"ಹಾಯ್ ಬಾಸ್ ಅಂದ, ಹಾಗೇ ಒಂದು ಕಪಾಳಕ್ಕೆ ಹೊಡೆದೆ"; ಒಳ್ಳೆಯ ಹುಡುಗ ಪ್ರಥಮ್
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಅವರ ಅಭಿಮಾನಿಗಳಿಗೆ ಪ್ರಥಮ್ ಸಲಹೆ ನೀಡಿದ್ದರು. ಈ ಬೆನ್ನಲ್ಲೇ ವಿಡಿಯೋ ವೈರಲ್ ಆಗುತ್ತಿದ್ದಂತೆ ದರ್ಶನ್ ಫ್ಯಾನ್ಸ್ ಪ್ರಥಮ್ಗೆ ಜೀವ ಬೆದರಿಕೆ ಹಾಕಿದ್ದಾರೆಂದು ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದ್ದಾರೆ.
ಇದೂವರೆಗೂ ದರ್ಶನ್ ಅಭಿಮಾನಿಗಳಿಂದ ಸುಮಾರು 500ಕ್ಕೂ ಅಧಿಕ ಫೋನ್ ಕರೆಗಳು ಬಂದಿವೆ ಎಂದು ಪ್ರಥಮ್ ಹೇಳಿಕೊಂಡಿದ್ದಾರೆ. ಜೀವ ಬೆದರಿಕೆ ಕರೆಗಳನ್ನು ಸ್ವೀಕರಿಸಿದ ಬಳಿಕ ಎಚ್ಚರಿಕೆ ಕ್ರಮವಾಗಿ ರಕ್ಷಣೆ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ದರ್ಶನ್ ಅಭಿಮಾನಿಗಳಿಂದ ಬಂದಿದ್ದ ಕರೆಗಳ ಬಗ್ಗೆ ಪ್ರಥಮ್ ಮಾಧ್ಯಮಗಳ ಬಗ್ಗೆ ಮಾತಾಡಿದ್ದಾರೆ.

ದರ್ಶನ್ ಬಂಧನವಾಗುತ್ತಿದ್ದಂತೆ ಅಭಿಮಾನಿಗಳು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಜೈಕಾರ ಹಾಕಿದ್ದರು. ಈ ಘಟನೆಯ ಬಳಿಕ ಮಾಜಿ ಬಿಗ್ಬಾಸ್ ವಿನ್ನರ್ ಪ್ರಥಮ್ "ಪೊಲೀಸರು ನನಗೆ ಒಂದು ವಾರ ಕಾನ್ಸ್ಸ್ಟೇಬಲ್ ಡ್ಯೂಟಿ ಕೊಟ್ಟರೆ, ಎಲ್ಲಾ ದರ್ಶನ್ ಅಭಿಮಾನಿಗಳನ್ನು ಲಾಠಿಯಿಂದ ಹೊಡೆದು ಒಬ್ಬರೂ ಬಾರದಂತೆ ಬುದ್ಧಿ ಕಲಿಸುತ್ತೇನೆ" ಎಂದು ಹೇಳಿದ್ದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಪ್ರಥಮ್ ವಿರುದ್ಧ ಕಿಡಿಕಾರಿದ್ದರು.
ಈಗ ಪ್ರಥಮ್ ಜೀವಬೆದರಿಕೆ ಕರೆಗಳು ಬರುತ್ತಿವೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ದೂರು ನೀಡಿದ ಬಳಿಕ ಪ್ರಥಮ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ದರ್ಶನ್ ಅಭಿಮಾನಿಗಳಿಗೆ ಮತ್ತೆ ಬುದ್ದಿಮಾತುಗಳನ್ನು ಹೇಳಿದ್ದಾರೆ.
"ನೀವು ಇಷ್ಟ ಪಡುವ ನಟರ ಜೊತೆ 48 ಗಂಟೆ ಓಡಾಡಿದರೆ ಸಾಕು. ನಿಮಗೆ ಅಸಹ್ಯ ಬಂದು ಬಿಡುತ್ತೆ. ನಾನು ಇಂತಹ ನಟನ ಅಭಿಮಾನಿನಾ ಅಂತ ಅನಿಸಿಬಿಡುತ್ತೆ. ಯಾರನ್ನೋ ನೋಡಿ ಇವನು ಯಾವನೋ ಕಿತ್ತೋದ್ ನನ್ ಮಗ ಅಂತೀವಿ. ಹತ್ತಿರ ಬಂದ ಕೂಡಲೇ ತಬ್ಬಿಕೊಳ್ಳುತ್ತೇವೆ. ಬರೀ ಡವ್ವು ನಮ್ಮದು" ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ದರ್ಶನ್ ಅವರು ನಿರಪರಾಧಿಯಾಗಿ ಹೊರಬಂದರೆ ಖುಷಿ ಪಡುತ್ತೇನೆ. ಚಿತ್ರರಂಗಕ್ಕೆ ಇದ್ದ ಕಳಂಕ ತೊಲಗಿತ್ತಲ್ಲ ಅಂತ ಖುಷಿ ಆಗುತ್ತೆ. "ದರ್ಶನ್ ಸರ್ ಹೊರಗೆ ಬಂದರೆ ಅತೀ ಹೆಚ್ಚು ಖುಷಿ ಪಡೋದು ನಾನು. ಯಾಕಂದ್ರೆ ಕಳಂಕ ಮುಕ್ತರಾದರಲ್ಲ." ಎಂದಿದ್ದಾರೆ. ಹೀಗಿದ್ದೂ, ಅಭಿಮಾನಿಗಳು ತನಗೆ ಹೊಡೆಯುವುದಕ್ಕೆ ಬರುತ್ತಾರೆ ಅಂದರೆ ಏನು ಮಾಡುವುದಕ್ಕೆ ಆಗುತ್ತೆ ಎಂದಿದ್ದಾರೆ.
ಹಾಗೇ ಅಭಿಮಾನಿಗಳಿಗೆ ಯಾರನ್ನೂ ಬಾಸ್ ಅಂತ ಕರೆಯಬೇಡಿ ಎಂದಿದ್ದಾರೆ. "ಮೊನ್ನೆ ಹೀಗೆ ಬರುತ್ತಿದ್ದೆ. ಯಾರೋ ಒಬ್ಬ ಪ್ರಥಮ್ ಬಾಸ್ ಹಾಯ್ ಅಂದ. ಹಾಗೇ ಒಂದು ಕಪಾಳಕ್ಕೆ ಹೊಡೆದೆ. ನೀನು ಬಾಸ್ ಅಂದರೆ ನನಗೆ ತಲೆ ತಿರುಗುತ್ತೆ. ಯಾವ ಸೀಮೆ ಬಾಸ್ ನಾನು. ಬಾಸ್ ಅಂದರೆ, ನನಗೆ ಮದ ಹೆಚ್ಚಾಗುತ್ತೆ. ನಾನು ನಿನಗೆ ಒಂದು ಹೊತ್ತಿನ ಹಿಟ್ಟು ಕೊಟ್ನಾ? ಇಲ್ವಲ್ಲ. ಕರ್ನಾಟಕದಲ್ಲಿ ಕನ್ನಡ ಬಾಸು. ಕನ್ನಡಿಗರು ನಮಗೆ ಬಾಸು. ನಿಮ್ಮ ಅಪ್ಪ ಅವ್ವ ನಿಮಗೆ ಬಾಸ್. ಮನೆಗೆ ನಡಿ ಅಂತ ಹೇಳಿದೆ." ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











