'ಕೆಜಿಎಫ್'ನಲ್ಲಿ ಶಿವು ಕೆ ಆರ್ ಪೇಟೆ ಸೀನ್ಗಳಿಗೆ ಕತ್ತರಿ ಹಾಕಿದ್ಯಾಕೆ? ಯಶ್ ಫೋನ್ ಮಾಡಿ ಕೊಟ್ಟ ಕಾರಣವೇನು?
ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಬರೆದ ಸಿನಿಮಾ 'ಕೆಜಿಎಫ್'. ಕನ್ನಡ ಸಿನಿಮಾಗಳು ಕನ್ನಡದ ಗಡಿಯನ್ನು ದಾಟಿ ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆ ಬರೆದ ಸಿನಿಮಾವಿದು. ಹೀಗಾಗಿ ಕೆಜಿಎಫ್ನ ಎರಡೂ ಚಾಪ್ಟರ್ಗಳಿಗೂ ಸ್ಯಾಂಡಲ್ವುಡ್ನಲ್ಲಿ ವಿಶೇಷವಾದ ಸ್ಥಾನವಿದೆ.
'ಕೆಜಿಎಫ್'ನಲ್ಲಿ ನಟಿಸಿದ ಪ್ರತಿಯೊಬ್ಬ ನಟರಿಗೂ ದಾಖಲೆ ಬರೆದ ಸಿನಿಮಾದಲ್ಲಿ ನಟಿಸಿದ ಹೆಮ್ಮೆಯಿದೆ. ಆದರೆ, ಈ ಸಿನಿಮಾದಲ್ಲಿ ಕನ್ನಡ ಹಾಸ್ಯ ನಟ ಶಿವು ಕೆ ಆರ್ ಪೇಟೆ ಕೂಡ ನಟಿಸಿದ್ದರು. ಈ ವಿಷಯ ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವು 'ಕೆಜಿಎಫ್ ಚಾಪ್ಟರ್ 1'ನಲ್ಲಿ ನಟಿಸಿರೋದು ಸತ್ಯ. ಆದರೆ, ಅವರ ಸೀನ್ ಸಿನಿಮಾದಲ್ಲಿ ಇಲ್ಲ

ಹೌದು.. ಶಿವು ಕೆ ಆರ್ ಪೇಟೆ 'ಕೆಜಿಎಫ್ ಚಾಪ್ಟರ್ 1' ಸಿನಿಮಾದಲ್ಲಿ ನಟಿಸಿದ್ದರು. ಈ ಮಾತನ್ನು ಸ್ವತ: ಶಿವು ಕೆ ಆರ್ ಪೇಟೆಯವರೇ ಕನ್ನಡ ಫಿಕ್ಚರ್ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ. 'ಕೆಜಿಎಫ್ ಚಾಪ್ಟರ್ 1'ಗಾಗಿ ಶಿವು ಕೆ ಆರ್ ಪೇಟೆ ಎಷ್ಟು ದಿನ ಶೂಟ್ ಮಾಡಿದ್ದರು? ಆ ಸೀನ್ ಅನ್ನು ಡಿಲೀಟ್ ಮಾಡಿದ್ದೇಕೆ? ಯಶ್ ಫೋನ್ ಮಾಡಿ ಕೊಟ್ಟ ಕಾರಣವೇನು? ತಿಳಿಯಲು ಮುಂದೆ ಓದಿ..
'ಕೆಜಿಎಫ್' ಶಿವು ಸೀನ್ಗ್ಯಾಕೆ ಕತ್ತರಿ?
ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮದ ಮೂಲಕ ಹೆಸರು ಮಾಡಿರೋ ನಟ ಶಿವು ಕೆ ಆರ್ ಪೇಟೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. ಆದರೆ, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ ಚಾಫ್ಟರ್ 1'ನಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅದ್ಯಾಕೆ? ಅಂತಹದ್ದೇನಾಯ್ತು? ಈ ಪ್ರಶ್ನೆಗೆ ಶಿವು ಕೆ ಆರ್ ಪೇಟೆ ಉತ್ತರ ಕೊಟ್ಟಿದ್ದಾರೆ.

"ಕೆಜಿಎಫ್ಗಾಗಿ 8-9 ದಿನ ಕೆಲಸ ಮಾಡಿದ್ದೆ"
ಶಿವು ಕೆ ಆರ್ ಪೇಟೆ 'ಕೆಜಿಎಫ್ ಚಾಪ್ಟರ್ 1'ರಲ್ಲಿ ಕೆಲಸ ಮಾಡಿದ್ದನ್ನು ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. "ಕೆಜಿಎಫ್ ಪಾರ್ಟ್ 1ನಲ್ಲಿ ನಾನು ಕೆಲಸ ಮಾಡಿದ್ದೆ ಅನ್ನೋ ಖುಷಿ ಇದೆ. ಪಾರ್ಟ್ 1ರಲ್ಲಿ ನಾನು 8-9 ದಿನ ಕೆಲಸ ಮಾಡಿದ್ದೆ ನಾನು. ಅದು ಪೂರ್ತಿ ಕಾಮಿಡಿ ಪೋಷನ್ ಇತ್ತು. ಪ್ರಶಾಂತ್ ನೀಲ್ ಸರ್ ಅವರ ರೂಮ್ಗೆ ಕರೆದು ಕೂತು ಬರೆದಿದ್ದರು. ಈ ತರ ಬರುತ್ತೆ ಸೀನ್ ಅಂತ ರೆಡಿ ಮಾಡಿಕೊಂಡು ಶೂಟಿಂಗ್ ಮಾಡಿದ್ದಾಗಿತ್ತು. ಸೀನ್ಗಳು ಚೆನ್ನಾಗಿ ಕೂಡ ಬಂದಿದ್ದವು." ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಸೀನ್ಗಳು ಕಟ್ಟಾಗಿದ್ದು ಯಾಕೆ?
"ಸಿನಿಮಾ ಅಷ್ಟು ಸೀರಿಯಸ್ ಆಗಿ ಹೋಗಬೇಕಾದರೆ ಯಾವುದೇ ಸಿನಿಮಾ ಆದರೂ ಸರಿ, ಯಾವ ಸೀನ್ಗಳಾದರೂ ಸರಿ. ತುರುಕುವಂತಹ ಅವಶ್ಯಕತೆ ಇರೋದಿಲ್ಲ. ಕೆಜಿಎಫ್ ಅಂತಹ ಅದ್ಭುತವಾದ ಸಿನಿಮಾದಲ್ಲಿ ನಾನು ಆಕ್ಟ್ ಮಾಡಿದ್ದೇನೆ ಅನ್ನೋ ಖುಷಿಯಿದೆ. ಅದರಲ್ಲಿ ಇಲ್ಲ ಪೋಷನ್ ಕಟ್ ಮಾಡಿದ್ದಾರೆ." ಎಂದು ಶಿವು ಕೆ ಆರ್ ಪೇಟೆ ಸಂದರ್ಶನದಲ್ಲಿ ಹೇಳಿದ್ದಾರೆ.
ಯಶ್ ಫೋನ್ ಮಾಡಿ ಹೇಳಿದ್ದೇನು?
"ನನಗೆ ಯಶ್ ಸರ್ ಫೋನ್ ಮಾಡಿದ್ದರು. ಹಿಂಗಿಂಗೆ ಆಗಿದೆ ಕಣೋ ಬೇಜಾರು ಮಾಡಿಕೊಳ್ಳಬೇಡ ಅಂದಿದ್ದರು. ನನಗೆ ಬೇಜಾರು ಯಾಕೆ? ಅಷ್ಟು ದೊಡ್ಡ ಸೆಟ್ಟು, ದೊಡ್ಡ ಸಿನಿಮಾದಲ್ಲಿ ಕೆಲಸ ಮಾಡಿದ ಖುಷಿಯಿದೆ ನನಗೆ. ಪ್ರಶಾಂತ್ ನೀಲ್ ಸರ್ ಸಿಕ್ಕಾಗಲೂ ಬೈಯ್ಯಬೇಕು ಅಂತ ಅನಿಸುತ್ತಿರಬೇಕು. ಬೈದು ಬಿಡಿ ಅಂತ ಹೇಳಿದ್ದರು. ಇಲ್ಲ ಸರ್ ನನಗೆ ಕೆಲಸ ಮಾಡಿದ್ದು ಖುಷಿಯಿದೆ ಅಂತ ಹೇಳಿದ್ದೆ." ಎಂದು ಶಿವು ಕೆ ಆರ್ ಪೇಟೆ ಹೇಳಿಕೊಂಡಿದ್ದಾರೆ.


Click it and Unblock the Notifications











