ಬೆಂಗಳೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ಮತ್ತೊಂದು ಚಿತ್ರಮಂದಿರ: ಈ ಸಿಂಗಲ್ ಸ್ಕ್ರೀನ್ ಇನ್ಮುಂದೆ ನೆನಪಷ್ಟೇ!
ಕೆಲವು ದಿನಗಳ ಹಿಂದಷ್ಟೇ ಫಿಲ್ಮಿಬೀಟ್ನಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಚರ್ಚೆ ಮಾಡಲಾಗಿತ್ತು. ಕಳೆದ ಒಂದೂವರೆ ವರ್ಷದಿಂದ ಬೆರಳೆಣಿಕೆಯಷ್ಟು ಸಿನಿಮಾಗಳು ಗೆದ್ದಿದ್ದು ಬಿಟ್ಟರೆ, ಸೋತ ಸಿನಿಮಾಗಳ ಸಂಖ್ಯೆ ಬಹುದೊಡ್ಡದಿದೆ. ಸೂಪರ್ಸ್ಟಾರ್ ಸಿನಿಮಾಗಳು ಥಿಯೇಟರ್ ಕಡೆಗೆ ಮುಖವನ್ನೂ ಮಾಡುತ್ತಿಲ್ಲ. ಹೊಸ ಸಿನಿಮಾಗಳನ್ನು ನೋಡಲು ಪ್ರೇಕ್ಷಕರಿಗೆ ಮನಸ್ಸಿಲ್ಲ. ಈ ಪರಿಣಾಮ ಚಿತ್ರಮಂದಿರಗಳು ಒಂದೊಂದಾಗಿಯೇ ಮುಚ್ಚುತ್ತಿವೆ.
ಬೆಂಗಳೂರಿನಲ್ಲಿ ಈಗಾಗಲೇ ಸಾಕಷ್ಟು ಸಿನಿಮಾ ಮುಚ್ಚಿವೆ. ಆ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ಗಳು ತಲೆ ಎತ್ತಿ ನಿಂತಿವೆ. ಈ ಸಾಲಿಗೆ ಈಗ ಮತ್ತೊಂದು ಚಿತ್ರಮಂದಿರ ಸೇರಿಕೊಂಡಿದೆ. ಬೆಂಗಳೂರಿನ ಶ್ರೀಮಂತರ ಬಡಾವಣೆಗೆ ಸಮೀಪದಲ್ಲಿದ್ದ, ಸುಮಾರು 50 ವರ್ಷಗಳಿಂದ ಸಾಕಷ್ಟು ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಾ ಬಂದಿದ್ದ ಚಿತ್ರಮಂದಿಗೆ ಈಗ ಸಂಪೂರ್ಣ ಸ್ಥಗಿತಗೊಂಡಿದೆ.

ಹೌದು, ಪ್ಯಾಲೇಜ್ ಗುಟ್ಟಹಳ್ಳಿಯಲ್ಲಿದ್ದ ಫೇಮಸ್ ಸಿಂಗಲ್ ಸ್ಕ್ರೀನ್ 'ಕಾವೇರಿ' ಸಂಪೂರ್ಣವಾಗಿ ತನ್ನ ಪ್ರದರ್ಶನವನ್ನು ನಿಲ್ಲಿಸಿದೆ. ಇಲ್ಲಿ ಕನ್ನಡವೂ ಸೇರಿದಂತೆ ಹಿಂದಿ ಹಾಗೂ ಪರಭಾಷೆಯ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದವು. ಡಾ.ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಸೇರಿದಂತೆ ಕನ್ನಡದ ದಿಗ್ಗಜರ ಸಿನಿಮಾಗಳು ಇದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು.
ಬೆಂಗಳೂರಿನ ಏರಿಯಾಗಳನ್ನು ಥಿಯೇಟರ್ಗಳ ಹೆಸರಿನಿಂದಲೇ ಗುರುತಿಸುತ್ತಿದ್ದ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಕಾವೇರಿ ಕೂಡ ಒಂದಾಗಿತ್ತು. ಕಾವೇರಿ ಚಿತ್ರಮಂದಿರ ಬೆಂಗಳೂರಿನ ಒಂದು ಲ್ಯಾಂಡ್ ಮಾರ್ಕ್ ಆಗುವಷ್ಟು ಫೇಮಸ್. 1974, ಜನವರಿ 11ರಂದು ಈ ಚಿತ್ರಮಂದಿರ ಆರಂಭಗೊಂಡಿತ್ತು. ಅಣ್ಣಾವ್ರು ನಟಿಸಿದ 'ಬಂಗಾರದ ಪಂಜರ' ಈ ಥಿಯೇಟರ್ನಲ್ಲಿ ಪ್ರದರ್ಶನಗೊಂಡ ಮೊದಲ ಸಿನಿಮಾ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿದ್ದ ದೊಡ್ಡ ಚಿತ್ರಮಂದಿರಗಳ ಪೈಕಿ ಕಾವೇರಿ ಕೂಡ ಒಂದಾಗಿತ್ತು. ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ಈ ಚಿತ್ರಮಂದಿರವನ್ನು ನಿರ್ಮಾಣ ಮಾಡಲಾಗಿತ್ತು. ಸಿಂಗಲ್ ಸ್ಕ್ರೀನ್ ಆಗಿದ್ದರೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಈ ಚಿತ್ರಮಂದಿರದಲ್ಲಿ ಇತ್ತು. ಹೀಗಾಗಿ ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿದ್ದರು. ಅಷ್ಟೇ ಅಲ್ಲ ಈ ಚಿತ್ರಮಂದಿರದಲ್ಲಿ ಸಿನಿಮಾದ ಚಿತ್ರೀಕರಣ ಕೂಡ ನಡೆದಿದೆ. ಪುನೀತ್ ರಾಜ್ಕುಮಾರ್ ಅಭಿನಯದ 'ಪರಮಾತ್ಮ' ಸಿನಿಮಾದ ಆರಂಭಿಕ ಸೀನ್ ಅನ್ನು ಇಲ್ಲಿಯೇ ಶೂಟಿಂಗ್ ಮಾಡಲಾಗಿತ್ತು.

ಇತ್ತೀಚೆಗೆ ಹೆಚ್ಚಾಗಿ ಹಿಂದಿ, ತೆಲುಗು ಹಾಗೂ ತಮಿಳು ಸಿನಿಮಾಗಳನ್ನೇ ಹೆಚ್ಚಾಗಿ ಪ್ರದರ್ಶನ ಮಾಡಲಾಗುತ್ತಿತ್ತು. 'ಬಡೇ ಮಿಯ್ಯಾ ಚೋಟೆ ಮಿಯ್ಯಾ', 'ಮೈದಾನ್' ಈ ಎರಡು ಸಿನಿಮಾಗಳನ್ನು ಪ್ರದರ್ಶನ ಮಾಡಿದ ಬಳಿಕ ಕಾವೇರಿ ಥಿಯೇಟರ್ ಅನ್ನು ಬಂದ್ ಮಾಡಲಾಗಿದೆ. ಅಷ್ಟಕ್ಕೂ ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಈ ಚಿತ್ರಮಂದಿರ ಮುಚ್ಚುವುದಕ್ಕೆ ಕಾರಣ ಪ್ರೇಕ್ಷಕರು ಓಟಿಟಿ ಹಾಗೂ ಮಲ್ಟಿಪ್ಲೆಕ್ಸ್ ಕಡೆ ವಾಲಿರುವುದು.
ಇತ್ತೀಚೆಗೆ ಓಟಿಟಿ ಥಿಯೇಟರ್ಗಳನ್ನು ಓವರ್ಕೇಟ್ ಮಾಡುವ ಆತಂಕ ಸಿನಿಮಾ ಮಂದಿಗೆ ಹೆಚ್ಚಾಗಿ ಕಾಡುತ್ತಿದೆ. ಇನ್ನೊಂದು ಕಡೆ ಮಲ್ಟಿಪ್ಲೆಕ್ಸ್ ಕಡೆ ಜನರು ಹೆಚ್ಚಾಗಿ ವಾಲುತ್ತಿದ್ದಾರೆ. ಈ ಕಾರಣಕ್ಕೆ ಸಿಂಗಲ್ ಸ್ಕ್ರೀನ್ಗೆ ಜನರು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರಿಯ ಚಿತ್ರಮಂದಿರಗಳಾದ ಕಪಾಲಿ, ಸಾಗರ್, ಕಲ್ಪನಾ, ಮೆಜೆಸ್ಟಿಕ್, ಪಲ್ಲವಿ ಅಂತಹ ಚಿತ್ರಮಂದಿರಗಳು ಈ ಹಿಂದೆನೇ ಮುಚ್ಚಿದ್ದವು. ಈಗ ಆ ಸಾಲಿಗೆ ಕಾವೇರಿ ಚಿತ್ರಮಂದಿರವೂ ಸೇರಿಕೊಂಡಿದೆ. ಈ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುವ ಯೋಜನೆಯಿದೆ.


Click it and Unblock the Notifications











