'ಮನದ ಕಡಲು'ನಲ್ಲಿ ಮುತ್ತುಗಳ ಮಳೆ; ಅಪ್ಡೇಟ್ ಆಗಿ ಬಂದ ಯೋಗರಾಜ್ ಭಟ್ರು!
ಸ್ಯಾಂಡಲ್ವುಡ್ನಲ್ಲಿ ಸೂಪರ್ಸ್ಟಾರ್ಗಳಿಗೊಂದು ಫ್ಯಾನ್ ಬೇಸ್ ಇದ್ದರೆ. ಯೋಗರಾಜ್ ಭಟ್ರಿಗೊಂದು ಫ್ಯಾನ್ ಬೇಸ್ ಇದೆ. ಅವ್ರ ಲವ್ ಸ್ಟೋರಿ, ಡೈಲಾಗ್ಸ್, ಸಾಹಿತ್ಯ ಇವುಗಳನ್ನು ಇಷ್ಟ ಪಡುವ ಒಂದು ದೊಡ್ಡ ವರ್ಗವಿದೆ. ಆದರೆ, ಇತ್ತೀಚೆಗೆ ಯಾಕೋ ಭಟ್ರ ಖಾಲಿಯಾಗಿಬಿಟ್ಟರು ಅಂತ ಅನಿಸುತ್ತಿತ್ತು. ಬರೀ ಡೈಲಾಗ್ಗಳಲ್ಲೇ ಮನೆ ಕಟ್ಟುತ್ತಾರೆ ಅಂತ ಅದೇ ಫ್ಯಾನ್ಸ್ ಗೊಣಗಿದ್ದು ಇತ್ತು.
'ಕರಟಕ ದಮನಕ' ಸಿನಿಮಾ ಬಳಿಕ ಅಂತೂ ಅದು ನಿಜವೇನೋ ಅಂತ ಅನಿಸುವುದಕ್ಕೆ ಶುರುವಾಗಿತ್ತು. ಆದ್ರೀಗ ಯೋಗರಾಜ್ ಭಟ್ ಮತ್ತೊಂದು ಸಿನಿಮಾ ಹೊತ್ತು ಬರುತ್ತಿದ್ದಾರೆ. ಅದುವೇ 'ಮನದ ಕಡಲು'. ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅದನ್ನು ನೋಡಿದ ಬಳಿಕ ಸಿನಿಪ್ರಿಯರಿಗೆ ಮತ್ತೊಮ್ಮೆ ಭಟ್ರ ಮೇಲೆ ಭರವಸೆ ಮೂಡಿದೆ. ಟೀಸರ್ ನೋಡಿ ಥ್ರಿಲ್ ಆಗಿದ್ದಾರೆ.

'ಮನದ ಕಡಲು' ಟೀಸರ್ ರಿಲೀಸ್ ಆಗುತ್ತಿದ್ದಂತೆ ಕಾಮೆಂಟ್ಗಳ ಸುರಿ ಮಳೆಯೇ ಸುರಿಸಿದ್ದಾರೆ. ಒಂದೊಂದು ಕಾಮೆಂಟ್ ಯೋಗರಾಜ್ ಭಟ್ ಹಾಗೂ ವಿ. ಹರಿಕೃಷ್ಣಗೆ ಹೊಸ ಹುರುಷು ನೀಡೋದು ಗ್ಯಾರಂಟಿ. ಇದರ ಜೊತೆಗೆ 'ಮನದ ಕಡಲು' ಟೀಸರ್ ನೋಡಿದ ಬಳಿಕ ಈ ಬಾರಿ ಭಟ್ರು ಫುಲ್ ಅಪ್ಡೇಟ್ ಆಗಿ ಅಖಾಡಕ್ಕೆ ಇಳಿದಿದ್ದಾರೆ ಅಂತ ಅನಿಸುತ್ತೆ. ಟೀಸರ್ ನಿಜಕ್ಕೂ ಫ್ರೆಶ್ ಅಂತ ಅನಿಸುತ್ತೆ. ಇದು ಸಿನಿಮಾದ ಬಗೆಗಿನ ಮೊದಲ ಇಂಪ್ರೆಷನ್ ಅನ್ನಬಹುದು.
'ಮನದ ಕಡಲು' ಟೀಸರ್ಗೆ ವೀಕ್ಷಕರ ರಿಯಾಕ್ಷನ್ ಹೇಗಿದೆ ಅಂತ ನೋಡುವುದಕ್ಕೂ ಮುನ್ನ ಒಂದಿಷ್ಟು ಇಂಟ್ರೆಸ್ಟಿಂಗ್ ವಿಷಯಗಳನ್ನು ಹೇಳಲೇಬೇಕು. ಬಹುತೇಕ 'ಮುಂಗಾರು ಮಳೆ' ತಂಡವೇ ಈ ಸಿನಿಮಾದಲ್ಲಿ ಮತ್ತೆ ಒಂದಾಗಿದೆ. ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ಗೆ ಹೊಸ ಬದುಕು ಕೊಟ್ಟ 'ಮುಂಗಾರು ಮಳೆ' ಸಿನಿಮಾವನ್ನು ಮರೆಯೋಕೆ ಆಗುತ್ತಾ? ಅದೇ ಸಿನಿಮಾ ನಿರ್ಮಾಪಕ 'ಮನದ ಕಡಲು' ಚಿತ್ರವನ್ನು ನಿರ್ಮಿಸಿದ್ದಾರೆ.
ಯೋಗರಾಜ್ ಭಟ್ ಹಾಗೂ ಮುಂಗಾರು ಮಳೆ ನಿರ್ಮಾಪಕ ಇ.ಕೃಷ್ಣಪ್ಪ ಸುಮಾರು 18 ವರ್ಷಗಳ ಬಳಿಕ ಒಟ್ಟಿಗೆ ಸೇರಿಕೊಂಡಿದ್ದಾರೆ. 2006ರಲ್ಲಿ ಇನ್ನೇನು ಕನ್ನಡ ಚಿತ್ರರಂಗ ಮುಳುಗೇ ಹೋಯ್ತು ಅನ್ನುವಾಗಲೇ ಹೊಸ ತಂಡ ಬಾಕ್ಸಾಫೀಸ್ನಲ್ಲಿ ಇತಿಹಾಸವನ್ನು ಸೃಷ್ಟಿಸಿತ್ತು. ಈಗಲೂ ಕನ್ನಡ ಚಿತ್ರರಂಗ ಅದೇ ಸ್ಥಿತಿಯಲ್ಲಿ ಇದೆ. ಅಂತಹದ್ದೇ ಸನ್ನಿವೇಶದಲ್ಲಿ ಯೋಗರಾಜ್ ಭಟ್ ಮತ್ತೆ ಹೊಸಬರೊಂದಿಗೆ ಬರುತ್ತಿದ್ದಾರೆ. ಈ ಸಿನಿಮಾನೂ ಹಾಗೇ ಇತಿಹಾಸ ಸೃಷ್ಟಿಸುತ್ತಾ? ಅದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

ಸದ್ಯ ಸಿನಿಪ್ರಿಯರಿಗೆ 'ಮನದ ಕಡಲು' ಮತ್ತೆ 'ಮುಂಗಾರು ಮಳೆ', 'ಗಾಳಿಪಟ' ಸಿನಿಮಾವನ್ನು ನೆನಪಿಸಿದೆ. ಹೊಸ ಪ್ರತಿಭೆಗಳಾದ ಸುಮುಖ ಹೀರೋ, ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ಇಬ್ಬರು ನಾಯಕಿಯರು. ಈ ಹೊಸ ಪ್ರತಿಭೆಗಳು ಸ್ಯಾಂಡಲ್ವುಡ್ನಲ್ಲಿ ದಾಖಲೆ ನಿರ್ಮಾಣ ಮಾಡುತ್ತಾರಾ ಅನ್ನೋದು ಕುತೂಹಲ. ಸದ್ಯ ಟೀಸರ್ಗೆ ಸಿಕ್ಕಿರೋ ರಿಯಾಕ್ಷನ್ ಹೀಗಿದೆ.
ಒಬ್ಬರು " ಇದು ಬಾನು ಭೂಮಿಯ ನಡುವೆ ದಾರದ ಸೇತುವೆ ಕಟ್ಟಿದ ಕಥೆ" ಎಂದು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಹರಿಕೃಷ್ಣ ಹಾಗೂ ಯೋಗರಾಜ್ ಭಟ್ ಸೇರಿದರೆ ಬ್ಲಾಕ್ಬಸ್ಟರ್" ಎಂದು ಹೇಳುತ್ತಿದ್ದಾರೆ. "ಸುಮುಖ ಹಾಗೂ ರಾಸಿಕಾ ಶೆಟ್ಟಿ ಜನರು ಹೃದಯ ಗೆಲ್ಲುತ್ತಾರೆ" ಎನ್ನುತ್ತಿದ್ದಾರೆ. " ಯೋಗರಾಜ್ ಭಟ್ ನಿರ್ದೇಶನದಲ್ಲಿ ಮತ್ತೊಂದು ಲವ್ ಸ್ಟೋರಿ. ಇದು ಮುಂಗಾರು ಮಳೆಯನ್ನು ಹಿಂದಿಕ್ಕಬಹುದು" ಎಂದು ಆಶಾ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಬ್ಬರು "ಭಟ್ರೆ ಈ ಮೂವಿ ನ ಪ್ಯಾನ್ ಇಂಡಿಯಾ ರಿಲೀಸ್ ಮಾಡಿ. ಇದು ಪಕ್ಕ ಇನ್ನೊಂದು ಮುಂಗಾರು ಮಳೆ ಆಗುತ್ತೆ. ಈ ಮೂವಿಯಲ್ಲಿ ಎಲ್ಲಾ ಇದೆ. ದಯವಿಟ್ಟು ಈ ಚಿತ್ರವನ್ನು ಭಾರತಾದ್ಯಂತ ರಿಲೀಸ್ ಮಾಡಿ. ಇದು ಒಳ್ಳೆ ಸಿನಿಮಾ. ನೋಡಿದ್ರೆ ಗೊತ್ತಾಗುತ್ತೆ. ಇಷ್ಟ್ ಹೇಳಿದೀನಿ. ಮಿಕ್ಕಿದ್ ನಿಮಿಗೆ ಬಿಟ್ಟಿದ್ದು" ಅಂತ ಸಲಹೆ ಬೇರೆ ಕೊಟ್ಟಿದ್ದಾರೆ. ಇನ್ನು ಕೆಲವರು "ಬಾಲ್ಯದ ದಿನಗಳು ಮತ್ತೆ ಬರುವ ಮುನ್ಸೂಚನೆ", "ಮನದ ಪ್ರೇಮದ ಕಾವ್ಯವೇ ಮನದ ಕಡಲು" ಎಂದು ಹೇಳಿದ್ದಾರೆ.


Click it and Unblock the Notifications











