ನಿರ್ಮಾಪಕ ಸೂರಪ್ಪ ಬಾಬು ಮೇಲೆ ಹಲ್ಲೆ: ಬಿಗುವಿನ ಸ್ಥಿತಿ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಎದುರು ಕನ್ನಡಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಕೆಲವರು ನಿರ್ಮಾಪಕ ಸೂರಪ್ಪ ಬಾಬು ಮೇಲೆ ಹಲ್ಲೆ ನಡೆಸಿದ್ದರಿಂದ ಅಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಣಿಜ್ಯ ಮಂಡಳಿ ಡಬ್ಬಿಂಗ್ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟ ಪಡಿಸಬೇಕೆಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ಅಲ್ಲದೇ, ಸಾ.ರಾ.ಗೋವಿಂದು ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಆಂಗೀಕರಿಸ ಬಾರದೆಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದರು. (ಡಬ್ಬಿಂಗ್ ವಿರೋಧಿಗಳಿಗೆ ಸಾಮಾನ್ಯ ಪ್ರೇಕ್ಷಕನ ಪ್ರಶ್ನೆ)
ಇತ್ತ ವಾಣಿಜ್ಯ ಮಂಡಳಿಯಲ್ಲಿ ಸಾ.ರಾ.ಗೋವಿಂದು ರಾಜೀನಾಮೆಯನ್ನು ಆಂಗೀಕರಿಸ ಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ಸಭೆ ನಡೆಯುತ್ತಿತ್ತು. ಆ ಸಭೆಯಲ್ಲಿ ಭಾಗವಹಿಸಲು ಸೂರಪ್ಪ ಬಾಬು ಆಗಮಿಸಿದಾಗ ಈ ಘಟನೆ ನಡೆದಿದೆ.

ಸೂರಪ್ಪ ಬಾಬು ವಾಣಿಜ್ಯ ಮಂಡಳಿ ಕಚೇರಿಗೆ ಆಗಮಿಸುತ್ತಿದ್ದಂತೆ ಕೆಲವರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಸೂರಪ್ಪ ಬಾಬು ನನ್ನ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆಂದು ಕಿರುಚುತ್ತಾ ವಾಣಿಜ್ಯ ಮಂಡಳಿ ಕಚೇರಿ ಒಳಗೆ ಓಡಿ ಬಂದಿದ್ದಾರೆ.
ಸೂರಪ್ಪ ಬಾಬು ಧ್ವನಿ ಕೇಳಿದ ಕೂಡಲೇ ನಡೆಯುತ್ತಿದ್ದ ನಿರ್ಮಾಪಕರ ಮತ್ತು ಇತರರ ಸಭೆಯನ್ನು ಅರ್ಧಕ್ಕೇ ನಿಲ್ಲಿಸಿ ಎಲ್ಲರೂ ಸೂರಪ್ಪ ಬಾಬು ಸಹಾಯಕ್ಕೆ ಬಂದಿದ್ದಾರೆ ಮತ್ತು ಅವರನ್ನು ಸಮಾಧಾನ ಪಡಿಸಿದ್ದಾರೆ.
ಹಲ್ಲೆ ಮಾಡಿದವರನ್ನು ಸೂರಪ್ಪ ಬಾಬು ಗುರುತಿಸಿದರಾದರೂ, ಅಷ್ಟು ಹೊತ್ತಿಗಾಗಲೇ ಅವರನ್ನು ಆಟೋದಲ್ಲಿ ಬೇರೆಡೆಗೆ ಕರೆದುಕೊಂಡು ಹೋಗಲಾಗಿತ್ತು. ಸೂರಪ್ಪ ಬಾಬು ಅವರ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸ ಬೇಕೆಂದು ನಿರ್ಮಾಪಕರು ವಾಣಿಜ್ಯ ಮಂಡಳಿಯ ಕಚೇರಿಯ ಎದುರೇ ಧರಣಿ ಕೂತಿದ್ದಾರೆ. (ಕನ್ನಡ ಚಲನಚಿತ್ರೋದ್ಯಮದಲ್ಲಿ ಭುಗಿಲೆದ್ದ ಭಿನ್ನಮತ)
ಹಲ್ಲೆ ನಡೆದ ವಿಷಯ ತಿಳಿಯುತ್ತಿದ್ದಂತೇ, ನಿರ್ಮಾಪಕರ ಮತ್ತು ವಿತರಕರ ಸಂಘದ ಹಲವರು ವಾಣಿಜ್ಯ ಮಂಡಳಿ ಕಚೇರಿಯತ್ತ ದೌಡಾಯಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರೂ ಕೆಲವು ಹೊತ್ತು ಅಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಧರಣಿ ನಿರತರ ಮನವೊಲಿಸಿದ್ದಾರೆ.


Click it and Unblock the Notifications











