ಜವಾಬ್ದಾರಿಯುತ ಪ್ರಜೆಯಂತೆ ವರ್ತಿಸಿ: ಜನರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ
ಕೊರನಾ ವೈರಸ್ ಸೋಂಕನ್ನು ತಡೆಗಟ್ಟಲು ರಾಜ್ಯ ಸರ್ಕಾರ ಎಲ್ಲೆಡೆ ಲಾಕ್ಡೌನ್ ಘೋಷಿಸಿದೆ. ಅಂದರೆ ಅಗತ್ಯ ವಸ್ತುಗಳ ಹೊರತಾಗಿ ಬೇರೆ ಯಾವುದೇ ವ್ಯಾಪಾರ ವಹಿವಾಟು, ಸೌಲಭ್ಯಗಳನ್ನು ಬಂದ್ ಮಾಡಿ, ಬಲವಂತದ ಸಾಮಾಜಿಕ ಅಂತರವನ್ನು ಜಾರಿಗೆ ತರಲು ಮುಂದಾಗಿದೆ. ಆದರೆ ಸರ್ಕಾರ ಎಷ್ಟು ಮನವಿ ಮಾಡಿದರೂ ಜನರು ಅದನ್ನು ಲೆಕ್ಕಿಸದೆ ಗುಂಪು ಗುಂಪಾಗಿ ಬೀದಿಗಳಲ್ಲಿ ಅಡ್ಡಾಡುತ್ತಿದ್ದಾರೆ.
ಕೊರೊನಾ ವೈರಸ್ ಹಾವಳಿಯನ್ನು ತಡೆಯಲು ಜನರು ಮನೆಯೊಳಗೆ ಇದ್ದರೆ ಅದೇ ದೊಡ್ಡ ಸಹಾಯ ಎಂದು ವೈದ್ಯರು ಕೇಳಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಜನರು ತಮಗೆ ಮುಂದೆ ಏನೂ ಸಿಗುವುದಿಲ್ಲವೇನೋ ಎಂಬ ಭಯದಿಂದ ಮಾರುಕಟ್ಟೆಗೆ ಓಡುತ್ತಿದ್ದಾರೆ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಅಪಾಯವೇ ಹೆಚ್ಚು. ಈ ಬಗ್ಗೆ 'ದಾಸ' ದರ್ಶನ್ ಜನರಿಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ.

ನಿಮ್ಮ ಮನೆಯಲ್ಲಿಯೇ ಇರಿ
ಎಲ್ಲಾ ಭಾರತೀಯರಲ್ಲೂ ನನ್ನ ಕಳಕಳಿಯ ವಿನಂತಿ. ಈ ಮಾರಕವಾದ ಕರೋನ ವೈರಸ್ ಇಂದ ಪಾರಾಗುವುದು ನಮ್ಮ ಮೊದಲ ಆದ್ಯತೆ ಆಗಿರಬೇಕು. ಈ ವೈರಸ್ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಗವರ್ನಮೆಂಟ್, ಡಾಕ್ಟರ್ಸ್, ಪೊಲೀಸ್ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ದಯಮಾಡಿ ನಿಮ್ಮ ಫ್ಯಾಮಿಲಿಗಾಗಿ, ನಿಮ್ಮ ನೆರೆಹೊರೆಯ ಗೆಳೆಯರಿಗಾಗಿ, ನಮಗಾಗಿ ಆದಷ್ಟು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಚಾಲೆಂಜಿಂಗ್ ಸ್ಟಾರ್ ಮನವಿ ಮಾಡಿದ್ದಾರೆ.
ಮಾರಣಹೋಮಕ್ಕೆ ತುತ್ತಾಗುವಂತೆ ಮಾಡಬೇಡಿ
ಈ ಸೋಂಕು ರೋಗ ಬಹಳ ಅಪಾಯಕಾರಿ ಎಂಬುದು ನಿಮಗೆ ತಿಳಿದರೂ ಸಹ ತಮ್ಮ ಊರುಗಳಿಗೆ ಹೋಗುವುದು, ಹಬ್ಬಕ್ಕಾಗಿ ಸಂಚರಿಸುವುದು ಮಾಡದಿರಿ. ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ ಎಂದು ಸಲಹೆ ನೀಡಿದ್ದಾರೆ.

ಇಟಲಿ, ಸ್ಪೇನ್ ಅನಾಹುತ ಕಣ್ಣ ಮುಂದೆ ಇದೆ
ಇಟಲಿ ಸ್ಪೇನ್ ದೇಶಗಳಲ್ಲಿ ಜಾಗೃತ ಕ್ರಮಗಳನ್ನು ಮೊದಲೇ ಸರಿಯಾಗಿ ಪಾಲಿಸದೆ ಆಗುತ್ತಿರುವ ಅನಾಹುತಗಳು ನಿಮ್ಮ ಕಣ್ಣ ಮುಂದಿವೆ. ನಿಮ್ಮ ಕರ್ತವ್ಯ ಮನೆಯಲ್ಲಿಯೇ ಇದ್ದು ದೇಶದ ಹಿತಕ್ಕಾಗಿ ಎಲ್ಲಾ ನಿಯಮಗಳನ್ನು ಪಾಲಿಸುವುದು. ಇದನ್ನು ದಯಮಾಡಿ ನೆರವೇರಿಸಿಕೊಡಿ ಎಂದು ದರ್ಶನ್ ಕೋರಿದ್ದಾರೆ.

ಕಾಮನ್ ಸೆನ್ಸ್ ಈಸ್ ನಾಟ್ ಕಾಮನ್
'Common sense is not common' ಎನ್ನುವ ಹಾಗೆ ಮಾಡಬೇಡಿ ಎಂದು ಸಿನಿಮಾ ಡೈಲಾಗ್ಅನ್ನು ನೆನಪಿಸಿರುವ ಅವರು, 'ದಯವಿಟ್ಟು ದೇಶದ ಜವಾಬ್ದಾರಿಯುತ ಪ್ರಜೆಯಂತೆ ವರ್ತಿಸಿ'
ನಿಮ್ಮ ದಾಸ ದರ್ಶನ್- ಎಂದು ಚಾಲೆಂಜಿಂಗ್ ಸ್ಟಾರ್ ಮನವಿ ಮಾಡಿದ್ದಾರೆ.


Click it and Unblock the Notifications











