'ಬಾಸ್' ಸಿನಿಮಾ ರಿಲೀಸ್ ಸದ್ಯಕ್ಕಿಲ್ಲ; ನಟ ದರ್ಶನ್ ವರ್ಸಸ್ ನಿರ್ಮಾಪಕರ ಪರ ವಕೀಲರ ವಾದ-ವಿವಾದ ಹೇಗಿತ್ತು?
ಸ್ಯಾಂಡಲ್ವುಡ್ನ ವಿವಾದಾತ್ಮಕ ಸಿನಿಮಾ 'ಬಾಸ್' ಎಲ್ಲಾ ಸರಿಯಿದ್ದಿದ್ದರೆ ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಸಿನಿಮಾ ರಿಲೀಸ್ ಮಾಡುವುದಕ್ಕೆ ಕಾನೂನು ಸಮರವನ್ನು ಸಾರಬೇಕಾಗಿದೆ. ಅದಕ್ಕೆ ಕಾರಣ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ. ಈ ಸಿನಿಮಾ ತುಣುಕುಗಳು ರೇಣುಕಾಸ್ವಾಮಿ ಪ್ರಕರಣವನ್ನು ಪ್ರತಿಬಿಂಬಿಸುವಂತೆ ಇವೆ. ಹೀಗಾಗಿ ರಿಲೀಸ್ಗೆ ಅನುಮತಿ ನೀಡಬಾರದೆಂದು ವಿಜಯಲಕ್ಷ್ಮಿ ದರ್ಶನ್ ಕೋರ್ಟ್ ಮೊರೆ ಹೋಗಿದ್ದಾರೆ.
ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ 'ಬಾಸ್' ಸಿನಿಮಾ ತಂಡ ಮತ್ತೊಂದು ಕಡೆ ಈ ವಿವಾದದ ವಿರುದ್ಧ ನ್ಯಾಯಾಲಯದಲ್ಲಿ ಸಮರ ಸಾರಿದ್ದಾರೆ. ಸಿನಿಮಾ ಬಿಡುಗಡೆ ಈಗ ಹೈವೋಲ್ಟೇಜ್ ಜಟಾಪಟಿಗೆ ಕಾರಣವಾಗಿದೆ. ಸ್ಯಾಂಡಲ್ವುಡ್ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ ಎಂದು ತೀವ್ರ ಕುತೂಹಲ ಮೂಡಿಸಿರುವ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಶುಕ್ರವಾರಕ್ಕೆ (ಜುಲೈ 3) ಮುಂದೂಡಿದೆ.

'ಬಾಸ್' ವಿವಾದವೇನು?
ವಿ.ಲವ ನಿರ್ದೇಶನದ 'ಬಾಸ್' ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ಈ ಸಿನಿಮಾವೀಗ ಗಂಭೀರ ವಿವಾದ ಮತ್ತು ಕಾನೂನು ಸಂಕಷ್ಟಗಳನ್ನು ಎದುರಿಸುತ್ತಿದೆ. 'ಬಾಸ್' ಸಿನಿಮಾ ತುಣುಕುಗಳು ತೆರೆಕಂಡ ಬಳಿಕ ದರ್ಶನ್ ಕುಟುಂಬ ಆಕ್ಷೇಪ ವ್ಯಕ್ತಪಡಿಸಿತ್ತು. "ಈ ಸಿನಿಮಾದ ಕಥೆ ತಮ್ಮ ಘನತೆಗೆ ಧಕ್ಕೆ ತರುತ್ತದೆ" ಎಂದು ದರ್ಶನ್ ತೂಗುದೀಪ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಬೆಂಗಳೂರಿನ 17ನೇ ಸಿಟಿ ಸಿವಿಲ್ ಕೋರ್ಟ್ ವಿಜಯಲಕ್ಷ್ಮಿ ಅವರ ಅರ್ಜಿಯನ್ನು ಪುರಸ್ಕರಿಸಿ ಸಿನಿಮಾ ಬಿಡುಗಡೆಗೆ ತಡೆ ನೀಡಿತ್ತು. ಬಳಿಕ ಸಿವಿಲ್ ಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು. ಈ ಬೆನ್ನಲ್ಲೇ ಸಿನಿಮಾ ರಿಲೀಸ್ಗೆ ರೆಡಿಯಾಗುತ್ತಿದ್ದಂತೆ ದರ್ಶನ್ ದಂಪತಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ ಅಲ್ಲೀಗ ವಾದ-ಪ್ರತಿವಾದಗಳು ನಡೆಯುತ್ತಿದೆ.
ಕೋರ್ಟ್ನಲ್ಲಿ ಎರಡೂ ಕಡೆ ವಕೀಲರ ವಾದ-ಪ್ರತಿವಾದ
'ಬಾಸ್' ಸಿನಿಮಾ ವಿವಾದದ ವಿಚಾರಣೆಯಲ್ಲಿ ಎರಡೂ ಕಡೆಯ ಪರವಾಗಿ ಹಿರಿಯ ವಕೀಲರು ವಾದ-ಪ್ರತಿವಾವನ್ನು ಮಂಡಿಸಿದ್ದಾರೆ. ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಪರವಾಗಿ ಹಿರಿಯ ವಕೀಲರಾದ ಶ್ಯಾಮ್ ಸುಂದರ್ ವಾದ ಮಂಡಿಸುತ್ತಿದ್ದಾರೆ. ಇತ್ತ 'ಬಾಸ್' ಸಿನಿಮಾ ತಂಡದ ಪರವಾಗಿ ಹಿರಿಯ ವಕೀಲರಾದ ಶ್ರೀ ವಿವೇಕ್ ಸುಬಾರೆಡ್ಡಿ ಅಖಾಡಕ್ಕೆ ಇಳಿದಿದ್ದಾರೆ. ಎರಡು ಕಡೆಯ ವಕೀಲರು ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಪ್ರಬಲ ವಾದವನ್ನು ಮಂಡಿಸಿದ್ದಾರೆ.
ವಾದ-ಪ್ರತಿವಾದ ಹೈಲೈಟ್ ಏನು?
ರೇಣುಕಾಸ್ವಾಮಿ ಪ್ರಕರಣವನ್ನು ಹೋಲುವಂತಹ ದೃಶ್ಯಗಳಿರುವ 'ಬಾಸ್' ಸಿನಿಮಾದ ಬಿಡುಗಡೆಯಿಂದ ತಮ್ಮ ಕಕ್ಷಿದಾರರಿಗೆ ತೊಂದರೆಯಾಗಲಿದೆ. ಹೀಗಾಗಿ ಸಿನಿಮಾದ ರಿಲೀಸ್ಗೆ ತಕ್ಷಣವೇ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಮೂರ್ತಿಗಳನ್ನು ದರ್ಶನ್ ಪರ ವಕೀಲರಾದ ಶ್ಯಾಮ್ ಸುಂದರ್ ಆಗ್ರಹಿಸಿದ್ದಾರೆ. ಅತ್ತ ಚಿತ್ರತಂಡದ ಪರ ಹಿರಿಯ ವಕೀಲರಾದ ವಿವೇಕ್ ಸುಬಾರೆಡ್ಡಿ ಅಷ್ಟೇ ಪ್ರಬಲ ಕಾರಣಗಳನ್ನು ನೀಡಿದ್ದಾರೆ. ದರ್ಶನ್ ಪರ ವಕೀಲರ ತಡೆಯಾಜ್ಞೆಯ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸಿ, ಸಿನಿಮಾ ಬಿಡುಗಡೆಗೆ ತಡೆ ನೀಡುವುದರಿಂದ ನಿರ್ಮಾಪಕರಿಗೆ ಭಾರಿ ನಷ್ಟವಾಗುತ್ತದೆ ಎಂದು ಪ್ರತಿವಾದ ಮಂಡಿಸಿದ್ದಾರೆ.
ಸದ್ಯಕ್ಕಿಲ್ಲ ರಿಲೀಸ್
ಎರಡೂ ಕಡೆಯ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ಗೌರವಾನ್ವಿತ ನ್ಯಾಯಾಧೀಶರು ಶುಕ್ರವಾರ (ಜುಲೈ 3)ಕ್ಕೆ ವಿಚಾರಣೆಯನ್ನು ಮುಂದೂಡಿದೆ. "ಈ ಹಂತದಲ್ಲಿ ಚಲನಚಿತ್ರದ ಬಿಡುಗಡೆಗೆ ಯಾವುದೇ ರೀತಿಯ ಮೌಖಿಕ ಮಧ್ಯಂತರ ತಡೆಯಾಜ್ಞೆಯನ್ನು ನೀಡಲು ಸಾಧ್ಯವಿಲ್ಲ" ಎಂದು ಕೋರ್ಟ್ ಸ್ಪಷ್ಟಪಡಿಸಿದೆ.ಆದರೆ, ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕವಾಗಿ ಬಿಡುಗಡೆಗೆ ಅವಕಾಶ ನೀಡಿಲ್ಲ. ಕಾನೂನು ಪ್ರಕ್ರಿಯೆಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವ ಉದ್ದೇಶದಿಂದ, ಮುಂದಿನ ವಿಚಾರಣೆಯ ವೇಳೆ 'ಬಾಸ್' ಚಿತ್ರತಂಡವು ತಮ್ಮ ವಾದಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ಹಾಗೂ ತ್ವರಿತವಾಗಿ ಮುಗಿಸಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.


Click it and Unblock the Notifications