CCL-2026: ಕಿಚ್ಚ, ಕೃಷ್ಣ, ರಾಜೀವ್ ಪಂಜಾಬ್ ಬೌಲರ್ಗೆ ಹ್ಯಾಟ್ರಿಕ್ ವಿಕೆಟ್; ಆರಂಭದಲ್ಲಿ ಕುಸಿದ ತಂಡಕ್ಕೆ ಕರಣ್ ಆಸರೆ
2026ರ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಇಂದಿನಿಂದ (ಜನವರಿ 16) ಶುಭಾರಂಭಗೊಂಡಿದೆ. ಮೊದಲ ಪಂದ್ಯ ವೈಜಾಗ್ನಲ್ಲಿ ನಡೆಯುತ್ತಿದೆ. ಪಂಜಾಬ್ ತಂಡವನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಎದುರಿಸುತ್ತಿದ್ದಾರೆ. ಫಸ್ಟ್ ಮ್ಯಾಚ್ನಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ ಉತ್ತಮ ಆರಂಭವನ್ನೇ ಪಡೆದಿತ್ತು. ಆದರೆ, ಡಾರ್ಲಿಂಗ್ ಕೃಷ್ಣ ವಿಕೆಟ್ ಕೀಳುವ ಮೂಲಕ ಪಂಜಾಬ್ ಟಕ್ಕರ್ ಕೊಟ್ಟಿತ್ತು.
ಸಿಸಿಎಲ್ 2026 ಮೊದಲ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪರ ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಡಾರ್ಲಿಂಗ್ ಕೃಷ್ಣ ಹಾಗೂ ಪ್ರದೀಪ್ ಆಗಮಿಸಿದ್ದರು. 4.3 ಓವರ್ಗಳಲ್ಲಿ ಇವರಿಬ್ಬರೂ ಸೇರಿ 31 ರನ್ಗಳನ್ನು ಕಲೆ ಹಾಕಿದ್ದರು. ಇನ್ನೇನು ಇಬ್ಬರೂ ಸೇರಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಮೊತ್ತವನ್ನು ಗಗನಕ್ಕೆ ತೆಗೆದುಕೊಂಡು ಹೋಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಹಾಗಿಲ್ಲ ಆರಂಭದಲ್ಲಿಯೇ ಬ್ಯಾಕ್ ಟು ಬ್ಯಾಕ್ ವಿಕೆಟ್ಗಳನ್ನು ಕಳೆದುಕೊಂಡಿತ್ತು.

ಈ ವರ್ಷದ ಸೆಲೆಬ್ರೆಟಿ ಕ್ರಿಕೆಟ್ ಲೀಗ್ನ ಮೊದಲ ಪಂದ್ಯದಲ್ಲಿಯೇ ಕರ್ನಾಟಕ ಬಲ್ಡೋಜರ್ಸ್ ತಂಡ ಹ್ಯಾಟ್ರಿಕ್ ವಿಕೆಟ್ಗಳನ್ನು ಪಂಜಾಬ್ ಒಪ್ಪಿಸಿತು. 4.3ನೇ ಓವರ್ನಲ್ಲಿ 31 ರನ್ ಇರುವಾಗ ಡಾರ್ಲಿಂಗ್ ಕೃಷ್ಣ ಪಂಜಾಬ್ನ ದಕ್ಷ್ ಸಿಂಗ್ ಅವರ ಬೌಲಿಂಗ್ನಲ್ಲಿ ಔಟ್ ಆದರು. ಕೃಷ್ಣ ನಿರ್ಗಮನದ ಬಳಿಕ ಬ್ಯಾಟ್ ಮಾಡುವುದಕ್ಕೆ ಬಂದ ಆಕ್ರಮಣಕಾರಿ ಆಟಗಾರ ರಾಜೀವ್ ಕೂಡ ಮೊದಲನೇ ಬೌಲ್ಗೆ ಔಟ್ ಆದರು.
ಅಲ್ಲಿಗೆ ಡಾರ್ಲಿಂಗ್ ಕೃಷ್ಣ ಹಾಗೂ ರಾಜೀವ್ ಹನು ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಹಿಂತಿರುಗಿದರು. ಎರಡು ವಿಕೆಟ್ಗಳನ್ನು ಕಳೆದುಕೊಂಡ ಬಳಿಕ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ಅಖಾಡಕ್ಕೆ ಇಳಿದರು. ಅವರು ಕೂಡ ಮೊದಲನೇ ಬೌಲ್ಗೆ ಔಟ್ ಆದರು. ದಕ್ಷ್ ಸಿಂಗ್ 5 ಓವರ್ ಮುಗಿಯುವುದರೊಳಗೆ ಒಂದರ ಹಿಂದೊಂದು ಮೂರು ವಿಕೆಟ್ಗಳನ್ನು ಕಿತ್ತಿದ್ದರು. ಈ ಮೂಲಕ 2026ರ ಮೊದಲ ಪಂದ್ಯದಲ್ಲಿಯೇ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ಸೃಷ್ಟಿಸಿದ್ದಾರೆ.
ಕರ್ನಾಟಕ ಬುಲ್ಡೋಜರ್ಸ ತಂಡದ ವಿಕೆಟ್ ಉದುರುವುದು ಇಲ್ಲಿಗೆ ನಿಲ್ಲಲಿಲ್ಲ. ಇನ್ನೊಂದು ಕಡೆ ಬ್ಯಾಟಿಂಗ್ ಮಾಡುತ್ತಿದ್ದ ಪ್ರದೀಪ್ ಗಟ್ಟಿಯಾಗಿ ನಿಲ್ಲಬಹುದೆಂಬ ನಿರೀಕ್ಷೆಯಿತ್ತು. ಆದರೆ, ಐದನೇ ಓವರ್ನ ಮೊದಲ ಎಸೆತದಲ್ಲಿಯೇ 13 ಎಸೆತಗಳಲ್ಲಿ 17 ರನ್ ಗಳಿಸಿದ್ದ ಪ್ರದೀಪ್ ಕೂಡ ಕೀಪರ್ ಕ್ಯಾಚ್ ಕೊಟ್ಟು ಔಟ್ ಆದರು. ಈ ಮೂಲಕ ಕರ್ನಾಟಕ ನಾಲ್ಕು ಬೌಲ್ಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತ್ತು.
ನಂತರ ಅಖಾಡಕ್ಕೆ ಇಳಿದ ಪ್ರತಾಪ್ ಹಾಗೂ ಕಾರ್ತಿಕ್ ಜಯರಾಂ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಸೂಚನೆ ನೀಡಿದ್ದರೂ, ಹೆಚ್ಚು ಅಂಕಗಳನ್ನು ಕಲೆ ಹಾಕುವುದಕ್ಕೆ ಸಾಧ್ಯವಾಗಿಲ್ಲ. ಆ ಬಳಿಕ ಬಂದ ಕರಣ್ ಆರ್ಯನ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವುದಕ್ಕೆ ಶುರುವಿಟ್ಟುಕೊಂಡರು. ಪಂಜಾಬ್ ಬೌಲರ್ಗಳನ್ನು ಅಡ್ಡಾದಿಡ್ಡಿ ಅಲೆದಾಡಿಸಿದರು. ಕರಣ್ ಆರ್ಯನ್ ಕೇವಲ 33 ಎಸೆತಗಳಲ್ಲಿ 83 ರನ್ಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾದರು.
ಆರಂಭದಲ್ಲಿ ವಿಕೆಟ್ಗಳು ನಷ್ಟ ಆಗಿದ್ದನ್ನು ನೋಡಿದರೆ, ಕರ್ನಾಟಕ ಬುಲ್ಡೋಜರ್ಸ್ 100 ರನ್ ಒಳಗೆ ಆಲ್ ಔಟ್ ಆಗುವ ಎಲ್ಲಾ ಸಾಧ್ಯಗಳು ಇದ್ದವು. ಹೀಗಿರುವಾಗ ತಂಡಕ್ಕೆ ಕರಣ್ ಆರ್ಯನ್ ಆಸೆಯಾಗಿ ಇಂತರು. ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ 170 ರನ್ಗಳನ್ನು ಕಲೆ ಹಾಕಿ, ಪಂಜಾಬ್ ದಿ ಶೇರ್ ತಂಡಕ್ಕೆ 171 ರನ್ಗಳ ಗುರಿಯನ್ನು ನೀಡಿದ್ದಾರೆ.


Click it and Unblock the Notifications











