'ನಗುತಲಿರು..' ಎಂದು ಕೊನೆಯದಾಗಿ ಹೇಳಿದ್ದ ಚಿರು, ಅಳು ಉಳಿಸಿ ಹೋದರು
ಚಿರಂಜೀವಿ ಸರ್ಜಾ ಕೊನೆಯದಾಗಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡಿದ್ದು ಶಿವಾರ್ಜುನ ಚಿತ್ರದಲ್ಲಿ. ಲಾಕ್ ಡೌನ್ ಅವಧಿಯಲ್ಲಿ ಅವರು ಕುಟುಂಬದವರೊಂದಿಗೆ ಮನೆಯೊಳಗೆ ಇದ್ದಾಗಲೂ ಚಿತ್ರರಂಗ ಹಾಗೂ ಅಭಿಮಾನಿಗಳಿಂದ ದೂರವಾಗಿರಲಿಲ್ಲ. ವಿವಿಧ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಅವರು, ಕೊರೊನಾ ವೈರಸ್ ವಿರುದ್ಧದ ಜಾಗೃತಿ ಮೂಡಿಸುವ ಯೋಜನೆಗಳಲ್ಲಿಯೂ ಮೇಘನಾ ರಾಜ್ ಜತೆ ಕಾಣಿಸಿಕೊಂಡಿದ್ದರು.
Recommended Video
ಚಿರಂಜೀವಿ ನಟನೆಯ 'ಶಿವಾರ್ಜುನ' ಬಿಡುಗಡೆಯಾದ ಕೊನೆಯ ಚಿತ್ರವಾಗಿತ್ತು. ಆದರೆ ಅದು ಬಿಡುಗಡೆಯಾದ ಸಂದರ್ಭದಲ್ಲಿಯೇ ಚಿತ್ರಮಂದಿರಗಳು ಸ್ಥಗಿತಗೊಂಡವು. ಲಾಕ್ ಡೌನ್ ಅವಧಿಯಲ್ಲಿ ಅವರು ಪತ್ನಿ ಮೇಘನಾ ರಾಜ್ ಮೇಣದ ಬತ್ತಿ ಹಿಡಿದು ಕೊರೊನಾ ವೈರಸ್ ವಾರಿಯರ್ಸ್ಗೆ ಗೌರವ ಸಲ್ಲಿಸಿದ್ದರು. ಮುಂದೆ ಓದಿ...

ನಗುತಲಿರು ಹಾಡು...
ಅವರು ತೆರೆಯ ಮೇಲೆ ಕೊನೆಯದಾಗಿ ಕಾಣಿಸಿಕೊಂಡ ಅಧಿಕೃತ ವಿಡಿಯೋ ಪನ್ನಗಾಭರಣ ನಿರ್ದೇಶನದ 'ನಗುತಲಿರು' ಎಂಬ ಕೊರೊನಾ ವೈರಸ್ ವಿರುದ್ಧದ ಜಾಗೃತಿಯ ಹಾಡು. ಇದರಲ್ಲಿ ಚಿತ್ರರಂಗದ ಅನೇಕ ಖ್ಯಾತ ನಟರು ಕಾಣಿಸಿಕೊಂಡಿದ್ದರು. ವಾಸುಕಿ ವೈಭವ್ ಹಾಡಿದ್ದ ಹಾಡಿನಲ್ಲಿ ಚಿರಂಜೀವಿ ಕೂಡ ಕಾಣಿಸಿಕೊಂಡಿದ್ದರು.

ಪತ್ನಿ ಜತೆ ಚಿರು
'ನೀನೇ ತಾಯಿ ನೀನೇ ತಂದೆ, ಭೂಮಿ ತಾಯಿ ಎಲ್ಲ ನಿಂದೆ' ಹಾಡಿನಲ್ಲಿ ಪುನೀತ್ ರಾಜ್ ಕುಮಾರ್, ಮುರಳಿ, ವಿಜಯ್ ರಾಘವೇಂದ್ರ, ರಮೇಶ್ ಅರವಿಂದ್, ಪ್ರಜ್ವಲ್ ದೇವರಾಜ್, ಧನಂಜಯ್, ಶ್ರದ್ಧಾ ಶ್ರೀನಾಥ್, ಪ್ರಣೀತಾ ಸುಭಾಷ್, ದಿಗಂತ್, ಐಂದ್ರಿತಾ ರೇ, ಶಾನ್ವಿ ಶ್ರೀವಾಸ್ತವ್, ಚಿರು ಮತ್ತು ಮೇಘನಾ ಮುಂತಾದವರು ನಟಿಸಿದ್ದರು.

ಈ ಸನ್ನಿವೇಶ ಕಳೆದುಹೋಗಲಿದೆ
ಈ ಕಠಿಣ ಸಂದರ್ಭದಲ್ಲಿ ನೀವೆಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ. ಈ ಸನ್ನಿವೇಶವೂ ಕಳೆದುಹೋಗಲಿದೆ. ನಗುತಲಿರು ಎಂದು ಚಿರು ಈ ಹಾಡಿನ ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದರು. ಆದರೆ ಈ ಸಂಕಷ್ಟದ ಸಮಯ ಕಳೆಯುವ ಮುನ್ನವೇ ಚಿರು ಕಣ್ಮರೆಯಾಗಿದ್ದಾರೆ.

ಕುಟುಂಬದ ಜತೆ ಕಾಲ ಕಳೆಯುತ್ತಿದ್ದ ಚಿರು
ಕುಟುಂಬದೊಂದಿಗೆ ಕಾಲ ಕಳೆಯುವುದನ್ನು ಚಿರಂಜೀವಿ ಹೆಚ್ಚು ಇಷ್ಟಪಡುತ್ತಿದ್ದರು. ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದ ಫೋಟೊಗಳೇ ಅದಕ್ಕೆ ಸಾಕ್ಷಿ. ಕಳೆದ ತಿಂಗಳು ತಮ್ಮ ಇಡೀ ಕುಟುಂಬದ ಫೋಟೋ ಶೇರ್ ಮಾಡಿದ್ದರು. ನಂತರ ಧ್ರುವ ಸರ್ಜಾ ಜತೆ ಚೆಸ್ ಆಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.

ಸಹೋದರರ ಜತೆ ಫೋಟೊ
ಈದ್ ಮುಬಾರಕ್ ಎಂದು ಪತ್ನಿ ಜತೆಗೆ ಇರುವ ಫೋಟೊ ಮೂಲಕ ಶುಭಾಶಯ ಕೋರಿದ್ದ ಅವರು, ರಾಜ್ ಕುಮಾರ್ ಹಾಗೂ ಅಂಬರೀಶ್ ಜನ್ಮದಿನದಂದು ಅವರಿಗೆ ಶುಭ ಕೋರಿದ್ದರು. ಸಹೋದರರೊಂದಿಗಿನ ಅಪರೂಪದ ಫೋಟೊಗಳನ್ನು ಜೋಡಿಸಿ, ಆಗ ಮತ್ತು ಈಗ. ನಾವು ಹಾಗೆಯೇ ಇದ್ದೇವೆ ಎಂದು ಸಾಯುವ ಒಂದು ದಿನದ ಮುಂಚೆಯಷ್ಟೇ ಪೋಸ್ಟ್ ಮಾಡಿದ್ದರು.


Click it and Unblock the Notifications











