Boycott Pushpa in Karnataka: ಕರ್ನಾಟಕದಲ್ಲಿ ಪುಷ್ಪ ಸಿನಿಮಾ ನಿಷೇಧ ಮಾಡುವಂತೆ ಕನ್ನಡಿಗರ ಅಭಿಯಾನ
ಇನ್ನೊಂದು ದಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸಿದ 'ಪುಷ್ಪ' ಸಿನಿಮಾ ಬಿಡುಗಡೆಯಾಗುತ್ತೆ. ಅಲ್ಲು ಅರ್ಜುನ್ ಅಭಿಮಾನಿಗಳು ಈ ಸಿನಿಮಾ ನೋಡಲು ಕಾತುರದಿಂದ ಕಾದು ಕೂತಿದ್ದಾರೆ. ನಿನ್ನೆ(ಡಿಸೆಂಬರ್ 15) ತಾನೇ ಅಲ್ಲು ಅರ್ಜುನ್ ಸೇರಿದಂತೆ ರಶ್ಮಿಕಾ ಮಂದಣ್ಣ, ಧನಂಜಯ್ ಬೆಂಗಳೂರಿಲ್ಲಿ ಪತ್ರಿಕಾಗೋಷ್ಠಿ ಮಾಡಿ ಕನ್ನಡಿಗರ ಮುಂದೆ ಸಿನಿಮಾ ಬಿಡುಗಡೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೂ 'ಪುಷ್ಪ' ಸಿನಿಮಾ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.
Recommended Video
'ಪುಷ್ಪ' ಸಿನಿಮಾ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಸಿನಿಮಾವನ್ನು ಬ್ಯಾನ್ ಮಾಡುವಂತೆ ಅಭಿಯಾನ ಆರಂಭ ಆಗಿದೆ. ಅಷ್ಟಕ್ಕೂ ಕನ್ನಡದಲ್ಲೂ ಬಿಡುಗಡೆ ಮಾಡಲು ಮುಂದಾಗಿರುವ 'ಪುಷ್ಪ' ತಂಡದ ವಿರುದ್ಧ ಕನ್ನಡಿಗರು ಕಿಡಿಕಾರುತ್ತಿರುವುದು ಯಾಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

'ಪುಷ್ಪ' ಸಿನಿಮಾ ನಿಷೇಧಕ್ಕೆ ಕರೆ ನೀಡಿದ್ದೇಕೆ?
'ಪುಷ್ಪ' ಅಲ್ಲು ಅರ್ಜುನ್ ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ವಿಶ್ವದಾದ್ಯಂತ ಅದ್ದೂರಿಯಾಗಿ ಥಿಯೇಟರ್ಗಳಿಗೆ ಎಂಟ್ರಿಕೊಡಲು ಚಿತ್ರತಂಡ ಸಜ್ಜಾಗಿದೆ. ಅಲ್ಲು ಅರ್ಜುನ್ ಕೂಡ ಐದೂ ಭಾಷೆಯಲ್ಲೂ ಪತ್ರಿಕಾಗೋಷ್ಠಿ ನಡೆಸಿ, ಸಿನಿಮಾದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಬೆಂಗಳೂರಿಗೆ ಬಂದು 'ಪುಷ್ಪ' ಬಗ್ಗೆ ಮಾಹಿತಿ ನೀಡಿ ಹೋಗಿದ್ದಾರೆ. ಆದರೂ, ಕನ್ನಡಿಗರು ಈ ಚಿತ್ರದ ಬಗ್ಗೆ ಸಮಾಧಾನಗೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ
#BoycottPushpainKarnataka ಹ್ಯಾಶ್ ಟ್ಯಾಗ್ ಕೊಟ್ಟು ಸಿನಿಮಾವನ್ನು ನಿಷೇಧ ಮಾಡುವಂತೆ ಅಭಿಯಾನ ಆರಂಭಿಸಿದ್ದಾರೆ.

ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಕನ್ನಡ 'ಪುಷ್ಪ'
'ಪುಷ್ಪ' ಚಿತ್ರದ ವಿರುದ್ಧ ಕನ್ನಡಿಗರು ತಿರುಗಿಬಿದ್ದಿರುವುದಕ್ಕೆ ಕಾರಣವಿದೆ. 'ಪುಷ್ಪ' ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಕನ್ನಡ ಭಾಷೆಯಲ್ಲಿಯೇ ಸಿನಿಮಾ ನೋಡಬಹುದು ಅಂತ ಕನ್ನಡಿಗರು ಕಾದು ಕೂತಿದ್ದರು. ಆದರೆ, ಕನ್ನಡದ 'ಪುಷ್ಪ' ಬಿಡುಗಡೆಯಾಗುತ್ತಿರುವುದು ಕೇವಲ ಬೆರೆಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಮಾತ್ರ. ಹೀಗಾಗಿ ಕನ್ನಡಿಗರು ಚಿತ್ರತಂಡದ ವಿರುದ್ಧ ಕಿಡಿಕಾರುತ್ತಿದ್ದಾರೆ. ಉದ್ದೇಶ ಪೂರ್ವಕವಾಗಿಯೇ ತೆಲುಗು ಅವರಣಿಕೆಯನ್ನು ಕನ್ನಡಿಗರಿಗೆ ತೋರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕನ್ನಡಕ್ಕೆ ಎಷ್ಟು? ತೆಲುಗಿಗೆ ಎಷ್ಟು ಥಿಯೇಟರ್?
ಕನ್ನಡಿಗರು ಕಣ್ಣುಗಳು ಕೆಂಪಾಗಿದ್ದಿದ್ದಕ್ಕೆ ಪ್ರಮುಖ ಕಾರಣ 'ಪುಷ್ಪ' ತಂಡ ಕನ್ನಡಕ್ಕೆ ಡಬ್ ಮಾಡಿದ್ದರೂ ರಿಲೀಸ್ ಮಾಡುತ್ತಿರುವುದು ಮಾತ್ರ ತೆಲುಗಿನಲ್ಲಿ. ತೆಲುಗಿನಲ್ಲಿಯೇ ಸಿನಿಮಾ ತೋರಿಸುವುದಾಗಿದ್ದರೆ, ಕನ್ನಡಕ್ಕೆ ಡಬ್ ಮಾಡಿದ್ದು ಯಾಕೆ? ಅನ್ನುವುದು ಕನ್ನಡಿಗರ ಆಕ್ರೋಶ. ಅದರಲ್ಲೂ ಕರ್ನಾಟಕದಲ್ಲಿ 749 ಸ್ಕ್ರೀನ್ಗಳಲ್ಲಿ ತೆಲುಗು 'ಪುಷ್ಪ' ತೆರೆಕಾಣುತ್ತಿದೆ. ಕನ್ನಡದ 'ಪುಷ್ಪ'ಗೆ ಕೇವಲ 8 ಸ್ಕ್ರೀನ್ಗಳನ್ನು ಮಾತ್ರ ನೀಡಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಂಡಕಾರುತ್ತಿದ್ದಾರೆ.

'ಪುಷ್ಪ' ಸಿನಿಮಾ ನೋಡುತ್ತಾರಾ ಕನ್ನಡಿಗರು
ಈಗ ಎದ್ದಿರುವ ಪ್ರಶ್ನೆ ಏನಪ್ಪಾ ಅಂದರೆ, ಕನ್ನಡಿಗರು 'ಪುಷ್ಪ' ಸಿನಿಮಾವನ್ನು ನೋಡುತ್ತಾರಾ? ಅಭಿಯಾನ ಆರಂಭ ಮಾಡಿದ ಮೇಲೂ ತೆಲುಗು ಅವತರಣಿಕೆಯ 'ಪುಷ್ಪ' ಸಿನಿಮಾವನ್ನೇ ಹೆಚ್ಚು ಸ್ಕ್ರೀನ್ಗಳಲ್ಲಿ ಬಿಡುಗಡೆ ಮಾಡಿದರೆ ಏನು ಮಾಡುತ್ತಾರೆ? ಕನ್ನಡಕ್ಕಿಂತ ತೆಲುಗು ವರ್ಷನ್ ಅನ್ನೇ ಜನರು ಹೆಚ್ಚಾಗಿ ಮೆಚ್ಚಿಕೊಂಡರೆ ಏನು ಮಾಡುತ್ತಾರೆ? ಇದು ಹಿಂದಿನಂತೆ ಸಿನಿಮಾ ಬಿಡುಗಡೆಗೂ ಮುನ್ನ ಅಭಿಮಾನ ಆರಂಭಿಸಿ ಬಳಿಕ ಸದ್ದೇ ಇಲ್ಲದೆ ಕಣ್ಮರೆಯಾಗುತ್ತಾ? ಅನ್ನುವ ಪ್ರಶ್ನೆಯಂತೂ ಕಾಡುತ್ತಿದೆ. ಕನ್ನಡಿಗರ ಸ್ವಾಭಿಮಾನದಿಂದ ಆರಂಭಿಸಿದ ಮತ್ತೊಂದು ಅಭಿಯಾನಕ್ಕೆ ಪ್ರತಿಕ್ರಿಯೆ ಹೇಗೆ ಸಿಗುತ್ತೆ ಅನ್ನವುದು ಇನ್ನೊಂದು ದಿನದಲ್ಲಿ ಗೊತ್ತಾಗುತ್ತೆ.


Click it and Unblock the Notifications











