ರಾಮ ಮಂದಿರ ಉದ್ಘಾಟನೆಯಂದೇ ಧ್ರುವ ಸರ್ಜಾ ಮಕ್ಕಳ ನಾಮಕರಣ; ಹೆಸರಲ್ಲಿ ರಾಮಾಯಣದ ಲಿಂಕ್?
ಇಂದು (ಜನವರಿ 22) ಅಯೋಧ್ಯೆಯಲ್ಲಿ ಶ್ರೀರಾಮ ಭಕ್ತರ ಸಂಭ್ರಮ ಮುಗಿಲು ಮುಟ್ಟಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಇಡೀ ದೇಶವೇ ಎದುರು ನೋಡುತ್ತಿದೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ಬೇಕಿರೋ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಶಾಸ್ತ್ರಗಳು ನಡೆಯಲಿವೆ.
ದೇಶದ ಮೂಲೆಯಲ್ಲಿ ಇಂದು ರಾಮನಾಮ ಜಪವನ್ನು ಜನರು ಮಾಡುತ್ತಿದ್ದಾರೆ. ಇನ್ನೊಂದು ಕಡೆ ಸಿನಿಮಾ ತಾರೆಯರಿಗೆ, ಕ್ರೀಡಾಪಟುಗಳಿಗೆ, ರಾಜಕಾರಣಿಗಳಿಗೆ, ಉದ್ಯಮಿಗಳಿಗೆ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವಂತೆ ಆಹ್ವಾನವನ್ನು ನೀಡಲಾಗಿದೆ. ಇದೇ ಶುಭ ಸಮಾರಂಭದಂದು ಶ್ರೀರಾಮ,ಆಂಜನೇಯನ ಭಕ್ತ ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಉತ್ತಮ ಕೆಲಸಕ್ಕೆ ಕೈ ಹಾಕಿದ್ದಾರೆ.

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ದಿನದಂದೇ ಧ್ರುವ ಸರ್ಜಾ ತಮ್ಮ ಮಕ್ಕಳಿಗೆ ನಾಮಕರಣ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಮೊದಲೇ ಆಂಜನೇಯ ಹಾಗೂ ಶ್ರೀರಾಮನ ಭಕ್ತರಾಗಿರುವ ಸರ್ಜಾ ಕುಟುಂಬ, ಈ ಶುಭ ದಿನದಂದು ಮಕ್ಕಳ ನಾಮಕರಣ ಮಾಡುವುದು ಉತ್ತಮವೆಂದು ಭಾವಿಸಿದ್ದಾರೆ ಎನ್ನಲಾಗಿದೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಜನಿಸಿದಾಗಲೇ ನಾಮಕರಣ ಯಾವಾಗ ಅಂತ ಅವರ ಅಭಿಮಾನಿಗಳು ಪ್ರಶ್ನೆ ಮಾಡುತ್ತಲೇ ಇದ್ದರು. ಅದಕ್ಕೆ ಧ್ರುವ ಸರ್ಜಾ ಒಂದು ಸಮಯ ನೋಡಿ ನಾಮಕರಣ ಮಾಡುತ್ತೇವೆ ಅಂತ ಪ್ರತಿಕ್ರಿಯೆ ನೀಡಿದ್ದರು. ಮಗಳು ಜನಿಸಿದ ಬಳಿಕ ಪುತ್ರನ ಜನನ ಆಗಿದ್ದರೂ, ಮಗಳಿಗೆ ಹೆಸರಿಟ್ಟಿರಲಿಲ್ಲ. ಹೀಗಾಗಿ ಈ ಪ್ರಶ್ನೆ ಅಭಿಮಾನಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಬರುತ್ತಲೇ ಇತ್ತು.
2022ರ ಅಕ್ಟೋಬರ್ 2 ರಂದು ಮಗಳ ಹುಟ್ಟಿದ್ರೆ, 2023ರ ಸೆಪ್ಟೆಂಬರ್ ತಿಂಗಳಲ್ಲಿ ಮಗು ಜನಿಸಿದ್ದ. ಈಗ ಇಬ್ಬರಿಗೂ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಈ ವಿಶೇಷ ದಿನದಂದೇ ನಾಮಕರಣ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್ನಲ್ಲಿ ಮಕ್ಕಳ ನಾಮಕರಣ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬಸ್ಥರು ಭಾಗವಹಿಸಲಿದ್ದಾರೆ.

ಧ್ರುವ ಸರ್ಜಾ ಆಪ್ತರ ಪ್ರಕಾರ, ಧ್ರುವ ಸರ್ಜಾ ಹಾಗೂ ಸರ್ಜಾ ಕುಟುಂಬ ಆಂಜನೇಯ ಹಾಗೂ ಶ್ರೀರಾಮನ ಭಕ್ತರಾಗಿರುವುದರಿಂದ ಮಕ್ಕಳಿಗೆ ಇಡುವ ಹೆಸರು ರಾಮಾಯಣಕ್ಕೆ ಹೊಂದಿಕೊಂಡಂತೆ ಇರುತ್ತೆ ಎಂದು ಹೇಳಲಾಗುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಧ್ರುವ ಸರ್ಜಾ ಮಕ್ಕಳ ಹೆಸರು ಕೂಡ ರಿವೀಲ್ ಆಗಲಿದೆ.
ಧ್ರುವ ಸರ್ಜಾ ಆಗಾಗ ತಮ್ಮ ಮಕ್ಕಳ ಫೋಟೊಗಳನ್ನು, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು. ಇಬ್ಬರೂ ಮಕ್ಕಳೊಂದಿಗೆ ಸಿಕ್ಕಾಪಟ್ಟೆ ಅಟ್ಯಾಚ್ಮೆಂಟ್ ಇಟ್ಟುಕೊಂಡಿದ್ದಾರೆ. ಶೂಟಿಂಗ್ನಿಂದ ಬಿಡುವು ಸಿಕ್ಕಾಗ ಮಕ್ಕಳೊಂದಿಗೆ ಹೆಚ್ಚಾಗಿ ಕಾಲ ಕಾಳೆಯುತ್ತಾರೆ. ಅವರೊಂದಿಗೆ ಕಳೆದ ಕ್ಷಣಗಳನ್ನು ಸೆರೆ ಹಿಡಿದು ತಮ್ಮ ಅಭಿಮಾನಿಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದೂ ಇದೆ.
ಇನ್ನು ಸಿನಿಮಾ ವಿಚಾರಕ್ಕೆ ಬರೋದಾದರೆ, ಧ್ರುವ ಸರ್ಜಾ ಕೈಯಲ್ಲಿ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳಿವೆ. ಎ.ಪಿ ಅರ್ಜುನ್ ನಿರ್ದೇಶಿಸಿದ 'ಮಾರ್ಟಿನ್' ಸಿನಿಮಾ ಶೂಟಿಂಗ್ ಮುಗಿದು ಬಿಡುಗಡೆ ರೆಡಿಯಾಗಿದೆ. ಯಾವಾಗ ರಿಲೀಸ್ ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಬೇಕಿದೆ. ಇನ್ನೊಂದು ಕಡೆ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ಶೂಟಿಂಗ್ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು, ಇದೇ ವರ್ಷ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.


Click it and Unblock the Notifications











