ಕಾರು ಅಪಘಾತ ಪ್ರಕರಣ: ನಟ ನಾಗಭೂಷಣ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ
ಟಗರು ಪಲ್ಯ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಟ ನಾಗಭೂಷಣ್ಗೆ ಬೆಂಗಳೂರು ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ. ಒಂದಲ್ಲ ಒಂದು ತೊಂದರೆಗೆ ಸಿಲುಕುತ್ತಿರುವ ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ತಿಂಗಳು ನಡೆದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಅವರು ಈಗ ತಾನೇ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಅವರ ಜೀವನದಲ್ಲಿ ಭಾರಿ ಕಷ್ಟದ ಸ್ಥಿತಿ ಎದುರಾಗಿದೆ. ದಂಪತಿ ಮೇಲೆ ಕಾರು ಹರಿಸಿ ಒಬ್ಬರ ಸಾವಿಗೆ ಕಾರಣರಾಗಿರುವ ಆರೋಪ ಅವರ ಮೇಲಿದ್ದು, ಈ ಪ್ರಕರಣದಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.

ನಾಗಭೂಷಣ್ಗೆ ತಪ್ಪದ ಸಂಕಷ್ಟ!
ಬೆಂಗಳೂರು ಸಂಚಾರಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಬರೋಬ್ಬರಿ 60 ಸಾಕ್ಷಿಗಳನ್ನು ಕಲೆಹಾಕಿದ್ದಾರೆ. ಹೀಗಾಗಿಯೇ ಅವರಿಗೆ ಈ ಪ್ರಕರಣದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಕುಮಾರಸ್ವಾಮಿ ಲೇಔಟ್ ಟ್ರಾಫಿಕ್ ಪೊಲೀಸರು ಪ್ರಕರಣವನ್ನು ಗಂಭಿರವಾಘಿ ಪರಿಗಣಿಸಿದ್ದು, ನಾಗಭೂಷಣ್ ಅವರ ಮೇಲೆ ಕೇಸ್ ಮತ್ತಷ್ಟು ಸ್ಟ್ರಾಂಗ್ ಆಗುತ್ತಿದೆ.
ಅಪಘಾತ ಪ್ರಕರಣ ದಾಖಲಾದ ಬಳಿಕ ಸಾಕ್ಷಿಗಳನ್ನು ಕಲೆ ಹಾಕಿರುವ ಅವರು ಬರೋಬ್ಬರಿ 80 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದಕ್ಕಾಗಿ 60 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ. ಘಟನೆ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆ.
ನಾಗಭೂಷಣ್ ಕಾರು ಅಪಘಾತ ಪ್ರಕರಣವೇನು?
ಕಳೆದ ತಿಂಗಳ ಅಕ್ಟೋಬರ್ 30 ರಂದು ಬೆಂಗಳೂರಿನ ಕೋಣನ ಕುಂಟೆ ಸಮೀಪ ನಟ ನಾಗಭೂಷಣ ಓಡಿಸುತ್ತಿದ್ದ ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಬಳಿಕ ವಿದ್ಯುತ್ ಕಂಬಕ್ಕೆ ಗುದ್ದಿ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಪ್ರೇಮಾ ಎಂಬುವವರು ಮೃತಪಟ್ಟಿದ್ದರು. ಅವರ ಪತಿ ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದರು.

ಅಪಘಾತದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣ ಅವರು ಈಗ ಚೇತರಿಕೆ ಕಂಡಿದ್ದು, ಪೊಲೀಸರು ಅವರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಇನ್ನು, ನಟ ನಾಗಭೂಷಣ ಅವರು, ದಂಪತಿ ಪುಟ್ಪಾತ್ನಿಂದ ಸಡನ್ ಆಗಿ ರಸ್ತೆಗೆ ಬಂದಾಗ ಕಾರು ಕಂಟ್ರೊಲ್ ಸಿಗದೆ ಡಿಕ್ಕಿ ಹೊಡೆದಿದೆ ಎಂದಿದ್ರು. ಆದರೆ, ಸಂತ್ರಸ್ತರಾದ ಕೃಷ್ಣ ಇದಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದ್ದು, ಪುಟ್ಪಾತ್ ಮೇಲೆ ಹೋಗುತ್ತಿದ್ದ ನಮ್ಮ ಮೇಲೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆಯಿತು ಎಂದಿದ್ದಾರೆ.
ನಾನು ಓಡಿಹೋಗಿಲ್ಲ ಎಂದಿದ್ದ ನಟ ನಾಗಭೂಷಣ
ಘಟನೆ ಬಳಿಕ ಪ್ರಕರಣ ದಾಖಲಾಗಿತ್ತು. ಇದಾದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ನಟ ನಾಗಭೂಷಣ, ನಾನು ಎಲ್ಲಿಯೋ ಓಡಿ ಹೋಗಿಲ್ಲ. ಹಿಟ್ ಅಂಡ್ ರನ್ ಎಂದು ಹೇಳಬೇಡಿ ಎಂದು ಮನವಿ ಮಾಡಿದ್ದರು. "ನಾನು ಆರ್ಆರ್ ನಗರದಿಂದ ಕೋಣನಕುಂಟೆಗೆ ಹೋಗುವಾಗ ಈ ಅಪಘಾತ ನಡೆಯಿತು. ಆದರೆ ಕೆಲವರು ಅದನ್ನು ಹಿಟ್ ಅಂಡ್ ರನ್ ಎಂದು ಕರೆಯುತ್ತಿದ್ದಾರೆ. ನಾನು ಎಲ್ಲೂ ಓಡಿ ಹೋಗಿರಲಿಲ್ಲ. ಅಪಘಾತವಾದಾಗ ನಾನೇ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದೆ" ಎಂದಿದ್ದರು.
"ಆಕ್ಸಿಡೆಂಟ್ ಬಳಿಕ ನಾನೆ ನನ್ನ ಕಾರಿನ ಬಂಪರ್ ಕಿತ್ತು ಬಿಸಾಕಿದೆ. ಆ ಮಹಿಳೆಯನ್ನು ನಾನೇ ಮಡಿಲಿನಲ್ಲಿ ಮಲಗಿಸಿಕೊಂಡು ಸಮಾಧಾನ ಮಾಡಿದ್ದೆ. ಅಪಘಾತದ ಬಳಿಕ ನಾನೇ ಖುದ್ದು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದೆ. ಪೊಲೀಸರು ಬಂದು ಕುಡಿದಿದ್ಯಾ ಎಂದು ಪರಿಕ್ಷಿಸಿದ್ದರು. ಘಟನೆ ನಡೆದ ಬಳಿಕ ನಾನು ಮಾನಸಿಕವಾಗಿ ಕುಸಿದು ಬಿಟ್ಟಿದ್ದೀನಿ. ನಾನು ಸಹ ಚಿಕ್ಕ ವಯಸ್ಸಿನಲ್ಲೇ ತಂದೆ ಕಳೆದುಕೊಂಡಿದ್ದೀನಿ. ಹಾಗಾಗಿ ನೋವು ನನಗೆ ಗೊತ್ತು" ಎಂದು ಭಾವುಕರಾಗಿ ಮಾತನಾಡಿದ್ದರು.


Click it and Unblock the Notifications











