"ನನಗೂ ದರ್ಶನ್ಗೂ ವ್ಯತ್ಯಾಸವಿದೆ, ನಾನೊಬ್ಬ ಹೋರಾಟಗಾರ"; ದರ್ಶನ್ ಬಗ್ಗೆ ಲಾಯರ್ ಜಗದೀಶ್ ಹೇಳಿದ್ದೇನು?
ಬಿಗ್ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಮೂರು ತಿಂಗಳು ಸೆರೆವಾಸ ಅನುಭವಿಸಿದ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಗಲಾಟೆ ಕೇಸ್ನಲ್ಲಿ ಅಂದರ್ ಆಗಿದ್ದ ಲಾಯರ್ ಜಗದೀಶ್ ಜಾಮೀನು ಸಿಗದೇ ಮೂರು ತಿಂಗಳು ಪರದಾಡಿದ್ದರು. ಕೊನೆಗೂ ಈಗ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದಾರೆ. ಅಲ್ಲಿಂದ ಜಗದೀಶ್ ಮತ್ತಷ್ಟು ಆಕ್ಟಿವ್ ಆಗಿದ್ದಾರೆ. ಡಿಕೆ. ಶಿವಕುಮಾರ್, ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಜೈಲಿನಿಂದ ಹೊರ ಬಂದ ಬಳಿಕ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಮಾತಾಡಿದ್ದಾರೆ. ಅದರಲ್ಲಿ ದರ್ಶನ್ ಕೇಸ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ನೇರವಾಗಿ ಕೆಲವು ಆರೋಪಗಳನ್ನು ಮಾಡಿದ್ದಾರೆ. ತಮ್ಮನ್ನು ಜೈಲಿಗೆ ಕಳಿಸಿ, ಜಾಮೀನು ಸಿಗದಂತೆ ನೋಡಿಕೊಂಡಿದ್ದೇ ಡಿಕೆ ಶಿವಕುಮಾರ್ ಎಂದು ಆರೋಪ ಮಾಡಿದ್ದರು.

ದರ್ಶನ್ ಜೈಲಿಗೆ ಹೋದಾಗ ಇದೇ ಜಗದೀಶ್ ಅವರು ಜೈಲಿನಿಂದ ಬಿಡಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದರು. ಬಳಿಕ ದರ್ಶನ್ ಅಭಿಮಾನಿಗಳು ಹಾಗೂ ಲಾಯರ್ ಜಗದೀಶ್ ನಡುವೆ ಕಿತ್ತಾಟ ಶುರುವಾಗಿತ್ತು. ಅದೇ ಲಾಯರ್ ಜಗದೀಶ್ ಜೈಲಿಗೆ ಹೋದಾಗ ದರ್ಶನ್ ಅವರ ಕೆಲ ಅಭಿಮಾನಿಗಳು ಕಿಚಾಯಸಿದ್ದರು. ಅದಕ್ಕೂ ಈ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ರಮೇಶ್ ಜಾರಕಿಹೊಳಿ, ಡಿಕೆ ಶಿವಕುಮಾರ್, ಸಿಎಂ ಸಿದ್ಧರಾಮಯ್ಯ ಬಗ್ಗೆನೂ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
"ದರ್ಶನ್ಗೂ ನನಗೂ ವ್ಯತ್ಯಾಸವಿದೆ"
ದರ್ಶನ್ ಬಗ್ಗೆ ಮಾತಾಡುತ್ತಿದ್ದ ಲಾಯರ್ ಜಗದೀಶ್ ಕೂಡ ಜೈಲಿಗೆ ಹೋಗಿದ್ದಾರೆ ಅನ್ನೋ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಾನು ಕೊಲೆ ಆರೋಪದ ಮೇಲೆ ಜೈಲಿಗೆ ಹೋಗಿಲ್ಲ ಎಂದಿದ್ದಾರೆ. "ದರ್ಶನ್ ಕೊಲೆ ಆರೋಪದಲ್ಲಿ ಒಳಗೆ ಹೋಗಿದ್ದ ಬ್ರದರ್. ಅವನಿಗೂ ನಮಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ. ದರ್ಶನ್ ಎಲ್ಲಿ? ನಾನು ಎಲ್ಲಿ? ನಾನೊಬ್ಬ ಹೋರಾಟಗಾರ. ಅವನ ಮೇಲೆ ಕೊಲೆ ಆರೋಪವಿದೆ. ನನ್ನ ಮೇಲೆ ಯಾವುದೇ ಕೊಲೆ ಆರೋಪವಿಲ್ಲ. ನಾನು ಯಾವುದು ಮಾಡುವುದೂ ಇಲ್ಲ. ನನಗೆ ಅದರ ಅವಶ್ಯಕತೆನೂ ಇಲ್ಲ." ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.

ಸಾಮಾನ್ಯದವರನ್ನು ಎದುರು ಹಾಕೊಂಡಿಲ್ಲ
ಇದೇ ಸಂದರ್ಶನದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಎದುರಾಕಿಕೊಂಡಿದ್ದೇನೆ. ಚಿಕ್ಕ ಪುಟ್ಟದವರನ್ನು ಅಲ್ಲ ಎಂದಿದ್ದಾರೆ. "ಅವರು ಯಾರೋ ಪೌರ ಕಾರ್ಮಿಕರನ್ನು ಮುಟ್ಟಿಲ್ಲ. ನಿಮಗೆ ಗೊತ್ತಿದೆ, ಬಸವರಾಜ ಬೊಮ್ಮಾಯಿ ಅವರನ್ನು ಹಾಕೊಂಡು ಬಂದೆ, ರವಿ ಡಿ ಚನ್ನಣ್ಣನವರ್ ಹಾಕೊಂಡು ಬಂದೆ, ಈ ಕಡೆ ಬೆಳಗಾವಿಯ ಜಾರಕಿಹೊಳಿ ಫ್ಯಾಮಿಲಿ, ಪಿಎಸ್ಐ ಹಗರಣದಲ್ಲಿ ಎಡಿಜಿಪಿ ಅಮೃತ್ಪಾಲ್ ಇಂತವರನ್ನು ಮುಟ್ಟಿಲ್ಲ ಅಂತಲ್ಲ." ಎಂದಿದ್ದಾರೆ.
ಡಿಕೆ ಶಿವಕುಮಾರ್ 4 ಬಾರಿ ಕರೆಸಿದ್ದರು
"ನನ್ನನ್ನು ಸಾಕಷ್ಟು ಬಾರಿ ಬಳಸಿಕೊಂಡಿದ್ದಾರೆ. ಇದೇ 2023ರಲ್ಲಿ ರಮೇಶ್ ಜಾರಕಿಹೊಳಿ ಕೇಸ್ ಮಾಡಬೇಕಾದರೆ, ಇದೇ ಡಿಕೆ ಶಿವಕುಮಾರ್ ನಾಲ್ಕು ಸಾರಿ ಕರೆಸಿಕೊಂಡಿದ್ದಾರೆ. ನಿಮ್ಮ ಹೋರಾಟ ಮುಂದುವರೆಯಿಲಿ ಎಂದಿದ್ದಾರೆ. ನಾನು ಯಾವ ಹೋರಾಟ ಅಂದರೆ, ರಮೇಶ್ ಜಾರಕಿಕೊಳಿ ಕೇಸ್. ಅದಕ್ಕೆ ಏನು ಹಣ ಖರ್ಚಾಗುತ್ತೆ, ಅದನ್ನೆಲ್ಲಾ ಕೊಡುತ್ತೇನೆ ಎಂದು ಹೇಳಿದ್ದರು. ಅವತ್ತು ಯಾರು ಬೇಕೋ ಅವರು ರಾಜಕೀಯ ತೀಟೆ ತೀರಿಸಿಕೊಂಡರು. ಅವತ್ತು ನಾನು ರಾಜಕೀಯವಾಗಿ ಪ್ರಬುದ್ಧನಾಗಿರಲಿಲ್ಲ. ರಮೇಶ್ ಜಾರಕಿಹೊಳಿ ಕೇಸ್ ಆದಾಗ, ಆ ಹೆಣ್ಣು ಮಗಳನ್ನು ರಕ್ಷಿಸಬೇಕು ಅಂತ ಮಾಡಿದ್ದು, ಡಿಕೆ ಶಿವಕುಮಾರ್ಗೆ ಸಹಾಯ ಮಾಡಬೇಕು ಅಂತ ನಮಗೆ ಗೊತ್ತಿರಲಿಲ್ಲ. ಅದರ ಅಡ್ವಾಂಟೆಜ್ ಅನ್ನು ಡಿಕೆ ಶಿವಕುಮಾರ್ ಕರೆಸಿಕೊಂಡು ತೆಗೆದುಕೊಂಡರು." ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ಧರಾಮಯ್ಯಗೆ ತಾಳ್ಮೆ ಇಲ್ಲ
"ನಮ್ಮ ಕರ್ನಾಟಕದ ಸಿಎಂಗೆ ತಾಳ್ಮೆ ಇಲ್ಲ ಅನ್ನೋದನ್ನು ನೋಡಿ ನಮಗೆ ಆಶ್ಚರ್ಯ ಆಗುತ್ತೆ. ಡಿಕೆ ಶಿವಕುಮಾರ್ ಪರ್ಸಂಟೇಜ್ ಕೇಳಿದ್ದಾರೆ ಎನ್ನುವ ಆರೋಪವಿದೆ. ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆದುಕೊಂಡು ಹೋದ ಪಿಎಂ ಆಗಬೇಕು ಅಂತ ಅಂದುಕೊಂಡರು. ಆದರೆ ಅವರು ಆಗಲಿಲ್ಲ. ಅವತ್ತು ಅವರು ಆರೋಪ ಮಾಡಿದ್ದೂ ಕೂಡ ಇದೇ 40 ಪರ್ಸಂಟೇಜ್ ಬಗ್ಗೆನೇ. ಆದರೆ, ಅವರ ಹತ್ತಿರ ಸಾಕ್ಷಿ ಇರಲಿಲ್ಲ. ಜನರಿಗೆ ಟೋಪಿ ಹಾಕಿದ್ದಾರೆ. ಅವರಿಗೆ ಚುನಾವಣೆ ಗೆಲ್ಲುವುದೇ ಉದ್ದೇಶವಾಗಿತ್ತು." ಎಂದು ಆರೋಪಿಸಿದ್ದಾರೆ.


Click it and Unblock the Notifications











