ಸಮರ್ಥನೆಯೊಂದಿಗೆ 'ಅಪ್ಪಟ ಕನ್ನಡಿಗರ' ಕ್ಷಮೆ ಕೋರಿದ 'ಕಾಮಿಡಿ ಕಿಲಾಡಿಗಳು' ನಯನಾ
ಫೇಸ್ಬುಕ್ನಲ್ಲಿ ಇಂಗ್ಲಿಷ್ ಪೋಸ್ಟ್ ಹಾಕಿದ್ದಕ್ಕೆ ಪ್ರಶ್ನಿಸಿದ್ದ ವ್ಯಕ್ತಿಗೆ ಅವಾಚ್ಯವಾಗಿ ನಿಂದಿಸಿ ವಿವಾದ ಸೃಷ್ಟಿಸಿದ್ದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟಿ ನಯನಾ ಕ್ಷಮೆ ಕೋರಿದ್ದಾರೆ. ಈ ವಿವಾದಕ್ಕಾಗಿ 'ಅಪ್ಪಟ ಕನ್ನಡಿಗರ' ಕ್ಷಮೆ ಕೋರುವುದಾಗಿ ಹೇಳಿರುವ ನಯನಾ, ತಮ್ಮ ಕಾಮೆಂಟ್ಅನ್ನು ಸಮರ್ಥಿಸಿಕೊಂಡಿದ್ದು ತಮ್ಮ ಕನ್ನಡ ಪ್ರೀತಿಯ ಬಗ್ಗೆ ವಿವರಣೆ ನೀಡಿದ್ದಾರೆ.
Recommended Video
ವಿಡಿಯೋ ಒಂದನ್ನು ಶೇರ್ ಮಾಡಿರುವ ನಯನಾ, 'ಎಲ್ಲ ಅಪ್ಪಟ ಕನ್ನಡಿಗರಿಗೆ ಕ್ಷಮೆ ಕೋರುತ್ತೇನೆ. ಒಂದು ಇಂಗ್ಲಿಷ್ ಪುಸ್ತಕದ ಹಿಂದೆ ಬರೆದಿದ್ದ ಸಾಲುಗಳನ್ನು ಪೋಸ್ಟ್ನಲ್ಲಿ ಹಾಕಿದ್ದೆ. ಅದು ಕನ್ನಡಕ್ಕೆ ಅನುವಾದಿಸುವಷ್ಟು ಅನುಕೂಲಗಳು ಇರಲಿಲ್ಲ. ಹಾಗಾಗಿ ಇಂಗ್ಲಿಷ್ನಲ್ಲಿ ಹಾಕಿದ್ದೆ. ಅದಕ್ಕೆ ವೆಂಕಟೇಶ್ ಎಂಬುವವರು 'ಬೆಳೆಯುವವರೆಗೆ ಮಾತ್ರ ಕನ್ನಡ ಬೇಕು, ಬೆಳೆದ ಬಳಿಕ ನಿಮಗೆ ಇಂಗ್ಲಿಷ್ ಬೇಕಾ' ಕಾಮೆಂಟ್ ಮಾಡಿದ್ದರು ಎಂದು ವಿವರಣೆ ನೀಡಿದ್ದಾರೆ. ಮುಂದೆ ಓದಿ...

ವೈಯಕ್ತಿಕವಾಗಿ ನೋವಾಯ್ತು
ನಾನು ಯಾವುದೇ ಚಾನೆಲ್ಗೆ ಹೋದರೂ, ಸಿನಿಮಾಗಳಲ್ಲಿ ನಟಿಸಿದಾಗಲೂ ನಾನು ಇಂಗ್ಲಿಷ್ನವಳು, ನಾನು ಇಂಗ್ಲಿಷ್ಗೆ ಹುಟ್ಟಿದವಳು, ಇಂಗ್ಲಿಷ್ ವ್ಯಾಮೋಹ ಜಾಸ್ತಿ ಎಂದು ಹೇಳಿಕೊಂಡಿಲ್ಲ. ಹೇಳಿಕೊಳ್ಳುವುದೂ ಇಲ್ಲ. ನಾವು ಕನ್ನಡಿಗರು, ನಮಗೆ ನಮ್ಮ ಬೆಲೆ ಏನು ಎಂದು ಚೆನ್ನಾಗಿ ಗೊತ್ತು. ಎಲ್ಲಿ ಅದನ್ನು ಬಳಸಬೇಕು ಎಂದು ಗೊತ್ತಿದೆ. ಕನ್ನಡವನ್ನು ಅವಶ್ಯಕತೆ ಎಂದು ಎಲ್ಲಿಯೂ ಬಳಸಿಲ್ಲ. ಅದನ್ನು ಅಧಿಕಾರ ಎಂದು ಬಳಸಿದ್ದೇವೆ. ಆ ಕಾಮೆಂಟ್ ಹಾಕಿದ್ದು ವೈಯಕ್ತಿಕವಾಗಿ ಹರ್ಟ್ ಆಯ್ತು. ಅದಕ್ಕಾಗಿ ಅವರಿಗೆ ಅಪ್ಪ ಕನ್ನಡ ಅಭಿಮಾನಿ ಮುಚ್ಕೊಂಡು ನಿನ್ನ ಕೆಲಸ ನೋಡು ಎಂದು ಹಾಕಿದ್ದೇ ಹೊರತು ಅವರು ಕನ್ನಡದ ಅಭಿಮಾನಿ ಎಂದು ಅಲ್ಲ.

ಕನ್ನಡದ ಅಭಿಮಾನಿ ಎಂದು ಬೈದಿಲ್ಲ...
ಅವನು ಕ್ರೇಜ್ಗಾಗಿ, ನಾಲ್ಕು ಜನ ಅವನನ್ನು ಫಾಲೋ ಮಾಡುತ್ತಾರೆ ಎಂಬ ಕಾರಣಕ್ಕೆ ಆ ರೀತಿ ಕಾಮೆಂಟ್ ಹಾಕಿದಂತೆ ಇದೆ. ನೀನು ಅದನ್ನು ಕನ್ನಡದಲ್ಲಿಯೇ ಕಾಮೆಂಟ್ ಮಾಡಿದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಕನ್ನಡ ಅಭಿಮಾನಿ ಎಂದು. ನಾನು ಆ ಕಾರಣಕ್ಕೆ ಹಾಗೆ ಕಾಮೆಂಟ್ ಮಾಡಿದ್ದೆನೇ ವಿನಾ ಆತ ಕನ್ನಡದ ಅಭಿಮಾನಿ ಎಂದು ಮುಚ್ಕೊಂಡು ಇರು ಎಂದಿಲ್ಲ. ನಾನು ಈ ಮುಂಚೆ ಕೆಲವು ವಿಡಿಯೋ ಅಪ್ಲೋಡ್ ಮಾಡಿದಾಗ 'ಫೇಸ್ ಬುಕ್ ರೂಲರ್ಸ್' ಅವಾಚ್ಯ ಶಬ್ಧ ಬಳಸಿದ್ದರು. ದುರಹಂಕಾರ ಜಾಸ್ತಿ, ಕೊಬ್ಬು ಜಾಸ್ತಿ ಎಂದರು. ನನಗೆ ಎಲ್ಲಿ ಅಹಂಕಾರ ಜಾಸ್ತಿಯಾಗಿದೆಯೋ ಗೊತ್ತಿಲ್ಲ.

ಚಿಕ್ಕ ಪುರಾವೆ ತೋರಿಸಿ
ನೀವು ಬಳಸುವ ಪದವನ್ನು ಇತಿಮಿತಿಯಲ್ಲಿ ಬಳಸಿದರೆ ನಾನೂ ಇತಿಮಿತಿಯಲ್ಲಿ ಬಳಸುತ್ತೇನೆ. ಯಾಕೆ ಎಂದರೆ ನನ್ನಷ್ಟೇ ವಯಸ್ಸಿನ ಹೆಣ್ಣುಮಕ್ಕಳು ನಿಮ್ಮ ಮನೆಯಲ್ಲಿ ಇರುತ್ತಾರೆ. ನಾನು ಕನ್ನಡ ನಿರ್ಲಕ್ಷ್ಯಮಾಡಿದ್ದರೆ ಅದಕ್ಕೆ ಒಂದು ಚಿಕ್ಕ ಪ್ರೂಫ್ ತೋರಿಸಿ. ಇಲ್ಲದಿದ್ದರೆ ದಯವಿಟ್ಟು ಯಾರೂ ಹಾಗೆ ಕಾಮೆಂಟ್ ಮಾಡಬೇಡಿ. ಸಾರ್ವಜನಿಕರಿಗೆ ಸ್ವಲ್ಪ ಪರಿಚಯ ಇರೋ ಮುಖಗಳಾಗಿ ನಾವು ಏನಾದರೂ ಕಾಮೆಂಟ್ ಮಾಡಿದರೆ ಅದು ದೊಡ್ಡ ವಿವಾದವಾಗುತ್ತದೆ. ಬೇಗ ಹರಡುತ್ತದೆ. ದೊಡ್ಡ ವ್ಯಕ್ತಿಗಳೆಂದು ಹೇಳುತ್ತಿಲ್ಲ. ಈಗಿನ ಜನರೇಷನ್ನಲ್ಲಿ ದಿನ ಮಾತನಾಡುವಾಗ ಇಂಗ್ಲಿಷ್ ಪದಗಳನ್ನು ಬಳಸುತ್ತಾರೆ. ಅದನ್ನು ಊಟಕ್ಕೆ ಉಪ್ಪಿನಕಾಯಿ ರೀತಿ ಬಳಸುತ್ತೇವೆಯೇ ವಿನಾ, ಇಂಗ್ಲಿಷ್ ಅವಶ್ಯಕತೆ ಎಂದು ಬಳಸುತ್ತಿಲ್ಲ.

ಅಪ್ಪಟ ಅಭಿಮಾನಿಗಳಿಗೆ ಮಾತ್ರ ಕ್ಷಮೆ
ನಾನೂ ಕನ್ನಡ ಶಾಲೆಯಲ್ಲಿ ಓದಿರೋದ್ರಿಂದ ಅದರ ಮೇಲೆ ಅಭಿಮಾನ ಮತ್ತು ಅಧಿಕಾರವಿದೆ. ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ, ಕನ್ನಡದ ಅಪ್ಪಟ ಅಭಿಮಾನಿಗಳಿಗೆ ಮಾತ್ರ. ನನ್ನ ಕಡೆಯಿಂದ ತಪ್ಪಾಗಿದ್ದರೆ ಕ್ಷಮಿಸಬೇಕು. ಯಾರೆಲ್ಲ ಕಾಮೆಂಟ್ ಸೆಕ್ಷನ್ನಲ್ಲಿ ಅವಾಚ್ಯ ಶಬ್ಧಗಳಿಂದ ರಿಪ್ಲೈ ಮಾಡಿದ್ದೀರಿ, ಅಂತಹವಳು ಇಂತಹವಳು ಎಂದಿದ್ದೀರಿ. ಅಂತಹವರಿಗೆಲ್ಲ ಉತ್ತರ ನೀಡಲೆಂದೇ ಒಬ್ಬರು ಸಹಾಯ ಮಾಡುವುದಾಗಿ ಹೇಳಿದ್ದಾರೆ. ಅದನ್ನು ಅವರು ನೋಡಿಕೊಳ್ಳುತ್ತಾರೆ. ಆ ಧೈರ್ಯದಿಂದಲೇ ವಿಡಿಯೋ ಮಾಡಿ ಹೇಳುತ್ತಿದ್ದೇನೆ. ನಿಮ್ಮ ಕಡೆಯಿಂದ ಏನು ತಪ್ಪಾಗಿದೆ ದಯವಿಟ್ಟು ಅದನ್ನು ಅರ್ಥ ಮಾಡಿಕೊಳ್ಳಿ.

ನಿಮ್ಮ ಅಭಿಮಾನ ಗೊತ್ತಾಗುತ್ತಿದೆ
ಆದಷ್ಟು ನಮ್ಮಂತಹ ಕಲಾವಿದರ ವೈಯಕ್ತಿಕ ಬದುಕಿನ ಬಗ್ಗೆ ಮೂಗು ತೂರಿಸುವುದು ಬೇಡ. ನೀವು ಅಭಿಮಾನಿಗಳು ನಿಜ, ನೀವು ಏನು ಹೇಳಿದರೂ ನಾವು ಕೇಳಬೇಕು ನಿಜ. ನಿಮ್ಮಿಂದ ನಾವು ಅನ್ನ ಹುಟ್ಟಿಸಿಕೊಂಡು ತಿನ್ನುತ್ತಿದ್ದೇವೆ. ಆ ವಿಚಾರವನ್ನು ಯಾವತ್ತೂ ತಲೆಯಲ್ಲಿ ಇಟ್ಟುಕೊಂಡಿರುತ್ತೇವೆ. ಅಂದಮಾತ್ರಕ್ಕೆ ನೀವು ಏನು ಬೇಕಾದರೂ ಹೇಳಬಹುದು ಎಂದಲ್ಲ. ನಮ್ಮತನ ಬಿಟ್ಟುಕೊಡಲು ಸಾಧ್ಯವಿಲ್ಲ. ನಮಗೂ ಕನ್ನಡದ ಬಗ್ಗೆ ಅಭಿಮಾನವಿದೆ. ತುಂಬಾ ಜನ ಅವಾಚ್ಯ ಶಬ್ಧಗಳಿಂದ ಬೈದಿದ್ದೀರಲ್ಲ. ನಿಮ್ಮ ಅಭಿಮಾನ ಏನು ಎನ್ನುವುದು ಇದರಲ್ಲಿ ಗೊತ್ತಾಗುತ್ತದೆ ಎಂದಿದ್ದಾರೆ.

ವಿವಾದದ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ
ಕನ್ನಡಿಗರು ಸಾಧ್ಯವಾದಷ್ಟು ಕನ್ನಡವನ್ನ ಬರಿಮಾತಿನಲ್ಲೆ ಆಡದೆ ಬರವಣಿಗೆಯಲ್ಲು ಬರೆಯಲು ಯತ್ನಿಸಬೇಕು! ನಾವೇ ನಮ್ಮ ಭಾಷೆ ಉಳಿಸದಿದ್ದರೆ ಮುಂದಿನ ಪೀಳಿಗೆ ಸಂಪೂರ್ಣ ಮರೆಯುತ್ತೆ! ಬರಿ ಓದು ಬರಹವಲ್ಲಾ ಕನ್ನಡದ ಸಾಹಿತ್ಯ, ಪತ್ರಿಕೆ, ಸಿನಿಮಾ ಸಂಸ್ಕೃತಿಯನ್ನು ಉಳಿಸಬೇಕು. ಆಗಲೆ ಸಾರ್ಥಕ ಕನ್ನಡ ಪ್ರೇಮ. ಇಲ್ಲದಿದ್ದರೆ ಪ್ರಚಾರಕ್ಕೆ ಮಾತ್ರ ಸೀಮಿತ ಅನಿಸಿಕೆ ಎಂದು 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ನಟ ಜಗ್ಗೇಶ್, ನಯನಾ ವರ್ತನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಎಚ್ಚರಿಕೆಯಿಂದ ಉತ್ತರಿಸಬೇಕು
ಈಕೆ ಇನ್ನು ಸೊಸೆ. ಅನುಭವದ ಅತ್ತೆಯಾಗಲು ಕಾಯಬೇಕು. ನಮ್ಮ ಕಾಲದಲ್ಲಿ ದಿನ ಹಾಗು ವಾರದ ಪತ್ರಿಕೆಯಲ್ಲಿ ಪ್ರತಿಕ್ರಿಯೆ ಬರುತ್ತಿತ್ತು. ಇಂದು ಅಂಗೈಯಲ್ಲಿ ಅಭಿಪ್ರಾಯ ಕುಟ್ಟುವ ಕೊಟ್ಯಾಂತರ ಪತ್ರಕರ್ತರಿದ್ದಾರೆ. ಹಾಗಾಗಿ ಎಚ್ಚರವಾಗಿ ಉತ್ತರಿಸಬೇಕು. ಇಲ್ಲದಿದ್ದರೆ ಗಮನಿಸದೆ ಮುಂದೆ ಹೋಗಬೇಕು. ಅನ್ಯರಿಗೆ ಉತ್ತರಿಸಿ ಕೂತರೆ ನಮ್ಮಗುರಿ ಶೂನ್ಯ. ಸಮಯವ್ಯರ್ಥ ಎಂದಿದ್ದಾರೆ ಜಗ್ಗೇಶ್.


Click it and Unblock the Notifications











