ಕೊಡಲ್ಲ ಅಂತಿದ್ದ ಕೋರಮಂಗಲದ ಪ್ರಾಪರ್ಟಿ ಅಪ್ಪುಗೆ ಕೊಟ್ಟಿದ್ದ ಕಾನ್ಫಿಡೆಂಟ್ ಗ್ರೂಪ್ ಮಾಲೀಕ: ಈ ಆಸ್ತಿಯ ಕಥೆಯೇನು?
ಇತ್ತೀಚೆಗೆ ಕಾನ್ಫಿಡೆಂಟ್ ಗ್ರೂಪ್ನ ಮಾಲೀಕ ಡಾ.ಸಿಜೆ ರಾಯ್ ಆತ್ಮ*ಹತ್ಯೆಗೆ ಶರಣಾಗಿದ್ದರು. ಇದು ರಿಯಲ್ ಎಸ್ಟೇಟ್ ಲೋಕವನ್ನೇ ಬೆಚ್ಚಿ ಬೀಳಿಸಿತ್ತು. ಇಲ್ಲಿವರೆಗೂ ಡಾ.ಸಿಜೆ ರಾಯ್ ಅವರ ಸಾವಿನ ಬಗ್ಗೆ ನಿಖರವಾದ ಕಾರಣವೇನು ಅನ್ನೋದು ತಿಳಿದು ಬಂದಿಲ್ಲ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಆತ್ಮ*ಹತ್ಯೆಗೆ ಕಾರಣಗಳನ್ನು ಹುಡುಕುತ್ತಿದ್ದಾರೆ. ಇದೊಂದು ಕಡೆಯಾದರೆ, ಈ ಹಿಂದೆ ಸಿಜೆ ರಾಯ್ ನೀಡಿದ್ದ ಸಂದರ್ಶನವೊಂದು ವೈರಲ್ ಆಗುತ್ತಿದೆ.
ಡಾ.ಸಿಜೆ ರಾಯ್ ಅವರಿಗೆ ರಿಯಲ್ ಎಸ್ಟೇಜ್ ಅಷ್ಟೇ ಅಲ್ಲ. ಚಿತ್ರರಂಗದ ಗಣ್ಯರೊಂದಿಗೆ ಕೂಡ ಅಷ್ಟೇ ಆತ್ಮೀಯ ಒಡನಾಟವಿತ್ತು. ತಮ್ಮ ಬ್ಯುಸಿನೆಸ್ ಜೊತೆಗೆ ಸಿನಿಮಾ ತಾರೆಯರೊಂದಿಗೂ ಗುರುತಿಸಿಕೊಂಡಿದ್ದರು. ಸ್ಟಾರ್ಗಳಿಗೆ ತಮ್ಮ ಪ್ರಾಪರ್ಟಿಯನ್ನು ಮಾರುತ್ತಿದ್ದರು. ಅವರೊಂದಿಗೆ ಖರೀದಿ ಮಾಡುತ್ತಿದ್ದರು. ಈ ಹಳೆಯ ಸಂದರ್ಶನದಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ಗೆ ತಮ್ಮ ಪ್ರಾಪರ್ಟಿಯನ್ನು ಮಾರಿದ್ದ ಸಂಗತಿಯನ್ನು ಹಂಚಿಕೊಂಡಿದ್ದರು.

ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ಆಲ್ರೌಂಡರ್ ಕ್ಲಿಪ್ಸ್ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದರು. ಇದರಲ್ಲಿ ತಮ್ಮ ಮಗಳಿಗೆ ಅಂತ ಖರೀದಿಸಿದ್ದ ಪ್ರಾಪರ್ಟಿಯನ್ನು ಪುನೀತ್ ರಾಜ್ಕುಮಾರ್ಗೆ ಕೊಟ್ಟಿದ್ದು ಏಕೆ? ಅಪ್ಪು ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಇಬ್ಬರೂ ಬಂದು ಭೇಟಿ ಮಾಡಿದಾಗ ಏನು ನೀಡಿತು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಕೋರಮಂಗಲ ಪ್ರಾಪರ್ಟಿ ಕೊಟ್ಟಿದ್ದೇಕೆ?
ಇದು 2000ನೇ ಇಸವಿಯ ಮಾತು. ಆಗ ಪುನೀತ್ ರಾಜ್ಕುಮಾರ್ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದರಷ್ಟೇ. ಈ ವೇಳೆ ಕಾನ್ಪಿಡೆಂಟ್ ಗ್ರೂಪ್ನ ಮಾಲೀಕರಾಗಿದ್ದ ಡಾ. ಸಿಜೆ ರಾಯ್ ಕೋರಮಂಗಲದ ಪ್ರಮುಖ ರಸ್ತೆಯಲ್ಲಿ ಅವರ ಮಗಳಿಗಾಗಿ ಪ್ರಾಪರ್ಟಿಯನ್ನು ಖರೀದಿ ಮಾಡಿದ್ದರು. ಯಾರಿಗೂ ಕೊಡುವುದೇ ಇಲ್ಲ ಎಂದು ಇಟ್ಟಿದ್ದ ಪ್ರಾಪರ್ಟಿಯನ್ನು ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಮಾರಿದ್ದರು. ಅದ್ಯಾಕೆ ಅನ್ನೋದನ್ನು ಈ ಸಂದರ್ಶನದಲ್ಲಿ ಹೇಳಿದ್ದಾರೆ.
"2000 ಇರಬೇಕು. ಪುನೀತ್ ಅವರು ತುಂಬಾನೇ ಅದ್ಭುತ ವ್ಯಕ್ತಿ. ಅವರು ತುಂಬಾನೇ ಸಿಂಪಲ್ ವ್ಯಕ್ತಿತ್ವ ಇರುವವರು. ನಾನು ನನ್ನ ಮಗಳಿಗೆ ಕೋರಮಂಗಲ ಮೈನ್ ರೋಡ್ನಲ್ಲಿ ಒಂದು ಪ್ರಾಪರ್ಟಿ ತೆಗೆದುಕೊಂಡಿದ್ದೆ. ನನ್ನಿಂದ ಆ ಪ್ರಾಪರ್ಟಿಯನ್ನು ಕೊಡಿಸುತ್ತೇನೆ ಅಂತ ನನಗೆ ಪ್ರಾಪರ್ಟಿ ಕೊಡಿಸಿದ್ದ ಬ್ರೋಕರ್ ಪುನೀತ್ ಅವರಿಂದ ಕಮಿಟ್ ಆಗಿದ್ದ. ಪುನೀತ್ ಹಾಗೂ ಅಶ್ವಿನಿ ಅವರು ಕೋರಮಂಗಲ ಮನೆಗೆ ಬಂದಿದ್ದರು. ನಾನು ಆ ಪ್ರಾಪರ್ಟಿಯನ್ನು ಮಾರಾಟ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ ಅವರಿಬ್ಬರಲ್ಲಿ ಇರುವ ವಿನಯತೆ ನೋಡಿ ಮೊದಲ ಮೀಟಿಂಗ್ನಲ್ಲಿ ಓಕೆ ಆಗಿ ಹೋಯ್ತು. ಒಬ್ಬ ಸ್ಟಾರ್ ಆಗಿ ಇಷ್ಟು ಸರಳವಾಗಿ ಇರಬಹುದಾ ಅನಿಸ್ತು. ಅವರು ಹಾಗೂ ಅಶ್ವಿನಿಯವರ ಮಾತುಕತೆ ಅಷ್ಟು ಸರಳವಾಗಿತ್ತು." ಎಂದಿದ್ದಾರೆ.

ಅಣ್ಣಾವ್ರು ಅಡ್ವಾನ್ಸ್ ಕೊಟ್ಟಿದ್ದರು
ಪ್ರಾಪರ್ಟಿ ಡೀಲ್ ಓಕೆ ಆದ್ಮೇಲೆ ಪುನೀತ್ ಹಾಗೂ ಅಶ್ವಿನಿ ಇಬ್ಬರೂ ಅಣ್ಣಾವ್ರ ಕೈಯಿಂದ ಅಡ್ವಾನ್ಸ್ ಕೊಡಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. "ಪುನೀತ್ ಹಾಗೂ ಅಶ್ವಿನಿಯವರು ಅಡ್ವಾನ್ಸ್ ಕೊಡುವುದಕ್ಕೆ ಅಪ್ಪಾಜಿ (ರಾಜ್ಕುಮಾರ್) ಹತ್ತಿರ ಕರೆದುಕೊಂಡು ಹೋದರು. ಹಾಗೇ ಅಮ್ಮ (ಪಾರ್ವತಮ್ಮ ರಾಜ್ಕುಮಾರ್) ಇದ್ದರು. ಇವರೆಲ್ಲರ ಪ್ರೀತಿಯನ್ನು ನೋಡಿದ ಮೇಲೆ ನಾನು ಆ ಪ್ರಾಪರ್ಟಿಯನ್ನು ಮಾರಾಟ ಮಾಡುವುದಕ್ಕೆ ಒಪ್ಪಿದೆ." ಎಂದು ಹೇಳಿದ್ದರು.
ಇಷ್ಟೇ ಅಲ್ಲದೆ ಆ ಪ್ರಾಪರ್ಟಿಯನ್ನು ಲಾಭಕ್ಕೂ ಮಾರಿರಲಿಲ್ಲ ಡಾ. ಸಿಜೆ ರಾಯ್. "ನಾನು ಆಪ್ರಾಪರ್ಟಿ ಮೇಲೆ ಲಾಭವನ್ನು ತೆಗೆದುಕೊಂಡಿಲ್ಲ. ಎಷ್ಟಕ್ಕೆ ತೆಗೆದುಕೊಂಡಿದ್ದೆನೋ ಅಷ್ಟಕ್ಕೆ ಕೊಟ್ಟು ಬಿಟ್ಟೆ. ಕೆಲವರ ವ್ಯಕ್ತಿತ್ವದಿಂದ ಅವರನ್ನು ಇಷ್ಟ ಪಡುವುದಕ್ಕೆ ಶುರು ಮಾಡುತ್ತೇವೆ. ಎಷ್ಟೋ ಬಾರಿ ಯಾರಿಗೂ ಕೊಡುವುದಿಲ್ಲ ಅಂತ ಹೇಳಿದವರು ನನಗೆ ಅವರ ಜಮೀನನನ್ನು ಕೊಟ್ಟಿದ್ದಾರೆ." ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.


Click it and Unblock the Notifications











