"ಲೈಫ್ನಲ್ಲಿ ಮುಂದಕ್ಕೆ ಹೋಗ್ಬೇಕು ಅಂದ್ರೆ ಬಂದು ಕಲ್ಲು ಹಾಕ್ತಾನೇ ಇದ್ದೀರ": ಕಣ್ಣೀರಿಟ್ಟ ಬೃಂದಾವನ ನಟ
ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ವರುಣ್ ಆರಾಧ್ಯ ಬಳಿಕ 'ಬೃಂದಾವನ' ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದರು. ಕಿರಿತೆರೆ ವೀಕ್ಷಕರಿಗೆ ಜನಪ್ರಿಯ ಫೇಸ್ ಆಗಿರುವ ವರುಣ್ ಆರಾಧ್ಯ ಬಗ್ಗೆ ಕೆಲವು ದಿನಗಳಿಂದ ಸುದ್ದಿಯೊಂದು ಓಡಾಡುತ್ತಿತ್ತು. ತನ್ನ ಮಾಜಿ ಗರ್ಲ್ಫ್ರೆಂಡ್ ವರ್ಷಾ ಕಾವೇರಿಯೊಂದಿಗಿನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂಬ ಸುದ್ದಿ ಹಬ್ಬಿತ್ತು.
ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ವರ್ಷಾ ಕಾವೇರಿ ದೂರನ್ನು ದಾಖಲಿಸಿದ್ದು, ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ವರ್ಷಾ ಕಾವೇರಿ ಇದು ಸುಳ್ಳು ಸುದ್ದಿ ಎಂದು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು.

ಈಗ ವರುಣ್ ಆರಾಧ್ಯ ವಿಡಿಯೋ ಮಾಡಿ ಈ ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಹಾಗೂ ಮಾಜಿ ಪ್ರೇಯಸಿ ನಡುವಿನ ವಿವಾದವೇನು? ಅನ್ನೋದನ್ನು ಹೇಳಿಕೊಂಡಿದ್ದಾರೆ. ಇದೇ ವೇಳೆ ತಮ್ಮನ್ನು ಬೆಳೆಯಲು ಬಿಡುತ್ತಿಲ್ಲವೆಂದು ಕಣ್ಣೀರು ಕೂಡ ಹಾಕಿದ್ದಾರೆ. ಅಸಲಿಗೆ ಏನು ನಡೆದಿದೆ ಅನ್ನೋದನ್ನು ಇಂಚಿಂಚಾಗಿ ಹೇಳಿಕೊಂಡಿದ್ದಾರೆ. ಅದರ ವಿಡಿಯೋದ ಝಲಕ್ ಇಲ್ಲಿದೆ.
"ನಮ್ಮನ್ನು ಕೇಳಿಕೊಂಡು ಸುದ್ದಿ ಹಾಕಿ"
"ವರುಣ್ ಆರಾಧ್ಯ ಖ್ಯಾತ ನಟ, ಬೃಂದಾವನ ಸೀರಿಯಲ್ ಮಾಡುತ್ತಿರುವವನು ಒಬ್ಬ ವ್ಯಕ್ತಿಯ ಮೇಲೆ ಕೊಲೆ ಬೆದರಿಕೆ ಮಾಡುವುದಕ್ಕೆ ಟ್ರೈ ಮಾಡುತ್ತಿದ್ದಾನೆ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಏನೇನೋ ಬರುತ್ತಿದೆ. ಅರೆಸ್ಟ್ ಮಾಡಿದ್ದಾರೆ. ಎಫ್ಐಆರ್ ಹಾಕಿದ್ದಾರೆ, ಜೈಲ್ನಲ್ಲಿ ಇದ್ದಾರೆ. ಅಲ್ಲಿದ್ದಾರೆ ಇಲ್ಲಿದ್ದಾರೆ ಅಂತೆಲ್ಲ ಹೇಳುತ್ತಿದ್ದಾರೆ. ಏನಕ್ಕೆ ಸುಳ್ಳು ಸುದ್ದಿಗಳನ್ನು ಹಾಕುತ್ತಿದ್ದೀರ ಅಂತ ಅರ್ಥ ಆಗುತ್ತಿಲ್ಲ. ಆರಾಮಾಗಿ ಮನೆಯಲ್ಲೇ ಇದ್ದೀನಿ. ಅವರ ಪಾಡಿಗೆ ಅವರು ಇದ್ದಾರೆ. ನನ್ನ ಪಾಡಿಗೆ ನಾನು ಇದ್ದೀನಿ. ಏನಿದೆ ಅಂತ ನಮ್ಮನ್ನು ಕೇಳಿಕೊಂಡು ನೀವು ಹಾಕಿ. ನಾವೇನು ಮಾಡಿದ್ದೀವಿ ಅಂತ ನಮ್ಮನ್ನು ಕೇಳಿ" ಎಂದು ವರುಣ್ ಆರಾಧ್ಯ ಹೇಳಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ?
"ಆ ವ್ಯಕ್ತಿ ಏನಿದ್ದಾರೆ ಅವರು ಪೊಲೀಸ್ ಸ್ಟೇಷನ್ನಲ್ಲಿ ಮನವಿ ಮಾಡಿದ್ದರು. ನನ್ನ ಮತ್ತು ಅವರ ವಿಡಿಯೋ ಇನ್ಸ್ಟಾಗ್ರಾಂನಲ್ಲಿ 2018ನಿಂದಲೇ ನಾವಿಬ್ಬರೂ ರೀಲ್ಸ್ ಮಾಡಿ ಅಪ್ಲೋಡ್ ಮಾಡಿದ್ವಿ. ಅದನ್ನು ಡಿಲೀಟ್ ಮಾಡಿಸುವುದಕ್ಕಾಗಿ ಅವರು ಮನವಿ ಮಾಡಿದ್ದರು. ನನಗೆ ಟೈಮ್ ಇರಲಿಲ್ಲ. ನಾನು ಬೇರೆ ಕೆಲಸದಲ್ಲಿ ಬ್ಯುಸಿ ಇದ್ದೆ. ಬಹುತೇಕ ವಿಡಿಯೋಗಳನ್ನು ಡಿಲೀಟ್ ಮಾಡಿದ್ದೆ. ಇನ್ನು ಕೆಲವು ಮಾತ್ರ ಹಾಗೇ ಇತ್ತು. ನಾಲ್ಕು ವರ್ಷದಲ್ಲಿ ತುಂಬಾ ವಿಡಿಯೋ ಮಾಡಿದ್ವಿ. ಅದು ಅವರಿಗೆ ಮುಂದೆ ಮದುವೆ ಆದರೆ ತೊಂದರೆ ಆಗಬಾರದು ಅಂತ. ನಮ್ಮ ಫ್ಯಾನ್ಸ್ ಆ ವಿಡಿಯೋಗಳನ್ನು ತೆಗೆದು ಪೋಸ್ಟ್ ಮಾಡುತ್ತಿದ್ದಾರೆ. ಅದು ಇಬ್ಬರಿಗೂ ತೊಂದರೆ ಆಗುತ್ತೆ. ಆ ಕಾರಣಕ್ಕೆ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿಕೊಂಡಿದ್ದರು." ಎಂದು ಪೊಲೀಸ್ ಠಾಣೆಗೆ ಹೋಗಿದ್ದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.
ಈ ವಿವಾದ ಯಾವ ಹಂತದಲ್ಲಿದೆ?
"ಬಸವೇಶ್ವರ ನಗರ ಪೊಲೀಸ್ ಸ್ಟೇಷನ್ಗೆ ಹೋದ್ವಿ. ನಮ್ಮ ಎಸಿಪಿಯವರಾದ ಉಮಾರಾಣಿ ಮೇಡಂ ಮುಂದೆನೇ ಇಬ್ಬರೂ ಇಚ್ಛೆಯಿಂದಲೇ ಕೂತು ಮಾತುಕತೆ ಮಾಡಿ, ನಮ್ಮಿಬ್ಬರ ನಡುವೆ ಏನು ವೈಮನಸ್ಸುಗಳಿವೆ. ಅದನ್ನು ಕೂತು ಬಗೆ ಹರಿಸಿಕೊಂಡು ನಮ್ಮಮ್ಮ ಲೈಫ್ ಅನ್ನು ನೋಡಿಕೊಳ್ಳುತ್ತಿದ್ದೇವೆ. ಇಷ್ಟೇ ಮ್ಯಾಟರ್. ಇದೇ ಆಗಿದ್ದು." ಎಂದು ವರುಣ್ ಆರಾಧ್ಯ ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟಿದ್ದಾರೆ.
ಕಣ್ಣೀರಿಟ್ಟ ವರುಣ್ ಆರಾಧ್ಯ
"ನನ್ನ ಲೈಫ್ ಮುಂದೆ ಹೋಗಬೇಕು. ಅವರ ಲೈಫ್ ಮುಂದೆ ಹೋಗಬೇಕು. ಅದಕ್ಕೆ ನೀವು ಬಂದು ಕಲ್ಲು ಹಾಕುತ್ತಲೇ ಇದ್ದೀರ. ನಮ್ಮ ಮನೆಯಲ್ಲಿ ನಮ್ಮ ಅಮ್ಮ, ಅಕ್ಕ ಪ್ರತಿಯೊಬ್ಬರೂ ಸಿಕ್ಕಾಪಟ್ಟೆ ನೊಂದುಕೊಂಡಿದ್ದಾರೆ. ಏನೂ ತಪ್ಪು ಮಾಡಿಲ್ಲ ಅಂದರೂ, ಪದೇ ಪದೆ ತಪ್ಪು ಸುದ್ದಿ, ಸ್ಟೇಟ್ಮೆಂಟ್ ಹಾಕುತ್ತಲೇ ಇದ್ದಾರೆ. ನಾನು ಬೆಳೆಯಬೇಕು ಅಂತ ತುಂಬಾನೇ ಪ್ರಯತ್ನ ಪಡುತ್ತಿದ್ದೇನೆ. ಯಾರೂ ಬೆಳೆಯುವುದಕ್ಕೆ ಬಿಡುತ್ತಿಲ್ಲ. ಒಳ್ಳೆಯತನವನ್ನು ಎಲ್ಲರೂ ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ." ಎಂದು ಕಣ್ಣೀರು ಹಾಕಿದ್ದಾರೆ.


Click it and Unblock the Notifications











