ಗಣೇಶ್ ನಟನೆಯ 'ಸಖತ್' ಸಿನಿಮಾಗೆ ಸ್ಟೇ ತರಲು ಯತ್ನ: ಕ್ಷಮೆ ಕೋರಿದ ಸಿಂಪಲ್ ಸುನಿ
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಸಿನಿಮಾ 'ಸಖತ್' ಇವತ್ತು (ನವೆಂಬರ್ 26) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಪಕ್ಕಾ ಕಾಮಿಡಿ ಸಿನಿಮಾವನ್ನು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ನೋಡುತ್ತಿದ್ದಾರೆ. ಚಮಕ್ ಬಳಿಕ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿತ್ತು. ಆದರೆ, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿಮಾ ಪ್ರದರ್ಶನ ನಿಲ್ಲುವ ಭೀತಿ ಚಿತ್ರತಂಡಕ್ಕೆ ಎದುರಾಗಿದೆ.
'ಸಖತ್' ಸಿನಿಮಾ ಬಿಡುಗಡೆಗೂ ಮುನ್ನ ಭರ್ಜರಿ ಪ್ರಚಾರ ಮಾಡಿತ್ತು. ಗಣೇಶ್, ನಿಶ್ವಿಕಾ ನಾಯ್ಡು ನಟಿಸಿದ ಈ ಸಿನಿಮಾಗಾಗಿ ಚಿತ್ರತಂಡ ಚಿತ್ರ ವಿಚಿತ್ರವಾದ ಪ್ರಮೋಷನ್ ಮಾಡಿತ್ತು. ಚಮಕ್ ಸಿನಿಮಾದಂತೆ ಈ ಚಿತ್ರ ಕೂಡ ಪ್ರೇಕ್ಷಕರನ್ನು ಹಾಸ್ಯದ ಹೊಳೆಯಲ್ಲಿ ತೇಲಿಸಲಿದೆ ಅಂದುಕೊಳ್ಳುವಾಗಲೇ, ಸ್ಟೇ ತರಲು ಸಂಸ್ಥೆಯೊಂದು ಮುಂದಾಗಿದೆ. ಆದರೆ, ಸಿನಿಮಾ ಬಿಡುಗಡೆಗೆ ಒಂದು ದಿನ ಮುನ್ನ ವಿವಾದಕ್ಕೆ ಸಿಲುಕಿತ್ತು. ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ ಮೆಟ್ಟಿಲೇರಲು ಸಂಸ್ಥೆಯೊಂದು ಮುಂದಾಗಿತ್ತು. ಹಾಗಿದ್ದರು ಆ ಸಂಸ್ಥೆ ಯಾವುದು? ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಒತ್ತಾಯ ಮಾಡುತ್ತಿರುವವರು ಯಾರು? ವಿವರಗಳಿಗಾಗಿ ಮುಂದೆ ಓದಿ...

ಗಣೇಶ್ 'ಸಖತ್' ಸಿನಿಮಾ ನಿಲ್ಲಿಸಲು ಆಗ್ರಹ
ಗೋಲ್ಡನ್ ಸ್ಟಾರ್ ಗಣೇಶ್ 'ಸಖತ್' ಸಿನಿಮಾದಲ್ಲಿ ಕಣ್ಣು ಕಾಣದ ವ್ಯಕ್ತಿಯಾಗಿ ನಟಿಸಿದ್ದಾರೆ. ಈ ಪಾತ್ರದ ಮೂಲಕ ಹಾಸ್ಯ ಕತೆ ಹೆಣೆದು, ಸಿನಿಪ್ರಿಯರಿಗೆ ಮನರಂಜನೆ ನೀಡಲು ಸಿಂಪಲ್ ಸುನಿ ಮುಂದಾಗಿದ್ದರು. ಚಿತ್ರದ ಟೀಸರ್, ಟ್ರೈಲರ್ ಹಾಗೂ ಪೋಸ್ಟರ್ಗಳು ಕೂಡ ಇದೊಂದು ಹಾಸ್ಯ ಸಿನಿಮಾ ಎಂಬುದನ್ನು ಸಾಬೀತು ಮಾಡಿತ್ತು. ಇನ್ನೇನು ಸಿನಿಮಾ ಬಿಡುಗಡೆಗೆ ಒಂದು ಬಾಕಿ ಇದೆ ಅನ್ನುವಾಗಲೇ 'ಸಖತ್' ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಬಾರದೆಂದು ಅಂಧರ ಅಸೋಸಿಯೇಷನ್ ಕೋರ್ಟ್ನಲ್ಲಿ ಸ್ಟೇ ತರಲು ಮುಂದಾಗಿತ್ತು.

ಅಂಧರ ಅಸೋಸಿಯೇಷನ್ಗೆ ಸುನಿ ಕ್ಷಮೆ
'ಸಖತ್' ಸಿನಿಮಾದಲ್ಲಿ ಅಂಧರಿಗೆ ಅವಮಾನ ಆಗುವಂತಹ ದೃಶ್ಯಗಳಿವೆ ಎನ್ನಲಾಗಿದ್ದು, ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ ಮೊರೆ ಹೋಗಲು ಅಂಧರ ಸಮುದಾಯ ಮುಂದಾಗಿತ್ತು. ಇದು ತಿಳಿಯುತ್ತಿದ್ದಂತೆ ನಿರ್ದೇಶಕ ಸುನಿ ಕ್ಷಮೆ ಕೇಳಿದ್ದಾರೆ. "ಸಖತ್ ಸಿನಿಮಾದ ನಿರ್ದೇಶಕ ಸುನೀಲ್ ಕುಮಾರ್ ಆದ ನಾನು ತಿಳಿಯಪಡಿಸುವ ವಿಷಯವೇನೆಂದರೆ, ಸಖತ್ ಸಿನಿಮಾವು ಅಂಧರ ಬಗ್ಗೆಯಾಗಿದ್ದು, ಇದರಲ್ಲಿ ನಿಮಗೆ ನೊಂದ ವಿಷಯವಿದ್ದರೆ, ನಿಮಗೆ ಶುಕ್ರವಾರ, 26-11-2021ರಂದು ಸಿನಿಮಾ ತೋರಿಸಿ ಹಾಗೂ ಅದೇ ದಿನ ಸುದ್ದಿಗೋಷ್ಟಿ ನಡೆಸಿ, ನೀವು ಹೇಳುವ ತಿದ್ದುಪಡಿಗಳನ್ನು ಸರಿಪಡಿಸಿಕೊಳ್ಳಲು ಒಪ್ಪಿರುತ್ತೇನೆ. ಹೀಗಾಗಿ ನೀವು ಚಿತ್ರ ಬಿಡುಗಡೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ. ತಿಳಿದೋ.. ತಿಳಿಯದೆಯೋ ತಪ್ಪಾಗಿದ್ದರೆ ನಾನು ಮತ್ತು ನನ್ನ ತಂಡದ ಪರವಾಗಿ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ.. ಮನ್ನಿಸಿ." ಎಂದು ಸುನಿ ನಿನ್ನೆ(ನವೆಂಬರ್ 25) ರಂದು ಬಹಿರಂಗ ಪತ್ರ ಬರೆದಿದ್ದಾರೆ.

ಅಂಧ ಸಮುದಾಯಕ್ಕೆ ಸಿನಿಮಾ ತೋರಿಸಿದ ನಿರ್ದೇಶಕ
ನಿನ್ನೆ(ನವೆಂಬರ್ 25) ಬಹಿರಂಗ ಪತ್ರದಲ್ಲಿ ಮಾತುಕೊಟ್ಟಂತೆ ಇಂದು ಅಂಧರ ಸಮುದಾಯಕ್ಕೆ ಸಿನಿಮಾ ತೋರಿಸಲಾಗಿದೆ. ಅವರಿಗಾಗಿಯೇ ಪ್ರತ್ಯೇಕವಾಗಿ ಸಿನಿಮಾ ನೋಡಲು ಚಿತ್ರತಂಡ ವ್ಯವಸ್ಥೆ ಮಾಡಿತ್ತು. ಅವರು ಸಿನಿಮಾ ನೋಡಿದ ಬಳಿಕ ಹೇಳುವ ದೃಶ್ಯಗಳಿಗೆ ನಿರ್ದೇಶಕ ಸುನಿ ಕತ್ತರಿ ಹಾಕಿ, ಸಿನಿಮಾವನ್ನು ಮರುಬಿಡುಗಡೆ ಮಾಡಲಿದ್ದಾರೆ.

ಚಿತ್ರತಂಡದಿಂದ ಪತ್ರಿಕಾಗೋಷ್ಟಿ
ಅಂಧರ ಸಮುದಾಯಕ್ಕೆ ಸಿನಿಮಾ ತೋರಿಸಿದ ಬಳಿಕ ಸಖತ್ ಸಿನಿಮಾ ತಂಡ ಪತ್ರಿಕಾ ಗೋಷ್ಟಿ ನಡೆಸಲು ಮುಂದಾಗಿದೆ. ಈ ಪತ್ರಿಕಾ ಗೋಷ್ಟಿಯಲ್ಲಿ ಸಖತ್ ಸಿನಿಮಾ ಹಾಗೂ ವಿವಾದದ ಬಗ್ಗೆ ನಿರ್ದೇಶಕ ಸುನಿ ಪೂರ್ಣ ವಿವರ ನೀಡಲಿದ್ದು, ಅಂಧರ ಸಮುದಾಯ ಏನೆಲ್ಲಾ ತಿದ್ದುಪಡಿ ಮಾಡಲು ಸೂಚಿಸಲಿದೆಯೋ ಆ ಬಗ್ಗೆ ಮಾತಾಡಲಿದ್ದಾರೆ.


Click it and Unblock the Notifications











