ಅಂಬಿ ಸ್ಮಾರಕ ನಿರ್ಮಿಸಲು ಭೂಮಿ ಪೂಜೆ: ಸ್ಮಾರಕ ಯಾಕೆ ಅನ್ನೋರಿಗೆ ಸುಮಲತಾ ಉತ್ತರ
ರೆಬೆಲ್ ಸ್ಟಾರ್ ಬಿರುದಿಗೆ ತಕ್ಕಂತೆ ವ್ಯಕ್ತಿತ್ವ. ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವಂತಹ ಅಭಿನಯ. ಸಿನಿಮಾನೇ ಮಾಡಲಿ, ರಾಜಕೀಯದಲ್ಲೇ ಇರಲಿ ಅಂಬರೀಷ್ ಅಂದರೆ ರೆಬೆಲ್ ಸ್ಟಾರ್. ಈ ಬಿರುದು ಮಾತ್ರ ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವೇ ಇಲ್ಲ. ಅಂಬಿ ಬೈದರೂ ಅಭಿಮಾನಿಗಳಿಗೆ ಖುಷಿ. ಹಾಗಂತ ಫ್ಯಾನ್ಸ್ ಅಷ್ಟೇ ಅಲ್ಲ. ಸ್ನೇಹಿತರಿಗೂ ಅಂಬರೀಷ್ ಮೊದಲು ಬೈದೇ ಮಾತಾಡಿಸುತ್ತಿದ್ದರು. ಇಂತಹ ವಿಶಿಷ್ಟ ವ್ಯಕ್ತಿತ್ವ ಚಿತ್ರರಂಗದಲ್ಲಿ ಬಲು ಅಪರೂಪ. ಆದರೆ, ಅಂಬರೀಷ್ ಈಗ ಅಪಾರ ಅಭಿಮಾನಿಗಳ ಅಗಲಿದ್ದಾರೆ. ಇವರ ನೆನಪಿಗಾಗಿ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ಚಿಂತಿಸಿದೆ. ಅದಕ್ಕೆ ಇಂದು (ಫೆ 27) ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
ಅಂಬರೀಷ್ಗಾಗಿ ಒಂದು ಸಮಾಧಿ ನಿರ್ಮಾಣ ಆಗಬೇಕು ಅನ್ನುವುದು ಅಭಿಮಾನಿಗಳು ಹಾಗೂ ಕುಟುಂಬದ ಮಹದಾಸೆಯಾಗಿತ್ತು. ಅದರಂತೆ ಇಂದು( ಫೆ 27) ರಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸ್ಮಾರಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ. ಈ ವೇಳೆ ಗಣ್ಯರು ರೆಬೆಲ್ ಸ್ಟಾರ್ ಅಂಬರೀಷ್ ನೆನೆದು ಗುಣಗಾನ ಮಾಡಿದರು.

ಸಿಎಂ, ಮಾಜಿ ಸಿಎಂ ನೆನೆದ ಸುಮಲತಾ
ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿದ ಬಳಿಕ ಸುಮಲತಾ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ಸ್ಮಾರಕ ನಿರ್ಮಾಣ ಆಗಬೇಕು ಅಂತ ಅಭಿಮಾನಿಗಳು ಒತ್ತಾಯ ಮಾಡಿದಾಗ ಒಂದೇ ಒಂದು ಕ್ಷಣವೂ ಯೋಚಿಸದೇ ಗ್ರೀನ್ ಸಿಗ್ನಲ್ ಕೊಟ್ಟು ಬಿ.ಎಸ್ ಯಡಿಯೂರಪ್ಪನವರು ಆದೇಶ ಹೊರಡಿಸಿದ್ದರು. ಅವರಿಗೆ ಧನ್ಯವಾದ ತಿಳಿಸುತ್ತೇನೆ." ಎಂದು ಸಿಎಂ ಹಾಗೂ ಮಾಜಿ ಸಿಎಂ ಇಬ್ಬರನ್ನೂ ಅಂಬರೀಷ್ ಪತ್ನಿ ಸುಮಲತಾ ನೆನೆದಿದ್ದಾರೆ. ಇದೇ ವೇಳೆ "ಅಭಿಮಾನಿಗಳೇ ದೊಡ್ಡ ಆಸ್ತಿ. ಅಂಬರೀಷ್ ನೆನಪಿಗೆ ಸ್ಮಾರಕ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ." ಎಂದು ಭರವಸೆ ನೀಡಿದರು.

ಸ್ಮಾರಕ ಯಾಕೆ ಅನ್ನುವವರಿಗೆ ಸುಮಲತಾ ಟಾಂಗ್
ಇದೇ ವೇಳೆ ಅಂಬರೀಷ್ಗೆ ಯಾಕೆ ಸ್ಮಾರಕ ಎಂದು ಪ್ರಶ್ನೆ ಮಾಡುವವರಿಗೆ ಸುಮಲತಾ ಉತ್ತರ ಕೊಟ್ಟಿದ್ದಾರೆ. "ಸಿನಿಮಾ, ರಾಜಕೀಯ, ಸಾಮಾಜಿಕ ಕ್ಷೇತ್ರಕ್ಕೆ ಅಂಬಿ ಕೊಡುಗೆ ಏನು ಅನ್ನೋದು ಮುಂದಿನ ತಲೆಮಾರಿಗೆ ಗೊತ್ತಾಗಬೇಕು. ಪತ್ನಿಯಾಗಿ ಮಾತ್ರ ಅಲ್ಲ. ಅಭಿಮಾನಿಯಾಗಿ ಮಾತನಾಡುತ್ತಿದ್ದೇನೆ. 200 ಹೆಚ್ಚು ಸಿನಿಮಾದಲ್ಲಿ ಅಂಬಿ ಅಭಿನಯಿಸಿದ್ದಾರೆ. ಕೆಲವು ಸಿಲ್ವರ್ ಜ್ಯೂಬ್ಲಿ, ಗೋಲ್ಡನ್ ಜ್ಯೂಬ್ಲಿ ಆಚರಿಸಿವೆ. 200 ಸಿನಿಮಾ ಮಾಡಿದ್ದರೂ 50 ಪರ್ಸೆಂಟ್ ಸಂಭಾವನೆಯನ್ನೂ ಪಡೆದುಕೊಂಡಿಲ್ಲ. ಕಷ್ಟ ಇದೆ. ಸಿನಿಮಾ ಮಾಡಿಕೊಡಿ ಅಣ್ಣ ಅಂತ ಬಂದ ನಿರ್ಮಾಪಕರಿಗೆ ಕಾಲ್ ಶೀಟ್ ಕೊಟ್ಟು, ಅವರಿಗೆ ದುಡ್ಡು ಕೊಟ್ಟು ಸಿನಿಮಾ ಮಾಡಿದ್ದೂ ಉಂಟು. ಚಿತ್ರರಂಗದ ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಡಾ. ರಾಜ್ ಕುಮಾರ್ ಕಂಡ ಕಲಾವಿದರ ಸಂಘದ ಕನಸು ನನಸು ಮಾಡಿದ್ದಾರೆ. ಅಂಬಿಯದ್ದು ದೊಡ್ಡ ವ್ಯಕ್ತಿತ್ವ. ಅವರು ಬೈದರೆ ಸಮಾಧಾನ ಪಡುವಂತಹ ಅಭಿಮಾನಿಗಳು ಇದ್ದಾರೆ. ಅಂಬಿ ರಾಜಕೀಯ ಮಾಡಿಲ್ಲ. ಜನಕ್ಕೆ ಹತ್ತಿರ ಆಗಲು, ಜನ ಸೇವೆ ಮಾಡೋದಕ್ಕೆ ರಾಜಕೀಯಕ್ಕೆ ಬಂದರು. ಎಲ್ಲೂ ಪ್ರಚಾರ ತೆಗೆದುಕೊಂಡಿಲ್ಲ. ಕೇಂದ್ರ ಮಂತ್ರಿಯಾಗಿದ್ದ ವೇಳೆ ಕಾವೇರಿ ನೀರಿನ ಹೋರಾಟ ಬುಗಿಲೆದ್ದಾಗ ಜನರ ಪರವಾಗಿ ನಿಂತರು. ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟರು." ಎಂದು ಸ್ಮಾರಕ ನಿರ್ಮಾಣಕ್ಕೆ ಸಮಜಾಯಿಷಿ ನೀಡಿದರು.

ಅಂಬಿ ನೆನೆದ ಸಿಎಂ ಬೊಮ್ಮಾಯಿ
"ಅಂಬರೀಷ್ಗೆ ಅಧಿಕಾರಕ್ಕೆ ಅಂಟಿಕೊಳ್ಳುವ ಗುಣವಿರಲಿಲ್ಲ. ಕಾವೇರಿ ಸಮಸ್ಯೆ ಇದ್ದಾಗ, ಕೇಂದ್ರ ಸಚಿವರಾಗಿದ್ರೂ, ಅಧಿಕಾರ ಬಿಸಾಕಿ ಬಂದ್ರು. ಕಾವೇರಿಗಾಗಿ ಯಾರಾದ್ರೂ ಹೋರಾಟ ಮಾಡಿದ್ರೆ ಅದು ಅಂಬಿ ಮಾತ್ರ. ಅಂಬರೀಷ್ಗೂ ಮಂಡ್ಯಗೂ ಅವಿನಾಭಾವ ಸಂಬಂಧವಿದೆ. ಚಿತ್ರರಂಗಕ್ಕೂ ಅಂಬಿ ಕೊಡುಗೆ ಅಪಾರ. ಯಾವುದೇ ತರಬೇತಿ ಇಲ್ಲದೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಬಿ ಜೊತೆ ಬಾಳುವುದು ಅಷ್ಟು ಸುಲಭವಲ್ಲ. ಅವರು ಗಟ್ಟಿಗಿತ್ತಿ. ಅಭಿಷೇಕ್ ಕೂಡ ತಂದೆ ಗುಣಗಳನ್ನು ರೂಢಿಸಿಕೊಳ್ಳಬೇಕು. ಮಂಡ್ಯದ ಗಂಡು ಎನಿಸಿಕೊಳ್ಳಬೇಕು. ಅಂಬರೀಷ್ ಸ್ಮಾರಕ ಬೇರೆ ರಾಜ್ಯದವರು ಕೂಡ ಬಂದು ನೋಡುವಂತಾಗುತ್ತೆ." ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪುನೀತ್ಗೆ 'ಕರ್ನಾಟಕ ರತ್ನ'
ಪುನೀತ್ ರಾಜ್ಕುಮಾರ್ ಅಗಲಿದ ಬಳಿಕ ಸಿ ಎಂ ಬಸವರಾಜ ಬೊಮ್ಮಾಯಿ 'ಕರ್ನಾಟಕ ರತ್ನ' ಎಂದು ಘೋಷಿಸಿದ್ದರು. ಅಪ್ಪು ಸಿನಿಮಾ ಸೇವೆ ಹಾಗೂ ಸಾಮಾಜಿಕ ಕಾರ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಶಸ್ತಿಯನ್ನ ಅನೌನ್ಸ್ ಮಾಡಿದ್ದರು. ಅದರಂತೆ ಶೀಘ್ರದಲ್ಲಿಯೇ ಪ್ರಶಸ್ತಿ ನೀಡುವ ದಿನವನ್ನು ತಿಳಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ ಪುನೀತ್ ಸ್ಮಾರಕ ನಿರ್ಮಾಣ ಕೂಡ ಬೇಗ ಆರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ.


Click it and Unblock the Notifications











