ಒಂದೇ ವೇದಿಕೆಯಲ್ಲಿ 6 ಚಿತ್ರಗಳು ಲಾಂಚ್: ಸಿನಿಮಾ ಮಂದಿಯ ಹೊಸ ಸಾಹಸ
ಸಿನಿಮಾ ಮಾಡುವುದು ಸಿನಿಮಾ ನೋಡಿದಷ್ಟು ಸುಲಭ ಅಲ್ಲ. ಆರಂಭದಿಂದ ಅಂತ್ಯದವರೆಗೂ ನೂರೆಂಟು ಸವಾಲುಗಳು. ನೂರೆಂಟು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಹೀಗಾಗಿ ಅದೆಷ್ಟೇ ದೊಡ್ಡ ನಿರ್ಮಾಪಕ ಆಗಿದ್ದರೂ ಒಂದು ಸಿನಿಮಾ ಪೂರ್ಣಗೊಂಡ ಬಳಿಕ ಇನ್ನೊಂದು ಸಿನಿಮಾ ಆರಂಭ ಮಾಡುತ್ತಾನೆ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಒಂದೇ ವೇದಿಕೆ ಮೇಲೆ ಕನಿಷ್ಠ ಎರಡು ಸಿನಿಮಾ ಲಾಂಚ್ ಮಾಡಿದ್ದು ತೀರಾ ವಿರಳ. ಇಂತಹದ್ರಲ್ಲಿ ಇಲ್ಲೊಂದು ಸಂಸ್ಥೆ ಒಂದೇ ವೇದಿಕೆ ಮೇಲೆ 6 ಸಿನಿಮಾ ರಿಲೀಸ್ ಮಾಡಿದೆ.
ಒಂದಲ್ಲ. ಎರಡಲ್ಲ. ಬರೋಬ್ಬರಿ 6 ಸಿನಿಮಾ ಒಂದೇ ವೇದಿಕೆ ಮೇಲೆ ಲಾಂಚ್ ಆದ ಉದಾಹರಣೆಗಳಿಲ್ಲ. ಕನ್ನಡದಲ್ಲಿ ಇಂತಹ ಪ್ರಯತ್ನಕ್ಕೆ ಕೈ ಹಾಕಿದವರು ಈಗ ಕಾಣೆಯಾಗಿದ್ದಾರೆ. ಆದರೆ, ಬಿಜು ಶಿವಾನಂದ್ ಅನ್ನುವವರು ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಇದೇ ವೇದಿಕೆ ಮೇಲೆ ನಾಲ್ಕು ಸಿನಿಮಾಗಳ ಶೀರ್ಷಿಕೆ ಕೂಡ ಅನಾವರಣ ಆಗಿದೆ. ಹಾಗಿದ್ದರೆ, ಆ ಸಿನಿಮಾಗಳು ಯಾವುವು? ಯಾವ್ಯಾವ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತೆ? ಈ ಎಲ್ಲಾ ಮಾಹಿತಿ ಇಲ್ಲಿದೆ.

ಒಂದೇ ವೇದಿಕೆ ಮೇಲೆ ನಾಲ್ಕು ಸಿನಿಮಾ ಟೈಟಲ್ ಅನಾವರಣ
6 ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿರುವುದು 'ಡೆಕ್ಕನ್ ಕಿಂಗ್' ಸಂಸ್ಥೆ ಅನೇಕ ಹೊಸ ಕಲಾವಿದರಿಗೆ ಅವಕಾಶ ನೀಡುತ್ತಿದೆ. ಹೀಗಾಗಿ ಆರು ಸಿನಿಮಾಗಳಲ್ಲಿ ನಾಲ್ಕು ಸಿನಿಮಾ ಟೈಟಲ್ ಅನ್ನುಅನೌನ್ಸ್ ಮಾಡಿದೆ. 'ಸ್ತಂಭಂ', 'ಸಮರ್ಥ್', 'ಮಂಗಳೂರು' ಮತ್ತು 'ಫೆಬ್ರವರಿ 29 ಸೂರ್ಯಗಿರಿ' ಚಿತ್ರಗಳ ಶೀರ್ಷಿಕೆಯನ್ನು ಘೋಷಣೆ ಮಾಡಲಾಗಿದೆ. ಈ ತಂಡದ ಸಾಹಸಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗಣ್ಯರು ಬೆಂಬಲ ನೀಡಿದ್ದಾರೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಉಮೇಶ್ ಬಣಕಾರ್ ಸೇರಿದಂತೆ ಚಿತ್ರರಂಗ ಗಣ್ಯರು ನಿರ್ಮಾಪಕರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಆರು ಸಿನಿಮಾಗಳು ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ತುಳು, ಕೊಂಕಣಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಅಲ್ಲದೆ ಅನೇಕ ಹೊಸ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ.

'ಸ್ತಂಭ' ಕೆಜಿಎಫ್ ಖ್ಯಾತಿಯ ಗರುಡ ರಾಮ್ ನಟನೆ
ಆರು ಸಿನಿಮಾಗಳಲ್ಲಿ ಒಂದು ಚಿತ್ರಕ್ಕೆ ಚಿತ್ರ 'ಸ್ತಂಭಂ' ಎಂಬ ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರದಲ್ಲಿ 'ಕೆಜಿಎಫ್' ಖ್ಯಾತಿಯ ನಟ ಗರುಡ ರಾಮ್ ನಟಿಸುತ್ತಿದ್ದಾರೆ. ಸಂದೀಪ್ ಶೆರಾವತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಗರುಡ ರಾಮ್ ಪಾತ್ರ ಪವರ್ಫುಲ್ ಆಗಿದ್ಯಂತೆ. ಆಲಿಯಾ ಮತ್ತು ರಕ್ಷಿತ್ ಅನ್ನವ ಹೊಸ ಪ್ರತಿಭೆ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

'ಸಮರ್ಥ್' ಚಿತ್ರದಲ್ಲಿ ಪ್ರವೀರ್ ಶೆಟ್ಟಿ-ಸೋನಾಲ್
'ಸಮರ್ಥ್' ಅನ್ನುವ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲಿ ಈ ಚಿತ್ರಕ್ಕೆ 'ವೇದಾದ್ರಿ' ಎಂದು ಟೈಟಲ್ ಇಡಲಾಗಿದೆ. ಕನ್ನಡದಲ್ಲಿ ಪ್ರವೀರ್ ಶೆಟ್ಟಿ ಮತ್ತು ಸೋನಲ್ ಮೊಂತೆರೋ ಅಭಿನಯಿಸುತ್ತಿದ್ರೆ, ತಮಿಳಿನಲ್ಲಿ ಕಿಶೋರ್ ಮತ್ತು ಏಸ್ತರ್ ನರೋನಾ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರವನ್ನು ರಾಜಾ ವೆಂಕಯ್ಯ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಅವತರಣಿಕೆಯಲ್ಲಿ ಪ್ರತಾಪ್ ಪೋತನ್, ಅವಿನಾಶ್, ಪವಿತ್ರಾ ಲೋಕೇಶ್, ಸಂದೀಪ್ ಮಲಾನಿ ಕನ್ನಡ ಮತ್ತು ತಮಿಳು ಎರಡೂ ಭಾಷೆಯಲ್ಲೂ ನಟಿಸುತ್ತಿದ್ದಾರೆ.
ಇನ್ನು 'ಮಂಗಳೂರು' ಚಿತ್ರಕ್ಕೆ ಸಂದೀಪ್ ಮಲಾನಿ ನಿರ್ದೇಶನವಿದೆ. ಈ ಚಿತ್ರಕ್ಕೆ ಇನ್ನಷ್ಟೇ ಕಲಾವಿದರ ಆಯ್ಕೆ ನಡೆಯಬೇಕಿದೆ. ಇದು ಕನ್ನಡದ ಜೊತೆಗೆ ಕೊಂಕಣಿ, ತುಳು ಮತ್ತು ಬ್ಯಾರಿ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಮತ್ತೊಂದು ಸಿನಿಮಾಗೆ 'ಫೆಬ್ರವರಿ 29 ಸೂರ್ಯಗಿರಿ' ದ್ವಿಭಾಷಾ ಸಿನಿಮಾ. ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣ ಆಗಲಿದೆ. ಇದರಲ್ಲೂ ಪ್ರವೀರ್ ಶೆಟ್ಟಿ, ಏಸ್ತರ್ ನೊರಾನಾ, ಪ್ರಗತಿ, ಗೋಕುಲ್ ಶಿವಾನಂದ್ ಮತ್ತು ಸಂದೀಪ್ ಮಲಾನಿ ನಟಿಸುತ್ತಿದ್ದಾರೆ. ಇಷ್ಟೆಲ್ಲಾ ಸಾಹಸಕ್ಕೆ ಕೈ ಹಾಕಿರುವ ಸಂಸ್ಥೆ, ಈ ಆರು ಸಿನಿಮಾಗಳನ್ನು ಹೇಗೆ ಮೇಕಿಂಗ್ ಮಾಡುತ್ತೆ? ಯಾವಾಗ ರಿಲೀಸ್ ಮಾಡುತ್ತೆ ಅನ್ನುವ ಕುತೂಹಲವಿದೆ.


Click it and Unblock the Notifications











