"ಅಂಬರೀಶ್ ಸ್ಮಾರಕಕ್ಕೆ ಕೋಟ್ಯಂತರ ತೆರಿಗೆದಾರರ ಹಣ ಹೋಯ್ತು"; ಸುಮಲತಾ ವಿರುದ್ಧ ಮತ್ತೆ ಚೇತನ್ ಕಿಡಿ
ಆ ದಿನಗಳು ಖ್ಯಾತಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮತ್ತೆ ಸುಮಲತಾ ಅಂಬರೀಶ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅಂಬರೀಶ್ ಸ್ಮಾರಕಕ್ಕೆ ಕೋಟ್ಯಂತರ ತೆರಿಗೆದಾರರ ಹಣವನ್ನು ಬಳಸಿದಿದ್ದಾರೆಂದು ಆರೋಪಿಸಿದ್ದಾರೆ. ಒಂದು ವರ್ಷದ ಹಿಂದೆ ಕೂಡ ಇದೇ ರೀತಿ ಆರೋಪ ಮಾಡಿದ್ದರು.
ಇತ್ತೀಚೆಗೆ ಸುಮಲತಾ ಈ ಬಾರಿಯ ಲೋಕಸಭೆ ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಬಿಜೆಪಿ ಪಕ್ಷದಿಂದ ಮಂಡ್ಯ ಲೋಕಸಭೆ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಸುಮಲತಾ ಚುನಾವಣೆಗೆ ಸ್ಪರ್ಧೆ ಮಾಡದೆ ಇರಲು ನಿರ್ಧರಿಸಿದ್ದಾರೆ. ಹಾಗೇ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದು, ಶೀಘ್ರದಲ್ಲೇ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಮಂಡ್ಯದಲ್ಲಿ ತನ್ನ ಬೆಂಬಲಿಗರೊಂದಿಗೆ ಹೇಳಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಚೇತನ್ ಅಹಿಂಸಾ ತನ್ನ ಫೇಸ್ಬುಕ್ ಹಾಗೂ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುಮಲತಾ ವಿರುದ್ಧ ತಿರುಗಿಬಿದ್ದಿದ್ದಾರೆ. ಸುಮಲತಾ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚೇತನ್ ಪೋಸ್ಟ್ ಮಾಡುತ್ತಿದ್ದಂತೆ ವೈರಲ್ ಆಗಿದ್ದು, ಆ ಬಗ್ಗೆನೇ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಚೇತನ್ ಮಂಡ್ಯದ ಹಾಲಿ ಎಂಪಿ ಸುಮಲತಾ ವಿರುದ್ಧ ಮಾಡಿರೋ ಆರೋಪವೇನು? ತಿಳಿಯಲು ಮುಂದೆ ಓದಿ..
ತೆರಿಗೆದಾರರ ಹಣದಿಂದ ಅಂಬರೀಶ್ ಸ್ಮಾರಕ
ಚೇತನ್ ಆಗಾಗ ಕೆಲವು ವಿಷಯಗಳ ವಿರುದ್ಧ ತಿರುಗಿಬೀಳುತ್ತಲೇ ಇರುತ್ತಾರೆ. ಸಿನಿಮಾ, ರಾಜಕೀಯ ಸೇರಿದಂತೆ ಯಾವುದೇ ಕ್ಷೇತ್ರದ ಬೆಳವಣಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಕೆಲವೊಮ್ಮೆ ವಿರೋಧಿಸಿ, ಸಂಕಷ್ಟಕ್ಕೆ ಸಿಲುಕಿದ್ದೂ ಇದೆ. ಕೆಲವು ದಿನ ಸೈಲೆಂಟ್ ಆಗಿದ್ದ ಚೇತನ್ ಈಗ ಮತ್ತೆ ಸುಮಲತಾ ಅಂಬರೀಶ್ ವಿರುದ್ಧ ಕಿಡಿಕಾರಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಸ್ಮಾರಕಕ್ಕಾಗಿ ಸುಮಲತಾ ತೆರಿಗೆದಾರರ ಹಣವನ್ನು ಬಳಸಿಕೊಂಡಿದ್ದಾರೆಂದು ಈ ಹಿಂದೆ ಆರೋಪ ಮಾಡಿದ್ದರು. ಈಗ ಲೋಕಸಭೆ ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಚೇತನ್ ಮತ್ತೆ ಅದೇ ಆರೋಪ ಮಾಡಿ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಆರೋಪಗಳು ಹೀಗಿವೆ.
"ಮಂಡ್ಯ ಸಂಸದೆ ಸುಮಲತಾ ಅವರು..
1. ಕೋವಿಡ್ ಸಮಯದಲ್ಲಿ ಅಂಬರೀಶ್ ಸ್ಮಾರಕಕ್ಕಾಗಿ ಕೋಟ್ಯಂತರ ತೆರಿಗೆದಾರರ ಹಣವನ್ನು ತೆಗೆದುಕೊಂಡರು.
2. ಖಾಸಗಿ ಪಿಎಂ ಕೇರ್ಸ್ಗೆ ಮಂಡ್ಯದ ಎಂಪಿ ಲಾಡ್ಸ್ ನಿಧಿಯನ್ನು ನೀಡಿದ್ದರು.
ಈಗ, ಮಂಡ್ಯ ಎಂಪಿ ಟಿಕೆಟ್ '100%' ಎಂದು ತಪ್ಪಾಗಿ ಖಾತರಿಪಡಿಸಿಕೊಂಡ ನಂತರ ಅವರು ನಾನ್-ಫ್ಯಾಕ್ಟರ್ ಆಗಿದ್ದಾರೆ.
5 ವರ್ಷಗಳಲ್ಲಿ, ಸುಮಲತಾ ಅವರು ಅತ್ಯಲ್ಪ, ಪ್ಲೇಸ್ ಹೋಲ್ಡರ್ ಸಂಸದರಾಗಿದ್ದರು." ಎಂದು ಚೇತನ್ ಟೀಕೆ ಮಾಡಿದ್ದಾರೆ.
ಸುಮಲತಾಗೆ ತಿರುಗೇಟು
ಕಳೆದ ವರ್ಷ ಸುಮಲತಾ, ಪತಿ ಅಂಬರೀಶ್ ಸ್ಮಾರಕದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಆಗಿದೆ. ಅಂಬರೀಶ್ ಎಂದಿಗೂ ತಮಗಾಗಿ ಏನನ್ನೂ ಕೇಳಿಲ್ಲ. ಯಾರ ಬಳಿಯೂ ಕೈ ಚಾಚಿದವರಲ್ಲ. ಅವರದ್ದು ಕೊಟ್ಟ ಕೈ. ತಗೊಳ್ಳೊ ಕೈ ಅಲ್ಲ ಎಂದು ಸುಮಲತಾ ಸ್ಮಾರಕದ ಬಗ್ಗೆ ಹೇಳಿಕೆ ನೀಡಿದ್ದರು.
ಆ ಹೇಳಿಕೆಯನ್ನೇ ಇಟ್ಟುಕೊಂಡು ಚೇತನ್ ಅಹಿಂಸಾ ಸೋಶಿಯಲ್ ಮೀಡಿಯಾದಲ್ಲಿ ಸುಮಲತಾರನ್ನು ಟೀಕಿಸಿದ್ದರು. "ಅಂಬರೀಶ್ ಸ್ಮಾರಕಕ್ಕೆ ಸುಮಲತಾ ಅವರು ಅಂದಾಜು ಎರಡು ಎಕರೆ ಜಾಗ ಮತ್ತು 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ಕೈ ಚಾಚಿ ಪಡೆದಿರುವುದು ವಿಪರ್ಯಾಸ. ತೆರಿಗೆದಾರರ ಹಣವನ್ನು ದುರಪಯೋಗ ಪಡಿಸಿಕೊಳ್ಳುವ ಬದಲು ತಮ್ಮ ಸ್ವಂತ 23.4 ಕೋಟಿ ರೂ.ಗಳನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲವೇ?" ಎಂದಿದ್ದರು. ಈಗ ಮತ್ತೆ "ಅಂಬರೀಶ್ ಸ್ಮಾರಕಕ್ಕಾಗಿ ಕೋಟ್ಯಂತರ ತೆರಿಗೆದಾರರ ಹಣವನ್ನು ತೆಗೆದುಕೊಂಡರು." ಎಂದು ಆರೋಪಿಸಿದ್ದಾರೆ.


Click it and Unblock the Notifications











