BBK 11:ಬಿಟ್ಟರೂ ಕಷ್ಟ.. ಇಟ್ಟುಕೊಂಡರೂ ಕಷ್ಟ; ಲಾಯರ್ ಜಗದೀಶ್ ಇರಬೇಕಾ? ಹೊರಬರಬೇಕಾ?
ಬಿಗ್ಬಾಸ್ ಕನ್ನಡ ಸೀಸನ್ 10 ಹ್ಯಾಪಿ ಬಿಗ್ಬಾಸ್ ಅಂತ ಶುರುವಾಗಿತ್ತು. ಸ್ಪರ್ಧಿಗಳ ಆಯ್ಕೆಯಿಂದ ಹಿಡಿದು ಪ್ರತಿಯೊಂದಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಬಿಗ್ ಬಾಸ್ ಕನ್ನಡ ಸೀಸನ್ 11 ಯಾಕೋ ಮಿಸ್ ಹೊಡೆಯುವ ಹಾಗೆ ಕಾಣಿಸುತ್ತಿದೆ. ಮೊದಲ ವಾರದಲ್ಲೇ ಬಿಗ್ಬಾಸ್ ಮನೆಯಲ್ಲಿ ಕಿತ್ತಾಟ ಶುರುವಾಗಿದೆ.
ಅದರಲ್ಲೂ ಲಾಯರ್ ಜಗದೀಶ್ ಕಾಟಕ್ಕೆ ಉಳಿದ ಸ್ಪರ್ಧಿಗಳು ತಲೆ ಕೆಡಿಸಿಕೊಂಡಿದ್ದಾರೆ. ಪ್ರತಿಯೊಂದು ವಿಚಾರಕ್ಕೂ ವಕೀಲ್ ಸಾಬ್ ಗರಂ ಆಗುತ್ತಿದ್ದಾರೆ. ತಮ್ಮ ಸಹ ಸ್ಪರ್ಧಿಯನ್ನೇ ಕೆಣಕುತ್ತಿದ್ದಾರೆ. ಏಕವಚನದಲ್ಲಿ ಮಾತಾಡಿಸುತ್ತಿದ್ದಾರೆ. ಟಾಸ್ಕ್ನಲ್ಲಿ ಹೇಳಿದ ಮಾತು ಕೇಳುತ್ತಿಲ್ಲ. ಈ ಕಾರಣಕ್ಕೆ ಲಾಯರ್ ಜಗದೀಶ್ ಮನೆಯೊಳಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದಾರೆ.

ನಿನ್ನೆ (ಅಕ್ಟೋಬರ್ 2) ಪ್ರಸಾರವಾದ ಎಪಿಸೋಡ್ನಲ್ಲೂ ಲಾಯರ್ ಜಗದೀಶ್ ಉಗ್ರ ಸ್ವರೂಪ ತಾಳಿದ್ದರು. ಹೊರಗಡೆ ಇದ್ದಂತೆ ಬಿಗ್ಬಾಸ್ ಮನೆಯೊಳಗೆ ಅವಾಜ್ ಹಾಕಿದ್ದಾರೆ. ಲಾಯರ್ ಜಗದೀಶ್ಗೂ ವಿರುದ್ಧ ಧನರಾಜ್ ಹಾಗೂ ಮಾನಸ ತುಕಾಲಿ ಇಬ್ಬರೂ ತಿರುಬಿದ್ದಿದ್ದಾರೆ. ಈ ಮಧ್ಯೆ ಇನ್ನೊಂದು ಬೆಳವಣಿಗೆ ನಡೆದು ಹೋಗಿದೆ. ಈ ವಕೀಲ್ ಸಾಬ್ ಬಿಗ್ಬಾಸ್ ವಿರುದ್ಧವೇ ಆವಾಜ್ ಹಾಕಿದ್ದಾರೆ.
ಈ ಬೆಳವಣಿಗೆ ಬಳಿಕ ಸ್ವತ: ಬಿಗ್ಬಾಸ್ ಸಂಕಷ್ಟಕ್ಕೆ ಸಿಲುಕಿದೆ. ಮನೆಯಿಂದ ಹೊರಗೆ ಕಳಿಸಿದರೂ ಸಮಸ್ಯೆ. ಒಳಗೆ ಇಟ್ಟುಕೊಂಡರೂ ಸಮಸ್ಯೆ. ಲಾಯರ್ ಜಗದೀಶ್ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತೆ? ಮುಂದಿನ ನಿರ್ಧಾರವೇನು? ಮನೆಯೊಳಗೆ ಇಟ್ಟುಕೊಳ್ಳುತ್ತಾ? ಆಚೆ ಕಳಿಸುತ್ತಾ? ಅನ್ನೋ ಗೊಂದಲ ಶುರುವಾಗಿದೆ.

ಲಾಯರ್ ಜಗದೀಶ್ ಪ್ರೋಮೊ ಹೊರಬಿದ್ದಿದೆ. ಅದರಲ್ಲಿ ಬಿಗ್ಬಾಸ್ ಮನೆಯಿಂದ ಹೊರ ಹೋಗುವುದಕ್ಕೆ ವಕೀಲ್ ಸಾಬ್ ರೆಡಿಯಾಗಿ ನಿಂತಿದ್ದಾರೆ. ಹೊರ ಬಂದ್ಮೇಲೆ ಬಿಗ್ಬಾಸ್ ಅನ್ನೂ ಎಕ್ಸ್ಪೋಸ್ ಮಾಡುತ್ತೇನೆ. ಸರ್ವನಾಶ ಮಾಡುತ್ತೇನೆ ಎಂದು ಕ್ಯಾಮರಾ ಮುಂದೆ ಹೇಳಿದ್ದಾರೆ. ಈಗ ಬಿಗ್ಬಾಸ್ಗೆ ಈ ಸ್ಪರ್ಧಿ ತೆಲೆ ನೋವು ಆದಂತೆ ಇದೆ. ಮನೆಯೊಳಗೆ ಇಟ್ಟುಕೊಂಡರೂ ತಲೆ ನೋವು. ಹೊರಗೆ ಬಿಟ್ಟರೂ ತಲೆನೋವು. ಹೀಗಾಗಿ ಬಿಗ್ಬಾಸ್ ಮುಂದಿನ ನಿರ್ಧಾರವೇನು? ಅನ್ನೋದು ಕುತೂಹಲ ಕೆರಳಿಸುತ್ತಿದೆ.
ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಈ ಬಾರಿ ಬಿಗ್ಬಾಸ್ ತಪ್ಪು ಮಾಡಿತೇ? ಅಂತ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹೊರಗಡೆ ರಾಜಕಾರಣಿಗಳನ್ನೇ ಎದುರು ಹಾಕಿಕೊಂಡಿದ್ದವರನ್ನು ಮನೆಯೊಳಗೆ ಕರೆತಂದು ಬಿಗ್ಬಾಸ್ ಸಿಕ್ಕಿಕೊಂಡಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭವನ್ನು ಬಿಗ್ ಬಾಸ್ ಹೇಗೆ ಹ್ಯಾಂಡಲ್ ಮಾಡುತ್ತೆ ಅನ್ನೋ ಕುತೂಹಲ ಎದ್ದಿದೆ.
ಯಾಕಂದ್ರೆ ಸದ್ಯ ಲಾಯರ್ ಜಗದೀಶ್ ಉಳಿದೆಲ್ಲ ಸ್ಪರ್ಧಿಗಳನ್ನು ಡಾಮಿನೇಟ್ ಮಾಡಿದ್ದಾರೆ. ಇಲ್ಲಿವರೆಗೂ ಜಗದೀಶ್ ಬೇರೆ ಯಾರನ್ನೂ ಚಿಗುರುವುದಕ್ಕೇ ಬಿಟ್ಟಿಲ್ಲ. ಉಗ್ರಂ ಮಂಜು ಗಮನ ಸೆಳೆಯುವುದಕ್ಕೆ ಪ್ರಯತ್ನ ಪಟ್ಟರೂ ಜಗದೀಶ್ ಆರ್ಭಟದ ಮುಂದೆ ಮಂಕಾದಂತೆ ಕಾಣುತ್ತಿದೆ. ಇನ್ನೂ ಸ್ವರ್ಗವಾಸಿಗಳ ಕಡೆ ಬಹುತೇಕ ಎಲ್ಲರೂ ಸೈಲೆಂಟ್. ಅತ್ತ ನರಕವಾಸಿಗಳ ಕಡೆ ಶಿಶಿರ್ ಶಾಸ್ತ್ರಿ, ಮಾನಸ ಕೊಂಚ ವಿರೋಧ ವ್ಯಕ್ತಪಡಿಸಿದರೂ ಅವರ ಆಟ ಇನ್ನೂ ಆರಂಭ ಆಗಿದೆ.
ಲಾಯರ್ ಜಗದೀಶ್ ಅನ್ನು ಹೀಗೆ ಬಿಟ್ಟರೆ ಬಿಗ್ಬಾಸ್ ಕನ್ನಡ 11 ಒನ್ ಮ್ಯಾನ್ ಶೋ ಆಗುತ್ತೆ. ಅದೇ ಕಂಟ್ರೋಲ್ ಮಾಡುವುದಕ್ಕೆ ಹೋದರೆ, ವಕೀಲ್ ಸಾಭ್ ಉಲ್ಟಾ ಹೊಡೆಯುತ್ತಾರೆ. ಸದ್ಯದ ಲಾಯರ್ ಜಗದೀಶ್ ಅವರನ್ನು ಮನೆಯೊಳಗೆ ಇಟ್ಟುಕೊಳ್ಳುವುದು ಒಳ್ಳೆಯದು ಅನ್ನೋ ಸಲಹೆ ಕೇಳಿ ಬರುತ್ತಿದೆ. ಆರಂಭದಲ್ಲಿ ಎಗರಾಡುತ್ತಿದ್ದ ಲಾಯರ್ ಜಗದೀಶ್ ಮುಂದಿನ ದಿನಗಳಲ್ಲಿ ಕಂಟ್ರೋಲ್ಗೆ ಬರಬಹುದು. ಹೊರಗಿನ ಪ್ರಪಂಚ ಬಿಟ್ಟು ಕೆಲವು ದಿನಗಳ ಒಳಗೆ ಇದ್ಮೇಲೆ ತಾಳ್ಮೆ ತಾನಾಗೆ ಬರಬಹುದು ಅನ್ನೋ ಸಲಹೆ ಕೂಡ ಕೇಳಿ ಬರುತ್ತಿದೆ.


Click it and Unblock the Notifications











