ಅಂಬರೀಶ್ ಅಭಿಮಾನಿಗಳಿಗೆ ಖುಷಿ ಸುದ್ದಿ: ಸ್ಮಾರಕ ನಿರ್ಮಾಣದ ಜಮೀನಿಗೆ ಅನುಮೋದನೆ
ನಟ ಅಂಬರೀಶ್ ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಖುಷಿಯ ಸುದ್ದಿ ಸಿಕ್ಕಿದೆ. ತಮ್ಮ ನೆಚ್ಚಿನ ನಟನ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಮೊದಲ ಹಂತದ ಪ್ರಕ್ರಿಯೆ ನಡೆದಿದ್ದು, ಸ್ಮಾರಕ ಸ್ಥಾಪಿಸಲು ಸರ್ಕಾರದಿಂದ ಜಮೀನು ಮಂಜೂರಾಗಿದೆ.
Recommended Video
ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರಕ್ಕೆ ದಿವಂಗತ ಅಂಬರೀಶ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಸಲುವಾಗಿ ಅವರ ಸ್ಮಾರಕ ನಿರ್ಮಾಣಕ್ಕೆ ಅಂಬರೀಶ್ ಪ್ರತಿಷ್ಠಾನ ಸಮಿತಿಯನ್ನು ಜನವರಿಯಲ್ಲಿ ರಚಿಸಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಎಂಟು ಸದಸ್ಯರು ಈ ಸಮಿತಿಯು ಇದೇ ಮೊದಲ ಬಾರಿಗೆ ಸೋಮವಾರ ಸಭೆ ಸೇರಿ ಚರ್ಚೆ ನಡೆಸಿತು.
ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಜಾಗ ನೀಡುವ ಬಗ್ಗೆ ಈ ಹಿಂದೆಯೂ ಪ್ರಸ್ತಾಪಿಸಲಾಗಿತ್ತು. ಅದಕ್ಕೆ ಸೋಮವಾರದ ಸಭೆಯಲ್ಲಿ ಅನುಮೋದನೆ ದೊರಕಿತು. ಮುಂದೆ ಓದಿ...

ಸ್ಟುಡಿಯೋ ಆವರಣದಲ್ಲಿ ಜಾಗ
ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣಕ್ಕಾಗಿ 1 ಎಕರೆ 34 ಗುಂಟೆ ಜಾಗ ನೀಡಲು ಅಂಬರೀಶ್ ಪ್ರತಿಷ್ಠಾನದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ಐದು ಕೋಟಿ ಅನುದಾನ
ಸ್ಮಾರಕ ನಿರ್ಮಿಸಲು ಜಾಗ ನೀಡಲಾಗಿದೆ. ಆದಷ್ಟು ಬೇಗ ಕೆಲಸ ಆರಂಭ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಸ್ಮಾರಕಕ್ಕಾಗಿ ಈ ವರ್ಷದ ನಿಯೋಜಿತ ಮೊತ್ತವಾದ ಐದು ಕೋಟಿ ರೂ ಅನುದಾನವನ್ನು ಮೀಸಲು ಇಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಉಪ ಸಮಿತಿ ರಚನೆಗೆ ಸೂಚನೆ
ಸ್ಮಾರಕ ನಿರ್ಮಾಣಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಹಾಗೂ ಅದಕ್ಕೆ ಅಗತ್ಯ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಅಲ್ಲದೆ, ಸ್ಮಾರಕ ನಿರ್ಮಾಣ ತ್ವರಿತಗತಿಯಲ್ಲಿ ನಡೆಯಲು ಅನುಕೂಲವಾಗುವಂತೆ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸುವಂತೆ ಸೂಚಿಸಿದರು.

ಸರ್ಕಾರ, ಚಿತ್ರರಂಗದ ಪ್ರತಿನಿಧಿಗಳು ಭಾಗಿ
ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದ ಸುಮಲತಾ ಅಂಬರೀಶ್, ಅಂಬರೀಶ್ ಮಗ ಅಭಿಷೇಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಸೇರಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರತಿನಿಧಿಗಳು, ಕಂಠೀರವ ಸ್ಟುಡಿಯೋದ ವ್ಯವಸ್ಥಾಪಕ ನಿರ್ದೇಶಕರು ಮತ್ತಿತರರು ಭಾಗಿಯಾಗಿದ್ದರು.

ವಿಷ್ಣುವರ್ಧನ್ ಸ್ಮಾರಕ ಬಾಕಿ
ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸಮಾಧಿ ಸ್ಥಳದಲ್ಲಿಯೇ ಸ್ಮಾರಕ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ ಅಂಬರೀಷ್ ನಿಧನರಾಗಿ ಎರಡು ವರ್ಷಗಳಾಗುತ್ತಾ ಬಂದರೂ ಅದಕ್ಕೆ ಚಾಲನೆ ದೊರಕಿಲ್ಲ ಎಂದು ಅಂಬಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ನಡುವೆ ನಟ ವಿಷ್ಣುವರ್ಧನ್ ಸ್ಮಾರಕದ ಗೊಂದಲ ಮತ್ತು ವಿವಾದ ಇನ್ನೂ ಬಗೆಹರಿದಿಲ್ಲ.


Click it and Unblock the Notifications











