ಅರ್ಜುನ್ ಸರ್ಜಾಗೆ ರಾಜೇಂದ್ರ ಸಿಂಗ್ ಬಾಬು ಕಪಾಳಕ್ಕೆ ಬಾರಿಸಿದ್ದೇಕೆ? ಆಕ್ಷನ್ ಕಿಂಗ್ ಕಥೆಯೇನು?
ದಕ್ಷಿಣ ಭಾರತದ ಸ್ಟಾರ್ ನಟ ಅರ್ಜುನ್ ಸರ್ಜಾ ಅಭಿಮಾನಿಗಳ ಪಾಲಿಗೆ ಆಕ್ಷನ್ ಕಿಂಗ್. ಅವರ ಆಕ್ಷನ್, ಸ್ಟಂಟ್ಗಳು ಇದೇ ನಾಲ್ಕು ದಶಕಗಳ ಹಿಂದೆ ಪ್ರೇಕ್ಷಕರನ್ನು ಹೌಹಾರಿಸಿತ್ತು. ಅರ್ಜುನ್ ಸರ್ಜಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು, ಮತ್ತೊಬ್ಬ ದಿಗ್ಗಜ ರಾಜೇಂದ್ರ ಸಿಂಗ್ ಬಾಬು. ಇವರು ನಿರ್ದೇಶಿಸಿದ 'ಸಿಂಹದ ಮರಿ ಸೈನ್ಯ' ಆಕ್ಷನ್ ಕಿಂಗ್ನ ಚೊಚ್ಚಲ ಸಿನಿಮಾ.
ಕನ್ನಡ ಚಿತ್ರರಂಗ ಕಂಡ ಅದ್ಭುತ ಖಳನಟ ಶಕ್ತಿ ಪ್ರಸಾದ್ ಪುತ್ರನಾಗಿದ್ದರೂ ಅರ್ಜುನ್ ಸರ್ಜಾಗೆ ಬರೋ ಐಡಿಯಾ ಇರಲಿಲ್ಲ. ರಾಜೇಂದ್ರ ಸಿಂಗ್ ಬಾಬು ಒಮ್ಮೆ ಮನೆಯ ಹತ್ತಿರ ಕಾರು ಕಳಿಸಿ, ಶೂಟಿಂಗ್ ಸ್ಪಾಟ್ಗೆ ಕರೆಸಿಕೊಂಡಿದ್ದರು. ಅಲ್ಲಿ ಅರ್ಜುನ್ ಸರ್ಜಾ ಶರ್ಟ್ ಬಿಚ್ಚಿಸಿ ನಿಲ್ಲಿಸಿದ್ದರು. ಅದಾಗಲೇ ದೇಹವನ್ನು ಹುರಿಗೊಳಿಸಿದ್ದ ಆಕ್ಷನ್ ಕಿಂಗ್ ಬಹುಬೇಗನೇ ಗಮನ ಸೆಳೆದು ಬಿಟ್ಟರು.'ಸಿಂಹ ಮರಿ ಸೈನ್ಯ'ಗೆ ಅರ್ಜುನ್ ಸರ್ಜಾ ಆಯ್ಕೆನೂ ಆದರು.

ರಾಜೇಂದ್ರ ಸಿಂಗ್ ಬಾಬು ಚಿತ್ರರಂಗಕ್ಕೆ ಬಂದು 50 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂಭ್ರಮದಲ್ಲಿ ಚಿತ್ರರಂಗದ ಗಣ್ಯರು ಬಂದು ಅವರೊಂದಿಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕೂಡ ತಮ್ಮ ಎಕ್ಸ್ಪೀರಿಯನ್ಸ್ ಹೇಳಿಕೊಂಡಿದ್ದಾರೆ. ಅದರಲ್ಲೂ ರಾಜೇಂದ್ರ ಸಿಂಗ್ ಬಾಬು ಕಪಾಳಕ್ಕೆ ಬಾರಿಸಿದ ದಿನವನ್ನು ನೆನಪಿಸಿಕೊಂಡಿದ್ದಾರೆ. ಆ ಘಟನೆ ನಿಜಕ್ಕೂ ಮಜವಾಗಿದೆ.
ರಾಜೇಂದ್ರ ಸಿಂಗ್ ಬಾಬು 50 ವರ್ಷಗಳನ್ನು ಪೂರೈಸಿದ ಕ್ಷಣವನ್ನು ಅರ್ಜುನ್ ಸರ್ಜಾ ಸಂಭ್ರಮಿಸಿದ್ದಾರೆ. ಇದೇ ವೇದಿಕೆ ಮೇಲೆ ಬಾಬು ಅವರ ಕಾರ್ಯವೈಖರಿಯ ಬಗ್ಗೆ ಮಾತಾಡಿದ್ದಾರೆ. ಅಲ್ಲದೆ, ಅವರನ್ನು ನೋಡಿದಾಗಲೆಲ್ಲ ಮೊದಲ ಸಿನಿಮಾ ನೆನಪಾಗುತ್ತೆ ಎಂದು ಹೇಳಿದ್ದಾರೆ. "ಚಿತ್ರರಂಗದಲ್ಲಿ 50 ವರ್ಷ ಸೇವೆ ಮಾಡುವುದು ಸಾಧಾರಣವಾದ ವಿಷಯವಲ್ಲ. ಇವತ್ತು ನಿಮ್ಮ ಗ್ರೇಟ್ ಡೇ. ನಿಮಗಷ್ಟೇ ಅಲ್ಲ, ಚಿತ್ರರಂಗದಲ್ಲಿ ಬೆಳೆಯುತ್ತಿರುವ ನಮ್ಮೆಲ್ಲರಿಗೂ ಗ್ರೇಟ್ ಡೇ. ಸಿಂಹದ ಮರಿ ಸೈನ್ಯ ಅನ್ನೋ ಸಿನಿಮಾ. ಆ ಸಿನಿಮಾ ಆದ್ಮೇಲೆ ತುಂಬಾ ಸಾರಿ ರಾಜೇಂದ್ರ ಸಿಂಗ್ ಬಾಬು ಅವರನ್ನು ನೋಡಿದ್ದೀನಿ. ಪ್ರತಿ ಬಾರಿ ನೋಡಿದಾಗಲೂ ನನಗೆ ಒಂದು ನೆನಪು ಬರುತ್ತೆ. ಅದು ಅವರು ನನ್ನನ್ನು ಆಯ್ಕೆ ಮಾಡಿದ ದಿನ." ಎಂದು ವೇದಿಕೆ ಮೇಲೆ ಅರ್ಜುನ್ ಸರ್ಜಾ ಹೇಳಿದ್ದಾರೆ.
ಇದೇ ವೇದಿಕೆ ಮೇಲೆ ಮೊದಲ ಸಿನಿಮಾಗೆ ಸಿಕ್ಕ ಅವಕಾಶದ ಬಗ್ಗೆನೂ ಮಾತಾಡಿದ್ದಾರೆ. "ಶಂಕರ್ ನಾಗ್ ಅವರೊಂದಿಗೆ ಕಾಳಿಂಗ ಸರ್ಪ ಅನ್ನೋ ಸಿನಿಮಾ ಮಾಡುತ್ತಿದ್ದರು. ನಾನು ನಮ್ಮ ಅಣ್ಣ ಮನೆಯಲ್ಲಿ ಇದ್ದೆವು. ಒಂದು ಕಾರು ಬಂತು. ನಿಮ್ಮ ತಂದೆಯವರು ಕರೆಯುತ್ತಿದ್ದಾರೆ ಬರಬೇಕಂತೆ ಅಂದರು. ತಂದೆಯೊಂದಿಗೆ ಆಗೊಮ್ಮೆ ಈಗೊಮ್ಮೆ ಶೂಟಿಂಗ್ಗೆ ಹೋಗಿದ್ದು ಬಿಟ್ಟರೆ, ಸಿನಿಮಾ ಬಗ್ಗೆ ಗಂಧ ಗಾಳಿ ಗೊತ್ತಿರಲಿಲ್ಲ. ಏನು ಅಂತ ಶೂಟಿಂಗ್ ಸ್ಪಾಟ್ಗೆ ಹೋದರೆ, ಅಲ್ಲಿ ನಮ್ಮ ತಂದೆ ಇರಲಿಲ್ಲ. ಶೂಟಿಂಗ್ ಮುಗಿಸಿಕೊಂಡು ಹೋಗಿದ್ದರು. ಡೈರೆಕ್ಟರ್ ಜೊತೆ ಮಾತಾಡಬೇಕಂತೆ ಅಂದರು. ನಾನು ಹೋಗಿ ನಿಂತುಕೊಂಡು. ಆಗ ಸಿನಿಮಾದಲ್ಲಿ ಆಕ್ಟ್ ಮಾಡುತ್ತೀರ ಅಂದರು. ನನಗೆ ಸಿನಿಮಾ ಬಗ್ಗೆ ಏನೂ ಗೊತ್ತಿರಲಿಲ್ಲ. ಸುಮ್ಮನೆ ನಿಂತಿದ್ದೆ. ನಿಮ್ಮ ಅಪ್ಪನನ್ನು ಒಪ್ಪಿಸುತ್ತೇನೆ ಮಾಡುತ್ತೀಯಾ ಅಂದರು. ತಲೆ ಅಲ್ಲಾಡಿಸಿದೆ. ಶರ್ಟ್ ಬಿಚ್ಚು ಅಂದರು. ತೆಗೆದೆ, ಕ್ಯಾಮರಾಮ್ಯಾನ್ ಓಕೆ ಅಂದರು. ಅಲ್ಲಿಂದ ಕೆಸಿಎನ್ ಚಂದ್ರು ಅವರ ಮನೆಗೆ ಕಳುಹಿಸಿದರು." ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ರಾಜೇಂದ್ರ ಸಿಂಗ್ ಬಾಬು ಡೈರೆಕ್ಷನ್ ಮಾಡುವುದನ್ನು ನೋಡಿ ಬೆಚ್ಚಿದ್ದಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ಸಿಂಹದ ಮರಿ ಸಿನಿಮಾ ಶುರುವಾಗುವುದಕ್ಕೂ ಮುನ್ನ ಸ್ವಲ್ಪ ದಿನ ಗ್ಯಾಪ್ ಇತ್ತು ನನಗೆ. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ನಮ್ಮ ತಂದೆ ಶೂಟಿಂಗ್ ಹತ್ತಿರ ಬಾ. ಭಯ ಅನ್ನೋದು ಏನಾದರೂ ಇದ್ದರೆ ಹೊರಟು ಹೋಗುತ್ತೆ. ಅಲ್ಲಿಗೆ ಹೋದೆ. ಅಲ್ಲಿ ಎರಡು ಹುಲಿಗಳಿದ್ದವು. ಒಂದು ರಾಜೇಂದ್ರ ಸಿಂಗ್ ಬಾಬು ಅವರು, ಇನ್ನೊಬ್ಬರು ಅಂಬರೀಶ್ ಸರ್. ಇಬ್ಬರೂ ಏನು ಕಮ್ಮಿಯಿಲ್ಲ ಸೆಟ್ಟಿನಲ್ಲಿ ಕಿರುಚಾಡುತ್ತಿದ್ದಾರೆ. ನಾನು ಹಿಂಗೆಲ್ಲಾ ಇರುತ್ತಾ ಅಂತ ಭಯಬಿದ್ದಿದ್ದೆ." ಎಂದಿದ್ದಾರೆ.
ಸಿಂಹ ಮರಿ ಸಿನಿಮಾ ಶುರುವಾಗಿತ್ತು. ಮೊದಲೇ ಕ್ಲೈಮ್ಯಾಕ್ಸ್ ಸೀನ್ ಶೂಟ್ ಮಾಡುತ್ತಿದ್ದರು. ಮೊದಲ ಸಿನಿಮಾದ ಮೊದಲ ಸೀನ್ನಲ್ಲಿಯೇ ಅರ್ಜುನ್ ಸರ್ಜಾ ಕೆನ್ನೆಗೆ ರಾಜೇಂದ್ರ ಸಿಂಗ್ ಬಾಬು ಬಾರಿಸಿದ್ದರು. ಅದ್ಯಾಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಅಂತ ಸಿನಿಮಾ ಆದ್ಮೇಲೆ ಸಿಂಹದಮರಿ ಶೂಟಿಂಗ್ ಶುರುವಾಗಿತ್ತು. ಫಸ್ಟ್ ಡೇನೇ ಕ್ಲೈಮ್ಯಾಕ್ಸ್. ಆಕ್ಟಿಂಗ್ ಗೊತ್ತಿಲ್ಲ. ಅದರಲ್ಲೂ ಅಳೋ ಸೀನ್ ಬೇರೆ ಇತ್ತು. ಎಷ್ಟೇ ಗ್ಲಿಸರಿನ್ ಹಾಕಿದ್ರೂ ಹುಡುಗರು ನಗಿಸುತ್ತಿದ್ದರು. ನಾನು ನಕ್ಕು ಬಿಡುತ್ತಿದ್ದೆ. ಎರಡು ಮೂರು ಸಾರಿ ನೋಡಿದರು. ನಗಬೇಡ ಅಂತ ಹೇಳುತ್ತಿದ್ದರು. ನಮಗೆ ಆಗಲಿಲ್ಲ. ಹತ್ತಿರ ಬಂದು ಕಪಾಳಕ್ಕೆ ಒಂದು ಏಟು ಬಿಟ್ಟರು. ಬಿಟ್ಟ ತಕ್ಷಣ ಮುಖನೇ ಚೇಂಜ್ ಆಯ್ತು. ಕಣ್ಣಲ್ಲಿ ನೀರು ತುಂಬಿಕೊಳ್ತು. ಈಗ ಕರೆಕ್ಟ್ ಆಗಿ ಇದ್ದಾನೆ ಇವನು ಶಾಟ್ ತೆಗೀರಿ ಅಂದರು. ಆಗ ಶಿಸ್ತು ಅಂದರೆ ಏನು ಅನ್ನೋದು ಗೊತ್ತಾಯ್ತು." ಎಂದು ಹೇಳಿದ್ದಾರೆ.


Click it and Unblock the Notifications











