"ಹಿಟ್ಲರ್ ಸತ್ಮೇಲೆ ಜರ್ಮನಿಯಲ್ಲಿ ಅವನ ವಿರುದ್ಧ ಸಿನಿಮಾ ಬಂದ್ವು.. ಸಮಯ ಬರಬೇಕು"; ಅನುರಾಗ್ ಕಶ್ಯಪ್
ಈ ಬಾರಿ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಬೇರೆ ಚಿತ್ರರಂಗದ ಗಣ್ಯರು ಈ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಸಿನಿಮಾ ಪ್ರದರ್ಶನದ ಜೊತೆ ಜೊತೆಗೆ ಉತ್ತಮ ಸಂವಾದಗಳು ನಡೆಯುತ್ತಿವೆ. ಇಂದು (ಜನವರಿ 31) ಬಾಲಿವುಡ್ನ ವಿವಾದಾತ್ಮಕ ನಿರ್ದೇಶಕ ಅನುರಾಗ್ ಕಶ್ಯಪ್ ಭಾಗಿಯಾಗಿದ್ದರು.
ಇಂದು ನಡೆದ 'ಫಿಯರ್ಲೆಸ್ ಫಿಲ್ಮ್ ಮೇಕಿಂಗ್' (ಭಯವಿಲ್ಲದೆ ಸಿನಿಮಾ ನಿರ್ಮಾಣ) ಸಂವಾದದಲ್ಲಿ ಬಾಲಿವುಡ್ ನಟ ಹಾಗೂ ನಿರ್ದೇಶಕ ಅನುರಾಗ್ ಕಶ್ಯಪ್ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಸಿನಿಮಾ ಮೇಕಿಂಗ್ ಹಾಗೂ ಅಡೆತಡೆಗಳು, ರಾಜಕೀಯ, ತಂತ್ರಜ್ಞಾನದಿಂದ ಆಗುತ್ತಿರುವ ಬದಲಾವಣೆ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

ದಕ್ಷಿಣ ಭಾರತದ ಜನಪ್ರಿಯ ವಿಮರ್ಶಕ ಭಾರದ್ವಾಜ್ ರಂಗನ್ ಈ ಸಂವಾದವನ್ನು ನಡೆಸಿಕೊಟ್ಟಿದ್ದು, ಅನುರಾಗ್ ಕಶ್ಯಪ್ ಕೆಲವು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಅದರಲ್ಲೂ "ಹಿಟ್ಲರ್ ಸತ್ತ ನಂತರವಷ್ಟೇ ಜರ್ಮನಿಯಲ್ಲಿ ಅವನ ವಿರುದ್ಧ ಸಿನಿಮಾಗಳು ಬಂದವು. ಪ್ರತಿಯೊಂದಕ್ಕೂ ಸಮಯ ಬರಬೇಕು" ಎಂದು ಹೇಳಿದ್ದು ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಅಷ್ಟಕ್ಕೂ ಅನುರಾಗ್ ಕಶ್ಯಪ್ ಪ್ರಸ್ತಾಪ ಮಾಡಿದ ವಿಷಯಗಳು ಹೀಗಿವೆ.
ಅನುರಾಗ್ ಕಶ್ಯಪ್ ಬಾಲಿವುಡ್ನಲ್ಲಿ ಕೆಲವು ಅದ್ಭುತ ಸಿನಿಮಾಗಳನ್ನು ನಿರ್ದೇಶನಗಳನ್ನು ಮಾಡಿದ್ದಾರೆ. ಅದರಲ್ಲಿ 'ಗ್ಯಾಂಗ್ಸ್ ಆಫ್ ವಾಸೇಪುರ್', 'ಬ್ಲ್ಯಾಕ್ ಫ್ರೈಡೇ' ಅಂತಹ ಸಿನಿಮಾಗಳು ಅದಕ್ಕೆ ಸಾಕ್ಷಿಯಾಗಿವೆ. ಈ ಸಿನಿಮಾಗಳು ರಾಜಕೀಯ ಸೂಕ್ಷ್ಮತೆಯನ್ನು ಪ್ರತಿಬಿಂಬಿಸಿದ್ದವು. ಇದನ್ನೇ ಇಟ್ಟುಕೊಂಡು ಈಗ 'ಫಿಯರ್ಲೆಸ್ ಫಿಲ್ಮ್ ಮೇಕಿಂಗ್' ಮಾಡುವುದಕ್ಕೆ ಯಾಕೆ ಸಾಧ್ಯವಿಲ್ಲವೆಂದು ಹೇಳಿದ್ದಾರೆ. "ಇಂದು 'ಗ್ಯಾಂಗ್ಸ್ ಆಫ್ ವಾಸೇಪುರ್' ಅಥವಾ 'ಬ್ಲ್ಯಾಕ್ ಫ್ರೈಡೇ' ಅಂತಹ ಸಿನಿಮಾಗಳನ್ನು ಮಾಡುವುದು ಅಸಾಧ್ಯ. ಕೆಲವು ವಿಷಯಗಳು ರಾಜಕೀಯವಾಗಿ ಸೂಕ್ಷ್ಮ ಎನಿಸಿದ್ದು, ವಿವಾದಗಳಿಗೆ ಎಡೆ ಮಾಡಿಕೊಡುತ್ತವೆ" ಎಂದು ಅನುರಾಗ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ.
ಹಾಗೇ "ಇರಾನ್ ಅಥವಾ ರಷ್ಯಾದಂತಹ ರಾಷ್ಟ್ರಗಳ ನಿರ್ದೇಶಕರು ನಮಗಿಂತ ಹೆಚ್ಚಿನ ನಿರ್ಬಂಧಗಳ ನಡುವೆಯೂ ಸಿನಿಮಾ ಮಾಡುತ್ತಿದ್ದಾರೆ. ಭಾರತೀಯ ನಿರ್ದೇಶಕರು ಅವರಿಂದ ಸ್ಫೂರ್ತಿ ಪಡೆಯಬೇಕು" ಎಂದು ಅನುರಾಗ್ ಕಶ್ಯಪ್ ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಹೇಳಿದ್ದಾರೆ.
ಇದರೊಂದಿಗೆ ಇತ್ತೀಚೆಗೆ ಬಾಲಿವುಡ್ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದ 'ಧುರಂಧರ್' ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಆದರೆ, ಮೂರು ವಿಷಯಗಳು ಅಗತ್ಯವಿರಲಿಲ್ಲ ಎಂದೂ ಹೇಳಿದ್ದಾರೆ. "ನನಗೆ ಈ ಸಿನಿಮಾ ಇಷ್ಟವಾಯಿತು. ಆದರೆ, ಕೆಲವು ಸಿದ್ಧಾಂತಗಳು ಇಷ್ಟವಾಗಲಿಲ್ಲ. ಇದು ಹೊಸ ಭಾರತ ಎಂಬ ಡೈಲಾಗ್ ಹಾಗೂ ಒಂದು ಸುದೀರ್ಘ ರಾಜಕೀಯ ಏಕಪಾತ್ರಾಭಿನಯವನ್ನೂ ಒಳಗೊಂಡು ಒಟ್ಟು ಮೂರು ದೃಶ್ಯಗಳು ಈ ಸಿನಿಮಾಗೆ ಬೇಕಿರಲಿಲ್ಲ. ಈ ಮೂರು ಅಂಶಗಳು ಇಲ್ಲದೇ ಇದ್ದೂ ಸಿನಿಮಾದ ಪ್ರಭಾವ ಕಡಿಮೆಯಾಗುತ್ತಿರಲಿಲ್ಲ" ಎಂದು ಅನುರಾಗ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ.

ಹಾಗೇ ಕನ್ನಡದ 'ಟಾಕ್ಸಿಕ್' ಸಿನಿಮಾದ ಟೀಸರ್ ವಿವಾದದ ಬಗ್ಗೆನೂ ಪ್ರತಿಕ್ರಿಯಿಸಿದ್ದಾರೆ. "ಟಾಕ್ಸಿಕ್ ಟೀಸರ್ ಅನ್ನು ಅತ್ಯಂತ ಧೈರ್ಯಶಾಲಿ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ. "ಟೀಸರ್ ವಿರುದ್ಧ ವ್ಯಕ್ತವಾದ ಆಕ್ರೋಶವು ನಮ್ಮ ಸಾಂಸ್ಕೃತಿಕ ಬೂಟಾಟಿಕೆಯನ್ನು ತೋರಿಸುತ್ತದೆ." ಎಂದು ಅವರು ಬೇಸರ ಹೊರ ಹಾಕಿದ್ದಾರೆ.
ಇದರೊಂದಿಗೆ ರಾಜಕೀಯ ಕುರಿತ ಸಿನಿಮಾಗಳ ಬಗ್ಗೆ ಪ್ರತಿಕ್ರಿಯಿಸುವ ವೇಳೆ ಹಿಟ್ಲರ್ ಉದಾಹರಣೆಯನ್ನಿಟ್ಟುಕೊಂಡು ಯಾರಿಗೋ ಟಾಂಗ್ ಕೊಟ್ಟಿದ್ದಾರೆ. "ಹಿಟ್ಲರ್ ಸತ್ತ ನಂತರವಷ್ಟೇ ಜರ್ಮನಿಯಲ್ಲಿ ಅವನ ವಿರುದ್ಧ ಸಿನಿಮಾಗಳು ಬಂದವು. ಪ್ರತಿಯೊಂದಕ್ಕೂ ಸಮಯ ಬರಬೇಕು" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇದರೊಂದಿಗೆ ಕನ್ನಡ ಸಾಹಿತ್ಯದ ಬಗ್ಗೆನೂ ಮಾತಾಡಿದ್ದಾರೆ. ಜನಪ್ರಿಯ ಬರಹಗಾರ ವಿವೇಕ್ ಶಾನಭಾಗ್ ಅವರ 'ಘಾಚರ್ ಘೋಚರ್' ಕಾದಂಬರಿಯನ್ನು ಆಧರಿಸಿ ಕನ್ನಡ ಸಿನಿಮಾವನ್ನು ಅನುರಾಗ್ ಕಶ್ಯಪ್ ನಿರ್ಮಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಸದ್ಯ ಈ ಸಿನಿಮಾ ಇನ್ನೂ ಪ್ರೀ-ಪ್ರೊಡಕ್ಷನ್ನಲ್ಲಿದೆ. ಕನ್ನಡದ ಬಳಿಕ ಹಿಂದಿಯಲ್ಲೂ ರಿಲೀಸ್ ಆಗುತ್ತೆಂದು ಮಾಹಿತಿ ನೀಡಿದ್ದಾರೆ.


Click it and Unblock the Notifications











