ಬೂಕರ್ ಪ್ರಶಸ್ತಿ ಸಮಾರಂಭದಲ್ಲಿ ಅಣ್ಣಾವ್ರ ಹಾಡಿನ ಉಲ್ಲೇಖ: ಲಂಡನ್ನಲ್ಲಿ ಜೇನಿನ ಹೊಳೆಯೋ ಎಂದಿದ್ದೇಕೆ?
Booker Prize 2025: ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕನ್ನಡ ಸಾಹಿತಿ ಬಾನು ಮುಷ್ತಾಕ್ ಅವರು ಬರೆದ ಕೃತಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಬಾನು ಮುಷ್ತಾಕ್ ಅವರು ಕನ್ನಡದಲ್ಲಿ ರಚಿಸಿದ ಸಣ್ಣ ಕಥೆಗಳನ್ನು ಇಂಗ್ಲಿಷ್ ಭಾಷೆಗೆ 'ಹಾರ್ಟ್ ಲ್ಯಾಂಪ್' ಹೆಸರಿನಲ್ಲಿ ದೀಪಾ ಸಭ್ತಿ ಅನುವಾದ ಮಾಡಿದ್ದರು. ಇದೇ ಕೃತಿಗೆ ಬೂಕರ್ ಪ್ರಶಸ್ತಿ ಸಿಕ್ಕಿದೆ.
ಇದು ಕನ್ನಡ ಕೃತಿಗೆ ಸಂದಿರುವ ಮೊದಲ ಬೂಕರ್ ಪ್ರಶಸ್ತಿ. ಹೀಗಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಹುರುಪು ಬಂದಂತೆ ಆಗಿದೆ. ವಿಶ್ವದಲ್ಲಿ ಮಾನ್ಯತೆ ಪಡೆದಿರುವ ಭಾಷೆಗಳಿಂದ ಹಲವು ಕೃತಿಗಳನ್ನು ಬೂಕರ್ ಪರಿಗಣನೆಗೆ ತೆಗೆದುಕೊಂಡಿರುತ್ತೆ. ಇದರಲ್ಲಿ ಕನ್ನಡತಿ ಬಾನು ಮುಷ್ತಾಕ್ ಬರೆದಿರುವ 'ಹೃದಯ ದೀಪ' ಇತಿಹಾಸವನ್ನು ಬರೆದಿದೆ. ಇದು ಕನ್ನಡಿಗರು ಎದೆಯುಬ್ಬಿಸಿ ನಡೆಯುವಂತೆ ಮಾಡಿದೆ.

ನಿನ್ನೆ (ಮೇ 20, ಮಂಗಳವಾರ) ರಾತ್ರಿ ಲಂಡನ್ನ ಪ್ರತಿಷ್ಠಿತ ಟೇಟ್ ಮಾಡರ್ನ್ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿತ್ತು. ಈ ಭಾವನಾತ್ಮಕ ಸನ್ನಿವೇಶದಲ್ಲಿ ಬಾನು ಮುಷ್ತಾಕ್ ಅವರ ಕೃತಿ ಪ್ರಶಸ್ತಿ ಗೆದ್ದಿದ್ದಕ್ಕೆ ಅನುವಾದಕಿ ದೀಪಾ ಭಸ್ತಿ ಕನ್ನಡ ಭಾಷೆಗೆ ಗೌರವನ್ನು ಸೂಚಿಸಿದ್ದಾರೆ. ಇದಕ್ಕೆ ಡಾ.ರಾಜ್ಕುಮಾರ್ ನಟಿಸಿದ 'ಚಲಿಸುವ ಮೋಡಗಳು' ಸಿನಿಮಾದ ಹಾಡನ್ನು ಹೇಳುವ ಮೂಲಕ ಕನ್ನಡ ಭಾಷೆಯ ಪ್ರಾಮುಖ್ಯತೆಯ ಅರಿವು ಮೂಡಿಸಿದ್ದಾರೆ.
2025ನೇ ಸಾಲಿನ ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಆರು ಕೃತಿಗಳು ಪೈಪೋಟಿಯಲ್ಲಿ ಇದ್ದವು. ಆ ಕೃತಿಗಳಲ್ಲಿ ಬಾನು ಮುಷ್ತಾಕ್ ಕೃತಿ 'ಹೃದಯ ದೀಪ' (ಹಾರ್ಟ್ ಲ್ಯಾಂಪ್) ಕೂಡ ಇತ್ತು. ಕೆಲವು ದಿನಗಳ ಹಿಂದಷ್ಟೇ ತನಗೆ ಬೂಕರ್ ಪ್ರಶಸ್ತಿ ಲಭಿಸುವಂತೆ ಪ್ರಾರ್ಥನೆ ಮಾಡಿಕೊಳ್ಳುವಂತೆ ಕನ್ನಡಿಗರಿಗೆ ಹೇಳಿದ್ದರು. ಅದರಂತೆ ಅವರಿಗೆ ಬೂಕರ್ ಪ್ರಶಸ್ತಿ ಲಭಿಸಿತ್ತು. ಇದರ ಪ್ರಶಸ್ತಿ ಸಮಾರಂಭ ಲಂಡನ್ನಲ್ಲಿ ನೆರೆವೇರಿದೆ. ಈ ವೇಳೆ ಈ ಕೃತಿಯನ್ನು ಅನುವಾದಿಸಿದ ದೀಪಾ ಸಭ್ತಿ ಅಣ್ಣಾವ್ರ ಹಾಡನ್ನು ಹಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
1982ರಲ್ಲಿ ತೆರೆಕಂಡಿದ್ದ ಅಣ್ಣಾವ್ರು ನಟಿಸಿದ 'ಚಲಿಸುವ ಮೋಡಗಳು' ಸಿನಿಮಾದ ಜನಪ್ರಿಯ ಗೀತೆಯ "ಜೇನಿನ ಹೊಳೆಯೋ ಹಾಲಿನ ಮಳೆಯೋ" ಸಾಲುಗಳನ್ನು ಹೇಳಿದ್ದಾರೆ. ಇದನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿ ಅದರ ಅರ್ಥವನ್ನು ತಿಳಿಸಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕನ್ನಡಿಗರಂತೂ ಈ ವಿಡಿಯೋವನ್ನು ಹಿರಿ ಹಿರಿ ಹಿಗ್ಗಿದ್ದಾರೆ.
'ಚಲಿಸುವ ಮೋಡಗಳು' ಸಿನಿಮಾದ ಈ ಹಾಡನ್ನು ಲೆಜೆಂಡರಿ ಸಿನಿ ಸಾಹಿತಿ ಚಿ. ಉದಯಶಂಕರ್ ಅವರು ಬರೆದಿದ್ದರು. ಈ ಹಾಡನ್ನು ಅಣ್ಣಾವ್ರ ಕಂಠಸಿರಿಯಲ್ಲಿ ಮೂಡಿ ಬಂದಿತ್ತು. ಇಂದಿಗೂ ಈ ಹಾಡು ಕನ್ನಡಿಗರ ಮೆಚ್ಚಿನ ಸಾಂಗ್. ಈ ಹಾಡು ಕನ್ನಡ ಭಾಷೆಗೆ ಕಾವ್ಯದ ಮೂಲಕ ನೀಡಿದ ಗೌರವ ಎಂದೇ ಬಣ್ಣಿಸಲಾಗಿದೆ. ಇದೇ ವೇಳೆ " ನನ್ನ ಸುಂದರವಾದ ಭಾಷೆ ಎಂತಹ ದೊಡ್ಡ ಗೆಲುವು ಸಿಕ್ಕಿದೆ. ಈ ಭೂಮಿಯ ಮೇಲೆ ಇರುವ ಅತ್ಯಂತ ಹಳೆಯ ಭಾಷೆಗಳ ಸಾಲಿನಲ್ಲಿ ಕನ್ನಡ ಸೇರಿದೆ. ಈ ಭಾಷೆಯಲ್ಲಿ ಓದುವುದು, ಬರೆಯುವುದು ಹಾಗೂ ಭಾಷಾಂತರ ಮಾಡುವ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸುತ್ತೆ ಎಂದು ತಿಳಿದು ಪರಮಾನಂದವಾಗಿದೆ"ಎಂದು ದೀಪಾ ಭಸ್ತಿ ಹೇಳಿದ್ದಾರೆ.
ಇನ್ನು 12 ಸಣ್ಣ ಕಥೆಯನ್ನು ಒಳಗೊಂಡ ಕಥಾ ಸಂಕಲನ ಗುಚ್ಛ ಇದಾಗಿದೆ. ಬಾನು ಮುಷ್ತಾಕ್ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಹೆಣ್ಣುಮಕ್ಕಳ ದೈನಂದಿನ ಬದುಕಿಗೆ ಸಂಬಂಧಿಸಿದ ವಿಷಯಗಳ ಮೇಲೆ ಈ ಕಥೆಗಳು ಕೇಂದ್ರೀಕರಿಸಿವೆ. ಈ ಪ್ರಶಸ್ತಿಗೆ ಬೂಕರ್ ಸಂದಿರುವ ಗೌರವ ಒಂದೆಡೆಯಾದರೆ, ಇನ್ನೊಂದು ಕಡೆ 57.28 ಲಕ್ಷ ರೂಪಾಯಿ ಪ್ರಶಸ್ತಿ ಹಣವಾಗಿ ಬರಲಿದೆ.


Click it and Unblock the Notifications











