'ಒಡೆಯ'ನ ಮನೆಗೆ ಓಡೋಡಿ ಬಂದ 'ಹಳ್ಳಿಕಾರ್'; ದರ್ಶನ್ ಮನೆ ಮುಂದೆ ವರ್ತೂರು ಸಂತೋಷ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು (ಫೆಬ್ರವರಿ 16) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರೋ ನಟನಿಗೆ ಚಿತ್ರರಂಗದ ಗಣ್ಯರು ಶುಭಕೋರಿದ್ದಾರೆ. ಸ್ಯಾಂಡಲ್ವುಡ್ನ ಕೆಲ ತಾರೆಯರು ಮಧ್ಯರಾತ್ರಿಯಿಂದಲೇ ಮನೆಗೆ ತೆರಳಿ ಶುಭ ಕೋರುತ್ತಿದ್ದಾರೆ. ಅಭಿಮಾನಿಗಳ ಮಧ್ಯೆನೇ ದರ್ಶನ್ ಕೂಡ ಅತಿಥಿಗಳಿಗೆ ಶುಭಾಶಯಗಳನ್ನು ಸ್ವೀಕರಿಸುತ್ತಿದ್ದಾರೆ.
ಇತ್ತೀಚೆಗೆ ಬಿಗ್ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋನಲ್ಲಿ ನಾಲ್ಕನೇ ರನ್ನರ್ ಅಪ್ ಆಗಿದ್ದ ವರ್ತೂರು ಸಂತೋಷ್ ಕೂಡ ದರ್ಶನ್ ಮನೆಗೆ ಭೇಟಿ ಕೊಟ್ಟಿದ್ದಾರೆ. ದರ್ಶನ್ ಬರ್ತ್ಡೇ ದಿನವೇ ಭೇಟಿ ಕೊಟ್ಟಿರೋದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ದರ್ಶನ್ಗೂ ಹಳ್ಳಿಕಾರ್ ಒಡೆಯನಿಗೂ ಏನು ನಂಟು? ಬರ್ತ್ಡೇ ವಿಶ್ ಮಾಡುವುದಕ್ಕೆ ಬಂದ್ರಾ? ಇಲ್ಲಾ ಹಳ್ಳಿಕಾರ್ ರೇಸ್ಗೆ ಶುಭಕೋರುವುದಕ್ಕೆ ಬಂದ್ರಾ? ಅನ್ನೋ ಪ್ರಶ್ನೆ ಅವರ ಬೆಂಬಲಿಗರನ್ನು ಕಾಡುತ್ತಿದೆ.

ವರ್ತೂರು ಸಂತೋಷ್ ಬಿಗ್ಬಾಸ್ ಮನೆಯಿಂದ ಬಂದ್ಮೇಲೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಹಳ್ಳಿಕಾರ್ ತಳಿಗಳ ಮೇಲಿನ ಅವರ ಪ್ರೀತಿಯನ್ನು ಹೊಗಳಿ ಕೊಂಡಾಡುತ್ತಿದ್ದಾರೆ. ಇತ್ತ ದರ್ಶನ್ ಕೂಡ ಪ್ರಾಣಿ ಪ್ರಿಯ ಅನ್ನೋದು ಗೊತ್ತಿದೆ. ಹೀಗಾಗಿ ವರ್ತೂರು ಸಂತೋಷ್ ಚಾಲೆಂಜಿಂಗ್ ಸ್ಟಾರ್ ಮನೆಗೆ ಭೇಟಿ ಕೊಟ್ಟಿದ್ದು ಸಹಜವಾಗಿಯೇ ಅಚ್ಚರಿ ಮೂಡಿಸಿದೆ. ಆದರೆ, ಹಿಂದೇನೆ ವರ್ತೂರು ಸಂತೋಷ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಮಾತಾಡಿದ್ದರು. ಅದರ ಝಲಕ್ ಇಲ್ಲಿದೆ.
ವರ್ತೂರು ಸಂತೋಷ್ ಬಿಗ್ಬಾಸ್ ಮನೆಯೊಳಗೆ ಹೋಗುವುದಕ್ಕೂ ಮುನ್ನವೇ ದರ್ಶನ್ ಬಗ್ಗೆ ಮಾತಾಡಿದ್ದರು. ಇಬ್ಬರೂ ಪ್ರಾಣಿ ಪ್ರಿಯರಾಗಿದ್ದರಿಂದ ಇಬ್ಬರಲ್ಲೂ ಚಿಕ್ಕದೊಂದು ಸಾಮ್ಯತೆ ಇದೆ. ಈಗ ಹುಟ್ಟುಹಬ್ಬದ ದಿನವೇ ದರ್ಶನ್ ಮನೆಗೆ ಭೇಟಿ ಕೊಟ್ಟಿದ್ದು ಕುತೂಹಲ ಮೂಡಿದೆ. ಬಹುಶ: ಬೆಂಗಳೂರಿನಲ್ಲಿ ನಡೆಯಲಿರುವ ಹಳ್ಳಿಕಾರ್ ರೇಸ್ಗೆ ಆಹ್ವಾನ ಕೊಡುವುದಕ್ಕೆ ಬಂದಿರಬಹುದು ಅನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಒಂದು ವರ್ಷದ ಹಿಂದೆ ವರ್ತೂರು ಸಂತೋಷ್ ಯೂಟ್ಯೂಬ್ ಚಾನೆಲ್ ಒಂದರಲ್ಲಿ ದರ್ಶನ್ ಬಗ್ಗೆ ಮಾತಾಡಿದ್ದರು. "ಪ್ರಾಣಿ ಪ್ರಿಯರು ಯಾರು ಇರುತ್ತಾರೆ. ಅವರು ನಿಷ್ಕಲ್ಮಶ ಪ್ರೀತಿ ಕೊಟ್ಟು, ನಿಷ್ಕಲ್ಮಶ ಪ್ರೀತಿ ತೆಗೆದುಕೊಳ್ಳೋರು. ಪ್ರಾಣಿಗಳಿಗೆ ಸುಳ್ಳು ಪ್ರೀತಿ ಅನ್ನೋದು ಗೊತ್ತೇ ಇಲ್ಲ. ನಾವು ಅಷ್ಟೇನೆ ಸುಳ್ಳು ಪ್ರೀತಿ ತೋರಿದರೆ, ಅವು ಅಷ್ಟೇ ಸರಿಯಾಗಿಯೇ ಕೊಡುತ್ತವೆ. ಹೀಗಾಗಿ ದನಗಳು ಅಷ್ಟೇ ಅಲ್ಲ. ಯಾವುದೇ ಪ್ರಾಣಿ ಆಗಿರಬಹುದು ನಿಷ್ಕಲ್ಮಶ ಪ್ರೀತಿ ಕೊಟ್ಟರೆ, ಅದರ 10ರಷ್ಟು ಪ್ರೀತಿ ನಮಗೆ ವಾಪಸ್ ಕೊಡುತ್ತವೆ." ಎಂದು ಪ್ರಾಣಿ ಪ್ರೀತಿ ಬಗ್ಗೆ ಮಾತಾಡಿದ್ದರು.

ಇದೇ ಸಂದರ್ಶನದಲ್ಲಿ ದರ್ಶನ್ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಆ ಅಭಿಯಾನವನ್ನು ನೆನಪಿಸಿಕೊಂಡಿದ್ದರು. "ದರ್ಶನ್ ಸರ್ ಅಷ್ಟೇನೆ ಯಾವುದೋ ಒಂದು ವಿಡಿಯೋ ಮಾಡಿ ಬಿಡುತ್ತಾರೆ. ಮೃಗಾಲಯಗಳಲ್ಲಿ ಪ್ರಾಣಿ ನಿರ್ವಹಣೆ ಮಾಡುವುದಕ್ಕೆ ಕಷ್ಟ ಎಂದು ಹೇಳಿದ್ದರು. ಅದನ್ನು ನೋಡಿರುವಂತಹ ಅವರ ಅಭಿಮಾನಿಗಳು ಎಷ್ಟೋ ಜನ, ಒಂದೇ ದಿನ ಎಷ್ಟೆಷ್ಟೋ ಕೋಟಿ ಹಣ ಕೊಟ್ಟಿದ್ದಾರೆ." ಎಂದು ಹೇಳಿದ್ದರು.
ಹಾಗೇ ಹಳ್ಳಿಕಾರ್ ತಳಿಗಳ ಬಗ್ಗೆನೂ ಮಾತಾಡಬೇಕು ಎಂದು ಹೇಳಿಕೊಂಡಿದ್ದರು. "ನಮ್ಮ ಹಳ್ಳಿಕಾರ್ ಬಗ್ಗೆ ಒಲವು ತೋರಿ ಮಾತಾಡಿದರೆ, ಅವರ ಅಭಿಮಾನಿಗಳು ಹಳ್ಳಿಕಾರ್ ತಳಿಗಳನ್ನು ಸಾಕುವುದಕ್ಕೆ ಮುಂದೆ ಬರುತ್ತಾರೆ ಅಂತ ಅಂದುಕೊಂಡಿದ್ದೇನೆ. ದರ್ಶನ್ ಅವರನ್ನು ಬೆಂಗಳೂರು ರೇಸ್ಗೆ ಕರೆಸಬೇಕು ಅಂತ ಅಂದುಕೊಂಡಿದ್ದೇನೆ." ಎಂದು ವರ್ತೂರು ಸಂತೋಷ್ ಒಂದು ವರ್ಷದ ಹಿಂದೆನೇ ದರ್ಶನ್ ಬಗ್ಗೆ ಹೇಳಿದ್ದರು.


Click it and Unblock the Notifications











