'ಶತಮಾನಕೊಬ್ಬ ಹಾಸ್ಯ ಚಕ್ರವರ್ತಿಯ ಶತಮಾನೋತ್ಸವ':ನರಸಿಂಹರಾಜು ಜನ್ಮ ಶತಮಾನೋತ್ಸವ ಸಂಭಮಾಚರಣೆ
ಜುಲೈ 24ರಂದು ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ದಿವಂಗತ ಟಿ.ಆರ್ ನರಸಿಂಹರಾಜು ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ವಿಶೇಷ ಅಂದರೆ, ಇದು ನರಸಿಂಹರಾಜು ಅವರ 100ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ಹೀಗಾಗಿ ನರಸಿಂಹರಾಜು ಕುಟುಂಬಸ್ಥರು ಈ ವಿಶೇಷ ಸಂದರ್ಭವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ತೀರ್ಮಾನಿಸಿದೆ. ಈ ಸಂಭ್ರಮವನ್ನು 'ಶತಮಾನಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ' ಎಂದು ಆಚರಣೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಇದರ ಜೊತೆ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಚರಿಸಲು ನರಸಿಂಹರಾಜು ಕುಟುಂಬದವರು ಹಾಗೂ ಅಭಿಮಾನಿಗಳು ನಿರ್ಧಾರ ಮಾಡಿಕೊಂಡಿದ್ದಾರೆ. ಈ ಸಂಬಂಧ ಹುಟ್ಟುಹಬ್ಬದ ದಿನದಂದೇ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ ಆರ್ ಕೆ ವಿಶ್ವನಾಥ್, ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಎನ್ ಸುಬ್ರಹ್ಮಣ್ಯ ಹಾಗೂ ಹಿರಿಯನಟ ಬೆಂಗಳೂರು ನಾಗೇಶ್ ಸೇರಿದಂತೆ ವಿವಿಧ ಗಣ್ಯರು ಭಾಗಿಯಾಗಿದ್ದರು. ಈ ವೇಳೆ ನರಸಿಂಹರಾಜು ಜನ್ಮ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ನರಸಿಂಹರಾಜು ಮೊಮ್ಮಕ್ಕಳಾದ ಅರವಿಂದ್ ಹಾಗೂ ಅವಿನಾಶ್ ಸಹ ಉಪಸ್ಥಿತರಿದ್ದರು.
'ಶತಮಾನಕ್ಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ' ಒಂದು ದಿನ ಅಥವಾ ಒಂದು ತಿಂಗಳಿಗೆ ಸೀಮಿತವಾಗಿಲ್ಲ. ಈ ಕಾರ್ಯಕ್ರಮಗಳು ವರ್ಷ ಪೂರ್ತಿ ನಡೆಯಲಿವೆ. ಅಲ್ಲದೆ ನರಸಿಂಹರಾಜು ಹೆಸರಿನಲ್ಲಿ ಮೂರು ಪ್ರಶಸ್ತಿಗಳನ್ನು ನೀಡಲು ಕುಟುಂಬ ನಿರ್ಧರಿಸಿದೆ. ದೊಡ್ಡ ಮಟ್ಟಕ್ಕೆ ಸಮಾರಂಭ ಮಾಡಿ ಈ ಪ್ರಶಸ್ತಿಗಳನ್ನು ನೀಡುವುದಕ್ಕೆ ತೀರ್ಮಾನ ಮಾಡಲಾಗಿದೆ.
ಮೊದಲ ಕಾರ್ಯಕ್ರಮವಾಗಿ ನರಸಿಂಹರಾಜು ಸಿನಿಮಾ ಕೊಡುಗೆಯನ್ನು ಯುವಜನತೆಗೆ ತಲುಪಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಹಾಗಾಗಿ ಹನ್ನೆರಡು ಜನರ ತಂಡ ಎರಡು ಟ್ರಕ್ಗಳ ಮೂಲಕ ಕರ್ನಾಟಕದ 32 ಜಿಲ್ಲೆಗಳ ಕೆಲವು ಕಾಲೇಜುಗಳಿಗೆ ಭೇಟಿ ನೀಡಲಿದೆ. ಎಲ್ಇಡಿ ಮೂಲಕ ಹಾಸ್ಯ ದಿಗ್ಗಜನ ಸಾಧನೆಯನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತೆ. ಆ ಬಳಿಕ ನರಸಿಂಹರಾಜು ಕುರಿತು ವಿದ್ಯಾರ್ಥಿಗಳಿಗೆ ಕ್ವಿಜ್ ಅನ್ನು ಹಮ್ಮಿಕೊಳ್ಳಿದೆ.
'ಶತಮಾನಕ್ಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ' ಕಾರ್ಯಕ್ರಮದ ಅಡಿಯಲ್ಲಿಯೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಾಸ್ಯದ ಕುರಿತು ಕಿರುಚಿತ್ರೋತ್ಸವ ಆಯೋಜಿಸಲಾಗಿದೆ. ಕರ್ನಾಟಕದಾದ್ಯಂತ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನರಸಿಂಹರಾಜು ಅಭಿನಯದ ಹಾಸ್ಯ ನಾಟಕಗಳನ್ನು ಆಯೋಜನೆ ಮಾಡಲಿದೆ.
ಆ ಪ್ರಸಿದ್ದ ನಾಟಕ ಕಂಪನಿಗಳ ಮೂಲಕ ನರಸಿಂಹರಾಜು ಅವರ ಜನಪ್ರಿಯ ನಾಟಕಗಳನ್ನು ಅಹೋರಾತ್ರಿ ಆಯೋಜಿಸಲಿದೆ. ಆಗಸ್ಟ್ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಸಮಾರಂಭ ಹಮ್ಮಿಕೊಳ್ಳುವ ಪ್ಲಾನಿಂಗ್ ನಡೆಯುತ್ತಿದೆ. ಈ ಕಾರ್ಯಕ್ರಮಗಳು ಮುಂದಿನ ಆರು ತಿಂಗಳಲ್ಲಿ ನಡೆಯಲಿದೆ. ಮುಂದಿನ ಆರು ತಿಂಗಳ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಮೊಮ್ಮಗ ಅವಿನಾಶ್ ಹೇಳಿದ್ದಾರೆ.


Click it and Unblock the Notifications











