ತಮ್ಮ ಚಿತ್ರಕ್ಕೆ ತಾವೇ ಬ್ಲಾಕ್ನಲ್ಲಿ ಟಿಕೆಟ್ ಖರೀದಿಸಿದ್ದ ನಿರ್ದೇಶಕರು ಇವರು
ಸಿನಿಮಾ ಬಿಡುಗಡೆಯಾದ ಬಳಿಕ ನಿರ್ದೇಶಕರು, ನಟರು ಸೇರಿದಂತೆ ಚಿತ್ರತಂಡದವರು ಆಗಾಗ್ಗೆ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿರುತ್ತಾರೆ. ತಮ್ಮ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ತಿಳಿಯುವುದು, ಪ್ರೇಕ್ಷಕರಿಗೆ ಖುಷಿ ನೀಡುವುದು ಅದರ ಮೂಲಕ ಮತ್ತಷ್ಟು ಪ್ರಚಾರ ನೀಡುವುದು ಅವರ ಉದ್ದೇಶ. ಇದಕ್ಕಾಗಿ ಬೇರೆ ಬೇರೆ ಜಿಲ್ಲೆಯ ಪ್ರಮುಖ ಚಿತ್ರಮಂದಿರಗಳಿಗೂ ಭೇಟಿ ನೀಡುತ್ತಿರುತ್ತಾರೆ.
ಆದರೆ ಕನ್ನಡದ ನಿರ್ದೇಶಕರೊಬ್ಬರು ತಮ್ಮ ಸಿನಿಮಾವನ್ನು ನೋಡಲು ತಾವೇ ಬ್ಲಾಕ್ನಲ್ಲಿ ಟಿಕೆಟ್ ಖರೀದಿಸಿದ್ದರು. ಅಷ್ಟೇ ಅಲ್ಲ, ಆ ಬ್ಲಾಕ್ ಟಿಕೆಟ್ ಮಾರಾಟಗಾರನಲ್ಲಿ ಚಿತ್ರದ ಕುರಿತ ವಿಮರ್ಶೆಯನ್ನೂ ಕೇಳಿದ್ದಾರೆ. ಸಿನಿಮಾಗಳ ಕುರಿತು ಬ್ಲಾಕ್ ಟಿಕೆಟ್ ಮಾರುವವರೂ ಅತ್ಯುತ್ತಮ ವಿಮರ್ಶೆ ನೀಡಬಲ್ಲರು ಎಂಬ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಬ್ಲಾಕ್ ಟಿಕೆಟ್ ಮಾರುತ್ತಿದ್ದ ವ್ಯಕ್ತಿಯ ಮಾತುಗಳನ್ನು ರಹಸ್ಯವಾಗಿ ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. ಮುಂದೆ ಓದಿ...

ಬೆಲ್ ಬಾಟಂ ಚಿತ್ರ
2019ರ ಅತ್ಯಂತ ಹಿಟ್ ಚಿತ್ರಗಳಲ್ಲಿ 'ಬೆಲ್ ಬಾಟಂ' ಒಂದು. ಜಯತೀರ್ಥ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ಸಿನಿಮಾ ಶತದಿನೋತ್ಸವ ಆಚರಿಸಿತ್ತು. ಈ ಚಿತ್ರದ ಪ್ರದರ್ಶನದ ವೇಳೆ ತಮಗಾದ ಅನುಭವವನ್ನು ನಿರ್ದೇಶಕ ಜಯತೀರ್ಥ ಹಂಚಿಕೊಂಡಿದ್ದಾರೆ.

ಹೌಸ್ ಫುಲ್ ಪ್ರದರ್ಶನ
ವೀರೇಶ್ ಚಿತ್ರಮಂದಿರದಲ್ಲಿ 2019ರ ಮಾರ್ಚ್ 10ರ ಭಾನುವಾರ ರಾತ್ರಿ 9 ಗಂಟೆ ಶೋ ನೋಡಲು ಜಯತೀರ್ಥ ಕುಟುಂಬ ಸಮೇತ ಹೋಗಿದ್ದರು. ಬೆಲ್ ಬಾಟಂ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿತ್ತು. ತಮ್ಮ ಚಿತ್ರಕ್ಕೆ ತಮಗೇ ಟಿಕೆಟ್ ಖರೀದಿಸಲು ಕಷ್ಟವಾಗಿತ್ತು. ಹೀಗಾಗಿ ಬ್ಲಾಕ್ನಲ್ಲಿ ಟಿಕೆಟ್ ಮಾರುತ್ತಿದ್ದ ವ್ಯಕ್ತಿಯನ್ನು ಮಾತನಾಡಿಸಿದರು.

ಫ್ಯಾಮಿಲಿ ಪಿಕ್ಚರ್ ಅಂದ್ರೆ ಹೀಗೆ
'ಇನ್ನೂರು ಬಾಲ್ಕನಿ. ಇರೋದೇ ಆರು ಟಿಕೆಟ್. ಫಿಲಂ ಹೆಂಗೆ ಕಿತ್ಕೊಂಡು ಹೋಗ್ತಿದೆ ಗೊತ್ತಾ ಈ ವಾರ. ನನಗೇ ಆಶ್ಚರ್ಯ ಆಗುತ್ತೆ ಗೊತ್ತಾ. ಹೋದವಾರ ಈ ರೀತಿ ಕಲೆಕ್ಷನ್ನೇ ಇರ್ಲಿಲ್ಲ. ಇವೆಲ್ಲ ಎರಡನೆಯ ವಾರದ ಮೇಲೆ ರೈಸ್ ಆಗೋದು ಫ್ಯಾಮಿಲಿ ಪಿಕ್ಚರ್. ಸುಮ್ನೆ ಅದೆಲ್ಲ ಕೊಚ್ಚು ಕೊಚ್ಚು ಕೊಚ್ಚು ಅನ್ನೋ ಪಿಕ್ಚರೆಲ್ಲ ಒಂದು ವಾರ. ಕೊಚ್ಚು ಕೊಚ್ಚು ಅನ್ನೋದರಲ್ಲಿ ನಾವೇ ಕೊಚ್ಚಿಕೊಂಡು ಹೋಗಬೇಕಾಗುತ್ತದೆ' ಎಂದು ಫ್ಯಾಮಿಲಿ ಸಿನಿಮಾಗಳ ಮಹತ್ವ ಹೇಳಿದ್ದಾರೆ.
ಇಂಡಿಯಾ ಬಂದರೂ ಟಿಕೆಟ್ ಸಿಗೊಲ್ಲ
'ಬೆಲ್ ಬಾಟಂ ಬಾಲ್ಕನಿಗೆ ಇನ್ನೂರು. ಇಡೀ ಇಂಡಿಯಾನೇ ಹುಡುಕಿಕೊಂಡು ಬಂದರೂ ಬಾಲ್ಕನಿ ಟಿಕೆಟ್ ಸಿಗೊಲ್ಲ ಈಗ. ನಾನೇ ಧೈರ್ಯಮಾಡಿ ನೂರೈವತ್ತಕ್ಕೆ ಇಸ್ಕೊಂಡಿದ್ದೇನೆ. ಸುಮ್ನೆ ಅಲ್ಲ ನಾನು. ಬೇಕಾದರೆ ತಗೊಳ್ಳಿ. ಹತ್ತು ನಿಮಿಷದಲ್ಲಿ ಎಲ್ಲ ಟಿಕೆಟ್ ಖಾಲಿ ಮಾಡ್ತೀನಿ ನೋಡಿ. ಬ್ಲಾಕಲ್ಲಿ ನನ್ನದು ಇಪ್ಪತ್ತು ವರ್ಷ ಸರ್ವೀಸ್. ರೈಟ್ಸ್ ನಂದು. ಮೆಜೆಸ್ಟಿಕ್ನಲ್ಲಿ ಯಾವ ಪಿಕ್ಚರ್ ಕೇಳಿ ಹೇಳ್ತೀನಿ. ಬಾಲ್ಕನಿಗೆ ನನ್ನನ್ನೇ ಹುಡುಕಿಕೊಂಡು ಬರಬೇಕು' ಎಂದು ಆತ ಆತ್ಮವಿಶ್ವಾಸದಿಂದ ಮಾತನಾಡುತ್ತಲೇ ಇದ್ದ.

ಆ ದಿನಗಳು ಮತ್ತೆ ಬರಲಿ
'ಇದು ನಾನೇ ಚಿತ್ರೀಕರಿಸಿದ ವಿಡಿಯೋ. ನಾನೂ ಬ್ಲಾಕ್ನಲ್ಲಿ ಟಿಕೆಟ್ ತಗೊಂಡು ಕುಟುಂಬಕ್ಕೆ ಸಿನಿಮಾ ತೋರಿಸಬೇಕಾಯ್ತು. ಆದಷ್ಟು ಬೇಗ ಕೊರೊನಾ ತೊಲಗಲಿ. ಚಿತ್ರರಂಗದ ಸಂಭ್ರಮದ ದಿನಗಳು ವಾಪಸ್ ಬರಲಿ ಎಂದು ಆಶಿಸುತ್ತೇನೆ' ಎಂದು ಜಯತೀರ್ಥ ಹೇಳಿದ್ದಾರೆ.


Click it and Unblock the Notifications











