ಬಡವರ ಒಪ್ಪೊತ್ತು ಕೂಳಿಗಾದರೂ ನೆರವಾಗಿ: ಜನರಿಗೆ 'ದಾಸ' ದರ್ಶನ್ ಮಾಡಿದ ಮನವಿ
ಮೊದಲೇ ಸಂಕಷ್ಟದಲ್ಲಿದ್ದ ಸಾವಿರಾರು ಬಡ ಕುಟುಂಬಗಳು ಕೊರೊನಾ ವೈರಸ್ ಲಾಕ್ಡೌನ್ನಿಂದ ಅಕ್ಷರಶಃ ತತ್ತರಿಸಿವೆ. ಒಂದು ಹೊತ್ತಿನ ಊಟಕ್ಕೆ ಕೂಡ ಪರದಾಡುವ ಸ್ಥಿತಿ ಹೆಚ್ಚಾಗಿದೆ. ಹೊರಗೆ ಹೋಗಿ ದುಡಿಯಲು ಅವಕಾಶವಿಲ್ಲ. ಖರೀದಿ ಮಾಡಲು ಹಣವೂ ಇಲ್ಲ. ಹೀಗೆ ದೈನಂದಿನ ಕೂಲಿಯನ್ನು ನಂಬಿಕೊಂಡವರು, ಭಿಕ್ಷುಕರ ಸ್ಥಿತಿ ತೀರಾ ಅಧೋಗತಿಗೆ ಇಳಿದಿದೆ. ಈ ಸಂದರ್ಭದಲ್ಲಿ ಉಳ್ಳವರು ಅಂತಹವರ ನೆರವಿಗೆ ಧಾವಿಸಬೇಕಿದೆ.
ಹೀಗೆ ಕಷ್ಟದಲ್ಲಿರುವ ಬಡಜನರಿಗೆ ನೆರವಿನ ಹಸ್ತ ಚಾಚಲು ಅನೇಕರು ಮುಂದಾಗಿದ್ದಾರೆ. ಸೆಲೆಬ್ರಿಟಿಗಳು ಕೂಡ ದೇಣಿಗೆ ನೀಡುವ ಹಾಗೂ ಬಡವರಿಗೆ ಆಹಾರ ಪೂರೈಸುವ ಯೋಜನೆಗಳನ್ನು ಮಾಡುತ್ತಿದ್ದಾರೆ. ಅನೇಕ ಸ್ಟಾರ್ಗಳ ಅಭಿಮಾನಿಗಳು ಹಸಿದವರಿಗೆ ಅನ್ನ ನೀಡುವ ಮಾನವೀಯ ಕೆಲಸ ಮಾಡುತ್ತಿದ್ದಾರೆ. ಮುಂದೆ ಓದಿ...
Recommended Video

ಚಾಲೆಂಜಿಂಗ್ ಸ್ಟಾರ್ ಮನವಿ
ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹಾಗೂ ಇತರರಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಸಂಕಷ್ಟದಲ್ಲಿರುವ ಬಡ ಜನರಿಗೆ ಒಂದು ಹೊತ್ತಿನ ಊಟಕ್ಕಾದರೂ ನೆರವಾಗೋಣ ಎಂದು ಸಲಹೆ ನೀಡಿದ್ದಾರೆ.
ಒಪ್ಪೊತ್ತು ಕೂಳಿಗಾದರೂ ನೆರವಾಗಿ
ಈ ಸಮಯದಲ್ಲಿ ನಾನೊಂದು ಸಣ್ಣ ಸಲಹೆ ನೀಡಲು ಇಚ್ಚಿಸುತ್ತೇನೆ. ದಿನನಿತ್ಯ ನೀವು ಮಾಡುವ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಜನರಿಗಾಗುವಂತೆ ಮಾಡಿ ನಿಮ್ಮ ಅಕ್ಕಪಕ್ಕದ ಬಡಜನರಿಗೆ ಒಪ್ಪೊತ್ತು ಕೂಳಿಗಾದರೂ ನೆರವಾದರೆ ಒಳಿತು ಎಂಬುದು ನನ್ನ ಭಾವನೆ. ಸಾಧ್ಯವಾದಷ್ಟು ನಿಮ್ಮ ಕೈಲಾಗುವ ಈ ಕೆಲಸದಿಂದ ಅನೇಕ ಕುಟುಂಬಗಳು ಚೇತರಿಸಿಕೊಳ್ಳಬಹುದು ಎಂದು 'ದಾಸ' ದರ್ಶನ್ ಹೇಳಿದ್ದಾರೆ.

ಜಾಗೃತರಾಗಿರಿ- ದರ್ಶನ್ ಕಿವಿಮಾತು
ಜತೆಗೆ ಈ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೊರಗೆ ಹೋಗುವಾಗ ನಾವು ಎಚ್ಚರಿಕೆಯಿಂದಿರಬೇಕು ಎಂಬ ಕಿವಿಮಾತು ಹೇಳಿದ್ದಾರೆ. 'ಸ್ವಚ್ಛವಾಗಿರಿ, ಸ್ವಸ್ಥರಾಗಿರಿ, ಸುರಕ್ಷಿತವಾಗಿರಿ. ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ಜಾಗೃತೆಯಿಂದಿರಿ' ಎಂದು ತಿಳಿಸಿದ್ದಾರೆ.
ದರ್ಶನ್ ಅಭಿಮಾನಿಗಳಿಂದ ನೆರವು
ಮೈಸೂರಿನಲ್ಲಿ ಈಗಾಗಲೇ ದರ್ಶನ್ ಅಭಿಮಾನಿಗಳು ಹಸಿದು ಸಂಕಷ್ಟದಲ್ಲಿರುವ ಜನರಿಗೆ ಟೊಮ್ಯಾಟೋ ಬಾತ್, ಮೊಸರನ್ನ, ನೀರು ಮುಂತಾದವುಗಳನ್ನು ಒದಗಿಸುತ್ತಿದ್ದಾರೆ. ದರ್ಶನ್ ಹೆಸರಲ್ಲಿ ಅವರ ಅಭಿಮಾನಿಗಳು ಮಾಡುತ್ತಿರುವ ಸಾಮಾಜಿಕ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.


Click it and Unblock the Notifications











