ಚಿತ್ರರಂಗದಲ್ಲಿ ಈ ಬೆಳವಣೆಗೆ ಬೇಕು; ದಿಗಂತ್ ಸಿನಿಮಾ ರಿಲೀಸ್ಗೆ ಕೈ ಜೋಡಿಸಿದ ಬ್ಲಿಂಕ್- ಶಾಖಹಾರಿ ನಿರ್ಮಾಪಕರು
ಕಳೆದ ಎರಡುವರೆಗೂ ಮೂರು ವರ್ಷಗಳಿಂದ ಕನ್ನಡ ಚಿತ್ರರಂಗ ಮಕಾಡೆ ಮಲಗಿದೆ. ಆಗೊಂದು ಈಗೊಂದು ಸಿನಿಮಾಗಳು ಹಿಟ್ ಲಿಸ್ಟ್ ಸೇರಿದ್ದು ಬಿಟ್ಟರೆ, ಇದೂವರೆಗೂ ರಿಲೀಸ್ ಆದ ಸಿನಿಮಾಗಳು ಪ್ಲಾಪ್ ಲಿಸ್ಟ್ ಸೇರಿದ್ದೇ ಹೆಚ್ಚು. ಮತ್ತೆ ಕೆಲವು ಸಿನಿಮಾಗಳು ಕಂಟೆಂಟ್ ಅದ್ಭುತವಾಗಿದ್ದರೂ ಪ್ರೇಕ್ಷಕರು ಥಿಯೇಟರ್ಗೆ ಬಂದು ನೋಡಿಲ್ಲ. ಇಲ್ಲವೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ಆ ಸಿನಿಮಾಗಳು ಸೋತಿವೆ.
ಇವೆಲ್ಲದರ ನಡುವೆ ಕಳೆದ ವರ್ಷ ರಿಲೀಸ್ ಆದ ಎರಡು ಸಿನಿಮಾಗಳು ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದವು. ಅದರಲ್ಲಿ ಒಂದು 'ಬ್ಲಿಂಕ್'. ಇನ್ನೊಂದು ರಂಘಾಯಣ ರಘು ನಟನೆಯ 'ಶಾಖಹಾರಿ'. ಈ ಎರಡೂ ಸಿನಿಮಾಗಳು ಥಿಯೇಟರ್ನಲ್ಲೋ, ಓಟಿಟಿಯಲ್ಲೋ ಪ್ರೇಕ್ಷಕರಿಗಂತೂ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಈ ಎರಡೂ ಸಿನಿಮಾಗಳು ಕನ್ನಡ ಚಿತ್ರರಂಗ ಯಶಸ್ವಿ ಸಿನಿಮಾಗಳಾಗಿ ಹೊರ ಹೊಮ್ಮಿದ್ದವು.

ಈಗ ಈ ಎರಡು ಸಿನಿಮಾಗಳ ಬಗ್ಗೆ ಯಾಕೆ ಮಾತು ಅಂದರೆ, ಅದಕ್ಕೆ ಕಾರಣ 'ಎಡಗೈ ಅಪಘಾತಕ್ಕೆ ಕಾರಣ'. ದಿಗಂತ್, ನಿಧಿ ಸುಬ್ಬಯ್ಯ ನಟಿಸಿದ ಈ ಸಿನಿಮಾ ಬಿಡುಗಡೆಯಾಗುವುದಕ್ಕೆ ಪರದಾಡುತ್ತಿತ್ತು. ಈಗ ಈ ಎರಡೂ ಸಿನಿಮಾಗಳ ನಿರ್ಮಾಪಕರು ದಿಗಂತ್ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಇದು ಕನ್ನಡದ ಚಿತ್ರರಂಗದಲ್ಲಿ ಆದ ಅದ್ಭುತ ಬೆಳೆವಣಿಗೆ ಎನ್ನಬಹುದು.
ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ಬೆಳವಣಿಗೆ ಆಗುವುದು ತೀರಾ ವಿರಳ. ಒಂದು ಸಿನಿಮಾ ಬಿಡುಗಡೆಗೆ ಮತ್ತೊಂದು ಸಿನಿಮಾದ ನಿರ್ಮಾಪಕ ಸಹಾಯಕ್ಕೆ ನಿಲ್ಲುವುದು ಅಪರೂಪದಲ್ಲಿ ಅಪರೂಪ. ಅದರಲ್ಲೂ ಇಂತಹ ಪರಿಸ್ಥಿತಿಯಲ್ಲಿ 'ಬ್ಲಿಂಕ್' ಹಾಗೂ 'ಶಾಖಹಾರಿ' ಸಿನಿಮಾದ ನಿರ್ಮಾಪಕರು 'ಎಡಗೈ ಅಪಘಾತಕ್ಕೆ ಕಾರಣ' ಬಿಡುಗಡೆಗೆ ಸಹಾಯ ಹಸ್ತ ಚಾಚಿದ್ದು ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಬೆಳವಣಿಗೆ. ಬಹುಶ: ಯುವ ನಿರ್ಮಾಪಕರು ಸ್ಯಾಂಡಲ್ವುಡ್ನಲ್ಲಿ ಹೊಸ ಟ್ರೆಂಡ್ ಅನ್ನು ಹುಟ್ಟಾಕಬಹುದು.
'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾವನ್ನು ಸಮರ್ಥ್ ಕಡ್ಕೊಳ್ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನ ಅಷ್ಟೇ ಅಲ್ಲದೆ, ನಿರ್ಮಾಣ ಕೂಡ ಮಾಡಿದ್ದಾರೆ. ಇಷ್ಟೊತ್ತಿಗಾಗಲೇ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಹಲವು ಕಾರಣಗಳಿಂದ ಮುಂದಕ್ಕೆ ಹೋಗುತ್ತಲೇ ಇತ್ತು. ಈ ಸಿನಿಮಾದ ತುಣುಕುಗಳ ರಿಲೀಸ್ ಆದಾಗ ಇನ್ನೇನು ರಿಲೀಸ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಪೋಸ್ಟ್ಪೋನ್ ಆಗುತ್ತಲೇ ಇರುವುದನ್ನು ನೋಡಿ ರಿಲೀಸ್ ಆಗುವುದು ಅನುಮಾನ ಎಂದೇ ಮಾತಾಡಿಕೊಂಡಿದ್ದೂ ಇದೆ. ಈ ಹಂತದಲ್ಲಿ ಇಬ್ಬರು ನಿರ್ಮಾಪಕರು 'ಎಡಗೈ ಅಪಘಾತಕ್ಕೆ ಕಾರಣ' ರಿಲೀಸ್ಗೆ ಸಹಾಯ ಹಸ್ತ ಚಾಚಿದ್ದಾರೆ.

ಈ ಬೆಳವಣಿಗೆ ಎರಡು ದೃಷ್ಟಿಯಲ್ಲಿ ತುಂಬಾನೇ ಮುಖ್ಯ ಆಗಿತ್ತು. ಈ ಪ್ರಯತ್ನ ಯಶಸ್ವಿಯಾದರೆ, ಮುಂದೆ ನಿರ್ಮಾಪಕರು ಹೀಗೆ ಒಬ್ಬರಿಗೊಬ್ಬರು ಸಹಾಯಹಸ್ತ ಚಾಚಬಹುದು. ಎರಡನೆಯದ್ದು, ಇಂತಹ ವಿಭಿನ್ನ ಕಂಟೆಂಟ್ಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗಬಹುದು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಯುವ ನಿರ್ದೇಶಕರು ಹೆಚ್ಚಾಗಿ ಎಂಟ್ರಿ ಕೊಡಬಹುದು.
ಈ ಪ್ರಯತ್ನಕ್ಕೆ 'ಶಾಖಾಹಾರಿ' ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ ಹೀಗೆನ್ನುತ್ತಾರೆ. "ಶಾಖಹಾರಿ ಸಿನಿಮಾ ಬಳಿಕ ಚಿತ್ರೀಕರಣ ಆಗಿರುವ ಅಥವಾ ರಿಲೀಸ್ಗೆ ರೆಡಿ ಇರುವ ಸಿನಿಮಾಗೆ ಸಹ ನಿರ್ಮಾಪಕ ಆಗಲು ಇಷ್ಟವಿರಲಿಲ್ಲ. ಆದರೆ ಎಡಗೈ ಸಿನಿಮಾದ ಕಂಟೆಂಟ್ ಕ್ವಾಲಿಟಿ ಅದ್ಭುತವಾಗಿದೆ. ಈ ಸಿನಿಮಾದಿಂದ ನನ್ನ ಪ್ರೊಡಕ್ಷನ್ ವ್ಯಾಲ್ಯೂ ಕೂಡ ಜಾಸ್ತಿ ಆಗುತ್ತೆ. ಈ ಕಾರಣಕ್ಕೆ ಈ ಸಿನಿಮಾ ರಿಲೀಸ್ ಮಾಡಲು ಕೈ ಜೋಡಿಸಿದ್ದೇನೆ." ಎಂದಿದ್ದಾರೆ.
ಹಾಗೇ 'ಬ್ಲಿಂಕ್' ನಿರ್ಮಾಪಕ ರವಿಚಂದ್ರ ಎಜೆ ಹೇಳೋದು ಹೀಗೆ "ಕಳೆದ ಆರು ತಿಂಗಳಲ್ಲಿ ನನಗೆ ಅನೇಕ ಕನ್ನಡ ಚಲನಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿದೆ. ಅವುಗಳಲ್ಲಿ ಈ ಸಿನಿಮಾ ಅತ್ಯುತ್ತಮ ಸಿನಿಮಾ ಆಗಿದೆ. ನಮ್ಮ ಜನನಿ ಪಿಕ್ಚರ್ಸ್ ಬ್ಯಾನರ್ನಲ್ಲಿ 'ಎಡಗೈ ಅಪಘಾತಕ್ಕೆ ಕಾರಣ' ವಿತರಣೆ ಮಾಡುತ್ತೇವೆ" ಎಂದಿದ್ದಾರೆ. 'ಶಾಖಾಹಾರಿ'ಯ ರಾಜೇಶ್ ಕೀಳಂಬಿ ಹಾಗೂ 'ಬ್ಲಿಂಕ್' ಸಿನಿಮಾದ ರವಿಚಂದ್ರ ಎಜೆ ಜೊತೆಯಾಗಿದ್ದು, ಆನೆ ಬಲ ಬಂದಂತೆ ಆಗಿದೆ. ಈಗ ದಿಗಂತ್ಗೆ ಎಡಗೈ ಕೈ ಹಿಡಿಯುತ್ತಾ? ಎನ್ನುವ ಪ್ರಶ್ನೆ ಅಂತೂ ಹುಟ್ಟಿಕೊಂಡಿದ್ದು, ರಿಲೀಸ್ ಬಳಿಕ ಉತ್ತರ ಸಿಗಲಿದೆ.


Click it and Unblock the Notifications











