Bigg Boss Kannada 11: ಬಿಗ್ಬಾಸ್ ಓಕೆ.. A23 ರಮ್ಮಿ ಯಾಕೆ? ಮೋದಿ, ಸಿದ್ಧರಾಮಯ್ಯ ಮನೆ ಮುಂದೆ ಪ್ರತಿಭಟನೆ ಮಾಡಿ" ಎಂದ ಕಿಚ್ಚ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 11 ಇದೇ ಸೆಪ್ಟೆಂಬರ್ 29ರಿಂದ ಆರಂಭ ಆಗುತ್ತಿದೆ. ಈ ಬೆನ್ನಲ್ಲೇ ಬಿರುಸಿನಿಂದ ಸಿದ್ಧತೆಗಳು ಆರಂಭ ಆಗಿವೆ. ಈಗಾಗಲೇ ಬಿಗ್ಬಾಸ್ ಕನ್ನಡ 11ರ ಪ್ರೋಮೊ ರಿಲೀಸ್ ಆಗಿದೆ. ಈ ಮಧ್ಯೆ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡದ ಮುಖ್ಯಸ್ಥರು ಈ ಬಾರಿಯ ಶೋ ಬಗ್ಗೆ ಮಾಹಿತಿ ನೀಡಿದ್ದರು.
ಈ ಬಾರಿಯ ಬಿಗ್ಬಾಸ್ ಕನ್ನಡ ಸೀಸನ್ 11ರನ್ನು ಸ್ಪಾನ್ಸರ್ ಮಾಡಿರುವ ಕಂಪನಿಗಳಲ್ಲಿ ಎ23 ಕೂಡ ಸೇರಿದೆ. ಕೆಲವು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಇದೇ ರಮ್ಮಿ ವಿಚಾರವಾಗಿ ವಿವಾದಕ್ಕೆ ಸಿಕ್ಕಿಕೊಂಡಿದ್ದರು. ಈಗ ಬಿಗ್ಬಾಸ್ ಕನ್ನಡ ಸೀಸನ್ 11ರ ಸ್ಪಾನ್ಸರ್ಗಳಲ್ಲಿ ಎ23 ರಮ್ಮಿ ಕೂಡ ಒಬ್ಬರಾಗಿರುವುದರಿಂದ ಪತ್ರಿಕಾಗೋಷ್ಠಿಯಲ್ಲಿ ಇದೇ ಪ್ರಶ್ನೆಯನ್ನು ಎತ್ತಲಾಗಿತ್ತು.

ಸ್ಪೆಷಲ್ ಪಾರ್ಟನರ್ನಲ್ಲಿ ಎ23 ರಮ್ಮಿ ಅಂತ ಇದೆ. ಈಗ ಶುರುವಾದ ಮೇಲೆ ರಮ್ಮಿ ಆಡದವರನ್ನೂ ಆಡಿಸುತ್ತೀರ. ಆಮೇಲೆ ಅವರು ಮನೆ ಮಠ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸುದೀಪ್ ಪ್ರೋಗ್ರಾಂಗೆ ಇಂತಹದ್ದೊಂದು ಸ್ಪೆಷಲ್ ಪಾರ್ಟನರ್ ಬೇಕಿತ್ತಾ ಅಂತ ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಕಿಚ್ಚ ಸುದೀಪ್ ಗರಂ ಆಗಿ ಉತ್ತರ ಕೊಟ್ಟಿದ್ದಾರೆ.
"ತಿಳುವಳಿಕೆ ಇರುವಂತಹ ಸಮಾಜ ನಮ್ಮದು. ಇಲ್ಲಿ ಸಿಗರೇಟ್ ಇದೆ, ಕುಡಿತಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ತಂದೆ-ತಾಯಿ ಇದ್ದಾರೆ. ನಮಗೆ ಏನು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಕೋವಿಡ್ ಕೂಡ ಇದೆ. ಸಮಾಜದಲ್ಲಿ ಆರೋಗ್ಯ ಕೂಡ ಇದೆ" ಎಂದು ಕಿಚ್ಚ ಉತ್ತರಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಿಯಾಲಿಟಿ ಶೋಗೆ ಸ್ಪಾನ್ಸರರ್ಗಳು ಯಾಕೆ ಮುಖ್ಯ ಅನ್ನೋದಕ್ಕೆ ಸರ್ಕಾರ ತೆರಿಗೆ ಸಂಗ್ರಹಿಸುವುದನ್ನು ಉದಾಹರಣೆಯಾಗಿಟ್ಟುಕೊಂಡು ಉತ್ತರಿಸಿದ್ದಾರೆ. "ಸರ್ಕಾರದವರು ನಮ್ಮ ಬಳಿ ತುಂಬಾನೇ ದುಡ್ಡ ವಸೂಲಿ ಮಾಡುತ್ತಿದ್ದಾರೆ ಅಂತ ಅನಿಸುತ್ತೆ. ಆದರೆ, ದೇಶವನ್ನು ನಡೆಸುವುದಕ್ಕೆ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡಬೇಕು. ಹಾಗೇ ಶೋ ಅನ್ನು ನಡೆಸುವುದಕ್ಕೆ ಇವರು ಏನು ಮಾಡಬೇಕೋ ಅದನ್ನು ಮಾಡಬೇಕು. ಒಂದು ಶೋ ನಡೆಸಬೇಕಾದರೆ, ಖರ್ಚು ಅಷ್ಟೇ ಹೆಚ್ಚಾಗುತ್ತೆ" ಎಂದಿದ್ದಾರೆ.
ಬಿಗ್ಬಾಸ್ನಿಂದ ಸಾಕಷ್ಟು ಮನೆಗಳು ಉದ್ದಾರ ಆಗಿವೆ. ಎಷ್ಟೋ ವ್ಯಕ್ತಿತ್ವಗಳು ಉದ್ದಾರ ಆಗಿವೆ. ಬಿಗ್ಬಾಸ್ನಿಂದ ಕೆಲಸ ಪಡೆದುಕೊಂಡವರೆಲ್ಲ ಎ23ಯನ್ನು ಸಬ್ಸ್ಕ್ರೈಬ್ ಮಾಡಿಕೊಂಡಿದ್ದಾರಾ? ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಕಿಚ್ಚ ಸುದೀಪ್ ರಮ್ಮಿ ಬಗ್ಗೆ ಕೇಳಿದ ಪ್ರಶ್ನೆಗೆ ಕೊನೆಯಲ್ಲಿ ಗರಂ ಆಗಿ ಉತ್ತರ ಕೊಟ್ಟಿದ್ದಾರೆ. ನರೇಂದ್ರ ಮೋದಿ ಹಾಗೂ ಸಿದ್ಧರಾಮಯ್ಯ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಿ ಎಂದು ಹೇಳಿದ್ದಾರೆ. "ಇದು ತುಂಬಾ ಚಿಕ್ಕ ವಿಷಯ. ಇಲ್ಲಾ ಅಂದರೆ, ನೀವು ಮೋದಿ ಮನೆ ಮುಂದೆ ಹೋಗಿ, ಇಲ್ಲ ಸಿದ್ಧರಾಮಯ್ಯ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವಷ್ಟು ಪವರ್ ಇಲ್ಲ. ನಾನು ಮೋದಿ ಅವರನ್ನ, ಸಿದ್ಧರಾಮಯ್ಯ ಅವರನ್ನು ಹ್ಯಾಂಡಲ್ ಮಾಡುವ ಹಾಗಿದ್ದರೆ, ಬೇರೆ ರೀತಿ ಆಗಿರೋದು. ಮುಂದೆ ನಾನೇನಾದರೂ ರಾಜಕಾರಣಿ ಆದರೆ, ಬನ್ನಿ ನಿಮಗೆ ಏನಾದರೂ ಸಹಾಯ ಮಾಡುತ್ತೇನೆ" ಎಂದು ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











