"ಡಾ.ರಾಜ್ ಕುಮಾರ್ ಅಭಿನಯದ ಸನಾದಿ ಅಪ್ಪಣ್ಣ ಸಿನಿಮಾ ಹಲವು ಬಾರಿ ನೋಡಿದ್ದೆ"
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಡಾ.ರಾಜ್ಕುಮಾರ್ ಅಭಿನಯದ 'ಸನಾದಿ ಅಪ್ಪಣ್ಣ' ಸಿನಿಮಾ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಉದ್ಘಾಟಿಸಿದ ಬಳಿಕ ಕುಳುವ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆಯಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯ ಮಾತುಗಳನ್ನು ಆಡಿದರು. ಕುಳುವ ಸಮಾಜದ ಹಲವರಲ್ಲಿ ತಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗೆ ಇಡಬಹುದು ಎನ್ನುವ ಆತಂಕ ಹಲವರಲ್ಲಿದೆ. ಆದರೆ, ನಾನು ಹೇಳ್ತಾ ಇದ್ದೇನೆ. ಆ ಆತಂಕ ಬೇಡ ಎಂದು ಭರವಸೆ ನೀಡಿದ್ದಾರೆ.

ಈ ವೇಳೆ "ಸನಾದಿ ಅಪ್ಪಣ್ಣ ಕೂಡ ಕುಳುವ ಸಮಾಜದವರು. ಡಾ.ರಾಜ್ ಕುಮಾರ್ ಅವರ ಅಭಿನಯದ ಸನಾದಿ ಅಪ್ಪಣ್ಣ ಸಿನಿಮಾವನ್ನು ನಾನು ಹಲವು ಬಾರಿ ನೋಡಿದ್ದೇನೆ. ನನಗೆ ರಾಜ್ ಕುಮಾರ್ ಅವರ ಸಿನಿಮಾವನ್ನು ಬರಿ ಒಂದು ಸಾರಿ ನೋಡಿದರೆ ಸಮಾಧಾನ ಆಗುತ್ತಿರಲಿಲ್ಲ. ಅದಕ್ಕೇ ಪದೇ ಪದೇ ನೋಡುತ್ತಿದ್ದೆ" ಸಿಎಂ ಸಿದ್ದರಾಮಯ್ಯ ಸಿನಿಮಾವನ್ನು ಉದಾಹರಣೆಯಾಗಿಟ್ಟುಕೊಂಡು ಕುಳುವ ಸಮಾಜದ ಬಗ್ಗೆ ಮಾತಾಡಿದ್ದಾರೆ.
"ಶಿಕ್ಷಣ ಹೆಚ್ಚಾದಷ್ಟೂ ಜಾತಿ ವ್ಯವಸ್ಥೆ ನಶಿಸಬೇಕಿತ್ತು. ಆದರೆ ಹಾಗೇ ಉಳಿದುಕೊಂಡಿದೆ. ಬಸವಾದಿ ಶರಣರು 12 ನೇ ಶತಮಾನದಲ್ಲೇ ಜಾತಿ ವ್ಯವಸ್ಥೆ ಮತ್ತು ತಾರತಮ್ಯದ ವಿರುದ್ಧ ಕ್ರಾಂತಿ ಮಾಡಿದ್ದರು. ನುಲಿಯ ಚಂದಯ್ಯ ಬಸವಾದಿ ಶರಣರಲ್ಲಿ ಪ್ರಮುಖರು. ಶರಣರಲ್ಲೇ ಅಗ್ರ ಗಣ್ಯರು. ಹೀಗಾಗಿ ಬಸವಣ್ಣನವರಿಗೆ ನುಲಿಯ ಚಂದಯ್ಯರ ಬಗ್ಗೆ ಬಹಳ ಅಭಿಮಾನ ಪ್ರೀತಿ ಇತ್ತು" ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ವಿವರಿಸಿದ್ದಾರೆ.

"ಸಮಾಜದಲ್ಲಿ ಸ್ವಾರ್ಥಿಗಳಿಂದ ಜಾತಿ ವ್ಯವಸ್ಥೆ ರೂಪುಗೊಂಡಿತು. ಯಾವ್ಯಾವ ಕಸುಬನ್ನು ಯಾರು ಮಾಡುತ್ತಿದ್ದಾರೋ ಅದದೇ ಕಸುಬನ್ನೇ ಮಾಡಿಕೊಂಡಿರಲಿ. ಅವರು ಯಾರೂ ಪ್ರಗತಿ ಕಾಣಬಾರದು ಎನ್ನುವ ಸ್ವಾರ್ಥ ಜಾತಿ ವ್ಯವಸ್ಥೆಗೆ ಕಾರಣ" ಎಂದು ಸಿಎಂ ಹೇಳಿದ್ದಾರೆ.
"ಧರ್ಮವನ್ನು ಅರ್ಥ ಮಾಡಿಕೊಳ್ಳಲು ದೊಡ್ಡ ಗ್ರಂಥಗಳನ್ನು ಓದುವ ಅಗತ್ಯವಿಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಜಾತಿ-ಧರ್ಮದ ಹೆಸರಲ್ಲಿ ಮನುಷ್ಯರನ್ನು ದ್ವೇಷಿಸುವುದೇ ಅಧರ್ಮ. ಧರ್ಮದ ಬಗ್ಗೆ ಭಾಷಣ ಮಾಡುವುದು ಸುಲಭ. ಆದರೆ ಧರ್ಮವಂತರಾಗಿ ಬದುಕುವುದು ಕಷ್ಟ. ಧರ್ಮದ ಬಗ್ಗೆ ಭಾಷಣ ಮಾಡುವವರು ಧರ್ಮವಂತರಾಗಿ ಬದುಕುತ್ತಿದ್ದಾರಾ" ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ.
ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ವಹಿಸಿದ್ದರು. ಕೊರಮ ಕೊರಚ ಕೊರವ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಿವಾನಂದ ಎಂ ಭಜಂತ್ರಿ, ಸಮುದಾಯದ ಮುಖಂಡರುಗಳಾದ AKMS ನ ಪಲ್ಲವಿ, ಬಿ.ಎಸ್.ಆನಂದಕುಮಾರ್ ಏಕಲವ್ಯ, ಆದರ್ಶ್ ಯಲ್ಲಪ್ಪ, ಎಂ.ವೆಂಕಟೇಶ್, ಜಿ.ಚಂದ್ರಣ್ಣ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.
ಈ ಕಾರ್ಯಕ್ರಮದಲ್ಲಿ ಕೊರಮ ಕೊರಚ ಕೊರವ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಿವಾನಂದ ಎಂ ಭಜಂತ್ರಿ, ಸಮುದಾಯದ ಮುಖಂಡರುಗಳಾದ AKMSನ ಪಲ್ಲವಿ, ಬಿ.ಎಸ್.ಆನಂದಕುಮಾರ್ ಏಕಲವ್ಯ, ಆದರ್ಶ್ ಯಲ್ಲಪ್ಪ, ಎಂ.ವೆಂಕಟೇಶ್, ಜಿ.ಚಂದ್ರಣ್ಣ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.


Click it and Unblock the Notifications










