'ಮನಸ್ಮಿತ' ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ಮರಳಿದ ಬಾಲಿವುಡ್ ನಟ ಅತುಲ್ ಕುಲಕರ್ಣಿ
ಬಹುಭಾಷಾ ನಟ ಅತುಲ್ ಕುಲಕರ್ಣಿ ಮೂರು ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಅದುವೇ 'ಮನಸ್ಮಿತ'. 'ಭೂಮಿಗೀತಾ', 'ಆ ದಿನಗಳು', 'ಎದೆಗಾರಿಕೆ', ಉಗ್ರಂ ಅಂತಹ ಸಿನಿಮಾಗಳಲ್ಲಿ ನಟಿರೋ ಅತುಲ್ ಕುಲಕರ್ಣಿ ಕನ್ನಡಿಗರು ತುಂಬಾನೇ ಚಿರಪರಿಚಿತ.
ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಹಾಗೂ ಓಟಿಟಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಅತುಲ್ ಕುಲಕರ್ಣಿ, ಕನ್ನಡ, ಹಿಂದಿ, ಮರಾಠಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ಅತುಲ್ ಕುಲಕರ್ಣಿ ನಟಿಸಿದ 'ಅಳಿದು ಉಳಿದವರು' ಕನ್ನಡ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈಗ ಮತ್ತೊಂದು ಕನ್ನಡ ಸಿನಿಮಾ 'ಮನಸ್ಮಿತ'ದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆ ಸಜ್ಜಾಗಿದೆ.
'ಮನಸ್ಮಿತಾ' ಪಕ್ಕಾ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ. ಅಪ್ಪಣ್ಣ ಸಂತೋಷ್ ಎಂಬುವವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹಲವು ವರ್ಷಗಳ ಬಳಿಕ ಸ್ಯಾಂಡಲ್ವುಡ್ನಲ್ಲಿ ಸಂಗೀತದ ಮೂಲಕವೇ ಮೋಡಿ ಮಾಡಲು ಮ್ಯೂಸಿಕ್ ಲವ್ ಸ್ಟೋರಿ ಸಿನಿಮಾ ಮನಸ್ಮಿತ ಥಿಯೇಟರ್ಗೆ ಲಗ್ಗೆ ಇಡಲು ಸಜ್ಜಾಗಿದೆ.

ಈ ಸಿನಿಮಾದ ಹಾಡುಗಳು ಈಗಾಗಲೇ ಸಿನಿ ಪ್ರಿಯರ ಮನಗೆದ್ದಿದೆ. ಇಂದು (ಏಪ್ರಿಲ್ 28) ಮನಸ್ಮಿತ ಚಿತ್ರದ 2ನೇ ಹಾಡು ರಿಲೀಸ್ ಆಗಿದೆ. ನಿರ್ದೇಶಕ ಅಪ್ಪಣ್ಣ ಸಂತೋಪ್ಗೆ ಇದು ಮೊದಲ ಸಿನಿಮಾ. ತನ್ನ ಮೊದಲ ಸಿನಿಮಾದಲ್ಲಿಯೇ ಹೊಸ ಪ್ರತಿಭೆಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಹೊಸಬರ ಜೊತೆಗೆ ಹಿರಿಯ ಕಲಾವಿದರು ಜೊತೆಯಾಗಿದ್ದು, ಅತುಲ್ ಕುಲಕರ್ಣಿ ಪ್ರಮುಖ ಆಕರ್ಷಣೆಯಾಗಿದ್ದಾರೆ.
'ಮನಸ್ಮಿತ' ಸಿನಿಮಾ ಜೂನ್ 3ರಂದು ಬಿಡುಗಡೆಯಾಗುತ್ತಿದೆ. 'ಮನಸ್ಮಿತ' ಸಿನಿಮಾದ ಮೊದಲ ಹಾಡಿಗೆ ಕ್ಲಾಸಿಕ್ ಟಚ್ ನೀಡಲಾಗಿತ್ತು. ವಾರದ ಹಿಂದೆ ರಿಲೀಸ್ ಆದ ಈ ಹಾಡು ಈಗಾಗಲೇ ಸಿನಿಪ್ರಿಯರ ಮನ ಗೆದ್ದಿದೆ. ಕ್ಲಾಸಿಕಲ್ ನೃತ್ಯ ಸಂಯೋಜನೆಯ ನೀಲ ಮೇಘ ಶ್ಯಾಮ ಹಾಡಿಗೆ ಸಂಗೀತ ಪ್ರಿಯರು ತಲೆದೂಗಿದ್ದಾರೆ. ಈ ಹಾಡು ಶಂಕರ್ ಮಹದೇವನ್ ಧ್ವನಿಯಲ್ಲಿ ಮೂಡಿ ಬಂದಿದೆ. ಮಂಜು ಎಂ ದೊಡ್ಡಮಣಿ ಸಾಹಿತ್ಯ ರಚಿಸಿದ್ದಾರೆ.
ಇದೇ ಜೋಷ್ನಲ್ಲಿ ಸಿನಿಮಾ 2ನೇ ಹಾಡು ರಿಲೀಸ್ ಆಗಿದೆ. ಇದೂ ಸಂಪೂರ್ಣ ಮೆಲೋಡಿ ಸಾಂಗ್ ಆಗಿದ್ದು 'ಮುದ್ದಾದ ಬಾನುಲಿ ವರದಿ' ಎಂದು ಆರಂಭ ಆಗುವ ಹಾಡು ಕೂಡ ಇಂಪಾಗಿದೆ. ಈ ಹಾಡನ್ನು ಚಿತ್ರೀಕರಿಸಿರುವ ಲೊಕೇಶನ್ಗಳು ಅದ್ಭುತವಾಗಿವೆ. ಹರಿಕಾವ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಎರಡನೇ ಹಾಡನ್ನು ಅವರೇ ಹಾಡಿದ್ದಾರೆ. ಹರಿಕಾವ್ಯ ಜೊತೆಗೆ ಖ್ಯಾತ ಗಾಯಕ ಹರಿಹರನ್, ಸನಾ ಮೈದುಟ್ಟಿ ಕೂಡ ಧ್ವನಿ ಕೂಡಿಸಿದ್ದು, ಕೆ. ಕಲ್ಯಾಣ್ ಸಾಹಿತ್ಯ ರಚಿಸಿದ್ದಾರೆ.

'ಮನಸ್ಮಿತ' ಸಿನಿಮಾ ಹಾಡುಗಳು ಮತ್ತು ತಾರಾ ಬಳಗದ ಮೂಲಕವೇ ನಿರೀಕ್ಷೆ ಹುಟ್ಟುಹಾಕಿದೆ. ಸೀತಮ್ಮ ವಿ.ಟಿ ನಿರ್ಮಾಣದ ಸಿನಿಮಾದಲ್ಲಿ ಚರಣ್ ಗೌಡ , ಸಂಜನಾ ದಾಸ್ , ಪಲ್ಲವಿ ಪುರೋಹಿತ್ ಅತುಲ್ ಕುಲಕರ್ಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಸುಚೇಂದ್ರ ಪ್ರಸಾದ್ , ರಾಜೇಂದ್ರ ಕಾರಂತ್, ಕರಿ ಸುಬ್ಬು , ಶಿಲ್ಪಾ , ವೀಣಾ, ಸೌಭಾಗ್ಯ , ಪ್ರದೀಪ್ ಶಾಸ್ತ್ರಿ , ಪ್ರದೀಪ್ ಪೂಜಾರಿ ಸೇರಿದಂತೆ ಹಲವರ ತಾರಾಗಣವಿದೆ. ಇನ್ನು ಚಿತ್ರಕ್ಕೆ ಚಂದ್ರಶೇಖರ್ ಕ್ಯಾಮೆರಾ, ಮಧು ಸಂಕಲನವಿದೆ.
Recommended Video

ಅಪ್ಪಣ್ಣ ಸಂತೋಷ್ ಬಾಲ್ಯದಿಂದಲೇ ನಟನೆ ಸಿನಿಮಾರಂಗದ ಆಸೆ ಬೆಳೆಸಿಕೊಂಡವರು. ಸೇಲ್ಸ್ ಎಕ್ಸಿಕ್ಯುಟಿವ್ನಿಂದ ಹಿಡಿದು ಬ್ಯುಸಿನೆಸ್ ಮ್ಯಾನೇಜರ್ವರೆಗೂ ಅನುಭವ ಪಡೆದಿದ್ದು, ಬಳಿಕ ಸ್ವಂತ ಉದ್ಯಮ ಶುರು ಮಾಡಿದ್ದರು. ಈ ನಡುವೆ, ಸಿನಿಮಾ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ಅಪ್ಪಣ್ಣಗೆ ಹಂಸಲೇಖಾ ಅವರ ಪರಿಚಯವಾ ಅವರ 'ಶಕುಂತಲೆ' ಸಿನಿಮಾಗೆ ಬಂಡವಾಳ ಹೂಡಲು ಮುಂದಾಗಿದ್ದರು. ಆದರೆ ಕಾರಣಾಂತರದಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಆದರೂ ಹಠ ಬಿಡದೇ ಸಿನಿಮಾ ಮಾಡಲೇಬೇಕೆಂಬ ಛಲದಲ್ಲಿ 'ಮನಸ್ಮಿತ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.


Click it and Unblock the Notifications











