ಪುಟ್ಟಣ್ಣ ಕಣಗಾಲ್ ಮನೆ ಸ್ಮಾರಕ ಮಾಡುವುದಾಗಿ ಭರವಸೆ ನೀಡಿದ ಸಿಎಂ
ಪುಟ್ಟಣ್ಣ ಕಣಗಾಲ್ ಭಾರತೀಯ ಚಿತ್ರರಂಗ ಕಂಡ ಶೇಷ್ಠ ನಿರ್ದೇಶಕರಲ್ಲಿ ಒಬ್ಬರು. ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಸಿನಿಮಾಗಳು ಇಂದಿಗೂ ಪ್ರಸ್ತುತ. ಸಿನಿಮಾ ನಿರ್ದೇಶಕನಾಗಬೇಕು ಎಂದುಕೊಳ್ಳುವ ಪ್ರತಿಯೊಬ್ಬನಿಗೂ ಇವರೇ ಮಾನಸಿಕ ಗುರು. ಇವರ ಸಿನಿಮಾಗಳೇ ದಾರಿ ದೀಪ. ಕನ್ನಡ ಅಷ್ಟೇ ಅಲ್ಲ ತೆಲುಗು, ತಮಿಳಿ, ಹಿಂದಿ ಭಾಷೆಯಲ್ಲೂ ಸಿನಿಮಾಗಳನ್ನು ನಿರ್ದೇಶಿಸಿರುವ ಪುಟ್ಟಣ್ಣ ಕಣಗಾಲ್ ಸಿನಿಮಾಗಳನ್ನು ಮತ್ತು ಚಿತ್ರರಂಗಕ್ಕೆ ಅವರು ಮಾಡಿದ ಸೇವೆಯನ್ನು ಮರೆಯುವಂತಿಲ್ಲ.
ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ವಿಷ್ಣುವರ್ಧನ್, ಅಂಬರೀಶ್, ಕಲ್ಪನಾ, ಶ್ರೀನಾಥ್ ಸೇರಿದಂತೆ ಅನೇಕ ಗಣ್ಯರು ತಾರೆಯರಾಗಿ ಹೊರಹೊಮ್ಮಿದ್ದಾರೆ. ಇಂತಹ ದಿಗ್ಗಜ ನೆನಪನ್ನು ಉಳಿಸುವಂತ ಕೆಲಸ ಇದೂವರೆಗೂ ಆಗಿಲ್ಲ . ಆದ್ರೀಗ ಮೈಸೂರಿನ ಪಿರಿಯಾಪಟ್ಟಣದಲ್ಲಿರುವ ಪುಟ್ಟಣ್ಣ ಅವರ ಪೂರ್ವಿಕರ ಮನೆಯನ್ನು ಸ್ಮಾರಕವನ್ನಾಗಿ ಮಾಡಲು ಸರ್ಕಾರ ಒಪ್ಪಿದೆ. ಈ ಬಗ್ಗೆ ಸ್ವತಃ ಸಿ ಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪುಟ್ಟಣ್ಣ ಮನೆ ಸ್ಮಾರಕ ಮಾಡಲು ಸಿಎಂ ನಿರ್ಧಾರ
ಕನ್ನಡ ಚಿತ್ರರಂಗದ ಸೃಜನ ಶೀಲ ನಿರ್ದೇಶಕ ಪುಟ್ಟಣ ಕಣಗಾಲ್ ಅವರ ವಾಸವಿದ್ದ ಪೂರ್ವಿಕರ ಮನೆಯನ್ನು ಸ್ಮಾರಕ ಮಾಡಲು ನಿರ್ಧರಿಸಲಾಗಿದೆ. ನಿನ್ನೆ (ಮಾರ್ಚ್ 03) ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಅತೀ ಶೀಘ್ರದಲ್ಲಿಯೇ ಪುಟ್ಟಣ್ಣ ಕಣಗಾಲ್ ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗುವುದು ಎಂದಿದ್ದಾರೆ.

ಪುಟ್ಟಣ್ಣ ಮನೆ ಈಗ ಹೇಗಿದೆ?
ಪುಟ್ಟಣ ಕಣಗಾಲ್ ನಿಧನರಾಗಿ ಸುಮಾರು 4 ದಶಕಗಳೇ ಕಳೆದಿವೆ. ಅಲ್ಲಿಂದ ಪುಟ್ಟಣ್ಣ ಹುಟ್ಟಿಬೆಳೆದ ಮನೆಯ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಮೈಸೂರಿನ ಪಿರಿಯಾಪಟ್ಟಣದಲ್ಲಿರುವ ಈ ಮನೆ ಈಗ ಹಾಳಾಗಿದೆ. ತೀರಾ ಹಳೆಯ ಮನೆಯಾಗಿದ್ದರಿಂದ ವಾಸಿಸಲು ಯೋಗ್ಯವಾಗಿಲ್ಲ. ಹೀಗಾಗಿ ಈ ಮನೆಯನ್ನು ಪುಟ್ಟಣ್ಣ ಕಣಗಾಲ್ ಅವರ ನೆನಪಿಗಾಗಿ ಸ್ಮಾರಕ ಮಾಡುವಂತೆ ಹಲವು ದಿನಗಳಿಂದ ಕೂಗು ಕೇಳಿಬರುತ್ತಿತ್ತು. ಕೊನೆಗೂ ಈ ಕೂಗಿಗೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದು, ಸ್ಮಾರಕ ಮಾಡಲು ನಿರ್ಧರಿಸಿದ್ದಾರೆ.

ಚಲನಚಿತ್ರ ಅಕಾಡೆಮಿಯಿಂದ ಪ್ರಸ್ತಾವನೆ
ಮೈಸೂರು ಬಳಿ ಪಿರಿಯಾಪಟ್ಟಣದಲ್ಲಿರುವ ಪೂರ್ವಿಕರ ಮನೆಯನ್ನು ಸ್ಮಾರಕವನ್ನಾಗಿ ನಿರ್ಮಿಸಬೇಕೆಂದು ಚಲನಚಿತ್ರ ಅಕಾಡೆಮಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ ಪಿರಿಯಾ ಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿರುವ ಪುಟ್ಟಣ್ಣವರ ಮನೆಯನ್ನುಸ್ಮಾರಕ ಮತ್ತು ಲೈಬ್ರರಿಯಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಇದೇ ಉದ್ದೇಶದಿಂದ ನಿನ್ನೆ (ಮಾರ್ಚ್ 03)ರಂದು ಸ್ಮಾರಕ ನಿರ್ಮಾಣ ಮಾಡುವುದಾಗಿ ಸಿಎಂ ಹೇಳಿಕೆ ಕೊಟ್ಟಿದ್ದಾರೆ.

ಕಣಗಾಲ್ ಮನೆ ವೈರಲ್ ಆಗಿತ್ತು
ಪುಟ್ಟಣ್ಣ ಕಣಗಾಲ್ ಮನೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದನ್ನು ಗಮಸಿದ ಚಲನಚಿತ್ರ ಅಕಾಡೆಮಿ ಪುಟ್ಟಣ್ಣ ಕಣಗಾಲ್ ಮನೆಯನ್ನು ಸ್ಮಾರಕ ಮಾಡಲು ನಿರ್ಧರಿಸಿತ್ತು. ಆರಂಭದಲ್ಲಿ ಈ ಮನೆಯನ್ನು ಸ್ಮಾರಕ ಮಾಡಲು ಸುಮಾರು 10ಕೋಟಿಗೂ ಅಧಿಕ ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಸರ್ಕಾರ ಯಾವಾಗ ಕಾಮಾಗಾರಿ ಆರಂಭಿಸುತ್ತೆ? ಯಾವಾಗ ಸ್ಮಾರಕ ಮುಗಿಯುತ್ತೆ ಎನ್ನುವುದು ಸದ್ಯಕ್ಕೆ ಕುತೂಹಲ.


Click it and Unblock the Notifications











