Breaking: ಚಿತ್ರೀಕರಣದ ವೇಳೆ ಅವಘಡ, ಸಾಹಸ ಕಲಾವಿದ ಸಾವು
ಕನ್ನಡದ 'ಐ ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಫೈಟರ್ (ಸಾಹಸ ಕಲಾವಿದ) ಒಬ್ಬರು ಮೃತಪಟ್ಟಿದ್ದಾರೆ.
Recommended Video

ರಚಿತಾ ರಾಮ್, ಅಜಯ್ ರಾವ್ ನಟಿಸಿರುವ 'ಐ ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣ ಬಿಡದಿ ಹೊಬಳಿಯ ಜೋಗರಪಾಳ್ಯ ಗ್ರಾಮದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಫೈಟ್ ಮಾಸ್ಟರ್ ವಿನೋದ್ ನಿರ್ದೇಶನದಲ್ಲಿ ಸಾಹಸ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಹೈಟೆನ್ಷನ್ ವೈರ್ ತಗುಲಿ ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿದ್ದಾರೆ.

ಫೈಟ್ ದೃಶ್ಯ ನಡೆಯುತ್ತಿದ್ದ ವೇಳೆ ಅಲ್ಲಿಯೇ 11 ಕೆವಿ ವಿದ್ಯುತ್ ವೈಯರ್ ಇತ್ತು. ಫೈಟ್ ದೃಶ್ಯದ ಚಿತ್ರೀಕರಣದ ವೇಳೆ ವಿವೇಕ್ಗೆ ಆ ವೈಯರ್ ತಗುಲಿ ಶಾಕ್ ಆಗಿ ಸಾವನ್ನಪ್ಪಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗುತ್ತಿದೆ.
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಸಾಹಸ ನಿರ್ದೇಶಕ ವಿನೋದ್ ಅನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಇನ್ನಷ್ಟೆ ದಾಖಲಾಗಬೇಕಿದೆ. ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿತೆ ಅಥವಾ ಇದೊಂದು ಅಪಘಾತ ಅಷ್ಟೆಯೇ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಲಿದೆ.
'ಲವ್ ಯು ರಚ್ಚು' ಸಿನಿಮಾವನ್ನು ಗುರು ದೇಶಪಾಂಡೆ ನಿರ್ಮಾಣ ಮಾಡುತ್ತಿದ್ದು, ಶಂಕರ್ ರಾಜ್ ಎಂಬ ಹೊಸ ನಿರ್ದೇಶಕ ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ ಆಗಿದ್ದು ಮೊದಲ ಸಿನಿಮಾದಲ್ಲಿಯೇ ದೊಡ್ಡ ಅವಘಡ ಸಂಭವಿಸಿದೆ.
ಮಾಧ್ಯಮವೊಂದಕ್ಕೆ ನಿರ್ಮಾಪಕ ಗುರು ದೇಶಪಾಂಡೆ ಹೇಳಿರುವಂತೆ 'ಸೆಟ್ನಲ್ಲಿ ಅವಘಡ ನಡೆದಿರುವುದು ನಿಜ. ಸಹ ಸಾಹಸ ಕಲಾವಿದನೊಬ್ಬ ಮೃತಪಟ್ಟಿರುವುದು ಸಹ ನಿಜ ಆದರೆ ಘಟನೆ ನಡೆದಾಗ ನಾನು ಸ್ಥಳದಲ್ಲಿರಲಿಲ್ಲ ಈಗ ಸ್ಥಳಕ್ಕೆ ಹೋಗುತ್ತಿದ್ದೇನೆ'' ಎಂದಿದ್ದಾರೆ. ನಟ ಅಜಯ್ ರಾವ್ ಸಹ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು ಆದರೆ ದುರ್ಘಟನೆ ನಡೆದ ದೃಶ್ಯದಲ್ಲಿ ಅವರು ಇರಲಿಲ್ಲ. ಬದಲಿಗೆ ದುರ್ಘಟನೆ ನಡೆದ ಸ್ಥಳದಿಂದ 200 ಮೀಟರ್ ದೂರದಲ್ಲಿ ಇದ್ದರು ಎನ್ನಲಾಗುತ್ತಿದೆ.
ಘಟನೆ ನಡೆದಾಗ ವಿವೇಕ್ ಜೊತೆಗೆ ಇನ್ನೂ ಒಬ್ಬರಿಗೆ ಗಾಯವಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ವಿವೇಕ್ ಮೃತಪಟ್ಟಿದ್ದಾರೆ. ಇನ್ನೊಬ್ಬ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಸಾಹಸ ನಿರ್ದೇಶಕ ವಿನೋದ್ ಜೊತೆಗೆ ಸಿನಿಮಾದ ನಿರ್ದೇಶಕ ಶಂಕರ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ರೀತಿ ಚಿತ್ರೀಕರಣದ ಸಂದರ್ಭದಲ್ಲಿ ಅವಘಡಗಳು ಕನ್ನಡ ಚಿತ್ರರಂಗಕ್ಕೆ ಹೊಸದೇನೂ ಅಲ್ಲ. ದುನಿಯಾ ವಿಜಯ್ ನಟಿಸಿದ್ದ 'ಮಾಸ್ತಿಗುಡಿ' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಹೆಲಿಕಾಪ್ಟರ್ನಿಂದ ಕೆರೆಗೆ ಹಾರಿದ ಜನಪ್ರಿಯ ಖಳನಾಯಕರಾಗಿದ್ದ ಉದಯ್ ಮತ್ತು ಅನಿಲ್ ಅಲ್ಲೇ ಪ್ರಾಣ ಬಿಟ್ಟಿದ್ದರು. ಆ ಘಟನೆ ಚಂದನವನದಲ್ಲಿ ಭಾರಿ ಸದ್ದಾಗಿತ್ತು. ಚಿತ್ರೀಕರಣದ ವೇಳೆ ತೆಗೆದುಕೊಳ್ಳಲೇ ಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಹಾಗಿದ್ದಾಗ್ಯೂ ಇಂದು ಈ ಅವಘಡ ನಡೆದಿದೆ.
ಸಿನಿಮಾದ ಚಿತ್ರೀಕರಣಕ್ಕೆ ಅನುಮತಿ ಪಡೆದಿರಲಿಲ್ಲ ಎನ್ನಲಾಗುತ್ತಿದೆ. ಆದರೆ ಅನುಮತಿ ಇದೆ ಎಂದುಕೊಂಡೇ ಪುಟ್ಟರಾಜು ತಮ್ಮ ಜಮೀನಿನಲ್ಲಿ ಚಿತ್ರೀಕರಣ ಮಾಡಲು ಅವಕಾಶ ಕೊಟ್ಟಿದ್ದರಂತೆ. ಆದರೆ ಘಟನೆ ನಂತರ ಪುಟ್ಟರಾಜು ಕಾಣೆಯಾಗಿದ್ದಾರೆ. ಸಾಹಸ ನಿರ್ದೇಶಕ ವಿನೋದ್, ಕ್ರೇನ್ ಚಾಲಕ, ನಿರ್ದೇಶಕ ಶಂಕರ್, ನಿರ್ಮಾಪಕ ಗುರು ದೇಶಪಾಂಡೆಯವರುಗಳನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದಿದ್ದು ಇವರುಗಳ ಮೇಲೆ 304, 308ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಚಿತ್ರೀಕರಣಕ್ಕೆ ಯೋಗ್ಯವಲ್ಲದ ಜಾಗದಲ್ಲಿ ಚಿತ್ರೀಕರಣ ಮಾಡಲು ಹೊರಟಿದ್ದೇ ಚಿತ್ರತಂಡ ಮಾಡಿದ ತಪ್ಪು. ಚಿತ್ರೀಕರಣ ಮಾಡಲಿರುವ ಸ್ಥಳವನ್ನು ಸೂಕ್ತವಾಗಿ ಪರಾಮರ್ಶಿಸದೇ ಚಿತ್ರೀಕರಣ ಮಾಡಲು ಮುಂದಾಗಿದ್ದರಿಂದ ಈಗ ದೊಡ್ಡ ಬೆಲೆ ತೆರೆಯುವಂತಾಗಿದೆ.


Click it and Unblock the Notifications











