ಗರುಡ ಗಮನ ವೃಷಭ ವಾಹನಕ್ಕೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಕೊಟ್ಟ ಮಾರ್ಕ್ಸ್ ಎಷ್ಟು?
'ಗರುಡ ಗಮನ ವೃಷಭ ವಾಹನ' ಇದು ಕರಾವಳಿಯ ಭೂಗತಲೋಕದ ಅನಾವರಣ ಇರಬಹುದಾ? ಅಥವಾ ಇಬ್ಬರು ಸ್ನೇಹಿತರ ರಕ್ತಸಿಕ್ತ ಚರಿತ್ರೆನಾ? ಅನ್ನುವುದನ್ನೇ ಪ್ರಶ್ನೆ ಮಾಡುವ ಸಿನಿಮಾ. ರಾಜ್ ಬಿ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ನಟಿಸಿರುವ ಈ ಮಂಗಳೂರು ಸೊಗಡಿನ ಸಿನಿಮಾಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಂಗಳೂರಿನ ಮಂಗಳಾದೇವಿಯ ಸಮ್ಮುಖದಲ್ಲಿ ನಡೆಯುವ ಕ್ರೈಂ ಸ್ಟೋರಿಯನ್ನು ತೆಗಳಿದವರಿಗಿಂತ ಹೊಗಳಿಕೊಂಡಾಡುತ್ತಿರುವವರೇ ಹೆಚ್ಚು.
ಮೂರು ದಿನಗಳಲ್ಲೇ ಗರುಡ 'ಗಮನ ವೃಷಭ ವಾಹನ' ಸಾಕಷ್ಟು ಸದ್ದು ಮಾಡಿದೆ. ಬಹುತೇಕ ಕಡೆ ಹೌಸ್ಫುಲ್ ಬೋರ್ಡ್ ಬಿದ್ದಿದೆ. ಶನಿವಾರ ಹಾಗೂ ಭಾನುವಾರ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಂದ ತುಂಬಿ ತುಳುಕಾಡಿವೆ. ಈ ಮಧ್ಯೆ ಕರಾವಳಿಯ ಶೆಟ್ಟರ ಜೋಡಿ ಬಾಲಿವುಡ್ ನಿರ್ದೇಶಕ ಬೆನ್ನು ತಟ್ಟಿದ್ದಾರೆ. ಸಿನಿಮಾ ನೋಡಿ ಭೇಷ್ ಅಂದಿದ್ದಲ್ಲದೆ ರೇಟಿಂಗ್ ಕೂಡ ನೀಡಿದ್ದಾರೆ.

ಅನುರಾಗ್ ಕಶ್ಯಪ್ ಮನಗೆದ್ದ 'ಗರುಡ ಗಮನ ವೃಷಭ ವಾಹನ'
ಒಂದು ಕನ್ನಡ ಸಿನಿಮಾ ಕನ್ನಡಿಗರಿಗೆ ಇಷ್ಟ ಆಗುವುದು ಬೇರೆ ಮಾತು. ಸಿನಿಪ್ರಿಯರಿಗೆ ಇಷ್ಟ ಆಗುವುದು ಮತ್ತೊಂದು ಮಾತು. ಅದೇ ಕನ್ನಡ ಸಿನಿಮಾವನ್ನು ಬಾಲಿವುಡ್ ಅಂತ ದೊಡ್ಡ ಮಾರುಕಟ್ಟೆ ಹೊಂದಿರುವ ನಿರ್ದೇಶಕ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಅಂದರೆ, ಆ ಸಿನಿಮಾವನ್ನು ಇಷ್ಟಪಡದವರೂ ಮತ್ತೊಮ್ಮೆ ವಿಮರ್ಶೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದರ್ಥ. ಕ್ರೈಂ ಇಲ್ಲವೇ ಡಾರ್ಕ್ ಸಿನಿಮಾಗಳನ್ನೇ ನಿರ್ದೇಶಿಸುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ಗೆ 'ಗರುಡ ಗಮನ ವೃಷಭ ವಾಹನ' ಇಷ್ಟ ಆಗಿದೆ. ಅದಕ್ಕೆ ಈ ಚಿತ್ರಕ್ಕೆ ಬರೋಬ್ಬರಿ ನಾಲ್ಕೂವರೆ ಸ್ಟಾರ್ ನೀಡಿದ್ದಾರೆ.

ನಿರ್ದೇಶಕ ಪೋಸ್ಟ್ ಶೇರ್ ಮಾಡಿದ ರಾಜ್
'ಗರುಡ ಗಮನ ವೃಷಭ ವಾಹನ' ಈ ಸಿನಿಮಾದ ಪ್ರಮುಖ ರೂವಾರಿ ರಾಜ್ ಬಿ ಶೆಟ್ಟಿ. ಯಾಕಂದ್ರೆ, ಈ ಚಿತ್ರದ ನಿರ್ದೇಶಕರೂ ಇವರೇ, ನಾಯಕರೊಬ್ಬರೂ ಇವರೇ. ಎರಡೆರಡು ಜವಾಬ್ದಾರಿಯನ್ನು ಹೊತ್ತುಕೊಂಡು ಗೆದ್ದಿರುವ ರಾಜ್ ಬಿ ಶೆಟ್ಟಿಗೆ ಬಾಲಿವುಡ್ ನಿರ್ದೇಶಕ ಸೂಪರ್ ಅಂದಿದ್ದಾರೆ. ಅನುರಾಗ್ ಕಶ್ಯಪ್ ನಿರ್ದೇಶಿಸುವ ಕಥೆಗಳೂ ಕೂಡ ಹೀಗೆ ಗ್ಯಾಂಗ್ಸ್ಟರ್ ಹಿನ್ನೆಲೆ ಹೊಂದಿರುತ್ತೆ. ಹೀಗಾಗಿ ಮಂಗಳೂರಿನ ಈ ರಕ್ತಸಿಕ್ತ ಕಥೆಯೂ ಇಷ್ಟ ಆಗಿರಬಹುದು. ಬರೋಬ್ಬರಿ ನಾಲ್ಕೂವರೆ ಸ್ಟಾರ್ ಕೊಟ್ಟು ಚಿತ್ರತಂಡವನ್ನು ಹುರಿದುಂಬಿಸಿದ್ದು ಇಲ್ಲಿ ಗಮನಾರ್ಹ.

ಹೌಸ್ಫುಲ್ ಬೋರ್ಡ್ ಮುಂದೆ ಶೆಟ್ಟರ ಗ್ಯಾಂಗ್
'ಗರುಡ ಗಮನ ವೃಷಭ ವಾಹನ' ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲೂ ಸಿನಿಮಾ ರಿಲೀಸ್ ಆಗಿದೆ. ಸಿನಿಮಾಗೆ ಸಿಕ್ಕಿರುವ ರೆಸ್ಪಾನ್ಸ್ಗೆ ಥ್ರಿಲ್ ಆಗಿರುವ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಥಿಯೇಟರ್ ರೌಂಡ್ ಹಾಕಿದ್ದಾರೆ. ಕೆಲವು ಚಿತ್ರಮಂದಿರಗಳಿಗೆ ಭೇಟಿಕೊಟ್ಟು, ಆ ಚಿತ್ರಮಂದಿರದಲ್ಲಿ ಹಾಕಲಾಗಿದ್ದ ಹೌಸ್ಫುಲ್ ಬೋರ್ಡ್ ಮುಂದೆ ಕ್ಯಾಮರಾಗೆ ಪೋಸ್ ಕೊಟ್ಟು ಸಂಭ್ರಮಿಸಿದ್ದಾರೆ.

ಮಂಗಳೂರು ಗ್ಯಾಂಗ್ನ ಮೈಸೂರು ಪಯಣ
ಈ ಸಿನಿಮಾದ ಕಥೆ ಕರಾವಳಿ ಭಾಗದ ಹಿನ್ನೆಲೆಯಾಗಿರುವುದರಿಂದ ಕರ್ನಾಟಕದ ಉಳಿದ ಭಾಗದ ಜನರು ಆಸಕ್ತಿ ತೋರದೆ ಇರಬಹುದು. ಈ ಕಾರಣಕ್ಕೆ ಮೈಸೂರು ಭಾಗದ ಜನರಿಗೂ ತಮ್ಮ ಸಿನಿಮಾ ರಿಲೀಸ್ ಆಗಿದೆ ಅನ್ನುವುದನ್ನು ತಿಳಿಸಲು ಶೆಟ್ಟರ ಗ್ಯಾಂಗ್ ಮೈಸೂರಿಗೆ ಪಯಣ ಬೆಳೆಸಿದೆ. ಇಂದು (ನವೆಂಬರ್ 22) ಸಾಂಸ್ಕೃತಿಕ ನಗರಿ ಮೈಸೂರಿನ ಮಾಲ್ಗಳಿಗೆ ಭೇಟಿ ನೀಡಲಿದೆ. ಮೈಸೂರಿನ ಪಿವಿಆರ್ ಗರುಡಾ ಮಾಲ್, ಮೈಸೂರಿನ ಐನಾಕ್ಸ್ ಮಾಲ್, ಪಿವಿಆರ್ ಸೆಂಟ್ರಲ್ ಸಿಟಿ ಮಾಲ್ ಹಾಗೂ ಡಿಆರ್ಸಿ ಚಿತ್ರಮಂದಿರಕ್ಕೆ ಹರಿ ಹಾಗೂ ಶಿವ ಭೇಟಿ ನೀಡುತ್ತಿದ್ದಾರೆ.


Click it and Unblock the Notifications











