ಚಿರಂಜೀವಿ 150ನೇ ಸಿನ್ಮಾ ಕತ್ತಿ ರಿಮೇಕ್: ರಾಮ್ ಚರಣ್
ಮೆಗಾ ಸ್ಟಾರ್ ಚಿರಂಜೀವಿ ಅವರ 150ನೇ ಚಿತ್ರದ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಚಿರಂಜೀವಿಯ ಕಮ್ ಬ್ಯಾಕ್ ಚಿತ್ರದ ಜವಾಬ್ದಾರಿ ಹೊತ್ತುಕೊಂಡಿರುವ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರು ಈ ಬಂದ ಸುದ್ದಿಯನ್ನೇ ಸ್ಪಷ್ಟಪಡಿಸಿದ್ದಾರೆ. ಫಿಲ್ಮಿಬೀಟ್ ತಂಡದೊಡನೆ ಮಾತನಾಡುತ್ತಾ ಚಿರಂಜೀವಿ ಅವರ 150ನೇ ಚಿತ್ರ ತಮಿಳಿನ 'ಕತ್ತಿ' ಚಿತ್ರದ ರಿಮೇಕ್ ಎಂದು ಹೇಳಿದರು.
'ಮಗಧೀರ' ಚಿತ್ರದಲ್ಲಿನ ಸ್ಪೆಷಲ್ ಅಪಿಯರೆನ್ಸ್, ಇತ್ತೀಚೆಗೆ ಬ್ರೂಸ್ ಲೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಚಿರಂಜೀವಿ ಅವರು ಪೂರ್ಣಪ್ರಮಾಣದಲ್ಲಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲು ತುಂಬಾ ಸಮಯ ತೆಗೆದುಕೊಂಡಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 150ನೇ ಚಿತ್ರ ತಮಿಳಿನ ಬ್ಲಾಕ್ ಬಸ್ಟರ್ ಸಿನಿಮಾ 'ಕತ್ತಿ' ರೀಮೇಕ್ ಆಗಿಲಿದೆ ಎಂದು ಫಿಲ್ಮಿಬೀಟ್ ನಲ್ಲಿ ಕಳೆದ ಅಕ್ಟೋಬರ್ ತಿಂಗಳಿನಲ್ಲೇ ಸುದ್ದಿ ಪ್ರಕಟಿಸಿದ್ದೆವು. ಇದು ಈಗ ಪಕ್ಕಾ ಆಗಿದೆ. ಚಿರಂಜೀವಿ ಕುಟುಂಬದ ಆಪ್ತ, ಜನಪ್ರಿಯ ನಿರ್ದೇಶಕ ವಿ.ವಿ.ವಿನಾಯಕ್ ಅವರು ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು ರಾಮ್ ಚರಣ್ ಹೇಳಿದರು. [ಚಿರು ಅಭಿಮಾನಿಗಳಿಗೆ ಶಾಕ್ ನೀಡಿದ ನಿರ್ದೇಶಕ ಪುರಿ]

ಬೆಂಗಳೂರಿನಲ್ಲಿ ನಡೆದ ರಿಟ್ಜ್ ಐಕಾನ್ 2015 ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ರಾಮ್ ಚರಣ್ ಅವರು ಈ ವಿಷಯ ಹಂಚಿಕೊಂಡರು.
ಎ.ಆರ್.ಮುರುಗದಾಸ್ ನಿರ್ದೇಶನದ, ವಿಜಯ್ ಅಭಿನಯದ 'ಕತ್ತಿ' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ರೈತರ ಸಂಕಷ್ಟ, ನೀರಿನ ಅಭಾವ, ಕಾರ್ಪೊರೇಟ್ ಸಂಸ್ಥೆಗಳ ದಬ್ಬಾಳಿಕೆ ಕುರಿತು ರೆಡಿಯಾಗಿದ್ದ 'ಕತ್ತಿ' ಸಾಮಾಜಿಕ ಸಂದೇಶ ಸಾರುವ ಸಿನಿಮಾ. ಹೀಗಾಗಿ ಚಿರಂಜೀವಿ ಅವರಿಗೆ ಜನನಾಯಕನ ಇಮೇಜ್ ಮತ್ತೊಮ್ಮೆ ತಂದುಕೊಡಲು ಈ ಸಬ್ಜೆಕ್ ಸೂಕ್ತ ಎಂದು ಚಿರಂಜೀವಿ ಕುಟುಂಬ ನಿರ್ಧರಿಸಿದೆ.
ತೆಲುಗು ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಚಿರಂಜೀವಿ ಅವರ 150ನೇ ಚಿತ್ರಕ್ಕೆ 'ಆಟೋಜಾನಿ' ಎಂದು ಆರಂಭದಲ್ಲಿ ಹೆಸರಿಡಲಾಗಿತ್ತು. ಚಿತ್ರದ ನಿರ್ಮಾಪಕನಾಗಿ ರಾಮಚರಣ್ ಜವಾಬ್ದಾರಿ ವಹಿಸಿಕೊಂಡಿದ್ದರು. ಈಗಲೂ ನಿರ್ಮಾಣದ ಹೊಣೆ ಅವರ ಮೇಲೆ ಇದೆ. ಪುರಿ ಜಗನ್ನಾಥ್ ಅವರು ನಿರ್ದೇಶಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿತ್ತು.
ಅದರೆ, ಜಗನ್ನಾಥ್ ಈಗ ಯಾಕೋ ಆಕ್ಷನ್ ಕಟ್ ಹೇಳೋಕೆ ಆಗಲ್ಲ ಎಂದು ಹೇಳಿ ಚಿರು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. ವಿ.ವಿ. ವಿನಾಯಕ್ ನಿರ್ದೇಶನ ಹಾಗೂ ಚಿನ್ನಿಕೃಷ್ಣ ಅವರ ಕಥೆ ಚಿರು ಚಿತ್ರಕ್ಕೆ ಪಡೆಯುವ ನಿರೀಕ್ಷೆ ಇತ್ತು. ಅದರಂತೆ, ವಿವಿ ವಿನಾಯಕ್ ಈಗ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. ಈ ಹಿಂದೆ ಚಿರಂಜೀವಿ ಅಭಿನಯದ ಠಾಗೋರ್ ಚಿತ್ರ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು.


Click it and Unblock the Notifications











