Dhananjay Wedding:ಇದೂವರೆಗೂ ದರ್ಶನ್ಗೆ ಯಾಕೆ ಮದುವೆ ಕರೆದಿಲ್ಲ? ಡಾಲಿ ಕೊಟ್ಟ ಕಾರಣವೇನು?
ಡಾಲಿ ಧನಂಜಯ್ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮದುವೆ ತಯಾರಿಯಲ್ಲಿಯೇ ಬ್ಯುಸಿಯಾಗಿದ್ದ ಡಾಲಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ವಿವಾಹಕ್ಕೆ ಸೆಲೆಬ್ರೆಟಿಗಳು, ರಾಜಕೀಯ ಮುಖಂಡರು, ಮಠಾಧೀಶರು ಹಾಗೂ ಅಭಿಮಾನಿಗಳಿಗೂ ಆಹ್ವಾನ ನೀಡಿದ್ದು, ಇವರೆಲ್ಲರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಕಳೆದೆರಡು ತಿಂಗಳಿನಿಂದ ಧನಂಜಯ್ ಮದುವೆ ಆಮಂತ್ರಣವನ್ನು ಹಂಚುವುದರಲ್ಲಿಯೇ ನಿರತರಾಗಿದ್ದಾರೆ. ಹೀಗಾಗಿ ಸಿನಿಮಾ ಕೆಲಸಗಳಿಗೆ ಸಂಪೂರ್ಣ ಬ್ರೇಕ್ ಕೊಟ್ಟು ಚಿತ್ರರಂಗದ ತನ್ನ ಸಹೋದ್ಯೋಗಿಗಳಿಗೆ ಆಹ್ವಾನ ನೀಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ಗಳಿಗೂ ಆಹ್ವಾನವನ್ನು ನೀಡಲಾಗಿದೆ. ಆದರೆ, ಇದೂವರೆಗೂ ದರ್ಶನ್ಗೆ ಮಾತ್ರ ಆಮಂತ್ರಣ ಪತ್ರಿಕೆಯನ್ನು ನೀಡಿಲ್ಲ. ಇಬ್ಬರ ಅಭಿಮಾನಿಗಳಲ್ಲೂ ಕುತೂಹಲ ಕೆರಳಿಸಿದೆ.

ಇಂದು (ಫೆಬ್ರವರಿ 5) ಡಾಲಿ ಧನಂಜಯ್ ತಮ್ಮ ಭಾವಿ ಪತ್ನಿ ಧನ್ಯತಾ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದಾರೆ. ಈ ವೇಳೆ ಧನಂಜಯ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಯಾಕೆ ಮದುವೆಗೆ ಆಹ್ವಾನ ನೀಡಿಲ್ಲ ಎಂಬ ಪ್ರಶ್ನೆ ಕೂಡ ಮಾಧ್ಯಮದ ಕಡೆಯಿಂದ ಎದುರಾಗಿತ್ತು. ಅದಕ್ಕೆ ಧನಂಜಯ್ ಕೂಡ ಸೂಕ್ತ ಕಾರಣಗಳನ್ನು ನೀಡಿದ್ದಾರೆ. ಅದೇನು ಅಂತ ನೋಡುವುದಾರೆ.
ಡಾಲಿ ಧನಂಜಯ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರೂ ಆತ್ಮೀಯರು. ಚಿತ್ರರಂಗದಲ್ಲಿ ಎಲ್ಲಾ ಸ್ಟಾರ್ ನಟರೊಂದಿಗೆ ಸ್ನೇಹದಿಂದ ಇದ್ದಾರೆ. ಹಾಗೇ ದರ್ಶನ್ ಜೊತೆಗೂ ಧನಂಜಯ್ ಸಂಬಂಧ ಚೆನ್ನಾಗಿದೆ. ಅಷ್ಟೇ ಅಲ್ಲದೆ, ದರ್ಶನ್ ಸಿನಿಮಾ ಧನಂಜಯ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ದರ್ಶನ್ ನಟಿಸಿದ 'ಯಜಮಾನ' ಸಿನಿಮಾದಲ್ಲಿ ಡಾಲಿ ಧನಂಜಯ್ ಮಿಠಾಯಿ ಸೂರಿ ಎಂಬ ಪಾತ್ರದಲ್ಲಿ ನಟಿಸಿದ್ದರು. ಆ ಮಟ್ಟಿಗೆ ಅನ್ಯೋನ್ಯತೆಯಿದೆ. ಹೀಗಿದ್ದರೂ ಇದೂವರೆಗೂ ಯಾಕೆ ಮದುವೆ ಆಹ್ವಾನ ನೀಡಿಲ್ಲ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲು ಸೇರಿದ ಸಂದರ್ಭದಲ್ಲಿಯೂ ಧನಂಜಯ್ ಪ್ರತಿಕ್ರಿಯೆ ನೀಡಿದ್ದರು. ಮೊದಲು ಪ್ರತಿಕ್ರಿಯೆ ನೀಡುವುದಕ್ಕೆ ಹಿಂದೇಟು ಹಾಕಿದ್ದ ಡಾಲಿ ಬಳಿಕ "ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ದರ್ಶನ್ ಸಹೋದರನಾಗಿ ಹೇಳುತ್ತೇನೆ ಅವರಿಂದ ತಪ್ಪಾಗಿದ್ದರೆ ಶಿಕ್ಷೆಯಾಗಲಿ" ಎಂದಿದ್ದರು. ಹಾಗೇ "ಈ ಬಗ್ಗೆ ಮಾತಾಡು ಅಂದರೆ ಏನು ಮಾತಾಡೋದು? ಅಲ್ಲೊಂದು ಜೀವ ಹೋಗಿದೆ. ಒಂದು ತಪ್ಪು ನಡೆದಿದೆ. ರೇಣುಕಾಸ್ವಾಮಿ ತಂದೆ ತಾಯಿ, ಪತ್ನಿಯ ಮುಖ ನೋಡಿದಾಗ ಖಂಡಿತಾ ಬೇಜಾರಾಗುತ್ತೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಆ ಜೀವಕ್ಕೆ ಏನು ನ್ಯಾಯ ಸಿಗಬೇಕೋ ಅದು ಸಿಗುತ್ತೆ" ಎಂದಿದ್ದರು.
ಈ ಹೇಳಿಕೆಯಿಂದ ಧನಂಜಯ್ ಮೇಲೆ ದರ್ಶನ್ ಬೇಸರ ಮಾಡಿಕೊಂಡಿದ್ದಾರಾ ಅನ್ನುವ ಪ್ರಶ್ನೆ ಹುಟ್ಟುತ್ತೆ. ಆದರೆ, ಇಲ್ಲಿ ಧನಂಜಯ್ ದರ್ಶನ್ಗೆ ಬೇಸರ ಆಗುವಂತಹದ್ದು ಏನನ್ನೂ ಹೇಳಿಲ್ಲ. ಹೀಗಾಗಿ ಇದು ಕಾರಣ ಆಗಿರಲಿಕ್ಕಿಲ್ಲ. ಈ ಕೂತೂಹಲಕ್ಕೆ ಧನಂಜಯ್ ಉತ್ತರ ಕೊಟ್ಟಿದ್ದಾರೆ. "ಎಲ್ಲರನ್ನೂ ಮದುವೆ ಕರೆಯುತ್ತಿದ್ದೇನೆ ಅಂದ್ಮೇಲೆ ಅವರನ್ನು ಕರೆಯುವ ಪ್ರಯತ್ನ ಮಾಡಿರುತ್ತೇನೆ. ಆದರೆ, ಅವರನ್ನು ರೀಚ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ತುಂಬಾನೇ ಪ್ರೀತಿಯಿಂದ ಅವರನ್ನು ಇಲ್ಲಿಯಿಂದಲೇ ಕರೆಯುತ್ತೇನೆ" ಎಂದು ಧನಂಜಯ್ ಹೇಳಿದ್ದಾರೆ.
ಆದರೆ, ಧನಂಜಯ್ ಅಂತಹ ನಟರಿಗೂ ದರ್ಶನ್ ಸಿಗುತ್ತಿಲ್ಲವೇ ಅನ್ನೋ ಪ್ರಶ್ನೆಯಂತೂ ಕಾಡುತ್ತೆ. ಇತ್ತೀಚೆಗೆ ರಾಯಲ್ ಸಿನಿಮಾ ನೋಡುವುದಕ್ಕಾಗಿ ಎಲ್ಲರೊಂದಿಗೂ ಮಿಂಗಲ್ ಆಗಿದ್ದರು. ಮನೆಯಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ, ಧನಂಜಯ್ ಯಾಕೆ ಸಿಗುತ್ತಿಲ್ಲ ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.


Click it and Unblock the Notifications











