ಯೋಗರಾಜ್ ಭಟ್ 'ಗರಡಿ' ಅಡ್ಡಾದಲ್ಲಿ ದರ್ಶನ್ ಪ್ರತ್ಯಕ್ಷ : ಮ್ಯಾಟರ್ ಏನು?
ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ 'ಗರಡಿ' ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಯೋಗರಾಜ್ ಭಟ್ಟರು ಕುಸ್ತಿಯನ್ನು ಆಧರಿಸಿದ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಭಟ್ಟರೇ ನಿರ್ದೇಶಿಸಿರುವ 'ಗಾಳಿಪಟ 2' ಬಿಡುಗಡೆಗೂ ಮುನ್ನವೇ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇದೂ ಕೂಡ ಭಟ್ಟರಿಗೆ ಹೊಸತೇ. ಸಾಮಾನ್ಯವಾಗಿ ಒಂದು ಸಿನಿಮಾ ರಿಲೀಸ್ ಆದ ಬಳಿಕ ಮತ್ತೊಂದು ಸಿನಿಮಾ ಶೂಟಿಂಗ್ ಆರಂಭ ಮಾಡುತ್ತಿದ್ದರು. ಆದ್ರೀಗ 'ಗಾಳಿಪಟ 2' ಮುಗಿಸಿ, ಅದು ಬಿಡುಗಡೆಗೂ ಮುನ್ನವೇ 'ಗರಡಿ'ಯೊಳಗೆ ಪ್ರವೇಶ ಮಾಡಿದ್ದಾರೆ. ಈಗ ದರ್ಶನ್ ಈ 'ಗರಡಿ' ಅಡ್ಡಾಗೆ ಎಂಟ್ರಿಕೊಟ್ಟಿದ್ದು ಅಚ್ಚರಿಗೆ ಕಾರಣವಾಗಿದೆ.
ಯೋಗರಾಜ್ ಭಟ್ ಹೊಸ ಸಿನಿಮಾ 'ಗರಡಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಯಶಸ್ ಸೂರ್ಯ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ದರ್ಶನ್ 'ಗರಡಿ' ಚಿತ್ರೀಕರಣ ನಡೆಯುತ್ತಿದ್ದ ವೇಳೆ ಶೂಟಿಂಗ್ ಸ್ಪಾಟ್ಗೆ ಎಂಟ್ರಿಕೊಟ್ಟಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Recommended Video

'ಗರಡಿ' ಅಡ್ಡಾದಲ್ಲಿ ದರ್ಶನ್ ಪ್ರತ್ಯಕ್ಷ
'ಗರಡಿ' ಅಂತ ಟೈಟಲ್ ಇಟ್ಟಿರೋದರಿಂದ ಸಿನಿಮಾದ ಕಥೆ ಗರಡಿ ಮನೆ, ಕುಸ್ತಿ ಹಿನ್ನೆಯಲ್ಲಿಯೇ ನಡೆಯುತ್ತೆ ಎನ್ನುವುದನ್ನು ಆರಾಮಾಗಿ ಊಹಿಸಬಹುದು. ಕೆಲವು ದಿನಗಳಿಂದ ಯೋಗರಾಜ್ ಭಟ್ ಸದ್ದಿಲ್ಲದೆ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ. ಯಶಸ್ ಸೂರ್ಯ ಈ ಸಿನಿಮಾದಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶಸ್ ಸೂರ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಆಪ್ತರಾಗಿರುವುದರಿಂದ ದರ್ಶನ್ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಸರ್ಪ್ರೈಸ್ ವಿಸಿಟ್ ಹಾಕಿದ್ದಾರೆ.

'ಗರಡಿ' ಜೊತೆ ಇದ್ದ ದರ್ಶನ್
'ಗರಡಿ' ಸಿನಿಮಾ ಶೂಟಿಂಗ್ ನೋಡಲೆಂದೇ ದರ್ಶನ್ ಶೂಟಿಂಗ್ ಸ್ಪಾಟ್ಗೆ ಬಂದಿದ್ದರು. ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಹಾಗೂ ಕೃಷಿ ಸಚಿವ ಬಿ ಸಿ ಪಾಟೀಲ್ ಹಾಗೂ ನಾಯಕ ನಟ ಯಶಸ್ ಸೂರ್ಯ ಜೊತೆ ಕೆಲ ಕಾಲ ಮಾತುಕತೆ ನಡೆಸಿದರು. ಶೂಟಿಂಗ್ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲ ಕಾಲ ನಿಂತು 'ಗರಡಿ' ಶೂಟಿಂಗ್ ಅನ್ನು ವೀಕ್ಷಣೆ ಮಾಡಿದ್ದಾರೆ. ಈ ಸಿನಿಮಾದ ಮುಹೂರ್ತಕ್ಕೂ ದರ್ಶನ್ ಅತಿಥಿಯಾಗಿ ಬಂದಿದ್ದರು.

ಬಿ ಸಿ ಪಾಟೀಲ್ ಕಾಲೆಳೆದ ದರ್ಶನ್
ನಿರ್ಮಾಪಕ, ಕೃಷಿ ಸಚಿವ ಬಿ ಸಿ ಪಾಟೀಲ್ ಹಾಗೂ ದರ್ಶನ್ ಇಬ್ಬರ ಸಂಬಂಧ ಉತ್ತಮವಾಗಿದೆ. ಅಲ್ಲದೆ ಕೃಷಿ ಇಲಾಖೆಗೆ ನಟ ದರ್ಶನ್ರನ್ನು ರಾಯಬಾರಿಯನ್ನಾಗಿ ಮಾಡಿದ್ದಾರೆ. ಇನ್ನೊಂದು ಕಡೆ ದರ್ಶನ್ ಗೆಳೆಯ ಯಶಸ್ ಸೂರ್ಯಗಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಶೂಟಿಂಗ್ ಸ್ಪಾಟ್ಗೆ ದರ್ಶನ್ ವಿಸಿಟ್ ಹಾಕಿದ್ದಾರೆ. ಈ ವೇಳೆ ನಿರ್ಮಾಪಕ ಬಿಸಿ ಪಾಟೀಲ್ಗೆ "ನಮಗೆ ಹಿಂಗೆಲ್ಲಾ ಸಿನಿಮಾ ಮಾಡುತ್ತೀರಾ?" ಎಂದು ಕೇಳಿದ್ದರು. ಅದಕ್ಕೆ ಬಿಸಿ ಪಾಟೀಲ್ ನಗುತ್ತಲೇ " ನಮ್ಮದು ಲೋ ಬಜೆಟ್ ಸಿನಿಮಾ." ಎಂದು ಪ್ರತಿಕ್ರಿಯಿಸಿದ್ದಾರೆ. ಆಗ ದರ್ಶನ್ ಮತ್ತೆ "ಬಜೆಟ್ ಕಡಿಮೆ ಇರಲಿ, ಜಾಸ್ತಿ ಇರಲಿ ಊಟ ಹಾಕಿಸಬೇಕಾ." ಎಂದು ತಮಾಷೆ ಮಾಡಿದ್ದಾರೆ.

'ಗರಡಿ'ಗೆ ಬಿಸಿ ಪಾಟೀಲ್ ನಿರ್ಮಾಪಕ
ಬಹಳ ದಿನಗಳ ಬಳಿಕ ಕೃಷಿ ಸಚಿವ ಬಿ ಸಿ ಪಾಟೀಲ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ಗರಡಿ' ಚಿತ್ರವನ್ನು ಬಿ.ಸಿ.ಪಾಟೀಲ್ ಪತ್ನಿ ವನಜಾ.ಬಿ.ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ಹೆಸರಲ್ಲಿ ನಿರ್ಮಿಸುತ್ತಿದ್ದಾರೆ. ‘ಗರಡಿ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅತಿಥಿ ಪಾತ್ರ ನಟಿಸಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ. ಇಷ್ಟೇ ಅಲ್ಲದೆ ರಾಜಕೀಯದಿಂದ ಕೊಂಚ ಬಿಡುವು ಮಾಡಿಕೊಂಡು ಬಿ ಸಿ ಪಾಟೀಲ್ ಈ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರವನ್ನೂ ಮಾಡುತ್ತಿದ್ದಾರೆ ಎನ್ನುವ ಸುದ್ದಿಯಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ ನೀಡಿಲ್ಲ.


Click it and Unblock the Notifications











