"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
ದಕ್ಷಿಣ ಭಾರತ ಕಂಡ ಜನಪ್ರಿಯ ನಟಿಯರಲ್ಲಿ ಬೇಬಿ ಇಂದಿರಾ ಅವರನ್ನು ಮರೆಯುವುದಕ್ಕೆ ಹೇಗೆ ಸಾಧ್ಯ? ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಸಿನಿಮಾರಂಗದಿಂದ ದೂರವೇ ಉಳಿದಿದ್ದರು. ಚಿತ್ರರಂಗದಲ್ಲಿ ಆಕ್ಟಿವ್ ಆಗಿರಲಿಲ್ಲ. ಯಾವುದೇ ಸಂದರ್ಶನವನ್ನು ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ರಘು ರಾಮ್ ಯೂಟ್ಯೂಬ್ ಚಾನೆಲ್ಗೆ ಸಂದರ್ಶನವನ್ನು ನೀಡಿದ್ದಾರೆ.
ಬೇಬಿ ಇಂದಿರಾ ನಟನೆಗೆ ಬಂದಿದ್ದು ಹೇಗೆ ಅನ್ನುವುದರಿಂದ ಹಿಡಿದು ಪ್ರಸ್ತುತ ಅವರ ಬದುಕಿನ ಚಿತ್ರಣವನ್ನು ರಘುರಾಮ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತೆರೆದಿಟ್ಟಿದ್ದಾರೆ. ಈಗಾಗಲೇ ಅವರ ಹಲವು ಸಂಚಿಕೆಗಳನ್ನು ರಾಘು ರಾಮ್ ಕನ್ನಡಿಗರ ಮುಂದೆ ತೆರೆದಿಟ್ಟಿದ್ದಾರೆ. ಇದರಲ್ಲಿ ಬೇಬಿ ಇಂದಿರಾ ಕೂಡ ಮನಬಿಚ್ಚಿ ಮಾತಾಡಿದ್ದಾರೆ.

ಇದೇ ಸಂದರ್ಶನದಲ್ಲಿ ನಟಿ ಬೇಬಿ ಇಂದಿರಾ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳನ್ನು ನೆನೆದು ಭಾವುಕರಾಗಿದ್ದಾರೆ. "ರಾಘವೇಂದ್ರ ಸ್ವಾಮಿಗಳು ತಮ್ಮ ತಾತ" ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ರಾಯರನ್ನು ನೆನೆದು ಬೇಬಿ ಇಂದಿರಾ ಕಣ್ಣೀರು ಹಾಕಿದ್ದು ಯಾಕೆ? ಇದನ್ನು ತಿಳಿಯಲು ಮುಂದೆ ಓದಿ..
ಬೇಬಿ ಇಂದಿರಾ ರಾಘವೇಂದ್ರ ಸ್ವಾಮಿಗಳ ಭಕ್ತರು. ಚಿಕ್ಕ ವಯಸ್ಸಿನಲ್ಲಿಯೇ ಅವರು 'ರಾಘವೇಂದ್ರ ಕರುಣೆ' ಅನ್ನುವ ಸಿನಿಮಾದಲ್ಲಿ ನಟಿಸಿದ್ರು. ಆ ಸಮಯದಲ್ಲೇ ರಾಯರಿಗೆ ಉರುಳು ಸೇವೆಯನ್ನು ಮಾಡಿದ್ದನ್ನು ಯೂಟ್ಯೂಬ್ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. "ರಾಘವೇಂದ್ರ ಸ್ವಾಮಿ ನನ್ನ ತಾತ. ಯಾಕಂದ್ರೆ, ರಾಘವೇಂದ್ರ ಕರುಣೆ ಅನ್ನುವ ಸಿನಿಮಾದಲ್ಲಿ ನಟನೆ ಮಾಡುವಾಗ, ನನಗೆ 9 ರಿಂದ 10 ವರ್ಷ. ಆ ಸಿನಿಮಾ ನೋಡಿದರೆ ನಿಮಗೆ ಗೊತ್ತಾಗುತ್ತೆ. 40 ದಿನ ಮಂತ್ರಾಲಯದಲ್ಲಿ ಶೂಟಿಂಗ್ ಮಾಡಿದ್ದೆವು. ಯಾರೋ ಹೇಳುತ್ತಿದ್ದರು. ರಾಯರಿಗೆ ಉರುಳು ಸೇವೆ ಮಾಡಿದರೆ ಒಳ್ಳೆಯದು ಅಂತ. ಆ ಚಿಕ್ಕ ವಯಸ್ಸಿನಲ್ಲಿ ತಲೆಯಲ್ಲಿ ಕೂತುಬಿಟ್ಟಿತ್ತು." ಎಂದು ಬೇಬಿ ಇಂದಿರಾ ಹೇಳಿಕೊಂಡಿದ್ದಾರೆ.
'ರಾಘವೇಂದ್ರ ಕರುಣೆ' ಸಿನಿಮಾವನ್ನು ಸುಮಾರು 40 ದಿನಗಳ ಕಾಲ ಚಿತ್ರೀಕರಣ ಮಾಡಿದ್ದರು. ಪ್ರತಿ ದಿನ ರಾಯರಿಗೆ ಉರುಳು ಸೇವೆ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. "ಬೆಳಗ್ಗೆ 5 ಗಂಟೆಗೆ ಹೇಗಿದ್ದರೂ ಏಳುತ್ತೇವೆ. ಹಾಗೇ ಓಡಿ ಹೋಗಿ ತುಂಗ ಭದ್ರಾ ನದಿಗೆ ಹಾರೋದು. ಹಾಗೇ ಒದ್ದೆಯಾಗಿ ಬಂದು ಹಾಗೇ ಒಂದು ಅಂಗ ಪ್ರದಕ್ಷಿಣೆ ಹಾಕುವುದು. ನಿಮಗೆ ನಂಬಿಕೆ ಬರಲ್ಲ ನಾನು ಎಷ್ಟು ದಿನ ಇದನ್ನು ಮಾಡಿದೆ ಅಂತ. ಅಷ್ಟೊಂದು ಪ್ರದಕ್ಷಿಣೆ ಮಾಡುತ್ತೇನೆ. ಯಾಕೆ? ನನಗೇನು ಬೇಡಿಕೆ ಇಲ್ಲ. ಆದರೆ, ನನಗೆ ಅವರು ಬಹಳ ಇಷ್ಟ." ಎಂದಿದ್ದಾರೆ.

ಪ್ರತಿ ರಾಯರ ಬಳಿ ಇವತ್ತು ಶೂಟಿಂಗ್ ಚೆನ್ನಾಗಿ ನಡೆಯಲಿ ಅಂತ ಬೇಡಿಕೊಳ್ಳುತ್ತಿದ್ದರು. ಅದಕ್ಕೆ ಅವರಿಗೆ ರಾಯರ ಭಕ್ತನ ಜೊತೆ ಮದುವೆ ಮಾಡಿಸಿದ್ದರೆಂದು ಬೇಬಿ ಇಂದಿರಾ ನಂಬುತ್ತಾರೆ. "ಇವತ್ತು ಶೂಟಿಂಗ್ ಬಹಳ ಚೆನ್ನಾಗಿ ನಡೆಯಬೇಕು ತಾತ. ನಾನು ಚೆನ್ನಾಗಿ ಆಕ್ಟ್ ಮಾಡಬೇಕು ತಾತ. ನಾನು ಒಳ್ಳೆಯ ಹೆಸರು ತೆಗೆದುಕೊಳ್ಳಬೇಕು ತಾತ. ನನ್ನ ಜೊತೆ ಇರಿ ತಾತ ಅಂತ ಮಾತಾಡುತ್ತಿದ್ದೆ. ನಾನು ಉರುಳು ಸೇವೆ ಮಾಡಿದ್ದರಿಂದಲೋ ಏನೋ ನಮ್ಮ ಯಜಮಾನರನ್ನು ಕೊಟ್ಟರು. ಯಾಕಂದ್ರೆ, ಅವರು ಕೂಡ ರಾಯರ ಭಕ್ತರು. ಅಂತಹ ಒಳ್ಳೆಯ ಕುಟುಂಬಕ್ಕೆ ಸೊಸೆಯನ್ನಾಗಿ ಮಾಡಿದರು. ಹಾಗೇ ಕರ್ನಾಟಕದ ಮಗಳಾಗಿದ್ದ ನಾನು ಕರ್ನಾಟಕದ ಸೊಸೆಯಾದೆ." ಎನ್ನುತ್ತಾರೆ.
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಸನ್ನಿಧಾನದಲ್ಲಿ ವಾದಿರಾಜ್ ಆಚಾರ ಎನ್ನುವವರು ಬೇಬಿ ಇಂದಿರಾ 'ರಾಘವೇಂದ್ರ ಕರುಣೆ' ಸಿನಿಮಾ ಮಾಡುವಾಗ ಅರ್ಚಕರಾಗಿದ್ದರಂತೆ. ಅವರನ್ನು ರಘುರಾಮ್ ಮಾತಾಡಿಸಿದ್ದರು. ಸಂದರ್ಶನದ ಮಧ್ಯೆ ಅವರ ವಿಡಿಯೋ ಹಾಕಿತ್ತಿದ್ದಂತೆ ಬೇಬಿ ಇಂದಿರಾ ಕಣ್ಣುಗಳು ಒದ್ದೆಯಾಗಿದ್ದವು.
"ಥ್ಯಾಂಕ್ಯೂ.. ಮಾತಿಲ್ಲ ನನಗೆ ಹೇಳುವುದಕ್ಕೆ. ನನ್ನ ರಾಯರು ಬಂದ ಹಾಗೆ ಇದೆ. ಪ್ರತಿ ದಿನ ನಾನು ರಾಯರಿಗೆ ಪ್ರಾರ್ಥನೆ ಮಾಡುತ್ತಾ ಇರುತ್ತೇನೆ. ಅದಕ್ಕೆ ಈಗ ನನ್ನನ್ನು ಹುಡುಕಿಕೊಂಡು ನನ್ನ ತಾತ ನಮ್ಮ ಮನೆಗೆ ಬಂದಿದ್ದಾರೆ. " ಎಂದು ನಿರೂಪಕ ರಘುರಾಮ್ ಅವರ ಎದುರು ಆನಂದದ ಕಣ್ಣೀರು ಹಾಕಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.


Click it and Unblock the Notifications











