'ರಕ್ಕಸಪುರದೋಳ್' ಟ್ರೈಲರ್ ಮೆಚ್ಚಿ ಬಾಲಿವುಡ್ ನಟ ಪೋಸ್ಟ್; ರಾಜ್ ಬಿ ಶೆಟ್ಟಿಗೆ ಶುಭಕೋರಿದ ನವಾಜುದ್ದೀನ್ ಸಿದ್ದಿಕಿ
'ಸು ಫ್ರಂ ಸೋ' ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ಇತಿಹಾಸದಲ್ಲಿ ಹೊಸ ಚರಿತ್ರೆಯನ್ನೇ ಬರೀತು. ಇಲ್ಲಿಂದ ರಾಜ್ ಬಿ ಶೆಟ್ಟಿಗೆ ಬೇಡಿಕೆ ದುಪ್ಪಟ್ಟಾಗಿದೆ. ಆದರೆ, ಈ ಸಿನಿಮಾ ರಿಲೀಸ್ಗೂ ಮುನ್ನವೇ ಕೆಲ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದರು. ಅದರಲ್ಲೊಂದು ಸಾಹಸ ನಿರ್ದೇಶಕ ರವಿವರ್ಮಾ ಇದೇ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವ 'ರಕ್ಕಸಪುರದೋಳ್'.
'ರಕ್ಕಸಪುರದೋಳ್' ಸಿನಿಮಾಗೆ ಈಗಾಗಲೇ ಚಿತ್ರರಂಗ ಗಣ್ಯರು ಶುಭಕೋರಿದ್ದಾರೆ. ಈ ಸಿನಿಮಾಗೆ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಈ ಸಿನಿಮಾಗೆ ಬೆಂಬಲ ನೀಡಿದ್ದರು. ರವಿವರ್ಮಾ ನಡೆದು ಬಂದ ಹಾದಿಯನ್ನು ನೆನೆದು ಮೆಚ್ಚಿಕೊಂಡಿದ್ದರು. ರಾಜ್ ಬಿ ಶೆಟ್ಟಿ ಪ್ರತಿಭೆಯನ್ನು ಹೊಗಳಿ ಕೊಂಡಾಡಿದ್ದರು. ಈಗ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಈ ಸಿನಿಮಾದ ಟ್ರೈಲರ್ ಅನ್ನು ಮೆಚ್ಚಿಕೊಂಡು ತಮ್ಮ ಇನ್ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಗೆಟಪ್ನಲ್ಲಿ ರಾಜ್ ಬಿ ಶೆಟ್ಟಿ ಖದರ್ ಸಿನಿಪ್ರೇಮಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಈ ಸಿನಿಮಾವನ್ನು ಜೋಗಿ ಪ್ರೇಮ್ ಅವರ ಶಿಷ್ಯ ರವಿ ಸಾರಂಗ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿದರು. ಇದೇ ಟ್ರೈಲರ್ ಅನ್ನು ನೋಡಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮೆಚ್ಚಿಕೊಂಡಿದ್ದಾರೆ. ಟ್ರೈಲರ್ ಬಗ್ಗೆ ಏನು ಹೇಳಿದ್ದಾರೆಂದು ನೋಡುವುದಾರೇ,
ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯ ಗೆಟಪ್ ಫ್ಯಾನ್ಸ್ಗಂತೂ ಕಿಕ್ ಕೊಟ್ಟಿದೆ. ಈ ಹಿಂದೆ ನಟಿಸಿದ ಸಿನಿಮಾಗಳಿಗಿಂತ 'ರಕ್ಕಸಪುರದೋಳ್'ನಲ್ಲಿ ಸಿಕ್ಕಾಪಟ್ಟೆ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ನಿರ್ದೇಶಕ ರವಿ ಸಾರಂಗ್ ಅವರೇ ಕಾರಣವೆಂದು ಹೇಳಿದ್ದಾರೆ. ರವಿ ಸಾರಂಗ್ ಹೇಳಿದ ಕಥೆ ರಾಜ್ ಬಿ ಶೆಟ್ಟಿಗೆ ಇಷ್ಟ ಆಗಿತ್ತು. ಅಲ್ಲದೆ ಇದು ಪ್ರತಿಭಾವಂತ ತಂತ್ರಜ್ಞರು ಇರುವ ಸಿನಿಮಾವೆಂದು ರಾಜ್ ಬಿ ಶೆಟ್ಟಿ ಹೇಳಿಕೊಂಡಿದ್ದರು. ಅದಕ್ಕೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಇನ್ಸ್ಟಾ ಪೋಸ್ಟ್ ಉತ್ತೇಜನ ನೀಡಿದಂತಿದೆ.
"ಇದೊಂದು ಅದ್ಭುತ ಟ್ರೈಲರ್. ಇಡೀ ತಂಡಕ್ಕೆ ಒಳ್ಳೆಯದಾಗಲಿ" ಎಂದು 'ರಕ್ಕಸಪುರದೋಳ್' ಸಿನಿಮಾದ ಪೋಸ್ಟರ್ ಪೋಸ್ಟ್ ಮಾಡಿ, ಟ್ರೈಲರ್ ಅನ್ನು ಮೆಚ್ಚಿಕೊಂಡಿದ್ದಾರೆ. ಹಾಗೇ ನಿರ್ಮಾಪಕ ಡಾ.ರವಿವರ್ಮಾ ಹಾಗೂ ರಾಜ್ ಬಿ ಶೆಟ್ಟಿಗೆ ಶುಭ ಕೋರಿದ್ದಾರೆ. ಇದು ಚಿತ್ರತಂಡ ಹೊಸ ಹುರುಪು ನೀಡಿದಂತೆ ಆಗಿದೆ. ಇಡೀ ಸ್ಯಾಂಡಲ್ವುಡ್ ಮಂದಿ ಸಿನಿಮಾಗೆ ಬೆಂಬಲ ನೀಡುತ್ತಿದ್ದು, ಈಗ ಬಾಲಿವುಡ್ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ಧಿಕಿ ಸಾಥ್ ಕೊಟ್ಟಿದ್ದು ಹುರುಪು ಬಂದಂತಾಗಿದೆ.

ರಾಜ್ ಬಿ ಶೆಟ್ಟಿ ಯಾವಾಗಲೂ ಕಡಿಮೆ ಬಜೆಟ್ ಸಿನಿಮಾ ಗೆಲ್ಲಬೇಕು ಅಂತ ಬಯಸುತ್ತಾರೆ. ಅಲ್ಲದೆ ತಂತ್ರಜ್ಞರು, ಕಥೆ ಹಾಗೂ ರೈಟರ್ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. 'ರಕ್ಕಸಪುರದೋಳ್' ಕೂಡ ರಾಜ್ ಬಿ ಶೆಟ್ಟಿ ಬಯಸಿದಂತಹ ಸಿನಿಮಾ. ಈ ಮಾತನ್ನು ಟ್ರೈಲರ್ ಲಾಂಚ್ ವೇಳೆ ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಫೆಬ್ರವರಿ 6ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾಗೆ ಹೇಗೆಲ್ಲ ರೆಸ್ಪಾನ್ಸ್ ಸಿಗುತ್ತೆ? ಅನ್ನೋದನ್ನು ನೋಡಬೇಕಿದೆ.
ಇನ್ನು ರವಿವರ್ಮಾ 'ರುಸ್ತುಂ' ಸಿನಿಮಾ ಮಾಡುವಾಗ ನಿರ್ದೇಶಕ ರವಿ ಸಾರಂಗ ಈ ಕಥೆಯನ್ನು ಹೇಳಿದ್ದರು. ಕಥೆ ಸಿಕ್ಕಾಪಟ್ಟೆ ಥ್ರಿಲ್ ಕೊಟ್ಟಿತ್ತು. ಈ ಕಥೆ ರಾಜ್ ಬಿ ಶೆಟ್ಟಿಗೂ ಇಷ್ಟ ಆಗಿತ್ತು. ಹೀಗಾಗಿ ಇಬ್ಬರೂ ಒಪ್ಪಿಕೊಂಡ ಬಳಿಕ ಈ ಸಿನಿಮಾ ಶುರುವಾಗಿತ್ತು. 'ರಕ್ಕಸಪುರದೋಳ್' ಸಿನಿಮಾವನ್ನು ಕನ್ನಡ ಹಾಗೂ ಮಲಯಾಳಂ ಎರಡು ಭಾಷೆಯಲ್ಲಿ ನಿರ್ಮಾಣ ಮಾಡಲಾಗಿದೆ. ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕರೆ, ಉಳಿದ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ.


Click it and Unblock the Notifications











