ಆಸ್ಪತ್ರೆಯಲ್ಲಿ ದರ್ಶನ್ ಫೋಟೋ ತೆಗೆದ ಅಭಿಮಾನಿಯ ಮೊಬೈಲ್ ಪುಡಿ ಪುಡಿ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ನೋವಿನಲ್ಲಿದ್ದಾರೆ. ಮೊನ್ನೆ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ದರ್ಶನ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಕೈ ಮೂಳೆ ಮುರಿದುಕೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದರ್ಶನ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಗಾಯಗೊಂಡಿರುವ ದರ್ಶನ್ ರನ್ನ ನೋಡಲು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಇದು ಆಸ್ಪತ್ರೆ ಸಿಬ್ಬಂದಿ ಹಾಗೂ ಇತರೆ ರೋಗಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಇದೇ ಕಾರಣಕ್ಕೆ, ''ಯಾರೂ ಕೂಡ ಆಸ್ಪತ್ರೆ ಬಳಿ ಬರಬೇಡಿ. ನಾನು ಆರಾಮಾಗಿ ಇದ್ದೇನೆ'' ಎಂದು ಅಭಿಮಾನಿಗಳಲ್ಲಿ ನಟ ದರ್ಶನ್ ಮನವಿ ಮಾಡಿದ್ದರು. ಆದರೂ, ಅಭಿಮಾನಿಯೊಬ್ಬ ಆಸ್ಪತ್ರೆಗೆ ಬಂದು ದರ್ಶನ್ ಬೆಡ್ ಮೇಲೆ ಮಲಗಿದ್ದ ಫೋಟೋವನ್ನು ತೆಗೆದಿದ್ದಾನೆ. ಇದರಿಂದ ಕೋಪಗೊಂಡ ದರ್ಶನ್ ಆಪ್ತರು ಮೊಬೈಲ್ ನ ಪುಡಿ ಪುಡಿ ಮಾಡಿದ್ದಾರೆ. ಮುಂದೆ ಓದಿರಿ...

ನಿನ್ನೆ ನಡೆದ ಘಟನೆ
ತಮ್ಮ ನೆಚ್ಚಿನ ನಟನ ಆರೋಗ್ಯ ವಿಚಾರಿಸಲು ದರ್ಶನ್ ಅಭಿಮಾನಿಯೊಬ್ಬ ನಿನ್ನೆ ಆಸ್ಪತ್ರೆಗೆ ಬಂದಿದ್ದ. ಈ ವೇಳೆ ದರ್ಶನ್ ಬೆಡ್ ಮೇಲೆ ಮಲಗಿದ್ದ ಫೋಟೋವನ್ನ ಕ್ಲಿಕ್ ಮಾಡಿದ್ದಾನೆ. ಫೋಟೋ ತೆಗೆದ ವೇಳೆ ಅನುಮಾನಗೊಂಡು ಮೊಬೈಲ್ ಚೆಕ್ ಮಾಡಿದ ದರ್ಶನ್ ಆಪ್ತರು ಮೊಬೈಲ್ ನಲ್ಲಿ ಫೋಟೋ ಕಾಣಿಸುತ್ತಿದ್ದಂತೆಯೇ ಮೊಬೈಲ್ ನ ಒಡೆದು ಹಾಕಿದ್ದಾರೆ.

ದರ್ಶನ್ ಇರುವ ಕೊಠಡಿ ಕಡೆ ತಲೆಹಾಕುವಂತಿಲ್ಲ.!
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಇತರ ವಾರ್ಡ್ ಗಳಲ್ಲಿರುವ ರೋಗಿಗಳು ಮತ್ತು ಅವರ ಕುಟುಂಬದವರು ನಟ ದರ್ಶನ್ ದಾಖಲಾಗಿರುವ ಕೊಠಡಿ ಕಡೆ ಹೋಗದಂತೆ ಸೂಚಿಸಲಾಗಿದೆ.

ಮೊಬೈಲ್ ಬಳಕೆ ನಿಷೇಧ
ದರ್ಶನ್ ಕೊಠಡಿಗೆ ಹೋಗುವ ಆಸ್ಪತ್ರೆ ಸಿಬ್ಬಂದಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ದರ್ಶನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿದ್ದ ಹಿನ್ನೆಲೆಯಲ್ಲಿ ದರ್ಶನ್ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅವಕಾಶ ಇಲ್ಲ
ದರ್ಶನ್ ರನ್ನ ನೋಡಲು ಇಂದು ಬೆಳಗ್ಗೆ ಕೂಡ ಆಸ್ಪತ್ರೆಯ ಮುಂಭಾಗ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಭದ್ರತಾ ದೃಷ್ಟಿಯಿಂದ ಯಾರನ್ನೂ ಪೊಲೀಸರು ಒಳಗೆ ಬಿಡಲಿಲ್ಲ. ಪೌರ ಕಾರ್ಮಿಕರ ನಿಯೋಗವೊಂದು ದರ್ಶನ್ ಭೇಟಿಗೆ ಇಂದು ಆಸ್ಪತ್ರೆಗೆ ಆಗಮಿಸಿತ್ತು. ಆದರೆ ಅವರಿಗೂ ಭೇಟಿಯ ಅವಕಾಶ ಸಿಗಲಿಲ್ಲ.


Click it and Unblock the Notifications











