ಅಣ್ಣಾವ್ರ 'ಗಂಧದ ಗುಡಿ' ಹೊಗಳುತ್ತಲೇ ಅಲ್ಲು ಅರ್ಜುನ್ಗೆ ತಿವಿದ್ರಾ ಪವನ್ ಕಲ್ಯಾಣ್?
ಮೆಗಾ ಕುಟುಂಬ ಹಾಗೂ ಅಲ್ಲು ಫ್ಯಾಮಿಲಿ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದಕ್ಕೆ ಆಗಾಗ ಸಾಕ್ಷಿ ಸಿಗುತ್ತಲೇ ಇದೆ. ಪವನ್ ಕಲ್ಯಾಣ್ ಚುನಾವಣೆಗೆ ನಿಂತಿದ್ದ ಸಮಯದಲ್ಲಿ ಪವನ್ ಕಲ್ಯಾಣ್ ಎದುರಾಳಿ ಅಭ್ಯರ್ಥಿಯ ಪರ ಅಲ್ಲು ಅರ್ಜುನ್ ಪ್ರಚಾರ ಮಾಡಿದ್ದರು. ಅಲ್ಲಿಂದ ಎರಡು ಕುಟುಂಬಗಳ ನಡುವಿನ ಸಂಬಂಧ ಮುರಿದು ಬಿದ್ದಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿತ್ತು.
ಚುನಾವಣೆಯಲ್ಲಿ ಗೆದ್ದ ಬಳಿಕ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಜೊತೆಗೆ ಅರಣ್ಯ ಮಂತ್ರಿಯಾಗಿಯೂ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂಬಂಧ ಕರ್ನಾಟಕದ ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಜೊತೆ ಚರ್ಚೆಯಲ್ಲಿ ಭಾಗಿಯಾಗಿದ್ದ ಪವನ್ ಕಲ್ಯಾಣ್ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡರು. ಇದಕ್ಕೂ ಮುನ್ನ ಪವನ್ ಕಲ್ಯಾಣ್ ಕನ್ನಡ ಭಾಷೆಯ ಬಗ್ಗೆ ಹೆಚ್ಚು ಮಾತಾಡಿದರು. ಕೊನೆಯಲ್ಲಿ ಅಣ್ಣಾವ್ರ ಗಂಧದ ಗುಡಿಯನ್ನು ಮುಂದಿಟ್ಟುಕೊಂಡು ಪರೋಕ್ಷವಾಗಿ ಅಲ್ಲು ಅರ್ಜುನ್ಗೆ ಮಾತಿನಲ್ಲೇ ತಿವಿದಿದ್ದಾರೆ. ಅದರ ಝಲಕ್ ಹೀಗಿದೆ.

ಕುವೆಂಪು ಅವರ ಸಾಲುಗಳೊಂದಿಗೆ ಪವನ್ ಕಲ್ಯಾಣ್ ತಮ್ಮ ಮಾತನ್ನು ಆರಂಭಿಸಿದ್ದರು. "ನಾವು ಪರಸ್ಪರ ಗಡಿಗಳನ್ನು ಶೇರ್ ಮಾಡಿಕೊಂಡಿದ್ದೇವೆ. ಈ ಮೀಟಿಂಗ್ ಕುವೆಂಪು ಅವರ ಕಾವ್ಯ ಸಂಪದದಿಂದ ಆರಂಭ ಆಗಿತ್ತು. ಈ ಮೀಟಿಂಗ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ, ನಮ್ಮ ಕಚೇರಿಯವರು ನನಗೆ ಕುವೆಂಪು ಅವರ ಎರಡು ಸಾಲುಗಳನ್ನು ಕೊಟ್ಟರು. ನನಗೆ ಕನ್ನಡ ಭಾಷೆಯ ಬಗ್ಗೆ ಅತೀವವಾದ ಗೌರವಿದೆ. ಹಾಗೇ ನಾನು ಇಂಗ್ಲಿಷ್ನಲ್ಲಿ ಮಾತಾಡುತ್ತಿರುವುದಕ್ಕೆ ಬೇಸರವಿದೆ. ಗಡಿಯನ್ನು ಹಂಚಿಕೊಂಡಿರುವ ನಾನು ಕನ್ನಡವನ್ನು ಕಲಿಯಲಿದೆ ಇರುವುದಕ್ಕೆ ಬೇಸರವಿದೆ." ಎಂದು ಕುವೆಂಪು ಅವರ ಸಾಲುಗಳನ್ನು ಹೇಳಿದರು.
ಬಳಿಕ ಮುಂದಿನ ದಿನಗಳಲ್ಲಿ ಕನ್ನಡವನ್ನು ಕಲಿತು ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಭರವಸೆ ಮೂಡಿಸಿದ್ದಾರೆ. "ನಾನು ನನ್ನ ಸಹೋದ್ಯೋಗಿಗೆ ಹೇಳುತ್ತಿದ್ದೆ. ಇವತ್ತಿನ ಮೀಟಿಂಗ್ ನನ್ನನ್ನು ಕನ್ನಡ ಕಲಿಯುವಂತೆ ಪ್ರಚೋದನೆ ಮಾಡಿತು. ಕನ್ನಡದಲ್ಲಿ ಮಾತಾಡಬೇಕು ಅಂತ ಅನಿಸಿತ್ತು. ನಾವು ಕನ್ನಡವನ್ನು ಕಲಿತಿದ್ದರು. ಕರ್ನಾಟಕಕ್ಕೆ ಇನ್ನೂ ಹತ್ತಿರ ಆಗಬಹುದಿತ್ತು. ಈಗಾಗಲೇ ಒಬ್ಬ ನಟನಾಗಿ ನನಗೆ ಹೆಚ್ಚು ಪ್ರೀತಿಯನ್ನು ಕೊಟ್ಟಿದ್ದಾರೆ. ಈಗ ನಾನು ಕರ್ನಾಟಕಕ್ಕೆ ನನ್ನ ಗೌರವವನ್ನು ಅರ್ಪಿಸುವ ಸಮಯ. ಮುಂದಿನ ದಿನಗಳಲ್ಲಿ ನಾನು ಕನ್ನಡ ಕಲಿತು, ನಾನು ಇಟ್ಟಿರುವ ಗೌರವವನ್ನು ತಿಳಿಸುತ್ತೇನೆ." ಎಂದು ಪವನ್ ಕಲ್ಯಾಣ್ ಭರವಸೆ ನೀಡಿದ್ದಾರೆ.

ಹಾಗೇ ಅಣ್ಣಾವ್ರ ನಟಿಸಿದ ಎವರ್ಗ್ರೀನ್ ಸಿನಿಮಾ 'ಗಂಧದ ಗುಡಿ'ಯನ್ನು ಉದಾಹರಣೆಯಾಗಿಟ್ಟುಕೊಂಡು ಅಲ್ಲು ಅರ್ಜುನ್ಗೆ ತಿರುಗೇಟು ಕೊಟ್ಟಿದ್ದಾರೆ. ಅಣ್ಣಾವ್ರು ಅರಣ್ಯ ರಕ್ಷಣೆ ಮಾಡುವ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಅದೇ ಈಗಿನ ಹೀರೊ ಕಾಡು ನಾಶ ಮಾಡುವ ಸಿನಿಮಾಗಳಲ್ಲಿ ನಟಿಸಿ ಹೀರೊ ಆಗುತ್ತಾನೆ ಎಂದು ಅಲ್ಲು ಅರ್ಜುನ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
"ನನಗೆ ಯಾವಾಗಲೂ ಒಂದು ನೋವು ಇತ್ತು. ನನಗೆ ಕನ್ನಡ ಕಂಠೀರವ ಡಾ ರಾಜ್ಕುಮಾರ್ ನಟನೆಯ 'ಗಂಧದ ಗುಡಿ' ಸಿನಿಮಾದಿಂದ ಅರಣ್ಯ ಉಳಿಸುವಿಕೆ ಬಗ್ಗೆ ಅರಿವು ಮೂಡಿತ್ತು. ಗಂಧದ ಗುಡಿ ಸಿನಿಮಾ ಫಾರೆಸ್ಟ್ ಆಫಿಸರ್ ಸ್ಮಗಲಿಂಗ್ ಮಾಡುತ್ತಿರುವವರಿಂದ ಅರಣ್ಯವನ್ನು ಸಂರಕ್ಷಿಸುವ ಸಂದೇಶ ನೀಡುತ್ತೆ. 40 ವರ್ಷಗಳ ಹಿಂದೆ ಹೀರೊ ಅರಣ್ಯವನ್ನು ರಕ್ಷಿಸುತ್ತಿದ್ದರು. ಆದರೆ, ಈಗೊಬ್ಬ ಹೀರೊ ಕಾಡನ್ನು ಕತ್ತರಿಸಿ ಸ್ಮಗಲರ್ ಆಗುತ್ತಾನೆ. ಹೇಗಿದೆ ನೋಡಿ ಕಲ್ಚರಲ್ ಶಿಫ್ಟ್" ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಈ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


Click it and Unblock the Notifications











