'ಕಾಂತಾರ ಚಾಪ್ಟರ್ 1'ರ ಶೂಟಿಂಗ್ ವೇಳೆ ಸುಸ್ತಾಗಿದ್ದ ರಾಕೇಶ್ ಪೂಜಾರಿ; ಆರೋಗ್ಯ ನಿರ್ಲಕ್ಷ್ಯ ಮಾಡಿದರೇ?
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಸೀಸನ್ 3 ಶೋ ಮೂಲಕ ಮನೆ ಮಾತಾಗಿದ್ದ ನಟ ರಾಕೇಶ್ ಪೂಜಾರಿ. ತಮ್ಮ ಹಾಸ್ಯ ಪ್ರಜ್ಞೆಯಿಂದ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದ ನಟ ಇನ್ನು ನೆನಪು ಪಾತ್ರ. ರಾಕೇಶ್ ಪೂಜಾರಿ ಹಠಾತ್ ನಿಧನ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಶೋಕ ಮನೆ ಮಾಡಿದೆ. ಗೆಳೆಯ ಮದುವೆಯ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಅವರಿಗೆ ಹೃದಯಾಘಾತವಾಗಿತ್ತು.
ಉಡುಪಿಯ ಮಿಯ್ಯಾರಿನಲ್ಲಿ ಗೆಳೆಯನ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದರು. ಈ ವೇಳೆ ಮೆಹೆಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವಾಗ ಹಠಾತ್ ಆಗಿ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಅವರನ್ನು ಕಾರ್ಕಳದ ಗ್ರಾಜಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅಷ್ಟೊತ್ತಿಗಾಗಲೇ ರಾಕೇಶ್ ಪೂಜಾರಿ ನಿಧನರಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಾಕೇಶ್ ಪೂಜಾರಿ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದರು. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ 'ಕಾಂತಾರ ಚಾಪ್ಟರ್ 1' ಸಿನಿಮಾದಲ್ಲಿ ಇವರಿಗೆ ಪ್ರಮುಖ ಪಾತ್ರವನ್ನು ನೀಡಲಾಗಿತ್ತು. ಈ ಸಿನಿಮಾದ ಶೂಟಿಂಗ್ಗಾಗಿ ಊರಿನಲ್ಲಿಯೇ ಇದ್ದರು. ನಿನ್ನೆ (ಮೇ 11) ಕೂಡ 'ಕಾಂತಾರ ಚಾಪ್ಟರ್ 1'ರ ಶೂಟಿಂಗ್ ಮುಗಿಸಿದ ಬಳಿಕವೇ ಗೆಳೆಯ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದಿದ್ದರು. ಕಾಂತಾರ ಸಿನಿಮಾ ಶೂಟಿಂಗ್ ವೇಳೆನೂ ರಾಕೇಶ್ ಪೂಜಾರಿ ಸುಸ್ತಾಗುತ್ತಿದ್ದರು. ಎಂದು ವರದಿಯಾಗಿದೆ.
ರಾಕೇಶ್ ಪೂಜಾರಿ ಇತ್ತೀಚೆಗೆ ಸಿನಿಮಾರಂಗದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಚಿತ್ರರಂಗದಲ್ಲಿ ತಮ್ಮ ವೃತ್ತಿ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಮುಂದಾಗಿದ್ದರು. ಇದೇ ವೇಳೆ ಅವರಿಗೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ 'ಕಾಂತಾರ ಚಾಪ್ಟರ್ 1' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಮೂಲಗಳ ಪ್ರಕಾರ, ಕಾಂತಾರ ಪ್ರೀಕ್ವೆಲ್ನಲ್ಲಿ ರಾಕೇಶ್ ಪೂಜಾರಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು ಎನ್ನಲಾಗಿದೆ.
ನಿನ್ನೆ (ಮೇ 11) ಕೂಡ ರಾಕೇಶ್ ಪೂಜಾರಿ 'ಕಾಂತಾರ ಚಾಪ್ಟರ್ 1'ರ ಶೂಟಿಂಗ್ ಮುಗಿಸಿದ ಗೆಳೆಯ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿದ್ದರು ಎಂದು ಹಾಸ್ಯ ನಟ ಗೋವಿಂದೇ ಗೌಡ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಚಿತ್ರರಂಗದಲ್ಲಿ ವೃತ್ತಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕನಸು ಕಂಡಿದ್ದ ರಾಕೇಶ್ ಪೂಜಾರಿಯ ಬಾಳಲ್ಲಿ ವಿಧಿ ಕ್ರೂರ ಆಟವನ್ನು ಆಡಿದೆ. ಕನಸು ಆರಂಭ ಆಗುವ ಮೊದಲೇ ರಾಕೇಶ್ ಪೂಜಾರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಇನ್ನು ಕಾಂತಾರ ಪ್ರೀಕ್ವೆಲ್ ಸಿನಿಮಾದ ಶೂಟಿಂಗ್ ಮಾಡುವಾಗಲೇ ರಾಕೇಶ್ ಪೂಜಾರಿ ಸುಸ್ತಾಗುತ್ತಿದ್ದರು. ನಿದ್ದೆ, ಊಟವನ್ನು ಸರಿಯಾಗಿ ಮಾಡುತ್ತಿರಲಿಲ್ಲ. ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವನ್ನು ಮಾಡಿರಬಹುದೆಂದು ಮಾಧ್ಯಮಗಳು ವರದಿ ಮಾಡಿವೆ.
"ನಿನ್ನೆ ಕಾಂತಾರ ಶೂಟಿಂಗ್ನಲ್ಲಿ ಇದ್ದನಂತೆ. ಆ ಶೂಟಿಂಗ್ ಅನ್ನು ಮುಗಿಸಿಕೊಂಡು ಸ್ನೇಹಿತರ ಕಾರ್ಯಕ್ರಮಕ್ಕೆ ಹೋಗಿದ್ದಾನೆ. ಶೂಟಿಂಗ್ ಮುಗಿದ ಬಳಿಕ ಸಂಜೆ ಸುಸ್ತು ಸುಸ್ತು ಎಂದು ಹೇಳುತ್ತಿದ್ದನಂತೆ. ಆ ವೇಳೆ ಸಡನ್ ಆಗಿ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಹೇಳುತ್ತಿದ್ದಾರೆ. ನನಗೆ ಶಾಕ್, ಬೆಳಗ್ಗೆ ನಾಲ್ಕು ಗಂಟೆಗೆ ನನಗೆ ನ್ಯೂಸ್ ಬಂದಿತ್ತು. ಎಲ್ಲರೂ ಎರಡು ಗಂಟೆಯಿಂದ ಫೋನ್ ಹೊಡೆದಿದ್ದಾರೆ. ನಾನು ಸೈಲೆಂಟ್ಗೆ ಹಾಕಿದ್ದೆ. ನಾಲ್ಕು ಗಂಟೆಗೆ ಇಷ್ಟೊಂದು ಫೋನ್ ಬಂದಿದೆಯಲ್ಲ ಎಂದು ಫೋನ್ ಮಾಡಿದಾಗ, ವಿಷಯ ಕೇಳಿ ಸಹಿಸಿಕೊಳ್ಳುವುದಕ್ಕೆ ಆಗಲಿಲ್ಲ." ಎಂದು ಹಾಸ್ಯ ನಟ ಗೋವಿಂದೇ ಗೌಡ ಟಿವಿ9 ಡಿಜಿಟಲ್ಗೆ ನೀಡಿದ ಮಾಹಿತಿಯಲ್ಲಿ ಹಂಚಿಕೊಂಡಿದ್ದಾರೆ. ರಾಕೇಶ್ ಪೂಜಾರಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸಿದ್ದರು. ಹಾಗೇ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಹೆಚ್ಚಾಗಿ ನಾಟಕಗಳು, ಸ್ಕಿಟ್ಗಳಲ್ಲಿ ಗುರುತಿಸಿಕೊಂಡಿದ್ದರು. ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದಿದ್ದ ನಟ ಕಾಮಿಡಿ ಕಿಲಾಡಿಗಳು ಸೀಸನ್ 3 ರ ವಿನ್ನರ್ ಕೂಡ ಆಗಿದ್ದರು.


Click it and Unblock the Notifications











