ಚಿತ್ರರಂಗಕ್ಕೆ ಜೆಕೆ ಗುಡ್ ಬೈ ಹೇಳಲು ನಿರ್ಧಾರ: ಕಿಚ್ಚನ ಗೆಳೆಯನ ಬೆನ್ನಿಗೆ ಇರಿದವರು ಯಾರು?
ಸ್ಯಾಂಡಲ್ವುಡ್ನ ಫಿಟೆಸ್ಟ್ ನಟ ಜಯರಾಂ ಕಾರ್ತಿಕ್. ಬಿಗ್ಬಾಸ್, ಸೀರಿಯಲ್, ಸಿನಿಮಾ, ಕ್ರಿಕೆಟ್ ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭೆ ಇದು. ಕನ್ನಡ ಅಷ್ಟೇ ಅಲ್ಲ. ಹಿಂದಿ ಧಾರಾವಾಹಿಗಳಲ್ಲೂ ಜೆಕೆಗೆ ಇವರದ್ದೇ ಆದ ಹೆಸರು ಇದೆ.
'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರು ಗಮನ ಸೆಳೆದಿದ್ದರು. ಇಲ್ಲಿಂದ ಜಯರಾಂ ಕಾರ್ತಿಕ್ ಹಿಂತಿರುಗಿ ನೋಡಿದ್ದೇ ಇಲ್ಲ. ಹಿಂದಿ ಸೀರಿಯಲ್ಗಳಲ್ಲೂ ಜೆಕೆಗೆ ಜನಮನ್ನಣೆ ದೊರೆತಿತ್ತು. ಆದರೆ, ಸಿನಿಮಾಗಳೇ ಯಾಕೋ ಜೆಕೆ ಕೈ ಹಿಡಿಯಲಿಲ್ಲ. ನಿರೀಕ್ಷಿಸಿದಷ್ಟು ಯಶಸ್ಸು ಸಿಗಲಿಲ್ಲ.

ಈಗ ಜೆಕೆ ಅಭಿನಯದ 'ಐರಾವನ್' ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಈ ವೇಳೆ ಕನ್ನಡ ಚಿತ್ರರಂಗದಲ್ಲಿ ಕೆಲವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ತುಳಿಯುತ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಅಲ್ಲದೆ ಎರಡು ಸಿನಿಮಾಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಕ್ಕೆ ನಿರ್ಧಾರ ಮಾಡಿದ್ದಾರೆ. ಅಷ್ಟಕ್ಕೂ ಕನ್ನಡ ಚಿತ್ರರಂಗದಲ್ಲಿ ಜೆಕೆಗೆ ಅಂತಹದ್ದೇನಾಯ್ತು? ಯಾಕೀ ಬೇಸರ? ಅವರೇ ಹೇಳಿದ್ದಾರೆ ಮುಂದೆ ಓದಿ.
"ಐರಾವನ್ ನನ್ನ ಕೊನೆಯ ಸಿನಿಮಾಗಳಲ್ಲೊಂದು"
'ಐರಾವನ್' ಜಯರಾಮ್ ಕಾರ್ತಿಕ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ. ಕೋವಿಡ್ ಸಮಯದಲ್ಲಿ ಈ ಸಿನಿಮಾ ಸೆಟ್ಟೇರಿತ್ತು. ಅಲ್ಲಿಂದ ಕಷ್ಟಕಾಲದಲ್ಲೂ ಸಿನಿಮಾ ಬಿಡದೆ ಶೂಟ್ ಮಾಡಿ ಮುಗಿಸಲಾಗಿದೆ. ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿರಬೇಕಾದರೆ, ಸಿನಿಮಾರಂಗವನ್ನೇ ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.
"ಐರಾವನ್ ನನ್ನ ಕೊನೆಯ ಸಿನಿಮಾಗಳಲ್ಲಿ ಒಂದು. ಇನ್ನೊಂದು ಸಿನಿಮಾವಿದೆ ಕಾಡ. ಐರಾವನ್ಗಿಂತ ಮುಂಚೆ ನಾನು ನನ್ನ ಹಿಂದಿ ಸೀರಿಯಲ್ಗಳನ್ನೆಲ್ಲಾ ಮುಗಿಸಿಕೊಂಡು ಬಂದೆ. ಅದಾದ್ಮೇಲೆ ಯಾವುದೂ ಮಾಡಿಲ್ಲ. ಆವಾಗಲೇ ನಾನು ಬೇರೆ ಲೈನ್ಗೆ ಹೋಗೋಣ ಅಂತ ಯೋಚನೆ ಮಾಡಿದ್ದೆ. ಬೈ ಚಾನ್ಸ್ ನನಗೆ ಗಣೇಶ್ ಅವರು ಸಿಕ್ಕಿದರು. ಅವರೂ ಅಷ್ಟೇ ನನ್ನನ್ನು ರೀಚ್ ಮಾಡುವುದಕ್ಕೆ ತುಂಬಾನೇ ಪ್ರಯತ್ನ ಪಟ್ಟರು. ನನ್ನ ಆತ್ಮೀಯ ಸ್ನೇಹಿತರೆಲ್ಲಾ ಅವರನ್ನು ತಡೆದಿದ್ದರು." ಎಂದು ಜೆಕೆ ಬೇಸರ ವ್ಯಕ್ತಪಡಿಸಿದ್ದಾರೆ.

"ನನಗೆ ದು:ಖ ಪಡುವುದಕ್ಕೆ ಇಷ್ಟವಿಲ್ಲ"
ಜಯರಾಂ ಕಾರ್ತಿಕ್ ಅದ್ಭುತ ನಟ ಅನ್ನೋದರಲ್ಲಿ ಅನುಮಾನವೇ ಇಲ್ಲ. ಕನ್ನಡ ಸೇರಿದಂತೆ ಹಿಂದಿ ಭಾಷಿಗರೂ ಕೂಡ ಇವರನ್ನು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ, ಯಾರೋ ಒಂದಿಷ್ಟು ಜನ ಇವರನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದು, ಅವಕಾಶಗಳನ್ನು ಸಿಗದಂತೆ ಮಾಡುತ್ತಿದ್ದಾರೆ ಅನ್ನೋದು ಜೆಕೆ (ಜಯರಾಂ ಕಾರ್ತಿಕ್) ಆರೋಪ.
"ನೀವು ಕಷ್ಟ ಪಡುತ್ತೀರ.. ತುಂಬಾನೇ ಎಫರ್ಟ್ ಹಾಕುತ್ತೀರ.. ನೀವೇ ಒಂದು ಸ್ಥಾನ ಪಡೆಯುತ್ತೀರ. ಎಲ್ಲೋ ಒಂದು ಸ್ಥಾನ ಗಿಟ್ಟಿಸಿಕೊಳ್ಳುತ್ತೀರ. ಅದಕ್ಕೂ ಹೋಗಿ ಸ್ವಲ್ಪ ಜನ ಕಟ್ ಮಾಡಿಸುತ್ತಾರೆ. ನಮ್ಮ ಮನೆಯಲ್ಲಿ ಯಾರಿಗೂ ಕಷ್ಟ ಕೊಡಬೇಡ. ಕಾಲು ಎಳೆಯ ಬೇಡ ಅಂತ ಹೇಳಿದ್ದಾರೆ. ಸರ್.. ಕೊನೆಯಲ್ಲಿ ನಾನು ಖುಷಿಯಲ್ಲಿ ಇರಬೇಕು. ಕಾರ್ಪೊರೇಟ್ ಲೈನ್ನಿಂದ ಬಂದಿದ್ದರಿಂದ ನನಗೆ ಹೆಚ್ಚು ದು:ಖಿಸುವುದಕ್ಕೆ ಇಷ್ಟವಿಲ್ಲ" ಎನ್ನುತ್ತಾರೆ ಜೆಕೆ.
"ಈ ವಿಡಿಯೋ ನೋಡಿ ನಗುತ್ತಿರುತ್ತಾರೆ"
ಕನ್ನಡ ಚಿತ್ರರಂಗದಲ್ಲಿ ಜಯರಾಂ ಕಾರ್ತಿಕ್ ಅವರನ್ನು ತುಳಿಯುತ್ತಿರೋರು ಯಾರು? ಅನ್ನೋದನ್ನು ಅವರು ಬಾಯಿ ಬಿಟ್ಟಿಲ್ಲ. ಎರಡು ಸಿನಿಮಾಗಳು ರಿಲೀಸ್ ಆದ ಬಳಿಕ ಬೇರೆ ಲೈನ್ಗೆ ಹೋಗುತ್ತೇನೇ ಎನ್ನುತ್ತಾರೆ. "ನೀವು ಶೂಟ್ ಮಾಡುತ್ತಿದ್ದೀರಲ್ಲ. ಅವರೇ ಅದನ್ನು ಮೊದಲು ನೋಡಿ ನಗುತ್ತಿರುತ್ತಾರೆ. ನನಗೂ ಯಾಕೆ ಅಂತ ಗೊತ್ತಿಲ್ಲ. ಗೊತ್ತಿದ್ದರೆ ಕೇಳಬಹುದಾಗಿತ್ತು." ಎಂದು ಮಾರ್ಮಿಕವಾಗಿ ನಗುತ್ತಾರೆ ಜೆಕೆ.
"ನನಗೆ ಬೇರೆ ಕಡೆ ಅಷ್ಟೊಂದು ಮರ್ಯಾದೆ ಕೊಟ್ಟಿದ್ದಾರೆ. 'ಸಿಯಾ ಕೆ ರಾಮ್' ಅಂತ ಒಂದು ಸೀರಿಯಲ್ ಮಾಡಿದೆ. ಅದರಲ್ಲಿ ರಾವಣನ ಪಾತ್ರ ಅದು ಎಷ್ಟು ಕಷ್ಟವಿತ್ತು? ಆ ಪಾತ್ರವನ್ನು ಹೇಗೆ ಮಾಡಿದೆ ಅನ್ನೋದು ನನಗೆ ಚೆನ್ನಾಗಿ ಗೊತ್ತು. ಆ ಧಾರಾವಾಹಿ ಮುಗಿಸಿದ ಕೂಡಲೇ ನಾನು ಅಲ್ಲೇ ಇರಬಹುದಿತ್ತು. ಅದನ್ನು ಬಿಟ್ಟು ಬಂದೆ. ಕನ್ನಡ ಸಿನಿಮಾ ಮಾಡಬೇಕು ಅಂತ ಬಂದೆ. 'ಮಹಾಕಾಳಿ' ಅಂತ ಶಿವನ ಪಾತ್ರ ಬಂದಿತ್ತು, ಇನ್ನೊಂದು ಹಿಂದಿ ಸೀರಿಯಲ್ ಸಿಕ್ಕಿತ್ತು ಅದನ್ನೂ ಮಾಡಿಲ್ಲ. ಇಲ್ಲಿ ಸಪೂರ್ಟ್ ಸಿಗುತ್ತೆ ಅಂತ ಬಂದೆ. ಆದರೆ, ಸಿಕ್ಕಿಲ್ಲ. ಅದಕ್ಕೆ ದೂರ ಇರೋಣ ಅಂತ." ಎಂದು ಬೇಸರ ವ್ಯಕ್ತಪಡಿಸುತ್ತಾರೆ.


Click it and Unblock the Notifications











