Karnataka Bandh-Darshan: ಕಾವೇರಿ ವಿಚಾರದಲ್ಲಿ ದರ್ಶನ್ ಕೊಟ್ಟ ವೈರಲ್ ಹೇಳಿಕೆಗಳು ಹೇಗಿವೆ ಗೊತ್ತಾ?
ಕರ್ನಾಟಕದ ಮೂಲೆ ಮೂಲೆಯಲ್ಲಿ ಕಾವೇರಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟಕ್ಕೆ ಹೋರಾಟ ನಡೆಯುತ್ತಿದೆ. ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದು ಹೋರಾಟ ಮಾಡುತ್ತಿದೆ. ಇನ್ನೊಂದು ಕಡೆ ರೈತರು ಬೀದಿಗೆ ಇಳಿದಿದ್ದಾರೆ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದೆ ಇರಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.
ಸಂಘ ಸಂಸ್ಥೆಗಳು, ಹೊಟೇಲ್, ಸಾರಿಗೆ ಸೇರಿದಂತೆ ಎಲ್ಲಾ ಕ್ಷೇತ್ರದ ಜನರು ಕಾವೇರಿ ನೀರಿಗಾಗಿ ಬೆಂಬಲ ಸೂಚಿಸಿದ್ದಾರೆ. ಕರ್ನಾಟಕ ಬಂದ್ನಲ್ಲಿ ಭಾಗಿಯಾಗಿದ್ದಾರೆ. ಕನ್ನಡ ಚಿತ್ರರಂಗ ಕೂಡ ಭಾಗಿಯಾಗಿದೆ. ಈ ವೇಳೆ ಚಾಲೆಂಜಿಂಗ್ ಸ್ಟಾರ್ ಹೆಚ್ಚು ಮಾತಾಡಿಲ್ಲ. ದೊಡ್ಡೋರು ಶಿವಣ್ಣ ಇದ್ದಾರೆ ಅವರು ಮಾತಾಡುತ್ತಾರೆಂದು ಹೇಳಿದ್ದಾರೆ.

ಆದರೆ, ಕಾವೇರಿ ವಿಷಯ ಬಂದಾಗ ತಮಿಳುನಾಡು ವಿರುದ್ಧ ಮೊದಲು ಕಿಡಿಕಾರುವುದೇ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇಂದು (ಸೆಪ್ಪೆಂಬರ್ 29) ದರ್ಶನ್ ಹೆಚ್ಚು ಮಾತಾಡದೇ ಹೋದರೂ ಈ ಹಿಂದೆ ಕಾವೇರಿ ವಿಚಾರಕ್ಕೆ ಸಂಬಂಧಿಸಂತೆ ಖಡಕ್ ಆಗಿಯೇ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಯಾವ್ಯಾವ ಸಂದರ್ಭದಲ್ಲಿ ದರ್ಶನ್ ಏನೇನು ಮಾತಾಡಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
"ದೊಡ್ಡೋರು ಶಿವಣ್ಣ ಮಾತಾಡುತ್ತಾರೆ"
ಕರ್ನಾಟಕ ಬಂದ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಸೂಚಿಸಿದೆ. ಈ ಸಂಬಂಧ ಎಲ್ಲಾ ಕಲಾವಿದರನ್ನು, ತಂತ್ರಜ್ಞರನ್ನು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಪ್ರತಿಯೊಬ್ಬರಿಗೂ ಆಹ್ವಾನವನ್ನೂ ನೀಡಲಾಗಿತ್ತು. ಅದರಂತೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂದ ಬಂದ್ಗೆ ಹಾಗೂ ಕಾವೇರಿ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದರು. ಈ ವೇಳೆ ಶಿವಣ್ಣನ ಕಾಲಿಗೆ ಬಿದ್ದು ನಮಸ್ಕರಿಸಿದ್ದಷ್ಟೇ ಅಲ್ಲದೆ. "ನಾನು ಆಗಲೇ ಮಾತಾಡಾಗಿದೆ. ಮತ್ತೆ ಮಾತಾಡೋದು ಬೇಡ. ದೊಡ್ಡೋರು ಇದ್ದಾರೆ ಶಿವಣ್ಣ. ಅವರು ಅವರು ಮಾತಾಡುತ್ತಾರೆ." ಎಂದು ಹೇಳಿ ದೊಡ್ಡತನ ಮೆರೆದಿದ್ದಾರೆ.

"ದರ್ಶನ್, ಸುದೀಪ್, ಶಿವಣ್ಣ ಅಷ್ಟೇ ಕಾಣೋದಾ?"
ಕಾವೇರಿ ವಿವಾದ ಎದ್ದಾಗಲೆಲ್ಲಾ ಕಲಾವಿದರು ಬೆಂಬಲ ನೀಡುತ್ತಿಲ್ಲ ಅನ್ನೋ ಮಾತು ಬರುತ್ತೆ. ಹೋರಾಟಗಾರು ಕಾಲವಿದರ ಮೇಲೆ ಆಕ್ರೋಶ ಹೊರ ಹಾಕುತ್ತಾರೆ. ಈ ಬಾರಿ ಕೂಡ ಕಲಾವಿದರು ಬಂದಿಲ್ಲ ಅಂತ ಹೋರಾಟಗಾರರು ಕಿಡಿಕಾರಿದ್ದರು. ಕೆಲವೇ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ದರ್ಶನ್ ಈ ಹೇಳಿಕೆಗೆ ತಿರುಗೇಟು ನೀಡಿದ್ದರು. "ಯಾಕೆ ಸುದೀಪ್ ಅವರು, ದರ್ಶನ್, ಶಿವಣ್ಣ ಯಶ್ ನಮ್ಮ ಅಭಿನೋ ಇನ್ನೊಬ್ರೋ ಮತ್ತೊಬ್ರೋ ನಾವೇ ಕಾಣಿಸುತ್ತಿರೋದಾ? ಯಾಕೆ ಅವರು (ತಮಿಳು ಹೀರೊ) ಯಾರೂ ಕಾಣಿಸುತ್ತಿಲ್ವಾ? ಹೀಗೆ ಹೇಳಿದ ಕೂಡ ದರ್ಶನ್ ಮಾತು ಖಾರವಾಗಿರುತ್ತೆ. ಕೆಟ್ಟದಾಗಿರುತ್ತೆ. ದರ್ಶನ್ಗೆ ಮಾನ ಮರ್ಯಾದೆ ಇಲ್ಲ. ಇನ್ನೊಂದಿಲ್ಲ ಮತ್ತೊಂದಿಲ್ಲ. ನಾನು ಇದನ್ನು (ಹಸಿರು ಶಾಲ್) ಸುತ್ತಿಕೊಂಡೇ ಬರುತ್ತಿರೋದು. ನಾನು ರೈತನೇ. ನಾನು ದನಗಳನ್ನು ಸಾಕಿದ್ದೀನಿ. ನಾನು ಹಾಲು ಹಾಕ್ತಿನಿ. ಇದೇ ಕಾವೇರಿ ನೀರಿನಲ್ಲೇ ನಾನು ಬೆಳೆ ಬೆಳೆಯುತ್ತಿದ್ದೇನೆ." ಎಂದು ದರ್ಶನ್ ಗುಡುಗಿದ್ದರು.
"ತಮಿಳು ಸಿನಿಮಾ ಯಾಕೆ ನೋಡಿದ್ರಿ ಸ್ವಾಮಿ?"
ರಜನಿಕಾಂತ್ ಹಾಗೂ ಅವರ 'ಜೈಲರ್' ಸಿನಿಮಾಗೆ ದರ್ಶನ್ ಟಾಂಗ್ ಕೊಟ್ಟಿದ್ದರು. "ಕರ್ನಾಟಕದಲ್ಲಿ 'ಜೈಲರ್' ಸಿನಿಮಾ 36 ಕೋಟಿ ರೂಪಾಯಿ ಮಾಡಿದೆ. ಆ ಸಿನಿಮಾ ನಟ ಮಾತಾಡಿ ಅಂತ ಯಾಕೆ ನೀವು ಹೇಳುತ್ತಿಲ್ಲ" ಎಂದು ಪ್ರಶ್ನೆ ಮಾಡಿದ್ದರು. ಹಾಗೇ "ನೀವು ಕನ್ನಡ ಕಲಾವಿದರಿಗೆ ಕೊಟ್ಟರೆ ಮಾತ್ರ ಕನ್ನಡ ಕಲಾವಿದರು ಬರ್ತಾರೆ. ಅವರು (ರಜನಿಕಾಂತ್) ದೊಡ್ಡ ಕಲಾವಿದರು. ನಾನು ಇಲ್ಲ ಅಂತ ಹೇಳುವುದಿಲ್ಲ. ನಾನು ಅವರ ಬಗ್ಗೆ ಮಾತಾಡುತ್ತಿಲ್ಲ. ಕರ್ನಾಟಕದಿಂದ 35, 36 ಕೋಟಿ ಹೋಯ್ತು ಸ್ವಾಮಿ. ಯಾಕೆ ಅವರನ್ನು (ರಜನಿಕಾಂತ್) ಕರೆದಿಲ್ಲ " ಎಂದು ದರ್ಶನ್ ರಾಂಗ್ ಆಗಿದ್ದರು.
"ಕರ್ನಾಟಕದವರು ಅಲ್ಲಿಗೆ ಹೋದರೆ ಜಾಗವಿದೆಯಾ?"
ಏಳೆಂಟು ವರ್ಷಗಳ ಹಿಂದೆ ಕೂಡ ಕಾವೇರಿ ವಿವಾದ ಭುಗಿಲೆದ್ದಿತ್ತು. ಆಗಲೂ ಹೀಗೆ ಹೋರಾಟಗಳು ನಡೆದಿದ್ದವು. ಆ ವೇಳೆ ಕೂಡ ಕನ್ನಡ ಸ್ಟಾರ್ ಕಲಾವಿದುರ ಹೋರಾಟದಲ್ಲಿ ಭಾಗಿಯಾಗಿದ್ದರು. ಆಗಲೂ ತಮಿಳುನಾಡಿನ ವಿರುದ್ಧ ದರ್ಶನ್ ಗುಡುಗಿದ್ದರು. "ನಾವು ಇಲ್ಲಿ ಅಣ್ಣ ತಮ್ಮಂದಿರಂತೆ ಎಲ್ಲರೂ ಇದ್ದೀವಿ. ತಮಿಳುನಾಡಿನವರು ಅಷ್ಟೂ ಜನ ಇಲ್ಲಿಗೆ (ಕರ್ನಾಟಕ) ಬಂದರೆ ಜಾಗವಿದೆ. ಕರ್ನಾಟಕದವರು ಅಲ್ಲಿಗೆ (ತಮಿಳುನಾಡು) ಹೋದರೆ ಜಾಗ ಇದೆಯಾ ಮೊದಲು ಕೆಳಬೇಕು. ಈ ಸರಿ ನ್ಯಾಯ ಸಿಗುವವರೆಗೂ ಇಲ್ಲೇ ಇರೋಣ. ಹೀಗೆ ಇರೋಣ." ಎಂದು ದರ್ಶನ್ ಹುರಿದುಂಬಿಸಿದ್ದರು.


Click it and Unblock the Notifications











