"ದುಡ್ಡು ಯಾರು ನಿಮ್ಮ ಅಪ್ಪ ಕೊಡ್ತಾನಾ" ಅಂತ ಕಾಮೆಂಟ್ ಹಾಕಿದವನಿಗೆ ಚಂದನ್ ಶೆಟ್ಟಿ ತಿರುಗೇಟು
ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಈಗ ಹೀರೋ ಆಗಿದ್ದಾರೆ. ಗಾಯನದಿಂದ ನಟನೆಯತ್ತ ಮುಖ ಮಾಡಿದ್ದು ಗೊತ್ತೇ ಇದೆ. ಮ್ಯೂಸಿಕ್ನಲ್ಲಿ ಹೆಸರು ಮಾಡಿರೋ ಚಂದನ್ ಶೆಟ್ಟಿ ಈಗ ನಾಯಕನಾಗಿ ನಟಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಚಂದನ್ ಶೆಟ್ಟಿ ನಟಿಸಿದ ಆ ಸಿನಿಮಾವೇ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ'.
'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಜುಲೈ 19ರಂದು ಥಿಯೇಟರ್ಗೆ ಲಗ್ಗೆ ಇಟ್ಟಿದೆ. ಚಂದನ್ ಶೆಟ್ಟಿ ನಾಯಕನಾಗಿ ನಟಿಸಿದ್ದರೆ, ಇವರೊಂದಿಗೆ ಅಮರ್, ಭಾವನಾ, ಮನಸ್ವಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಪ್ರಶಾಂತ್ ಸಂಬರ್ಗಿ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿ ಮಾಧ್ಯಮ ಹಾಗೂ ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನ ಕೊಟ್ಟಿದ್ದಾರೆ. ಈ ವೇಳೆ ಒಂದು ಹೇಳಿಕೆಯನ್ನು ಕೊಟ್ಟಿದ್ದರು. "ಜನರು ಥಿಯೇಟರ್ಗೆ ಬರುತ್ತಿಲ್ಲ" ಎಂದು ಹೇಳಿದ್ದರು. ಅದಕ್ಕೆ ನೆಟ್ಟಿಗರೊಬ್ಬರು "ದುಡ್ಡು ಯಾರು ನಿಮ್ಮ ಅಪ್ಪ ಕೊಡ್ತಾನಾ" ಅಂತ ಕಾಮೆಂಟ್ ಮಾಡಿದ್ದರು ಅದಕ್ಕೆ ಚಂದನ್ ಶೆಟ್ಟಿ ಗರಂ ಆಗಿದ್ದು, ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.
ಇತ್ತೀಚೆಗೆ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾ ಪ್ರೀಮಿಯರ್ ಮಾಡಲಾಗಿತ್ತು. ಈ ವೇಳೆ ಚಂದನ್ ಶೆಟ್ಟಿ ನೋಡುವಂತೆ ಪ್ರೇಕ್ಷಕರಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. "ಸಿನಿಮಾ ನೋಡಿ ಎಲ್ಲರೂ ಖುಷಿ ಪಡುತ್ತಿದ್ದಾರೆ. ಒಬ್ಬರೂ ನೆಗೆಟಿವ್ ರಿವ್ಯೂ ಮಾಡಿದವರೇ ಇಲ್ಲ. ನನಗೆ ಇದು ತುಂಬಾನೇ ಆಶ್ಚರ್ಯ ಆಗಿದೆ. ನಾವು ಹಾಕಿರುವ ಎಫರ್ಟ್ಗೆ ಇಷ್ಟೊಂದು ಪ್ರತಿಕ್ರಿಯೆ ಬರುತ್ತಿರೋದನ್ನು ನಾವೇ ಎಕ್ಸ್ಪೆಕ್ಟ್ ಮಾಡಿರಲಿಲ್ಲ. ಆದರೆ, ಸಿನಿಮಾ ತುಂಬಾ ಚೆನ್ನಾಗಿದೆ ಅಂತ ಬೆನ್ನು ತಟ್ಟುತ್ತಿದ್ದಾರೆ. ಇನ್ನೇನು ಓಟಿಟಿಯಲ್ಲಿ ಬರುತ್ತೆ. ಆಮೇಲೆ ಸಿನಿಮಾ ನೋಡೋಣ ಅನ್ನೋ ಮೈಂಡ್ ಸೆಟ್ಟಿನಲ್ಲಿ ಇರೋರು ಹೊರಬಂದು ಸಿನಿಮಾ ನೋಡಿ." ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

ಹಾಗೇ ಏನಾದರೂ ಒಂದು ಕಾಂಟ್ರವರ್ಸಿ ಆದಾಗ ನೆಗೆಟಿವ್ ಕಾಮೆಂಟ್ಗಳನ್ನು ಮಾಡುತ್ತಲೇ ಇರುತ್ತಾರೆ. ಹಾಗೆಯೇ ಏನೋ ಒಳ್ಳೆಯ ಕೆಲಸ ಮಾಡಿದ್ದಾಗ ಹೊಗಳಬೇಕಾದ ಸನ್ನಿವೇಶ ಬಂದಿದೆ. ಯಾರೆಲ್ಲ ನೆಗೆಟಿವ್ ಆಗಿ ಕಾಮೆಂಟ್ಗಳನ್ನೆಲ್ಲ ಮಾಡುತ್ತಿದ್ದಾರೋ, ಕೆಟ್ಟದಾಗಿ ಮಾತಾಡುತ್ತಿದ್ದಾರೋ ಅವರು ಬಂದು ಸಿನಿಮಾ ನೋಡಬೇಕು. ಇಷ್ಟ ಆಗಿಲ್ಲ ಅಂದರೆ ಅವರ ಕೆಲಸ ಏನಿದೆ ಅದನ್ನು ಮುಂದುವರೆಸಲಿ ಎಂದು ಹೇಳಿದ್ದಾರೆ.
ಇತ್ತೀಚೆಗೆ ತಮ್ಮ ಹೇಳಿಕೆಯೊಂದಕ್ಕೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು. ಅದಕ್ಕೆ ನೆಟ್ಟಿಗನೊಬ್ಬ ನೀಡಿದ ಪ್ರತಿಕ್ರಿಯೆಗೂ ತಿರುಗೇಟು ಕೊಟ್ಟಿದ್ದಾರೆ. "ಇತ್ತೀಚೆಗೆ ನಾನು ಥಿಯೇಟರ್ಗೆ ಜನ ಬರುತ್ತಿಲ್ಲ ಅಂತ ಹೇಳಿದ್ದೆ. ಅದಕ್ಕೆ ಕೆಳಗಡೆ ಒಬ್ಬ ಕಾಮೆಂಟ್ ಹಾಕಿದ್ದ. ದುಡ್ಡು ಯಾರು ನಿಮ್ಮ ಅಪ್ಪ ಕೊಡ್ತಾನಾ ಅಂತ. ಅದೇ ಒಬ್ಬ ವ್ಯಕ್ತಿ ತಮಿಳು ಸಿನಿಮಾ, ತೆಲುಗು ಸಿನಿಮಾ ರಿಲೀಸ್ ಆದಾಗ, ಅದೇ ವ್ಯಕ್ತಿ ಹೋಗಿ ತಮಿಳು, ಹಿಂದಿ ಸಿನಿಮಾ ನೋಡಿದಾಗ ಅವರ ಅಪ್ಪ ಏನಾದರೂ ಟಿಕೆಟ್ಗೆ ದುಡ್ಡು ಕೊಡುತ್ತಿದ್ದಾರಾ ಅಂತ ಗೊತ್ತಾಗುತ್ತಿಲ್ಲ." ಎಂದು ಚಂದನ್ ಶೆಟ್ಟಿ ಕಿಡಿಕಾರಿದ್ದಾರೆ.
ಚಂದನ್ ಶೆಟ್ಟಿ ತಮ್ಮ ಸಿನಿಮಾವನ್ನು ಜನರಿಗೆ ತಲುಪಿಸುವುದಕ್ಕೆ ಶತಪ್ರಯತ್ನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ "ಕನ್ನಡದವರನ್ನು ಕನ್ನಡದವರೇ ಬೆಳೆಸಬೇಕು. ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ. ಸಿನಿಮಾ ಚೆನ್ನಾಗಿದೆ ಸಪೋರ್ಟ್ ಮಾಡಿ. ಸುಮ್ಮನೆ ಹೇಳುತ್ತಿಲ್ಲ. ನೋಡಲೇಬೇಕಾದ ಸಿನಿಮಾ ಅಂತ ಹೇಳುತ್ತಿದ್ದಾರೆ. ಸ್ಟುಡೆಂಟ್ಸ್, ಪೇರೆಂಟ್ಸ್ ಬಂದು ಸಿನಿಮಾ ನೋಡಲೇಬೇಕು ಅಂತ ಹೇಳುತ್ತಿದ್ದಾರೆ." ಎಂದು ಚಂದನ್ ಶೆಟ್ಟಿ ಮನವಿಯನ್ನೂ ಮಾಡಿಕೊಂಡಿದ್ದಾರೆ.


Click it and Unblock the Notifications











