ಧರ್ಮಸ್ಥಳದಲ್ಲಿ ಪತ್ರಕರ್ತರ ಮೇಲೆ ಹಲ್ಲೆ; ಘಟನೆ ಬಗ್ಗೆ ಬಿಗ್ ಬಾಸ್ ರಜತ್ ಹೇಳೋದೇನು? ಪ್ರಕಾಶ್ ರಾಜ್ ಹೇಳಿದ್ದೇನು?
ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ಬಿಗುವಿನ ವಾತಾರಣ ನಿರ್ಮಾಣ ಆಗಿದೆ. ಕಳೆದ ಕೆಲವು ದಿನಗಳಿಂದ ಮೃತದೇಹಗಳನ್ನು ಹುಡುಕುವ ಕಾರ್ಯ ನಡೆಯುತ್ತಿದೆ. ಈ ಸಂಬಂಧ ಪತ್ರಕರ್ತರು ಹಾಗೂ ಕೆಲ ಯೂಟ್ಯೂಬರ್ಗಳು ಧರ್ಮಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ನಿನ್ನೆ (ಆಗಸ್ಟ್ 6) ಧರ್ಮಸ್ಥಳಕ್ಕೆ ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಭೇಟಿ ಕೊಟ್ಟಿದ್ದರು. ಈ ವೇಳೆ ಪತ್ರಕರ್ತರು ಹಾಗೂ ಯೂಟ್ಯೂಬರ್ಗಳ ಮೇಲೆ ಕಿಡಿಗೇಡಿಗಳಿಂದ ಹಲ್ಲೆ ನಡೆದಿದೆ.
ಈ ಘಟನೆಯ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ತನ್ನ ಎದುರ ನಡೆದ ಘಟನೆಯ ಬಗ್ಗೆ ಇಂಚಿಂಚೂ ಮಾಹಿತಿಯನ್ನು ನೀಡಿದ್ದಾರೆ. ಅವರ ಸೌಜನ್ಯ ಮನೆಗೆ ಯಾಕೆ ಹೋಗಿದ್ದರು? ಅಲ್ಲಿಂದ ಹಿಂತಿರುಗುವಾಗ ಏನಾಯ್ತು? ಗಲಾಟೆ ನಡೆದಿದ್ದು ಏಕೆ? ಅನ್ನೋದನ್ನು ರಜತ್ ವಿಸ್ತಾರವಾಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಇನ್ನೊಂದು ಕಡೆ ಪತ್ರಕರ್ತರು, ಯೂಟ್ಯೂಬರ್ಗಳ ಮೇಲೆ ಆದ ಹಲ್ಲೆಯನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಖಂಡಿಸಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು. ಹಾಗಿದ್ದರೆ, ಧರ್ಮಸ್ಥಳದಲ್ಲಿ ನಡೆದ ಘಟನೆ ಬಗ್ಗೆ ರಜತ್ ಏನಂದ್ರು? ಪ್ರಕಾಶ್ ರಾಜ್ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಘಟನೆ ಬಗ್ಗೆ ರಜತ್ ಹೇಳಿದ್ದೇನು?
ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಧರ್ಮಸ್ಥಳಕ್ಕೆ ತೆರಳಿ, ಅಲ್ಲಿಂದ ಸೌಜನ್ಯ ಮನೆಗೆ ಹೋಗಿದ್ದರು. ಸೌಜನ್ಯ ತಾಯಿಯನ್ನು ಭೇಟಿ ಮಾಡಿಕೊಂಡು ಬರುವಾಗ ದಾರಿಯಲ್ಲಿ ಕೆಲ ಯೂಟ್ಯೂಬರ್ಗಳು ಪ್ರತಿಕ್ರಿಯೆ ನೀಡುವಂತೆ ಹೇಳಿದ್ದರು. ಹೀಗಾಗಿ ದಾರಿಯಲ್ಲಿಯೇ ಕಾರು ನಿಲ್ಲಿಸಿ, ಅವರಿಗೆ ಪ್ರತಿಕ್ರಿಯೆ ನೀಡುವಾಗ ಒಂದಿಷ್ಟು ಮಂದಿ ಬಂದು ಏಕಾಏಕಿ ಪತ್ರಕರ್ತರು ಹಾಗೂ ಯೂಟ್ಯೂಬರ್ಗಳ ಮೇಲೆ ಹಲ್ಲೆಗೆ ಮುಂದಾದರು. ಕೈಗೆ ಸಿಕ್ಕಿದ್ದರಲ್ಲಿ ಹೊಡೆಯುವುದಕ್ಕೆ ಶುರು ಮಾಡಿದರು ಎಂದು ರಜತ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕಾಶ್ ರಾಜ್ ಖಂಡನೆ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಪ್ರಕಾಶ್ ರಾಜ್ ನಿನ್ನೆಯೇ (ಆಗಸ್ಟ್ 6) ಎಕ್ಸ್ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಖಂಡಿಸಿದ್ದಾರೆ. "ಧರ್ಮಸ್ಥಳದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಮಾಧ್ಯಮ ಮಿತ್ರರ ಮೇಲಿನ ಹಲ್ಲೆ ಖಂಡನಾರ್ಹ.. ಇಂತಹ ಗೂಂಡಾಗಳಿದಲೇ ಭಕ್ತಾದಿಗಳು ನಂಬುವ ಧರ್ಮಸ್ಥಳಕ್ಕೆ ಕಳಂಕ ಬಂದಿರುವುದು.. ಸೌಜನ್ಯಾಳ ದಾರುಣ ಹತ್ಯೆಗೆ ನ್ಯಾಯ ಕೇಳಿದರೆ ಇವರಿಗೇಕೆ ಕೋಪ.. ದಯವಿಟ್ಟು ಬಂಧಿಸಿ ಸತ್ಯ ಹೊರತನ್ನಿ" ಎಂದು ಬರೆದು ಪ್ರಕಾಶ್ ರಾಜ್ ಪೋಸ್ಟ್ ಮಾಡಿದ್ದಾರೆ.
ಹಾಗೇ ವಿಡಿಯೋದಲ್ಲೂ ಈ ಹಲ್ಲೆಯನ್ನು ಖಂಡಿಸಿದ್ದು, "ನ್ಯಾಯ ಕೇಳುವುದು ನಮ್ಮ ಕರ್ತವ್ಯ. ನಮ್ಮ ಹಕ್ಕು" ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. "ಧರ್ಮಸ್ಥಳದಲ್ಲಿ ಸೌಜನ್ಯಳ ಪರವಾಗಿ ನ್ಯಾಯ ಕೇಳುತ್ತಿರುವ ಪತ್ರಕರ್ತರ ಮೇಲೆ ಹಲ್ಲೆ ಮಾಡುತ್ತಿರುವುದ ಖಂಡನಾರ್ಹ. ಇಂತಹ ಗುಂಡಾಗಳಿಂದಾನೇ ಲಕ್ಷಾಂತರ ಜನರು ಪೂಜಿಸುವ ಮತ್ತು ಗೌರವಿಸುವ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುತ್ತಿರೋದು. ಇಂತಹದ್ದೊಂದು ಖಳಂಕ ಬರುತ್ತಿರೋದು." ಎಂದು ಪ್ರಕಾಶ್ ರಾಜ್ ವಿಡಿಯೋ ಪೋಸ್ಟ್ ಮಾಡಿ ಕಿಡಿಕಾರಿದ್ದಾರೆ.
ಹಾಗೇ ಮುಂದುವರೆಸಿ, "ಸೌಜನ್ಯ ಅನ್ನೋ ನಮ್ಮ ಹೆಣ್ಣು ಮಗಳ ಮೇಲೆ ಇಂತಹ ದಾರುಣ ಹತ್ಯೆ ಯಾಕೆ ನಡೆದಿದೆ ಅಂತ ಕೇಳಿದರೆ, ಗೂಂಡಾಗಳಿಗೆ ಯಾಕೆ ಕಿರಿಕಿರಿಯಾಗುತ್ತಿದೆ? ಯಾಕೆ ಕೋಪ ಬರುತ್ತಿದೆ? ಇವರ ಹಿಂದೆ ಯಾರಿದ್ದಾರೆ? ಯಾರನ್ನು ಕರೆಸಿ ಹೊಡೆಸುತ್ತಿದ್ದಾರೆ? ಅನುಮಾನ ಜಾಸ್ತಿಯಾಗುತ್ತಿದೆ. ದಯವಿಟ್ಟು ಪೊಲೀಸರು ಈ ಗೂಂಡಾಗಳನ್ನು ಬಂಧಿಸಿ, ಇದರ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಬೇಕು. ಜನರು ಅರ್ಥ ಮಾಡಿಕೊಳ್ಳಿ. ನ್ಯಾಯ ಕೇಳುವುದು ನಮ್ಮ ಕರ್ತವ್ಯ. ನಮ್ಮ ಹಕ್ಕು." ಎಂದು ಹೇಳಿದ್ದಾರೆ.


Click it and Unblock the Notifications











