"ಒಂದು ವರ್ಷ ಸುಮ್ನೆ ಕೂತಿಲ್ಲ.. ಮತ್ತೆ ಪ್ರೇಮಲೋಕ ಕಟ್ಟಿಕೊಡ್ತೀನಿ"; ಕ್ರೇಜಿಸ್ಟಾರ್ 'ಪ್ರೇಮಲೋಕ 2' ಆರಂಭ!
ಪ್ರತಿವರ್ಷದಂತೆ ಈ ಬಾರಿ ಕೂಡ ಹಂಪಿ ಉತ್ಸವ ಅದ್ಧೂರಿಯಾಗಿ ನಡೆದಿದೆ. ಈ ಉತ್ಸವದಲ್ಲಿ ಗಣ್ಯಾತೀಗಣ್ಯರು ಆಗಮಿಸಿ ಜನರನ್ನು ರಂಜಿಸಿದ್ದಾರೆ. ಹಂಪಿ ಬಗ್ಗೆ ಮಾತಾಡಿದ್ದಾರೆ. ಇದೇ ವೇಳೆ ಕನ್ನಡ ಚಿತ್ರರಂಗದ ದಿಗ್ಗಜರಿಗೂ ಆಹ್ವಾನ ನೀಡಲಾಗಿತ್ತು. ಹೀಗಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಹಂಪ ಉತ್ಸವದ ವಿಶೇಷ ಅತಿಥಿಯಾಗಿ ಬಂದಿದ್ದರು.
ಹಂಪಿ ಉತ್ಸವದಂತಹ ಮಹಾ ವೇದಿಕೆ ಮೇಲೆ ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಬಹಳ ದಿನಗಳಿಂದ ಇದ್ದ ಅವರ ಅಭಿಮಾನಿಗಳು ಆಸೆಯನ್ನು ಈಡೇರಿಸಲು ಮುಂದಾಗಿದ್ದಾರೆ. ಕಳೆದೊಂದು ವರ್ಷದಿಂದ ಮತ್ತೊಂದು ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿರೋದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ. ಈ ಮೂಲಕ 'ಪ್ರೇಮಲೋಕ 2' ಶೀಘ್ರದಲ್ಲಿಯೇ ಅನೌನ್ಸ್ ಆಗುತ್ತೆ ಅನ್ನೋ ಸುಳಿವು ನೀಡಿದ್ದಾರೆ. ಅಷ್ಟಕ್ಕೂ ವೇದಿಕೆ ಮೇಲೆ ಏನಂದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಅಪ್ಪ- ಅಪ್ಪು- ಅಪ್ಪುಗೆ ಬಗ್ಗೆ ಕ್ರೇಜಿ ಮಾತು
"ಪ್ರೇಮಲೋಕ ಸಿನಿಮಾ ಶುರು ಮಾಡಿದಾಗ, ಪಿಕ್ಚರ್ ನೋಡಿದ ತಕ್ಷಣ ನಮ್ಮ ಅಪ್ಪ ನನ್ನನ್ನು ತಬ್ಬಿಕೊಳ್ತಾರೆ. ತಬ್ಬಿಕೊಂಡು ನನ್ನ ಹಿಂದೆ ಅಳ್ತಾರೆ. ಇನ್ನೊಂದು ಅಪ್ಪುಗೆ ನಮ್ಮ ಅಪ್ಪುದು. ಯಾವಾಗಲೂ ಎದೆ ಮೇಲೆ ಬಂದು ಅಪ್ಪಿಕೊಳ್ಳುತ್ತಾರೆ. ಇವೆರಡು ಅಪ್ಪುಗೆ ಏನು ಹೇಳುತ್ತೆ ಅಂದರೆ, ಕಣ್ಣೀರು ಯಾವಾಗಲೂ ನಮ್ಮ ಹಿಂದೆ ಇರಬೇಕು. ನಗು ಯಾವಾಗಲೂ ಮುಂದೆ ಇರಬೇಕು. ಇದೇ ತುಂಬಾ ಮುಖ್ಯ ಜೀವನಕ್ಕೆ." ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ.
'ಪ್ರೇಮಲೋಕ' ಶುರುವಾಗಿ 37 ವರ್ಷ
"ಈ ಕಾರ್ಯಕ್ರಮ ಶುರುವಾಗಿ ಸುಮಾರು 36 ರಿಂದ 37 ವರ್ಷ ಆಗುತ್ತಿದೆ. ಪ್ರೇಮಲೋಕ ಶುರುವಾಗಿಯೂ 36 ರಿಂದ 37 ವರ್ಷ ಆಯ್ತು. ನಾನು ಹಂಪಿಗೆ ಬರೋದಕ್ಕೆ 36 ವರ್ಷ ತೆಗೆದುಕೊಳ್ತು. ಯಾವಾಗ ಬಂದಿದ್ದೇನೆ ಅಂದರೆ, ಮತ್ತೆ ಇನ್ನೊಂದು ಪ್ರೇಮಲೋಕ ಶುರು ಮಾಡಬೇಕು ಅಂತ ಕನಸು ಕಂಡಾಗ ಬಂದಿದ್ದೇನೆ. ಈ ಊರು ನನ್ನನ್ನು ಕರೆಸಿಕೊಂಡಿದೆ." ಎಂದು ಪ್ರೇಮಲೋಕ 2 ಬಗ್ಗೆ ರವಿಚಂದ್ರನ್ ಸುಳಿವು ನೀಡಿದ್ದಾರೆ.
"ನನ್ನನ್ನು ಪ್ರೇಮಲೋಕ ಬದುಕಿಸಿದೆ"
ಇದೇ ವೇಳೆ ಪ್ರೇಮಲೋಕ ಸಿನಿಮಾ ತನ್ನನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದೆ ಎಂದು ರವಿಚಂದ್ರನ್ ಹೇಳಿದ್ದಾರೆ. "ನಾನು ಏನಾದರೂ ಇಷ್ಟು ದೂರ ಟ್ರಾವೆಲ್ ಮಾಡಿದ್ದೀನಿ. 38 ವರ್ಷ ಆಯ್ತು ಪ್ರೇಮಲೋಕ ಮಾಡಿ, ಅದೊಂದು ಸಿನಿಮಾ ಇವತ್ತಿನವರೆಗೂ ಮೆಲುಕು ಹಾಕುತ್ತೆ ಅಂದರೆ, ನಾವು ಮಾಡುವ ಒಂದು ಒಳ್ಳೆಯ ಕೆಲಸ ಎಷ್ಟು ಬೇಕಾದರೂ ನಮ್ಮನ್ನು ಬದುಕಿಸುತ್ತೆ ಅನ್ನೋದಕ್ಕೆ ಪ್ರೇಮಲೋಕನೇ ಸಾಕ್ಷಿ." ಎಂದಿದ್ದಾರೆ.

"ಪ್ರೇಮಲೋಕಕ್ಕೆ 1.5 ಕೋಟಿ ಖರ್ಚು ಮಾಡಿದ್ದೆ"
"ನಾನು ಸಿನಿಮಾ ಮಾಡಿದಾಗ 10 ಲಕ್ಷ ರೂಪಾಯಿಗೆ ಒಂದು ಸಿನಿಮಾ ಮಾಡೋರು. ಅದು ಬಿಟ್ಟರೆ, ರಾಜ್ಕುಮಾರ್ ಅವರ ಸಿನಿಮಾ ಹೆಚ್ಚು ಖರ್ಚು ಆಗೋದು. ನಾನು ಅವತ್ತಿಗೆ ಒಂದು ಕಾಲು ಕೋಟಿ ಖರ್ಚು ಮಾಡಿದ್ದೆ. ನಮ್ಮ ಅಪ್ಪ ಬೆಡ್ರೂಮ್ಗೆ ಕರೆದು, ಇವನೊಬ್ಬ ವೈಟ್ ಎಲಿಫೆಂಟ್. ಇವನನ್ನು ಇಟ್ಕೊಂಡು ಸಿನಿಮಾ ಮಾಡೋಕೆ ಆಗುತ್ತಾ? ಇವನಿಗೆ ಹಾಕೋ ದುಡ್ಡು ಬರೋದಿಲ್ಲ ಅಂದರು. ನನಗೆ ದುಡ್ಡು ಅನ್ನೋದು ಗೊತ್ತಿಲ್ಲ. ಇವತ್ತಿಗೂ ಗೊತ್ತಿಲ್ಲ. ಅವತ್ತಿಗೆ ಆ ಸಿನಿಮಾ ಒಂದೂಕಾಲು ಕೋಟಿ ಅಲ್ಲ. ಅದನ್ನು ಎಲ್ಲಿಗೆ ಕರ್ಕೊಂಡು ಹೋಯ್ತು." ಎಂದಿದು ಪ್ರೇಮಲೋಕ ಬಜೆಟ್ ಬಗ್ಗೆ ಮಾತಾಡಿದ್ದಾರೆ.
"ನಾನು ಸೋತಿಲ್ಲ.. ಗೆದ್ದಿದ್ದೀನಿ"
"ಒಂದು ಶೋನಲ್ಲಿ ಅರುಣ್ ಸಾಗರ್ ಹೇಳಿದ್ರು. ಒಮ್ಮೆ ಸೋಲ್ತಾರೆ. ಇನ್ನೊಮ್ಮೆ ಗೆಲ್ತಾರೆ ಅಂತ. ನಾನು ಸೋತಿದ್ದೇ ಇಲ್ಲ. ನಾನು ಒಪ್ಪುವುದಿಲ್ಲ ಸೋತೆ ಅಂತ. ನಾನಂದುಕೊಂಡ ಹಾಗೆ ಸಿನಿಮಾ ಮಾಡಬೇಕು ಅನ್ನೋದು ನನ್ನ ಆಸೆ. ನೀವು ನೋಡಲಿಲ್ಲ ಅನ್ನೋದು ದು:ಖ ಆಗುತ್ತೆ. ನೀವು ನೋಡ್ಲಿಲ್ಲ ಅಂತ ನಾನು ಬಿಟ್ಟುಕೊಡುವುದಕ್ಕೆ ರೆಡಿಯಿಲ್ಲ. ಸಿನಿಮಾ ದುಡ್ಡು ಮಾಡದೇ ಇರಬಹುದು. ಅಂದ್ಕೊಂಡ ಹಾಗೇ ಸಿನಿಮಾ ಮಾಡಿದ್ನಲ್ಲ ಅದೇ ನನ್ನ ಗೆಲುವು. ಒಂದು ವರ್ಷ ಸುಮ್ಮನೆ ಕೂತಿಲ್ಲ. ಮತ್ತೆ ಪ್ರೇಮಲೋಕ ಕಟ್ಟಿ ಕೊಡುತ್ತೇನೆ. ಮನೆ ಮನೆಯಲ್ಲಿ ಹಾಡು ಗುನುಗಬೇಕು. ಹಾಗೆ ಮಾಡುತ್ತೇನೆ." ಎಂದು ಹೇಳಿದ್ದಾರೆ.
"ಈ ಜಗತ್ತಿಗೆ ನಾವೇನು ಮಾಡಿಲ್ಲ"
"ಹಂಪಿ, ವಿಜಯನಗರ ಅನ್ನೋದು ಹೆಸರು ಸುಮ್ಸುಮ್ನೆ ಬಂದಿಲ್ಲ. ಇಲ್ಲಿರೋ ಒಂದೊಂದು ಕಲ್ಲು ಒಂದೊಂದು ಸ್ವರ ಹೇಳುತ್ತೆ. ಒಂದೊಂದು ಕಥೆ ಹೇಳುತ್ತೆ. ಇದರ ಹಿಂದೆ ಲಕ್ಷಾಂತರ ಜನ ಕೆತ್ತನೆ ಮಾಡಿಟ್ಟು ಹೋಗಿದ್ದಾರಲ್ಲ. ಈ ಉತ್ಸವ ಅವರಿಗೆ. ಯಾರೋ ಎಲ್ಲಿಂದಲೋ ಹಂಪಿಯನ್ನು ಹುಡುಕೊಂಡು ಬರ್ತಾರೆ ಅಂದ್ರೆ, ಯಾರೋ ಮಾಡಿಟ್ಟಿರೋದಲ್ಲ. ಇದು ಹಂಪಿಯ ಕಲಾವಿದರು ಮಾಡಿಟ್ಟಿರೋದು. ಆ ಕಲಾವಿದರು ಮಾಡಿರುವ ಸೇವೆ ಮುಂದೆ. ಈ ಕಲಾವಿದರು ಮಾಡಿರೋದು ಇಷ್ಟಿಷ್ಟೇ. ಈ ಜಗತ್ತಿಗೆ ನಾವೇನು ಮಾಡಿಲ್ಲ." ಎಂದು ರವಿಚಂದ್ರನ್ ಹಂಪಿಯಲ್ಲಿ ಹೇಳಿದ್ದಾರೆ.


Click it and Unblock the Notifications











