"ಪ್ರೀತಿಯ ಹೆಸರಲ್ಲಿ ಇಂತಹ ಕೃತ್ಯ ಎಸಗಿದವರಿಗೆ ಶಿಕ್ಷೆ ಸಿಗಲಿ"; ನೇಹಾ ಹಿರೇಮಠ ಹತ್ಯೆಗೆ ಖಂಡಿಸಿದ ದರ್ಶನ್
ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜ್ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅನ್ನು ಹತ್ಯೆಗೈಯಲಾಗಿತ್ತು. ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾಳನ್ನು ಪ್ರೀತಿಸುವಂತೆ ಫಯಾಜ್ ಎಂಬಾತ ಪೀಡಿಸುತ್ತಿದ್ದ ಎನ್ನಲಾಗಿದೆ. ತನ್ನ ಪ್ರೀತಿಯನ್ನು ಒಪ್ಪದ ಕಾರಣಕ್ಕೆ ನೇಹಾ ಹೀರೆಮಠ ಅವರನ್ನು ಕಾಲೇಜ್ ಕ್ಯಾಂಪಸ್ನಲ್ಲಿ ಹತ್ಯೆಗೈದಿದ್ದ.
ಕೊಲೆ ಆರೋಪಿ ಫಯಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಹತ್ಯೆ ಪ್ರಕರಣ ದೇಶವ್ಯಾಪಿ ಚರ್ಚೆಯಾಗುತ್ತಿದೆ. ಈ ಹತ್ಯೆ ಲವ್ ಜಿಹಾದ್ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಹಲವೆಡೆ ಪ್ರತಿಭಟನೆಗಳು ಆರಂಭ ಆಗಿವೆ. ಹತ್ಯೆಗೈದ ಫಯಾಜ್ಗೆ ಕಠಿಣ ಶಿಕ್ಷೆ ಆಗಲೇ ಬೇಕು ಎಂದು ಅಭಿಯಾನ ಶುರುವಾಗಿದೆ.

#JusticeForNeha ಅನ್ನುವ ಅಭಿಯಾನ ಶುರುವಾಗಿದ್ದು, ನೇಹಾ ಹಿರೇಮಠ ಹತ್ಯೆಯನ್ನು ಸ್ಯಾಂಡಲ್ವುಡ್ ತಾರೆಯರು ಕೂಡ ಖಂಡಿಸುತ್ತಿದ್ದಾರೆ. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಖಂಡಿಸಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹತ್ಯೆ ಖಂಡಿಸಿ "ಪ್ರೀತಿಯ ಹೆಸರಲ್ಲಿ ಇಂತಹ ಕೃತ್ಯ ಎಸಗಿದವರಿಗೆ ಶಿಕ್ಷೆ ಸಿಗಲಿ" ಎಂದಿರೋ ದರ್ಶನ್ ಏನು ಫೋಸ್ಟ್ ಮಾಡಿದ್ದಾರೆಂದು ತಿಳಿಯಲು ಮುಂದೆ ಓದಿ.
ನೇಹಾ ಹಿರೇಮಠ ಹತ್ಯೆ ಪ್ರಕರಣ ವಿರೋಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ರಾಜಕೀಯ ಮುಖಂಡರು, ಗಣ್ಯರು, ಸಿನಿಮಾ ತಾರೆಯರು ಆಕ್ರೋಶ ಹೊರಹಾಕಿದ್ದಾರೆ. ದರ್ಶನ್ ಕೂಡ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ 23 ವರ್ಷದ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿದ್ದು, ಅಮಾನುಶವಾಗಿ ಕೊಲೆ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.
"ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ 23 ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ." ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ಸಿನಿಮಾ ತಾರೆಯರು ಕಳೆದೆರಡು ದಿನಗಳಿಂದ ಈ ಹತ್ಯೆಯನ್ನು ಖಂಡಿಸುತ್ತಿದ್ದಾರೆ. ಈಗಾಗಲೇ ನಟಿ ರಚಿತಾ ರಾಮ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಕ್ಷಿತಾ ಪ್ರೇಮ್, ಪ್ರಿಯಾ ಸವದಿ ಸೇರಿದಂತೆ ಹಲವು ಮಂದಿ ತಾರೆಯರು ಈ ಹತ್ಯೆಯನ್ನು ಖಂಡಿಸಿದ್ದಾರೆ. ಈಗ ದರ್ಶನ್ ಕೂಡ ನೇಹಾ ಹಿರೇಮಠ ಹತ್ಯೆ ವಿರುದ್ಧ ಧ್ವನಿ ಎತ್ತಿದ್ದಾರೆ.
ಹುಬ್ಬಳ್ಳಿಯ ಫಯಾಜ್ ಎಂಬಾತ ಕಳೆದ ಕೆಲವು ದಿನಗಳಿಂದ ತನ್ನನ್ನು ಪ್ರೀತಿಸುವಂತೆ ನೇಹಾ ಹಿರೇಮಠರನ್ನು ಪೀಡಿಸುತ್ತಿದ್ದ. ನೇಹಾ ಆತನ ಪ್ರೀತಿಯನ್ನು ನಿರಾಕರಿಸಿದ್ದು, ಇದೇ ಸಿಟ್ಟಿನಲ್ಲಿ ಬಿವಿಬಿ ಕಾಲೇಜ್ ಕ್ಯಾಂಪಸ್ ಒಳಗೆ ನುಗ್ಗಿ ಹತ್ಯೆ ಮಾಡಿದ್ದಾನೆಂಬ ಆರೋಪವಿದೆ. ನೇಹಾ ಹಿರೇಮಠ ಕುತ್ತಿಗೆ, ಹೊಟ್ಟೆ ಬೆನ್ನಿಗೆ ಸುಮಾರು 9 ಬಾರಿ ಇರಿದು ಹತ್ಯೆಗೈದಿದ್ದ. ಈಗ ಫಯಾಜ್ಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.


Click it and Unblock the Notifications











